ಆಲೂರು (ಹಾಸನ ಜಿಲ್ಲೆ): ತಾಲ್ಲೂಕಿನ ಕಾಡ್ಲೂರು ಕೊಪ್ಪಲು ಗ್ರಾಮದಲ್ಲಿ ಬುಧವಾರವಷ್ಟೇ ಮನೆಯೊಂದಕ್ಕೆ ನುಗ್ಗಿ ಭತ್ತವನ್ನು ತಿಂದು ಹೋಗಿದ್ದ ಕಾಡಾನೆ, ಗುರುವಾರ ಅದೇಮನೆಯ ಮಾಲೀಕನ ಮೇಲೆ ದಾಳಿ ಮಾಡಿದೆ.
ಮನೆ ಮಾಲೀಕ ಶಿವಕುಮಾರ್ ಗಾಯಗೊಂಡಿದ್ದು ಆಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೆಳೆಗೆ ನೀರು ಹಾಯಿಸಲೆಂದು ಗುರುವಾರ ಬೆಳಿಗ್ಗೆ ಜಮೀನಿನಲ್ಲಿ ಪಂಪ್ಸೆಟ್ ಚಾಲೂ ಮಾಡುತ್ತಿದ್ದಾಗ ಆನೆ ದಾಳಿ ಮಾಡಿ ಸೊಂಡಿಲಿನಿಂದ ಎತ್ತಿ ಎಸೆದಿದೆ. ಇದರಿಂದ ಅವರ ಕಾಲು, ಬೆನ್ನು, ಸೊಂಟ ಹಾಗೂ ಕೈಗೆ ತೀವ್ರತರನಾದ ಪೆಟ್ಟು ಬಿದ್ದಿದೆ. ಅಲ್ಲದೇ, ಪಂಪ್ಸೆಟ್ ಇಟ್ಟಿದ್ದ ಶೆಡ್ ಅನ್ನೂ ಹಾಳುಗೆಡವಿದೆ.
ಶಿವಕುಮಾರ್ ಕೂಗಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಜಮೀನಿನವರು ಓಡಿ ಬಂದು ಶಬ್ದ ಮಾಡಿ ಆನೆಯನ್ನು ಓಡಿಸಿ, ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಆಕ್ರೋಶ: ಮಲೆನಾಡು ಭಾಗಗಳಲ್ಲಿ ಪ್ರತಿದಿನ ಕಾಡಾನೆಗಳ ಹಾವಳಿ ಹೆಚ್ಚುತ್ತಲೇ ಇದೆ. ಇದರಿಂದಾಗಿ ಜನರು ಜಮೀನಿಗೆ ತೆರಳಲು ಹಾಗೂ ಮಕ್ಕಳು ಶಾಲೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿದಿನ ಜೀವ ಭಯದಲ್ಲಿಯೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.