
ಕಾಪು (ಪಡುಬಿದ್ರಿ): ರಾಷ್ಟ್ರೀಯ ಹೆದ್ದಾರಿ 66ರ ಕಾಪು ಪುರಸಭೆ ವ್ಯಾಪ್ತಿಯ ಕೊಪ್ಪಲಂಗಡಿಯಲ್ಲಿ ಸೋಮವಾರ ಬೆಳಗ್ಗೆ ಕಸ ಎಸೆದು ಹೋಗುತ್ತಿದ್ದ ಆಂಧ್ರಪ್ರದೇಶ ಮೂಲದ ಲಾರಿಯನ್ನು ಬೆನ್ನಟ್ಟಿ ಕಸ ಎಸೆದ ಚಾಲಕನಿಂದಲೇ ಕಸ ತೆರವುಗೊಳಿಸಿ ದಂಡ ವಿಧಿಸಲಾಗಿದೆ.
ಆಂಧ್ರಪ್ರದೇಶದಿಂದ ಉಡುಪಿ ಕಡೆ ತೆರಳುತ್ತಿದ್ದ ಲಾರಿಯಲ್ಲಿದ್ದ ಕಸವನ್ನು ಚಾಲಕ ಮತ್ತು ನಿರ್ವಾಹಕ ರಸ್ತೆ ಬದಿಗೆ ಎಸೆಯುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ವಿಡಿಯೊ ಮಾಡಿ ಕಸ ಅಲ್ಲಿ ಹಾಕದಂತೆ ಸೂಚಿಸಿದ್ದರು. ಇದನ್ನು ನಿರ್ಲಕ್ಷಿಸಿದ ಚಾಲಕ ಎಲ್ಲಾ ಕಸವನ್ನು ಅಲ್ಲೇ ಎಸೆದು ತೆರಳಿದ್ದರು. ಸ್ಥಳೀಯರು ಈ ಬಗ್ಗೆ ಪುರಸಭೆಗೆ ಮಾಹಿತಿ ನೀಡಿದ್ದರು.
ಪುರಸಭೆ ಸದಸ್ಯ ಅನಿಲ್ ಕುಮಾರ್ ಮಾಹಿತಿ ಪಡೆದು ಲಾರಿಯನ್ನು ಬೆನ್ನಟ್ಟಿ ಕಟಪಾಡಿ ಪೊಲೀಸರ ಸಹಕಾರದೊಂದಿಗೆ ಜಂಕ್ಷನ್ ಬಳಿ ಲಾರಿಯನ್ನು ತಡೆಯಲು ಯಶಸ್ವಿಯಾದರು. ಚಾಲಕ ತಪ್ಪೊಪ್ಪಿಕೊಂಡಿದ್ದಾನೆ. ಪುರಸಭೆಯವರು ಲಾರಿ ಮೂಲಕ ಚಾಲಕನನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಕಸ ತೆರವುಗೊಳಿಸಿದ್ದಾರೆ. ₹2 ಸಾವಿರ ದಂಡ ವಿಧಿಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.