ಚೆನ್ನೈ/ಹೈದರಾಬಾದ್: ‘ಫೆಂಗಲ್’ ಚಂಡಮಾರುತ ತಮಿಳುನಾಡು ಕರಾವಳಿಗೆ ಶನಿವಾರ ಅಪ್ಪಳಿಸಿದ್ದು, ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ನಗರಗಳು ಹಾಗೂ ಆಂಧ್ರಪ್ರದೇಶದ ಕರಾವಳಿ ಮತ್ತು ರಾಯಲಸೀಮಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ.
ಚೆನ್ನೈನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ನೀರು ನಿಂತಿದೆ. ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಜನರು ಫ್ಲೈಒವರ್ಗಳಲ್ಲಿ ಸಿಕ್ಕಿಹಾಕಿಕೊಂಡು ಪರದಾಡಿದ್ದಾರೆ. ವಸತಿ ಪ್ರದೇಶಗಳು, ಆಸ್ಪತ್ರೆಗಳಿಗೂ ನೀರು ನುಗ್ಗಿ ತೊಂದರೆಯಾಗಿದೆ.
ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರವು (ಎಎಐ) ಚೆನ್ನೈನಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ಡಿ.1ರ ನಸುಕಿನ 4ರ ವರೆಗೆ ಸ್ಥಗಿತಗೊಳಿಸಲು ತೀರ್ಮಾನ ತೆಗೆದುಕೊಂಡಿತ್ತು.
ಶನಿವಾರ ಬೆಳಿಗ್ಗೆಯಿಂದಲೇ, 55 ವಿಮಾನಗಳ ಸಂಚಾರ ರದ್ದು ಮಾಡಲಾಗಿದ್ದರೆ, ಇತರ 19 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. 12 ವಿಮಾನಗಳು ತಡವಾಗಿ ಸಂಚಾರ ಆರಂಭಿಸಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು ಎಂದು ಮೂಲಗಳು ಹೇಳಿವೆ. ಹೈದರಾಬಾದ್ನಿಂದ ಹೊರಡಬೇಕಿದ್ದ ಕನಿಷ್ಠ 20 ವಿಮಾನಗಳ ಸಂಚಾರ ರದ್ದುಗೊಳಿಸಲಾಗಿತ್ತು.
ದಕ್ಷಿಣ ರೈಲ್ವೆಯು ಚೆನ್ನೈ ಬೀಚ್–ವೇಲಾಚೆರಿ ಸೆಕ್ಷನ್ನಲ್ಲಿ ಲೋಕಲ್ ಟ್ರೇನುಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು.
ತಿರುಮಲದಲ್ಲಿ ವೆಂಕಟೇಶ್ವರ ದೇವರ ದರ್ಶನಕ್ಕೆ ಬಂದಿದ್ದ ಭಕ್ತರು ತೊಂದರೆ ಅನುಭವಿಸಿದರು.
‘ಫೆಂಗಲ್’ ಚಂಡಮಾರುತ ತಮಿಳುನಾಡು ಕರಾವಳಿಗೆ ಶನಿವಾರ ಅಪ್ಪಳಿಸಿದ್ದರಿಂದ ಭಾರಿ ಮಳೆಯಾಗುತ್ತಿದ್ದು ಚೆನ್ನೈ ವಿಮಾನನಿಲ್ದಾಣದಲ್ಲಿ ನೀರು ನಿಂತು ವಿಮಾನಗಳ ಸಂಚಾರಕ್ಕೆ ಅಡ್ಡಿಯಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.