
ಬೈಂದೂರು: ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಳದ ವಾರ್ಷಿಕ ಮನ್ಮಹಾರಥೋತ್ಸವ ಸೋಮವಾರ ಜರುಗಿತು.
ಬೆಳಿಗ್ಗೆ ನಿತ್ಯ ಬಲಿ, ಅಧಿವಾಸ ಹೋಮ, ರಥ ಶುದ್ಧಿ, ರಥ ಬಲಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಬಳಿಕ, ರಥಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
ಸಂಜೆ ವಿಶೇಷ ದೀಪಾಲಂಕಾರ, ಚಂಡೆವಾದನ, ಕೀಲು ಕುದುರೆ, ವಾದ್ಯಘೋಷ, ವಿವಿಧ ಭಜನಾ ತಂಡಗಳಿಂದ ದಾಸ ಸಂಕೀರ್ತನೆ ಸಹಿತ ಕುಣಿತ ಭಜನೆ, ಛತ್ರ ಚಾಮರ, ಧ್ವಜ ಇನ್ನಿತರೆ ಸಕಲ ಷೋಢಶೋಪಚಾರದೊಂದಿಗೆ ಭಕ್ತರು ಮನ್ಮಹಾರಥ ಎಳೆದು ಸಂಭ್ರಮಿಸಿದರು.
ಮಂಗಳವಾರ ಪ್ರಭೋಧೋತ್ಸವ ವಸಂತೋತ್ಸವ, ರಾತ್ರಿ 8ಕ್ಕೆ ಚೂರ್ಣೋತ್ಸವ (ಓಕುಳಿ) ಮೃಗಯಾವಿಹಾರ, ಅವಭೃತ ಸ್ನಾನ, ವರುಣ ಹೋಮ ನಡೆಯಿತು. ಬುಧವಾರ ಪೂರ್ಣಾಹುತಿ, ಧ್ವಜಾವರೋಹಣ ಜರುಗಲಿದೆ.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಶಾಸಕ ಗುರುರಾಜ್ ಗಂಟೆಹೊಳೆ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್ ಖಾರ್ವಿ, ಆಡಳಿತ ಸಮಿತಿ ಸದಸ್ಯರಾದ ರಾಮಕೃಷ್ಣ ಭಟ್, ಎನ್.ವಿ. ಪ್ರಕಾಶ್ ಐತಾಳ್, ಪಂಜು ಎಂ. ಕುಂದರ್, ಈಶ್ವರ, ಆನಂದ ದೇವಾಡಿಗ ರವಿರಾಜ್ ಪೂಜಾರಿ, ಸುಮಂಗಲ ಕಾರಂತ್, ನೇತ್ರಾವತಿ ಖಾರ್ವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.