
ಯಲ್ಲಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆ ಆಶ್ರಯದಲ್ಲಿ ರೈತರು ಸೋಮವಾರ ಕಿರವತ್ತಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಿರವತ್ತಿ ಪೊಲೀಸ್ ಠಾಣೆ ಎದುರಿನಿಂದ ರಾಷ್ಟ್ರೀಯ ಹೆದ್ದಾರಿ 63 ಮೂಲಕ ಗ್ರಾಮ ಪಂಚಾಯಿತಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅತಿಕ್ರಮಣ ಸಕ್ರಮ ಮಾಡಬೇಕು, ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಬೇಕು, ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅನ್ನದಾತ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ ಮಾತನಾಡಿ, ‘ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ಕೊಡಬೇಕು. ಬಡವರ ಕಷ್ಟಕ್ಕೆ ದ್ವನಿಯಾಗಬೇಕು ಇಲ್ಲದಿದ್ದರೆ ದೆಹಲಿಗೆ ಹೋಗಿ ಹೋರಾಟ ನಡೆಸುತ್ತೇವೆ' ಎಂದರು.
ಪ್ರತಿಭಟನಾಕಾರರು ಉಪ ತಹಶೀಲ್ದಾರ್ ಎಚ್.ಎನ್.ರಾಘವೇಂದ್ರ ಅವರ ಮೂಲಕ ಸರ್ಕಾರಕ್ಕೆ ತಮ್ಮ ಬೇಡಿಕೆಯ ಮನವಿ ಸಲ್ಲಿಸಿದರು.
‘ರಾಜ್ಯದಲ್ಲಿ ಅತಿವೃಷ್ಠಿಯಿಂದ ಬೆಳೆ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ 1978ರ ಪೂರ್ವದಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ದಲಿತರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಅರಣ್ಯ ಅತಿಕ್ರಮಣದಾರರಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರ ನೀಡಬೇಕು. ಹಾಳಾಗಿರುವ ಎಲ್ಲಾ ರಸ್ತೆಗಳ ಸುಧಾರಣೆ ಆಗಬೇಕು. ಕೊಳೆ ರೋಗದಿಂದ ಅಡಿಕೆಗೆ ಹಾನಿಯಾಗಿದ್ದು ತಕ್ಷಣ ಪರಿಹಾರ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು. ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಿದ್ದು ರೈತರು, ಕೂಲಿ ಕಾರ್ಮಿಕರು ಮಹಿಳೆಯರು ತೊಂದರೆಗೆ ಒಳಗಾಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಮುಖರಾದ ಸುಭಾಸ್ ಭೀಮಣ್ಣ ಶೇಷಗಿರಿ, ಭೀಮಶಿ ವಾಲ್ಮೀಕಿ,ನೂರ ಅಹಮ್ಮದ್ ಮುಜಾವರ, ಮಹೇಶ ಪೂಜಾರ,ಅರ್ಜುನ ಬೆಂಗೇರಿ, ವಿಲ್ಸನ್ ಫರ್ನಾಂಡೀಸ್,ಹರೂಣ್ ಶೇಖ ಮಾತನಾಡಿದರು.
ಉಪ ತಹಶಿಲ್ದಾರ್ ಎನ್.ಎಚ್.ರಾಘವೇಂದ್ರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಬೇಡಿಕೆ ತಲುಪಿಸಲಾಗುವುದು ಎಂದರು.
ಸಿಪಿಐ ರಮೇಶ ಹಾನಾಪುರ ನೇತೃತ್ವದಲ್ಲಿ ಪೋಲಿಸರು ಬಂದೋಬಸ್ತ್ ಏರ್ಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.