
ಕೆಂಭಾವಿ: ಪಟ್ಟಣದ ನಾರಾಯಣಪುರ ಮುಖ್ಯ ಕಾಲುವೆಯಿಂದ ಹಾದುಹೋಗುವ ಇಂಡಿ ಹಾಗೂ ಜೇವರ್ಗಿ ಶಾಖಾ ಕಾಲುವೆಗಳ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೋಮವಾರದಿಂದ ಕಾಲುವೆಗಳಿಗೆ ಪರೀಕ್ಷಾರ್ಥವಾಗಿ ನೀರು ಹರಿಬಿಡಲಾಯಿತು.
ಎನ್ಎಲ್ಬಿಸಿ ಮುಖ್ಯ ಕಾಲುವೆಯ ಪ್ರಮುಖ ಮೂರು ಶಾಖಾ ಕಾಲುವೆಗಳ ಕ್ರಸ್ಟ್ ಗೇಟ್ಗಳ ಮರುಜೋಡಣೆ ಕಾರ್ಯ ಎನ್ಎಲ್ಬಿಸಿ ಕಳೆದ ಎರಡು ತಿಂಗಳಿನಿಂದ ನಡೆಯುತಿತ್ತು. ಮೂರು ಗೇಟ್ಗಳಲ್ಲಿ ಇಂಡಿ ಹಾಗೂ ಹಳ್ಳಕ್ಕೆ ಹೋಗುವ ಮುಖ್ಯ ಗೇಟ್ಗಳನ್ನು ಸಂಪೂರ್ಣ ಬದಲಾವಣೆ ಮಾಡಿ ನೂತನ ಗೇಟ್ ಜೋಡಣೆ ಮಾಡಲಾಗಿದೆ.
ಗೇಟ್ಗಳ ಜೋಡಣೆಗೆ ಬೃಹತ್ ಕ್ರೇನ್ಗಳು ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಕಾರ್ಮಿಕರು ಹಗಲಿರುಳು ಕೆಲಸ ನಿರ್ವಹಿಸಿದ್ದರು. ಕೆಲಸ ಪೂರ್ಣಗೊಂಡ ಕಾಲುವೆಗಳಿಗೆ ಸೋಮವಾರದಿಂದ ಪರೀಕ್ಷಾರ್ಥವಾಗಿ ನೀರು ಹರಿಬಿಡಲಾಯಿತು.
ಯಾದಗಿರಿ ಜಿಲ್ಲೆ ಸೇರಿದಂತೆ ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ಈ ಗೇಟ್ಗಳು ಬಹುಮುಖ್ಯ ಪಾತ್ರ ವಹಿಸಲಿದ್ದು, ಕಾಲುವೆಯ ನಿರ್ವಹಣೆಯಲ್ಲಿ ಈ ಹಿಂದೆ ಇದ್ದ ಹಳೆಯ ಗೇಟ್ಗಳಿಂದ ಸಮಸ್ಯೆ ಉಂಟಾಗಿ ಕೆಲವು ಬಾರಿ ನೀರು ವೃಥ ಪೋಲಾಗುತ್ತಿತ್ತು.
ದೂರವಾದ ರೈತರ ಆತಂಕ: ಮಹಾರಾಷ್ಟ್ರದಲ್ಲಿ ಮಳೆಯಾಗಿದ್ದು, ಈಗಾಗಲೇ ಆಲಮಟ್ಟಿ ಜಲಾಶಯ ಭರ್ತಿಯಾಗಿ ನಾರಾಯಣಪುರ ಜಲಾಶಯಕ್ಕೆ ನೀರು ಹರಿದುಬರುತ್ತಿದೆ. ಇನ್ನೇನು ಕೆಲವೆ ದಿನಗಳಲ್ಲಿ ಕಾಲುವೆಗಳಿಗೆ ನೀರು ಹರಿಸುವ ಸಮಯ ಒದಗಿ ಬರಲಿದ್ದು, ಅಷ್ಟರಲ್ಲಿ ಈ ಬೃಹತ್ ಕಾಮಗಾರಿ ಮುಗಿಯಲಿದೆಯೆ ಎಂಬ ಆತಂಕ ರೈತರನ್ನು ಕಾಡುತ್ತಿತ್ತು. ರೈತರ ಆತಂಕಕ್ಕೆ ತೆರೆ ಎಳೆದಿರುವ ಇಲಾಖೆ ಕಾಮಗಾರಿ ಬೇಗನೆ ಮುಗಿಸಿದ್ದು, ಇದರಿಂದ ರೈತರಲ್ಲಿ ಇದ್ದ ಆತಂಕ ದೂರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.