ನವದೆಹಲಿ: ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಶನಿವಾರ ರಾತ್ರಿ ಆಕಾಶದಲ್ಲಿ ಉಲ್ಕಾಪಾತ ಸಂಭವಿಸಿದೆ ಎಂದು ವರದಿಯಾಗಿದೆ.
ಉಲ್ಕಾಪಾತ ಮಳೆಯಂತೆ ಗೋಚರಿಸುವ ಬೆಳಕಿನ ದೃಶ್ಯಗಳು ಸೆರೆಯಾಗಿರುವ ವಿಡಿಯೊವನ್ನು ಸುದ್ದಿಸಂಸ್ಥೆ ಎಎನ್ಐ ಟ್ವೀಟ್ ಮಾಡಿದೆ.
ಮಹಾರಾಷ್ಟ್ರದ ನಾಗ್ಪುರದ ಕೆಲವು ಪ್ರದೇಶಗಳು ಮತ್ತು ಮಧ್ಯಪ್ರದೇಶದ ಝಬುವಾ, ಬರ್ವಾನಿ ಜಿಲ್ಲೆಗಳಲ್ಲಿ ಉಲ್ಕಾಪಾತದ ದೃಶ್ಯಗಳು ಕಂಡುಬಂದಿರುವುದಾಗಿ ವರದಿಯಾಗಿದೆ.
‘ಇದು ಉಲ್ಕಾಪಿಂಡ (ಉಲ್ಕಾಶಿಲೆ) ಎಂಬಂತೆ ಗೋಚರವಾಗುತ್ತಿದೆ. ಅವುಗಳ ಪತನ ಸಾಮಾನ್ಯವಾಗಿರುತ್ತದೆ’ ಎಂದು ಉಜ್ಜಯಿನಿಯ ಜೀವಾಜಿ ವೀಕ್ಷಣಾಲಯದ ಅಧೀಕ್ಷಕ ರಾಜೇಂದ್ರ ಗುಪ್ತಾ ತಿಳಿಸಿದ್ದಾರೆ.
1862ರಲ್ಲಿ ಲೂಯಿಸ್ ಸ್ವಿಪ್ಟ್ ಮತ್ತು ಹೊರೆಸ್ ಪಾರ್ನೆಲ್ ಟಟಲ್ ಕಂಡುಹಿಡಿದ ಧೂಮಕೇತು ಉರಿದು ಉಳಿದ ಅವಶೇಷಗಳು ಈಗಲೂ ಉಲ್ಕಾಪಾತಕ್ಕೆ ಕಾರಣವಾಗುತ್ತಿವೆ.
1846ರಲ್ಲಿ ‘ಎನ್ಕೆ’ ಎಂಬ ಧೂಮಕೇತು ಒಡೆದು ಎರಡು ಹೋಳಾಗಿ ಆ ಹೋಳುಗಳು ದೂರ ದೂರದಲ್ಲಿ ಚಲಿಸುತ್ತಿದ್ದವು. ನಂತರ ಅವು ಕಾಣಿಸಲಿಲ್ಲ. ಅದಕ್ಕೆ ಬದಲಾಗಿ ಅವುಗಳನ್ನು ನಿರೀಕ್ಷಿಸಿದ್ದ ದಿಕ್ಕಿನಲ್ಲಿ ಗುಂಪು ಗುಂಪಾದ ಉಲ್ಕಾಪಾತ ಉಂಟಾಗಿತು. ಧೂಮಕೇತುವಿಗೂ ಮತ್ತು ಉಲ್ಕಾಪಾತಕ್ಕೂ ಇರುವ ಸಂಬಂಧ ಮೊದಲ ಬಾರಿಗೆ ಸ್ಪಷ್ಟವಾಗಿತ್ತು. ಕೆಲವೊಮ್ಮೆ ಪ್ರಸಿದ್ಧ ನಕ್ಷತ್ರರಾಶಿ ಅಥವಾ ನಕ್ಷತ್ರಪುಂಜಗಳ ಕಡೆಯಿಂದ ಉಲ್ಕೆಗಳು ಮಳೆಯೋಪಾದಿಯಲ್ಲಿ ಸುರಿಯುವುದನ್ನು ಕಾಣಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.