
ವಿಜಯಪುರ: ಆಲಮಟ್ಟಿ ಅಣೆಕಟ್ಟೆ ಗೇಟ್ ಅನ್ನು 524.256 ಮೀಟರ್ಗೆ ಎತ್ತರಿಸಿ, ರಾಜ್ಯದ ಪಾಲಿನ ಕೃಷ್ಣಾ ನೀರಿನ ಬಳಕೆಗೆ ಕ್ರಮ ವಹಿಸಬೇಕು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕೆಂದು ಆಗ್ರಹಿಸಿ ಜೂನ್ 30ರಂದು ರೈತ ಸಂಘಟನೆಗಳಿಂದ ಬೃಹತ್ ಹೋರಾಟ ನಡೆಸಲು ನಿರ್ಧರಿಸಲಾಗಿದೆ.
ನಗರದ ಗಗನಮಹಲ್ ಆವರಣದಲ್ಲಿ ರೈತ ಸಂಘಟನೆಗಳ ಮುಖಂಡರು /// ಸಭೆ ಸೇರಿ, ಆಲಮಟ್ಟಿ ಡ್ಯಾಂ ಎತ್ತರದ ಬಗ್ಗೆ ಮಹಾರಾಷ್ಟ್ರದವರು ಕ್ಯಾತೆ ತೆಗೆದಿರುವುದನ್ನು ಖಂಡಿಸಿದರು.
‘ರಾಜ್ಯ ಸರ್ಕಾರವು ಮಹಾರಾಷ್ಟ್ರದ ಒತ್ತಡಕ್ಕೆ ಮಣಿಯದೆ, ನ್ಯಾಯಾಧೀಕರಣದ ತೀರ್ಪಿನಂತೆ ಗೇಟ್ ಅಳವಡಿಸಲು ಕ್ರಮ ವಹಿಸಬೇಕು. ಈ ಬಗ್ಗೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು’ ಎಂದು ರೈತ ಮುಖಂಡರು ಆಗ್ರಹಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ‘ಕೃಷ್ಣಾ 2ನೇ ನ್ಯಾಯಾಧೀಕರಣವು ಆಲಮಟ್ಟಿ ಜಲಾಶಯವನ್ನು 519.60 ಮೀಟರ್ನಿಂದ 524.256 ಮೀಟರ್ಗೆ ಎತ್ತರಿಸಿ, ನೀರು ಹಂಚಿಕೆ ಮಾಡಲು 2010ರಲ್ಲೇ ತೀರ್ಪು ನೀಡಿದೆ. ಆದರೀಗ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆದಿದೆ’ ಎಂದು ಆರೋಪಿಸಿದರು.
‘ಸಾಂಗ್ಲಿ, ಕೊಲ್ಲಾಪುರದಲ್ಲಿ ಉಂಟಾಗುವ ಪ್ರವಾಹಕ್ಕೆ ಆಲಮಟ್ಟಿ ಜಲಾಶಯದ ಹಿನ್ನೀರು ಕಾರಣವಲ್ಲವೆಂದು ಮಹಾರಾಷ್ಟ್ರ ಸರ್ಕಾರವೇ ನೇಮಿಸಿದ್ದ ತಜ್ಞರ ಸಮಿತಿ 2019ರಲ್ಲೇ ವರದಿ ಸಲ್ಲಿಸಿದೆ. ಆದರೂ, ಆ ರಾಜ್ಯದವರು ತಕರಾರು ತೆಗೆಯುತ್ತಿರುವುದು ಸರಿಯಲ್ಲ’ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಪೂಜಾರಿ, ಪಾಂಡು ಹ್ಯಾಟಿ, ಶಾರದಾ, ಗುರುಲಿಂಗಪ್ಪ ಪಡಸಲಗಿ, ವಿಠಲ ಬಿರಾದಾರ, ಸುಜಾತಾ ಬಂಡಿವಡ್ಡರ, ಶಂಕರಗೌಡ ಹಿರೇಗೌಡರ, ಉಮೇಶ ವಾಲಿಕಾರ, ರಾಜೇಂದ್ರ ದೇಸಾಯಿ, ಮಡಿವಾಳಪ್ಪ ಕಲಗುರ್ಕಿ, ಶ್ರೀನಿವಾಸ ಗೊಟಗುಣಕಿ, ರಾಮನಗೌಡ ಹಾದಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.