
ಸಾಗರ: ಇಲ್ಲಿನ ಪರಿಣಿತಿ ಕಲಾ ಕೇಂದ್ರದ ವತಿಯಿಂದ ನ. 15 ಹಾಗೂ 16ರಂದು ಸಂಜೆ 5.30ಕ್ಕೆ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ 11ನೇ ರಾಷ್ಟ್ರೀಯ ನೃತ್ಯ, ಸಂಗೀತ, ಜಾನಪದೋತ್ಸವ ಆಯೋಜಿಸಲಾಗಿದೆ ಎಂದು ಕೇಂದ್ರದ ಪ್ರಮುಖರಾದ ವೀಣಾ ಬೆಳೆಯೂರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
15ರಂದು ರಾಘವೇಂದ್ರ ಬಿಜಾಡಿ ಸಂಗಡಿಗರಿಂದ ಸುಗಮ ಸಂಗೀತ, ಬೆಂಗಳೂರಿನ ದುರ್ಗಾ ಪರಮೇಶ್ವರಿ ಸ್ಕೂಲ್ ಆಫ್ ಡಾನ್ಸ್ ತಂಡದಿಂದ ಭರತನಾಟ್ಯ, ರಾಜಶಕ್ತಿ ಗರ್ಬರಾಸ್ ಮಂಡಲ್ ತಂಡದಿಂದ ಜಾನಪದ ನೃತ್ಯ, ತ್ರಿಶೂರ್ನ ಪುಷ್ಪಕ್ ಸಂಗಮ್ ತಂಡದಿಂದ ತಿರುವತಿರಕ್ಕಳ್ಳಿ ನೃತ್ಯ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
16ರಂದು ಬೆಂಗಳೂರಿನ ಶಾಂತಲಾ ಡಾನ್ಸ್ ಸಂಸ್ಥೆಯಿಂದ ಭರತನಾಟ್ಯ, ಗುಜರಾತ್ನ ಜಾಮ್ ನಗರ್ನ ರಾಜಶಕ್ತಿ ರಾಸ್ ಮಂಡಲ್ ಅವರಿಂದ ಜಾನಪದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ‘ಪರಿಣಿತಿ ಪ್ರಶಸ್ತಿ’ಯನ್ನು ಸಾಧಕರಾದ ಶಾಂತಾ ದಂತಿ, ವೈ.ಎ.ದಂತಿ, ನಾಗರಾಜ್ ಪೈ, ಮೋನಾ ಪೈ ಹಾಗೂ ಪರಿಣಿತಿ ಸಾಂಸ್ಕೃತಿಕ ಪ್ರಶಸ್ತಿಯನ್ನು ಬಿ.ಟಾಕಪ್ಪ ಕಣ್ಣೂರು, ಪರಶುರಾಮ ಸೂರನಗದ್ದೆ, ಸಂಜನಾ ಆರ್.ಎಸ್. ಅವರಿಗೆ ಪ್ರಧಾನ ಮಾಡಲಾಗುವುದು ಎಂದರು.
ಪ್ರಮುಖರಾದ ವಿದ್ವಾನ್ ಎಂ.ಗೋಪಾಲ್, ಉದಯಕುಮಾರ್ ಕುಂಸಿ, ಸತೀಶ್ ಕೆ. ಜಯಶ್ರೀ, ಸೋಮಶೇಖರ್, ಮಾಧವ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.