
ನವದೆಹಲಿ: ದೇಶದಲ್ಲಿ ಉತ್ತಮ ಮುಂಗಾರಿಗೆ ಪರಿಸ್ಥಿತಿಗಳು ಹೆಚ್ಚು ಅನುಕೂಲಕರವಾಗುತ್ತಿದ್ದು, ಜೂನ್ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಸರಾಸರಿಗಿಂತಲೂ (88 ಸೆಂ.ಮಿ) ಅಧಿಕ ಮಳೆ ಬೀಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ. ಮಾಧವನ್ ನಾಯರ್ ರಾಜೀವನ್ ಅವರು, 'ಈ ಬಾರಿ ದೇಶದಲ್ಲಿ ಉತ್ತಮ ಮುಂಗಾರಿಗೆ ಪರಿಸ್ಥಿತಿಗಳು ಹೆಚ್ಚು ಅನುಕೂಲಕರವಾಗುತ್ತಿವೆ. ಜೂನ್ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಮುಂಗಾರು ಮಳೆಯು ಅದರ ದೀರ್ಘಾವಧಿಯ ಸರಾಸರಿಗಿಂತಲೂ (88 ಸೆಂ.ಮಿ) ಅಧಿಕವಾಗಿ ಬೀಳಲಿದೆ' ಎಂದು ಹೇಳಿದ್ದಾರೆ.
ಮುಂದಿನ 48 ಗಂಟೆಗಳಲ್ಲಿ ಪೂರ್ವ ಮಧ್ಯ ಮತ್ತು ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಹವಾಮಾನ ವೈಪರಿತ್ಯಗಳು ಉಂಟಾಗಲಿವೆ ಎಂದಿರುವ ಅವರು, 'ಪೂರ್ವ ಮಧ್ಯ ಮತ್ತು ಆಗ್ನೇಯ ಅರೇಬಿಯನ್ ಸಮುದ್ರ, ಕರ್ನಾಟಕ-ಗೋವಾ ತೀರಗಳಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಲಿದೆ' ಎಂದಿದ್ದಾರೆ.
ಆಗ್ನೇಯ ಅರೇಬಿಯನ್ ಸಮುದ್ರ, ಲಕ್ಷದ್ವೀಪ ಪ್ರದೇಶ ಮತ್ತು ಕೇರಳ ಕರಾವಳಿಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಮೀನುಗಾರರು ಯಾವುದೇ ಕಾರ್ಯಚಟುವಟಿಕೆ ಕೈಗೊಳ್ಳಬಾರದು ಎಂದು ಡಾ. ಮಾಧವನ್ ನಾಯರ್ ರಾಜೀವನ್ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.