
ಎಂ.ಜಿ.ನಾಯ್ಕ
ಕುಮಟಾ: ‘ಸರ್ಕಾರಿ ಸೀಟು ಸಿಕ್ಕ ಕಾರಣ ಖರ್ಚಿಲ್ಲದೆ ವೈದ್ಯಕೀಯ ಪದವಿ ಪಡೆದೆ. ಈ ಋಣಕ್ಕಾಗಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಕೆಲಸ ಮಾಡಬೇಕೆಂಬ ಹಂಬಲ ಹುಟ್ಟಿಕೊಂಡಿತು. ಹಣ ಗಳಿಕೆಗಿಂತ, ಜನರ ಜೀವ ಉಳಿಸುವುದರಲ್ಲಿ ನೆಮ್ಮದಿ ಕಂಡುಕೊಂಡಿರುವೆ’
ಇದು ಇಲ್ಲಿನ ತಾಲ್ಲೂಕು ಆಸ್ಪತ್ರೆಯ ಫಿಸಿಶಿಯನ್ ಡಾ.ಶ್ರೀನಿವಾಸ ನಾಯಕ ಅವರ ಮಾತು. ಕೇವಲ ಮಾತುಗಳಲ್ಲಿ ಅವರು ಹೀಗೆ ಹೇಳುವುದಿಲ್ಲ. ಕಳೆದ 18 ವರ್ಷಗಳಿಂದ ತಾಲ್ಲೂಕಾಸ್ಪತ್ರೆಯಲ್ಲಿ ಕೆಲಸ ಮಾಡುತ್ತ, ಸಾವಿರಾರು ರೋಗಿಗಳ ಆರೋಗ್ಯ ಸಮಸ್ಯೆ ಪರಿಹರಿಸಿದ್ದಾರೆ.
ಡಾ.ಶ್ರೀನಿವಾಸ್ ಅವರ ಬಳಿ ಚಿಕಿತ್ಸೆ ಪಡೆಯಲು ಜಿಲ್ಲೆಯ ಬೇರೆ ತಾಲ್ಲೂಕುಗಳಿಂದಲೂ ರೋಗಿಗಳು ಬರುತ್ತಾರೆ. ಅವರಿಗಾಗಿ ತಾಸುಗಟ್ಟಲೆ ಕಾಯುತ್ತಾರೆ. ಸಮಯ ಮುಗಿಯಿತು ಎಂದು ಆಸ್ಪತ್ರೆಗೆ ಬಂದ ರೋಗಿಗಳನ್ನು ಪರೀಕ್ಷಿಸದೆ ಮರಳಿ ಕಳಿಸಿದ ಉದಾಹರಣೆಯೇ ಇಲ್ಲ ಎನ್ನುತ್ತಾರೆ ಅವರನ್ನು ಬಲ್ಲವರು.
ಅಂಕೋಲಾ ಮೂಲದವರಾದ ಡಾ.ಶ್ರೀನಿವಾಸ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಎಂ.ಬಿ.ಬಿ.ಎಸ್ ಹಾಗೂ ವಿಜಯಪುರದ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ ಪೂರೈಸಿದವರು. ಕಾರವಾರ ತಾಲ್ಲೂಕಿನ ಹಣಕೋಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಮೂರು ವರ್ಷ ಸೇವೆ ಸಲ್ಲಿಸಿ, ಅಲ್ಲಿಂದ ಕುಮಟಾ ತಾಲ್ಲೂಕು ಆಸ್ಪತ್ರೆಗೆ ವರ್ಗವಾಗಿ ಬಂದಿದ್ದಾರೆ.
‘ಚಿಕಿತ್ಸೆ ಪಡೆಯಲು ಬರುವ ರೋಗಿಗಳು ಕೊಂಚ ತಾಳ್ಮೆ ವಹಿಸಿ ವೈದ್ಯರೊಂದಿಗೆ ಸಹಕರಿಸುವುದು ಮುಖ್ಯ. ಕೆಲವೊಮ್ಮೆ ಒಬ್ಬ ರೋಗಿಗೆ ಒಂದೇ ನಿಮಿಷದಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಬಹುದು. ಕೆಲವರಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಆಗ ರೋಗಿಗಳು ವೈದ್ಯರ ಬಗ್ಗೆ ಅಪಾರ್ಥ ಕಲ್ಪಿಸಬಾರದು. ತಾಲ್ಲೂಕು ಆಸ್ಪತ್ರೆಯಲ್ಲಿ ಅತ್ಯುತ್ತಮ ಐ.ಸಿ.ಯು ಸ್ಥಾಪಿಸಿದ ಹೆಮ್ಮೆ ಇದೆ. ಇದಕ್ಕೆ ಜನಪ್ರತಿನಿಧಿಗಳು, ಜನರು ಸಹಕಾರ ನೀಡಿದ್ದಾರೆ’ ಎನ್ನುತ್ತಾರೆ ಡಾ.ಶ್ರೀನಿವಾಸ ನಾಯಕ.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಒಂದು ತಂಡವಾಗಿ ಶ್ರಮಿಸಿದರೆ ರೋಗಿಗಳು ದೂರದ ಆಸ್ಪತ್ರೆಗೆ ಹೆಚ್ಚಿನ ಚಕಿತ್ಸೆಗೆ ಹೋಗುವುದನ್ನು ತಡೆಯಬಹುದುಡಾ.ಶ್ರೀನಿವಾಸ ನಾಯಕ ಕುಮಟಾ ತಾಲ್ಲೂಕು ಆಸ್ಪತ್ರೆ ಪಿಸಿಶಿಯನ್
ಅಪಾಯದಿಂದ ಹೊರತಂದ ಸಮಾಧಾನ
‘ತಿಂಗಳ ಹಿಂದೆ 14 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ತೊಡೆಯಲ್ಲಿ ಗಡ್ಡೆಯಾಗಿ ಅದು ಕ್ಯಾನ್ಸರ್ಗೆ ಬದಲಾಯಿತು. ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಹೋದಾಗ ಅಲ್ಲಿನ ವೈದ್ಯರು ಪ್ರಾಣ ಉಳಿಸಲು ತೊಡೆ ಕತ್ತರಿಸುವುದು ಅನಿವಾರ್ಯ ಎಂದರಂತೆ. ಆಗ ನನಗೆ ಗೊತ್ತಿರುವ ನನ್ನ ಹಳೆಯ ವೈದ್ಯ ಸಹಪಾಠಿಯೊಬ್ಬರ ಮೂಲಕ ಆ ವಿದ್ಯಾರ್ಥಿನಿಯನ್ನು ಮುಂಬೈನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಗೆ ಕಳಿಸಿಕೊಟ್ಟೆ. ಅಲ್ಲಿ ಅವಳನ್ನು ಪರೀಕ್ಷಿಸಿದ ವೈದ್ಯರು ತೊಡೆ ಕತ್ತರಿಸುವ ಅಗತ್ಯವಿಲ್ಲ ಚಿಕಿತ್ಸೆಯಿಂದಲೇ ಕಾಯಿಲೆ ಗುಣಪಡಿಸಬಹುದು ಎನ್ನುವ ಭರವಸೆ ನೀಡಿದ್ದರು’ ಎಂದು ವಿಶೇಷ ಪ್ರಕರಣವೊಂದರ ಅನುಭವವನ್ನು ಡಾ.ಶ್ರೀನಿವಾಸ ಹಂಚಿಕೊಂಡರು. ‘ನಾಗರ ಹಾವು ಕಡಿತಕ್ಕೊಳಗಾದ ಪುಟ್ಟ ಬಾಲಕನೊಬ್ಬನನ್ನು ಚಿಕಿತ್ಸೆ ನೀಡಿ ಬದುಕಿಸಿದ ಘಟನೆಯನ್ನು ಎಂದಿಗೂ ಮರೆಯಲಾಗದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.