
ಜೈಪುರ: ಅಂಗವಿಕಲ ಕ್ರೀಡಾಪಟುಗಳ ಸಾಧನೆ ಗುರುತಿಸಲು ಇದೇ ವರ್ಷ ಆರಂಭಿಸಿರುವ ‘ದಿವ್ಯಂ ಕ್ರಿಕೆಟ್ ವಾರ್ಷಿಕ ಪ್ರಶಸ್ತಿ’ ಸಮಾರಂಭದಲ್ಲಿ ಮುಂಬೈನ ಅನುಭವಿ ಆಟಗಾರ ರವೀಂದ್ರ ಪಾಟೀಲ ಅವರಿಗೆ ‘ಜೀವಮಾನ ಸಾಧನೆ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರ್ನಾಟಕದ ರಾಜೇಶ್ ಕಣ್ಣೂರ್ ಅವರಿಗೆ ‘ವರ್ಷದ ಆಟಗಾರ’ ಗೌರವ ಪ್ರದಾನ ಮಾಡಲಾಯಿತು.
ರಾಜಸ್ಥಾನ ಅಂಗವಿಕಲ ಕ್ರಿಕೆಟ್ ಸಂಘ (ಆರ್ಡಿಸಿಎ) ಸಹಯೋಗದೊಂದಿಗೆ ಭಾರತ ವಿಕಲಚೇತನ ಕ್ರಿಕೆಟ್ ಮಂಡಳಿ (ಡಿಸಿಸಿಐ) ಆಯೋಜಿಸಿದ್ದ ಸಮಾರಂಭದಲ್ಲಿ ದೇಶದ ಹಲವಾರು ಆಟಗಾರರನ್ನು ಸನ್ಮಾನಿಸಲಾಯಿತು.
ವಿದರ್ಭದ ಗುರುದಾಸ್ ರಾವತ್ ಅವರು ‘ವಿಶೇಷ ಕೊಡುಗೆ’ ಪ್ರಶಸ್ತಿ, ಮುಂಬೈನ ವಿಕ್ರಾಂತ್ ಕೇಣಿ ಅವರು ‘ಜನಪ್ರಿಯ ಆಟಗಾರ’ ಪ್ರಶಸ್ತಿ, ಕರ್ನಾಟಕದ ಶಿವಶಂಕರ್ ಅವರು ‘ಐಕಾನಿಕ್ ಆಟಗಾರ’ ಪ್ರಶಸ್ತಿಯನ್ನು ಪಡೆದರು.
ರಾಜಸ್ಥಾನದ ಸುರೇಂದ್ರ ಖೋರ್ವಾಲ್ ‘ಅತ್ಯುತ್ತಮ ಆಟಗಾರ’ ಪ್ರಶಸ್ತಿ, ಗುಜರಾತ್ನ ಆದಿಲ್ ನನ್ಸೋಲಾ ‘ವರ್ಷದ ಉದಯೋನ್ಮುಖ ತಾರೆ’ ಪ್ರಶಸ್ತಿ ಮತ್ತು ಉತ್ತರ ಪ್ರದೇಶದ ಅನ್ವರ್ ಅಲಿ ‘ಅತ್ಯುತ್ತಮ ಜೂನಿಯರ್ ಆಟಗಾರ’ ಪ್ರಶಸ್ತಿ ಪಡೆದರು. ಹೈದರಾಬಾದ್ನ ಚಂದ್ರಭಾನ್ ಗಿರಿ ‘ಅತ್ಯುತ್ತಮ ಕೋಚ್’ ಪ್ರಶಸ್ತಿಯನ್ನು ಸ್ವೀಕರಿಸಿದರು.
ಜೀವಮಾನದ ಕೊಡುಗೆಗಾಗಿ ನಿತೇಂದ್ರ ಸಿಂಗ್ (ಬರೋಡಾ), ಅತ್ಯುತ್ತಮ ವಲಯ ಸಂಯೋಜಕರಾಗಿ ಮಧುಸೂದನ್ ನಾಯಕ್ (ದಕ್ಷಿಣ ವಲಯ) ಮತ್ತು ಉತ್ತಮ ಆಡಳಿತಗಾರರಾಗಿ ಧೀರಜ್ ಹರ್ಡೆ (ವಿದರ್ಭ) ಸೇರಿದಂತೆ ಹಲವರಿಗೆ ವಿಶೇಷ ಮನ್ನಣೆ ಪ್ರಶಸ್ತಿಗಳು ಸಂದವು.
‘ಅತ್ಯುತ್ತಮ ರಾಷ್ಟ್ರೀಯ ತಂಡ’ ಪ್ರಶಸ್ತಿಗೆ ಜಮ್ಮು ಮತ್ತು ಕಾಶ್ಮೀರ ಭಾಜನವಾದರೆ, ‘ವರ್ಷದ ಅತ್ಯುತ್ತಮ ಸಂಘ’ ಪ್ರಶಸ್ತಿಯನ್ನು ಛತ್ತೀಸಗಢ ಅಂಗವಿಕಲ ಕ್ರಿಕೆಟ್ ಸಂಘ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.