ADVERTISEMENT

ಯಾದಗಿರಿ | ‘ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಗಾಗಿ ಮನವಿ‘

ಕರ್ತವ್ಯಕ್ಕೆ ಅವಕಾಶ ಕೊಡದೆ ತಾರತಮ್ಯ: ಅತಿಥಿ ಉಪನ್ಯಾಸಕ ಗೋಳು

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 6:40 IST
Last Updated 19 ಜುಲೈ 2025, 6:40 IST
ಯಾದಗಿರಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ವಿಧಾನ ಪರಿಷತ್ತು ಸದಸ್ಯ ಶಶೀಲ್ ಜಿ. ನಮೋಶಿ ಅವರು ಆಕಸ್ಮಿಕವಾಗಿ ಭೇಟಿ ನೀಡಿದಾಗ ಅತಿಥಿ ಉಪನ್ಯಾಸಕರು ತಮಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದರು
ಯಾದಗಿರಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ವಿಧಾನ ಪರಿಷತ್ತು ಸದಸ್ಯ ಶಶೀಲ್ ಜಿ. ನಮೋಶಿ ಅವರು ಆಕಸ್ಮಿಕವಾಗಿ ಭೇಟಿ ನೀಡಿದಾಗ ಅತಿಥಿ ಉಪನ್ಯಾಸಕರು ತಮಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದರು   

ಯಾದಗಿರಿ: ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ವಿಧಾನ ಪರಿಷತ್ತು ಸದಸ್ಯ ಶಶೀಲ್ ಜಿ. ನಮೋಶಿ ಅವರು ಆಕಸ್ಮಿಕವಾಗಿ ಭೇಟಿ ನೀಡಿದಾಗ ಅತಿಥಿ ಉಪನ್ಯಾಸಕರು ತಮಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದರು.

ಈಗಾಗಲೇ ಸರ್ಕಾರಕ್ಕೆ ಹಲವಾರು ಸಂಧರ್ಭದಲ್ಲಿ ಮನವಿ ಸಲ್ಲಿಸಲಾಗಿದ್ದು. ಸರ್ಕಾರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೆ ಇರುವುದರಿಂದ ಅತಿಥಿ ಉಪನ್ಯಾಸಕರು ಯಾತನೆ ಪಡುವಂತಾಗಿದೆ. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಕನಿಷ್ಠ ₹5 ಲಕ್ಷ ಆರೋಗ್ಯ ವಿಮಾ ಸೌಲಭ್ಯ ಒದಗಿಸುವುದು, ಪಿಎಫ್ ಸೌಲಭ್ಯ ಒದಗಿಸುವುದು, ಸಂಶೋಧನೆ, ಪಠ್ಯ ಬೋಧನೆ, ಮೌಲ್ಯಮಾಪನಕ್ಕೆ ಲ್ಯಾಬ್ ಟಾಪ್ ಒದಗಿಸುವುದು, ಅನಾರೋಗ್ಯ ಉಂಟಾದಾಗ ವರ್ಷಕ್ಕೆ ಕನಿಷ್ಠ ಹದಿನೈದು ದಿನ ವೇತನ ಸಹಿತ ವೈದ್ಯಕೀಯ ರಜೆ ಮಂಜೂರು ಮಾಡುವುದು ಮುಂತಾದ ಬೇಡಿಕೆಗಳ ಬಗ್ಗೆ ತಾವು ಸದನದಲ್ಲಿ ಅತಿಥಿ ಉಪನ್ಯಾಸಕರ ಪರ ಧ್ವನಿ ಎತ್ತಿ ಸಮಸ್ಯೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.

ರಾಯಚೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ಅತಿಥಿ ಉಪನ್ಯಾಸಕರಿಗೆ ಕೇವಲ ಮೌಲ್ಯಮಾಪನಕ್ಕಷ್ಟೇ ಕರೆಯುತ್ತಾರೆ. ಕಾಲೇಜಿನಲ್ಲಿ ಪರೀಕ್ಷೆ ಕೊಠಡಿ ಮೇಲ್ವಿಚಾರಕರ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಬಾಹ್ಯ ಮೇಲ್ವಿಚಾರಕರು, ಪರೀಕ್ಷೆಯ ಜಾಗೃತ ದಳ (ಸ್ಕ್ಯಾರ್ಡ್) ಮುಂತಾದ ಕರ್ತವ್ಯಕ್ಕೆ ಅವಕಾಶ ಕೊಡದೆ ತಾರತಮ್ಯ ಮಾಡಲಾಗುತ್ತಿದೆ. ಇದರ ಬಗ್ಗೆಯು ತಾವು ಗಮನ ಹರಿಸಬೇಕೆಂದು ಮನವರಿಕೆ ಮಾಡಿದರು.

ADVERTISEMENT

ಇದಕ್ಕೆ ಕೂಡಲೇ ಸ್ಪಂದಿಸಿದ ಶಶೀಲ್ ಜಿ ನಮೋಶಿ ಅವರು, ರಾಯಚೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಿಗೆ ದೂರವಾಣಿ ಮೂಲಕ ಮಾತನಾಡಿ, ಅತಿಥಿ ಉಪನ್ಯಾಸಕರ ಅಹವಾಲುಗಳನ್ನು ಅವರ ಗಮನಕ್ಕೆ ತಂದಾಗ ಕುಲಸಚಿವರು ಮುಂಬರುವ ಪರೀಕ್ಷೆಗಳಲ್ಲಿ ಅವಕಾಶ ನೀಡಲು ಪ್ರಯತ್ನಿಸಲಾಗುವುದೆಂದು ಸಕಾರಾತ್ಮವಾಗಿ ಸ್ಪಂದಿಸಿದರು.

ಇದೇ ಸಂದರ್ಭದಲ್ಲಿ ಪೂರ್ಣಕಾಲಿಕ ಉಪನ್ಯಾಸಕರು ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ನ್ಯೂನತೆಗಳ ಬಗ್ಗೆಯು ನಮೋಶಿಯವರ ಗಮನಕ್ಕೆ ತಂದರು.

ನಮೋಶಿಯವರು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಫೋನ್ ಮೂಲಕ ಸಂಪರ್ಕಿಸಿ ಅತಿಥಿ ಉಪನ್ಯಾಸಕರ ಮತ್ತು ಪೂರ್ಣ ಕಾಲಿಕ ಉಪನ್ಯಾಸಕರ ಅಹವಾಲುಗಳ ಬಗ್ಗೆ ತಿಳಿಸಿದಾಗ ಅವರು ಕೂಡ ಸಕಾರಾತ್ಮವಾಗಿ ಸ್ಪಂದಿಸಿದರು.

ನಮೋಶಿಯವರನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಸುಭಾಶ್ಚಂದ್ರ ಕೌಲಗಿ ಸ್ವಾಗತಿಸಿ, ಸನ್ಮಾನಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕ ಸಿದ್ದಾರೆಡ್ಡಿ ಬಲಕಲ್, ಉಪನ್ಯಾಸಕರಾದ ಮೋನಯ್ಯ ಕಲಾಲ, ಬಿ.ಆರ್. ಕೇತನಕರ್, ಚಂದ್ರಶೇಖರ ಕೊಂಕಲ್, ರಾಘವೇಂದ್ರ ಬಂಡಿಮನಿ, ಮಂಜುನಾಥ, ಭೀಮರಾಯ ಲಿಂಗೇರಿ, ಜಗದೀಶ ನೂಲಿನವರ, ಮಹೇಶ ರೆಡ್ಡಿ, ರಾಜಶೇಖರ್ ಪುಲಮಾಮಡಿ, ಅಮರೇಶ ನಾಯಕ, ಸಾಬಯ್ಯ ಕಲಾಲ್, ಸಾಬರೆಡ್ಡಿ ಬಂಗಾರಿ, ಗೌರೀಶ ಹಿರೇಮಠ, ಸಿದ್ದಪ್ಪ ಗೌಡ, ಗುರುಲಿಂಗಯ್ಯ ಹಿರೇಮಠ, ನಾಗನಾಥ ಬೆಂಡೆ, ಉಮೇಶ್ ಮಠ, ಚನ್ನಬಸವ ಪಾಟೀಲ, ಮಂಜುನಾಥ್, ಬಸವರಾಜರೆಡ್ಡಿ, ಅಂಬಿಕಾ ಪಾಟೀಲ, ಜ್ಯೋತಿ ಸ್ವಾಮಿ, ಜ್ಯೋತಿ ಕಲಾಲ್‌, ಸಂತೋಷಿ ದಿಬ್ಬಾ, ಈರಮ್ಮ ಭಾವಿಕಟ್ಟಿ, ಶ್ರೀದೇವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.