ADVERTISEMENT

ನಾಡಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 3:04 IST
Last Updated 28 ಅಕ್ಟೋಬರ್ 2025, 3:04 IST
ಹುಳಿಯಾರು ನಾಡಕಚೇರಿ ಮುಂದೆ ಕಸ ಸುರಿಯುವ ವಿಚಾರವಾಗಿ ಪೊಲೀಸ್‌ ಹಾಗೂ ಪ್ರತಿಭಟನಕಾರರಿಗೆ ವಾಗ್ವಾದ ನಡೆಯಿತು
ಹುಳಿಯಾರು ನಾಡಕಚೇರಿ ಮುಂದೆ ಕಸ ಸುರಿಯುವ ವಿಚಾರವಾಗಿ ಪೊಲೀಸ್‌ ಹಾಗೂ ಪ್ರತಿಭಟನಕಾರರಿಗೆ ವಾಗ್ವಾದ ನಡೆಯಿತು   

​ಹುಳಿಯಾರು: ಕಸ ವಿಲೇವಾರಿ ಘಟಕ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರಿ ಧರಣಿ ಬೆಂಬಲಿಸಿ ಸೋಮವಾರ ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

​ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಪಟ್ಟಣ ಪಂಚಾಯಿತಿ ಮುಂದೆ ತಹಶೀಲ್ದಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಕಾರದೊಂದಿಗೆ ಸಂಜೆವರೆಗೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು.

ADVERTISEMENT

ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದುರ್ಗಮ್ಮನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ, ಮೆರವಣಿಗೆ ಮೂಲಕ ನಾಡಕಚೇರಿ ಮುಂದೆ ಆಗಮಿಸಿ, ಕಸ ಸುರಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಲು ಮುಂದಾದರು.

​ಪೊಲೀಸರ ಅಡ್ಡಿ: ನಾಡಕಚೇರಿ ಆವರಣದ ಮುಂದೆ ಕಸ ಸುರಿಯುವುದಕ್ಕೆ ಸ್ಥಳದಲ್ಲಿದ್ದ ಪೊಲೀಸರು ಅಡ್ಡಿಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಲು ನಾಡಕಚೇರಿ ಮುಂದೆ ಹೆಚ್ಚುವರಿ ಎಸ್.ಪಿ., ಡಿವೈಎಸ್ಪಿ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಗಿ ಸರ್ಪಗಾವಲು ಏರ್ಪಡಿಸಲಾಗಿತ್ತು.

​ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ: ​ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ಅವರು ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರು. ತುಮಕೂರು ನಗರ ಅಭಿವೃದ್ಧಿ ಕೋಶದ ಯೋಜನಾಧಿಕಾರಿ ಯೋಗಾನಂದ್, ತುಮಕೂರು ಎಪಿಎಂಸಿ ಉಪನಿರ್ದೇಶಕ ರಾಜಣ್ಣ, ತಹಶೀಲ್ದಾರ್ ಕೆ.ಪುರಂದರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ಕಾವೇರಿದ ಚರ್ಚೆ ನಡೆಯಿತು.

ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಕೇವಲ ಮೌಖಿಕವಾಗಿ ಹೇಳದೆ, ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ನಿರ್ದಿಷ್ಟ ಕಾರ್ಯತಂತ್ರವನ್ನು ರೂಪಿಸುವಂತೆ ಒತ್ತಾಯಿಸಿದರು.

ತಾಂತ್ರಿಕ ಸಮಿತಿ ರಚನೆ: ಜಾಗ ಗುರುತಿಸುವ ಮುನ್ನ ಅಧಿಕಾರಿಗಳು ಸಾರ್ವಜನಿಕರು ಜನಪ್ರತಿನಿಧಿಗಳು ಮತ್ತು ತಾಂತ್ರಿಕ ಪರಿಣಿತರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಕಸ ವಿಲೇವಾರಿ ಘಟಕದ ಶಾಶ್ವತ ಜಾಗ ಗುರುತಿಸುವ ಜವಾಬ್ದಾರಿಯನ್ನು ಆಡಳಿತ ತೆಗೆದುಕೊಂಡಿದ್ದು 15 ದಿನಗಳಲ್ಲಿ ಜಾಗ ಗುರುತಿಸಿ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದರು.  ಸಂತೆ ಜಾಗದ ಸ್ಥಳಾಂತರಕ್ಕೆ ತಾತ್ವಿಕ ಒಪ್ಪಿಗೆ ದೊರೆಯಿತು. ಸಾರ್ವಜನಿಕ ಶೌಚಾಲಯವನ್ನು ತೆರೆಯಲು ಅಧಿಕಾರಿಗಳು ಸೂಚನೆ ನೀಡಿದರು. ತೀವ್ರ ವಾದ ವಿವಾದ ಏರ್ಪಟ್ಟು ಕೊನೆಗೆ ನಾಡಕಚೇರಿಗೆ ಮಹಿಳೆಯರು ಆರತಿ ಎತ್ತಿ ಕಸ ಸುರಿಯುವ ನಿರ್ಧಾರಕ್ಕೆ ಅಂತ್ಯ ಹಾಡಿದರು. ಎರಡು ಬೇಡಿಕೆ ಬಗೆಹರಿದಿದ್ದರೂ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿಲ್ಲ. 15 ದಿನಗಳಲ್ಲಿ ಕಸ ವಿಲೇವಾರಿ ಘಟಕದ ಜಾಗ ಗುರುತಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.