ನವದೆಹಲಿ: ಮಧ್ಯ ಪ್ರದೇಶ ಬಿಜೆಪಿ ಸರ್ಕಾರದ ಲಸಿಕಾ ಅಭಿಯಾನದ ಬಗ್ಗೆ ವ್ಯಂಗ್ಯವಾಡಿ ಆಮ್ ಆದ್ಮಿ ಪಕ್ಷವು (ಎಎಪಿ) ಟ್ವೀಟ್ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.
ಮಧ್ಯ ಪ್ರದೇಶದ ಲಸಿಕಾ ಅಭಿಯಾನ ಮತ್ತು ದೆಹಲಿಯಲ್ಲಿ ಎಎಪಿ ಸರ್ಕಾರದ ಲಸಿಕಾ ಅಭಿಯಾನವನ್ನು ವಿಡಿಯೊದಲ್ಲಿ ತುಲನೆ ಮಾಡಲಾಗಿದೆ. ಮಧ್ಯ ಪ್ರದೇಶದ ಲಸಿಕಾ ಕೇಂದ್ರಗಳಲ್ಲಿ ಗದ್ದಲ, ಅವ್ಯವಸ್ಥೆ ಇರುವುದು ಮತ್ತು ದೆಹಲಿಯ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಲಸಿಕೆ ನೀಡಿ ಪ್ರಮಾಣ ಪತ್ರ ನೀಡುವ ದೃಶ್ಯ ವಿಡಿಯೊದಲ್ಲಿದೆ.
ಈ ವಿಡಿಯೊವನ್ನು 270ಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದು, 860ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಎಎಪಿ ಬೆಂಬಲಿಗರು ವಿಡಿಯೊ ಲೈಕ್ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೆ, ಬಿಜೆಪಿ ಬೆಂಬಲಿಗರು ಎಎಪಿ ವಿರುದ್ಧ ಕಿಡಿ ಕಾರಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳಿಗೆ ಲಸಿಕೆ ನೀಡುತ್ತಿದ್ದಾರೆ, ಅದು ಕೂಡ ಸಂಪೂರ್ಣವಾಗಿ ಉಚಿತವಾಗಿದೆ. ಆದರೆ, ಅದರ ಶ್ರೇಯಸ್ಸನ್ನು ಪಡೆದುಕೊಳ್ಳುವ ಸಾಮಾನ್ಯ ಕ್ರಿಮಿನಲ್ ಪಕ್ಷದ ಮಾದರಿಯನ್ನು ನೋಡಿ’ ಎಂದು ಪ್ರಕಾಶ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
ಹೇಮಲ್ ಎಂಬವರು, ಗುಜರಾತ್ನ ಸಾಬರಮತಿ ಆಶ್ರಮದ ಸುಂದರ ನದಿ ದಂಡೆ ಮತ್ತು ದೆಹಲಿಯ ಯಮುನಾ ನದಿಯ ನೀರು ಕಲುಷಿತಗೊಂಡಿರುವುದನ್ನು ತುಲನೆ ಮಾಡುವ ಚಿತ್ರವೊಂದನ್ನು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.