
‘ಕಾಂತಾರ–ಚಾಪ್ಟರ್ 1’ ಸಿನಿಮಾ ರಾಜ್ಯದ ನೂರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಕೆಲವೇ ಚಿತ್ರಮಂದಿರಗಳಲ್ಲಿ ಎರಡು ಕನ್ನಡ ಸಿನಿಮಾಗಳು ಇಂದು (ಅ.17) ತೆರೆಕಾಣುತ್ತಿದೆ.
ಟೈಮ್ ಪಾಸ್: ಚೇತನ್ ಜೋಡಿದಾರ್ ನಿರ್ದೇಶನದ ಈ ಸಿನಿಮಾ ಮನರಂಜನೆಯನ್ನೇ ಕೇಂದ್ರವಾಗಿಸಿಕೊಂಡಿರುವ ಕಥೆ ಹೊಂದಿದೆ. ಇಂದಿನ ಸಮಾಜಕ್ಕೆ ಕನ್ನಡಿ ಹಿಡಿದಂತಿರುವ ಕಥೆಯೊಂದನ್ನು ಈ ಸಿನಿಮಾ ಹೊಂದಿದೆ ಎಂದಿದೆ ಚಿತ್ರತಂಡ. ಚೇತನ್ ಜೋಡಿದಾರ್ಗೆ ಇದು ಚೊಚ್ಚಲ ಸಿನಿಮಾ. ಡಾರ್ಕ್ ಹ್ಯೂಮರ್ ಜಾನರ್ಗೆ ಸೇರಿದ ಈ ಸಿನಿಮಾವನ್ನು ಶ್ರೀ ಚೇತನ ಸರ್ವಿಸಸ್ ಬ್ಯಾನರ್ ಮೂಲಕ ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ, ಎಂ.ಎಚ್ ಕೃಷ್ಣಮೂರ್ತಿ ನಿರ್ಮಾಣ ಮಾಡಿದ್ದಾರೆ. ಇಮ್ರಾನ್ ಪಾಷಾ, ವೈಸಿರಿ ಕೆ. ಗೌಡ, ಪ್ರಭಾಕರ್ ರಾವ್, ನವೀನ್ ಕುಮಾರ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ತಾರಾಬಳಗದಲ್ಲಿದ್ದಾರೆ. ಗಿರೀಶ್ ಗೌಡ ಸಾಹಸ ನಿರ್ದೇಶನ, ವೈಷ್ಣವಿ ಸತ್ಯನಾರಾಯಣ್ ನೃತ್ಯ ನಿರ್ದೇಶನ, ರಾಜೀವ್ ಗಣೇಶ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
ಪ್ರೇಮಿಗಳ ಗಮನಕ್ಕೆ: ಲಿವ್ ಇನ್ ರಿಲೇಶನ್ಶಿಪ್ ವಿಷಯವಿಟ್ಟುಕೊಂಡು ಈ ಸಿನಿಮಾ ತೆರೆಗೆ ಬರುತ್ತಿದೆ. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಇಬ್ಬರು ಪ್ರೇಮಿಗಳ ಸುತ್ತ ನಡೆದ ನೈಜ ಘಟನೆಯ ಪ್ರೇರಣೆ ಕಥಾಹಂದರಕ್ಕಿದೆ. ಸಿಟಾಡಿಲ್ ಫಿಲಂಸ್ ಹಾಗೂ ಜೊಯಿಟಾ ಎಂಟರ್ಟೇನ್ಮೆಂಟ್ ಅಡಿ ಸುಬ್ಬು ಹಾಗೂ ಯಕ್ಕಂಟಿ ರಾಜಶೇಖರ ರೆಡ್ಡಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಬಿಗ್ಬಾಸ್’ ಖ್ಯಾತಿಯ ಶಶಿಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದು, ಚಿರಶ್ರೀ ಅಂಚನ್ ನಾಯಕಿಯ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ನಿರ್ಮಾಪಕ ಸುಬ್ಬು ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ವಿನ್ಸೆಂಟ್ ಇನ್ಬರಾಜ್ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಿ.ಅರುಳ್ ಸೆಲ್ವನ್ ಛಾಯಾಚಿತ್ರಗ್ರಹಣ, ಡೆನ್ನಿಸ್ ವಲ್ಲಭನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.