
ಶಿರಾಳಕೊಪ್ಪ (ಶಿಕಾರಿಪುರ): ‘ವಿಕಸಿತ ಭಾರತ ನಿರ್ಮಾಣಕ್ಕೆ ಯುವಜನ ಬುನಾದಿ ಎಂದು ಪ್ರಧಾನಿ ನರೇಂದ್ರ ಮೋದಿ ನಂಬಿದ್ದಾರೆ. ಅದಕ್ಕಾಗಿ ಯುವಜನ ದೇಶದ ಅಬ್ಯುದಯದ ಚಿಂತನೆಗೆ ಆದ್ಯತೆ ನೀಡಬೇಕು’ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿ ಜೀವನ ಅಮೂಲ್ಯ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪಠ್ಯ ಚಟುವಟಿಕೆ ಮಾತ್ರವಲ್ಲ; ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಬೇಕು. ಕೌಶಲ ಕಲಿಯುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಆದ್ಯತೆ ನೀಡಿದ್ದು, ಶಿಕ್ಷಣದೊಂದಿಗೆ ತಮಗೆ ಸಿಗುವ ಕೌಶಲ ಕಲಿಯಲು ಆದ್ಯತೆ ನೀಡಿ. ದೇಶ ಮೊದಲು ಎನ್ನುವ ಮನೋಭಾವ ಎಲ್ಲರಲ್ಲೂ ಮೂಡಬೇಕು. ಶೈಕ್ಷಣಿಕ ಜೀವನದಲ್ಲಿ ಜಾತಿ, ಧರ್ಮ, ಮೇಲು– ಕೀಳೆಂಬ ಹಂಗಿರುವುದಿಲ್ಲ. ಅದೊಂದು ಸುಂದರ ಅವಕಾಶ. ಅದರ ಸದ್ಭಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ರೋವರ್ಸ್ ಮತ್ತು ರೇಂಜರ್ಸ್, ಯುವ ರೆಡ್ಕ್ರಾಸ್ ಘಟಕ, ರೆಡ್ರಿಬ್ಬನ್ ಘಟಕ ಉದ್ಘಾಟನೆ ಮಾಡಲಾಯಿತು.
ನಿವೃತ್ತ ಪ್ರಾಂಶುಪಾಲ ಪ್ರೊ. ರಾಜೇಶ್ವರಿ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಪ್ರಭಾಕರ ಮಂಟೋರಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಎಚ್.ಮಂಜುನಾಥ್, ತನುರಾಜ್, ಚನ್ನಬಸವಯ್ಯ, ಪುನಿತ್ಕುಮಾರ್, ಹೇಮಾ ಪಂಡಿತ್, ಪವನ್ಕುಮಾರ್, ಮುಖಂಡರಾದ ಕೆ.ಎಸ್.ಗುರುಮೂರ್ತಿ, ಚನ್ನವೀರಪ್ಪ, ಮಂಚಿ ಶಿವಣ್ಣ, ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.