ADVERTISEMENT

ಮುದ್ರಿತ ಸಾಹಿತ್ಯದಿಂದ ಆಚೆ ಬಂದಾಗ ಹೊಸ ಗ್ರಹಿಕೆ: ಪ್ರೊ.ರಹಮತ್ ತರೀಕೆರೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:17 IST
Last Updated 12 ನವೆಂಬರ್ 2025, 5:17 IST
ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪ್ರೊ.ರಹಮತ್ ತರೀಕೆರೆ ಮಾತನಾಡಿದರು
ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪ್ರೊ.ರಹಮತ್ ತರೀಕೆರೆ ಮಾತನಾಡಿದರು   

ಶಿವಮೊಗ್ಗ: ‘ಮುದ್ರಿತ ಸಾಹಿತ್ಯದಿಂದ ಆಚೆ ಬಂದಾಗ ಮಾತ್ರ ಹೊಸ ಗ್ರಹಿಕೆ ಸಾಧ್ಯ’ ಎಂದು ಸಂಸ್ಕೃತಿ ಚಿಂತಕ ಪ್ರೊ.ರಹಮತ್ ತರೀಕೆರೆ ಹೇಳಿದರು.

ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಂದರ್ಶಕ ಪ್ರಾಧ್ಯಾಪಕರ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತ್ಯ ಓದು, ಸಂಸ್ಕೃತಿ ಅನುಸಂಧಾನದ ಮಾದರಿಗಳ ಕುರಿತು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಓದಿಗೆ ವ್ಯಾಪಕವಾದ ಅರ್ಥ ಇದೆ. ಓದು ಎಂದರೆ ಕೇವಲ ಗ್ರಂಥ ಭಾಷೆ ಮಾತ್ರ ಅಲ್ಲ. ಮುದ್ರಣದ ವಿಷಯಗಳನ್ನು ಬಿಟ್ಟು ಆಚೆ ನೋಡುವುದೇ ಓದು. ಇದು ಕೇವಲ ಓದುವುದು ಮಾತ್ರ ಅಲ್ಲ. ಕೇಳುವುದು, ನೋಡುವುದೂ ಆಗಬಹುದು. ಮುದ್ರಿತ ಸಾಹಿತ್ಯದಿಂದ ಆಚೆ ಬಂದಾಗ ಮಾತ್ರ ನಮಗೆ ವಾಙ್ಮಯ ಸ್ವರೂಪದ ಸಾಹಿತ್ಯ ದಕ್ಕುತ್ತದೆ ಮತ್ತು ಸೀಮಿತ ಗ್ರಹಿಕೆಯನ್ನು ಒಡೆದುಹಾಕುತ್ತದೆ’ ಎಂದು ಹೇಳಿದರು.

ADVERTISEMENT

‘ಸಾಹಿತ್ಯ ಕೇವಲ ಅಕ್ಷರಗಳ ರೂಪವಲ್ಲ. ಅದು ಒಂದು ಪರಂಪರೆ; ಒಂದು ಇತಿಹಾಸ. ಒಂದು ಜಾನಪದ ಹಾಡು ಕೂಡ ಸಾಹಿತ್ಯವಾಗಬಹುದು. ಸಂಗೀತ ಕೂಡ ಸಾಹಿತ್ಯವೇ. ಮಂಟೆಸ್ವಾಮಿಯಂತಹ ಹಾಡುಗಳು ಸಾಹಿತ್ಯಕ್ಕಿಂತ ಮೊದಲೇ ಇದ್ದಿದ್ದು, ಹಾಗಾಗಿ ಸಾಹಿತ್ಯ ದೃಶ್ಯಗಳ ಮೂಲಕವೂ ಸಾಗಿ ಅದು ಒಂದು ಪ್ರಜ್ಞಾ ಸ್ಥಿತಿಯನ್ನು ತಲುಪುತ್ತದೆ ಮತ್ತು ಸ್ಥಾನ ಪಲ್ಲಟ ಮಾಡುತ್ತದೆ’ ಎಂದರು.

‘ಸಂಸ್ಕೃತಿಗೆ ಹಲವು ಅರ್ಥಗಳಿವೆ. ಸಮುದಾಯ, ನೈತಿಕ ಮೌಲ್ಯಗಳು, ಕಲೆ, ಬದುಕಿನ ಆಲೋಚನೆಗಳು, ಚಿಂತನೆ, ವರ್ತನೆ ಇವೆಲ್ಲವೂ ಸಂಸ್ಕೃತಿಯ ಬೇರೆ ಬೇರೆ ರೂಪದ ಅರ್ಥಗಳೇ ಆಗಿವೆ. ಬದುಕಿನ ಚಿಂತನ ಕ್ರಮವನ್ನು ನಾವು ಸಂಸ್ಕೃತಿಯೆಂದೇ ಕರೆಯುತ್ತಿದ್ದೇವೆ. ಸಂಸ್ಕೃತಿಯಲ್ಲಿ ಮಾರಕವಾದದ್ದು ಇರುತ್ತದೆ’ ಎಂದು ಹೇಳಿದರು.

‘ಭೂತಕಾಲದ ಸಂಸ್ಕೃತಿಯನ್ನು ನಾವು ಕೇವಲ ನೋಡುವುದಷ್ಟೇ ಅಲ್ಲ. ಅದನ್ನು ವರ್ತಮಾನಕ್ಕೆ ತರಬೇಕು. ಆಗ ಹೊಸ ಆಲೋಚನ ಕ್ರಮ ನಮ್ಮ ಮುಂದೆ ಬರುತ್ತದೆ. ಯಜಮಾನಿಕೆ ಪ್ರವೃತ್ತಿಯನ್ನು ವಿರೋಧಿಸುವುದು ಸಿದ್ಧಮಾದರಿಯನ್ನು ಒಡೆದುಹಾಕುವುದರಿಂದ ಹೊಸ ಸಂಸ್ಕೃತಿಯನ್ನು ಹೊಸ ಆಲೋಚನ ಕ್ರಮಗಳನ್ನು ನಾವು ಕಟ್ಟಬಹುದಾಗಿದೆ’ ಎಂದು ತಿಳಿಸಿದರು.
 
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಣ್ಣರಾಮ, ‘ಜಗತ್ತು ಇಂದು ಕುದಿಯುತ್ತಿದೆ. ಮನುಷ್ಯತ್ವವೇ ನಾಶವಾಗುತ್ತಿದೆ. ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ದುರ್ಘಟನೆಯೇ ಇದಕ್ಕೆ ಸಾಕ್ಷಿ. ಜಗತ್ತಿನ ಯಾವ ರಾಷ್ಟ್ರಗಳೂ ನೆಮ್ಮದಿಯಿಂದ ಉಸಿರಾಡುವಂತಿಲ್ಲ. ಮನುಷ್ಯತ್ವವೇ ಸತ್ತು ಹೋಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ.ಕೆ.ಎನ್.ಮಂಜುನಾಥ್, ಐಕ್ಯೂಎಸಿ ಸಂಚಾಲಕ ಎಚ್.ಪಿ.ಮಂಜುನಾಥ್, ಕಾರ್ಯಕ್ರಮದ ಸಂಚಾಲಕ  ಕೆ.ಎಂ.ಮಹದೇವಸ್ವಾಮಿ, ಎಚ್‌.ಹಾಲಮ್ಮ, ಮೇಟಿ ಮಲ್ಲಿಕಾರ್ಜುನ ಇದ್ದರು.

ಜ್ಞಾನ ದಿಕ್ಕು ತಪ್ಪಲು ಬಿಡಬಾರದು. ವಿದ್ಯಾರ್ಥಿಗಳು ದ್ವೀಪಗಳಾಗಬಾರದು. ನಮ್ಮ ಮುಂದಿರುವ ಎಲ್ಲ ಗೋಡೆಗಳನ್ನು ಒಡೆಯಬೇಕಿದೆ. ಬಹುತ್ವವೇ ನಮಗೆ ಈಗಿನ ತುರ್ತು
ಪ್ರೊ.ಎಸ್.ಸಿರಾಜ್ ಅಹಮ್ಮದ್ ಸಹ್ಯಾದ್ರಿ ಕಲಾ ಕಾಲೇಜು ಪ್ರಾಚಾರ್ಯ
ಸಾಹಿತ್ಯದ ವಿದ್ಯಾರ್ಥಿಗಳು ಚಿಂತಿಸುವ ಅಗತ್ಯ ಇಂದು ತುರ್ತಾಗಿದೆ. ಪಠ್ಯಪುಸ್ತಕಗಳ ಆಚೆ ನಿಂತು ನಾವು ಜಗತ್ತನ್ನು ನೋಡಬೇಕಾಗಿದೆ. ಪ್ರೀತಿ ವಿಶ್ವಾಸಗಳಿಗೆ ತೆರೆದುಕೊಳ್ಳಬೇಕಾಗಿದೆ. ಮನುಷ್ಯತ್ವವೇ ಮುಖ್ಯ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಿದೆ.
ಪ್ರೊ.ಸಣ್ಣರಾಮ ನಿವೃತ್ತ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.