ADVERTISEMENT

ಹಾಡುತ್ತಾ ಬದುಕು ಕಟ್ಟಿದ ದಿಟ್ಟೆ ನಿರ್ಮಲಾ ಡಿ.ಆರ್‌.

ಸುಕೃತ ಎಸ್.
Published 12 ಮಾರ್ಚ್ 2021, 19:30 IST
Last Updated 12 ಮಾರ್ಚ್ 2021, 19:30 IST
ನಿರ್ಮಲಾ
ನಿರ್ಮಲಾ   

‘ನಾನು ಸಣ್ಣವಳಿದ್ದಾಗಲೇ ನನ್ನ ತಂದೆ, ಅಮ್ಮನನ್ನು ಬಿಟ್ಟು ಹೋದರು. ಅಲ್ಲಿಂದ ಇಲ್ಲಿಯವರೆಗೆ ನಾನು ಅವರ ಮುಖ ನೋಡಿಲ್ಲ. ತಳ್ಳುಗಾಡಿ ಹೋಟೆಲ್‌ನಿಂದ ಬಂದ ಹಣದಿಂದ ನಮ್ಮ ಜೀವನ ನಡೆದಿತ್ತು. ಹೀಗೆ ಗುರುತೇ ಇಲ್ಲದೆ ಪ್ರಾರಂಭವಾದ ನನ್ನ ಬದುಕು ಇಂದು ಸಮಾಜದಲ್ಲಿ ನಾಲ್ಕು ಜನ ಗುರುತಿಸುವ ಮಟ್ಟಕ್ಕೆ ಬಂದಿದೆ’ ಎಂದು ಬಹಳ ಆತ್ಮವಿಶ್ವಾಸ ಮತ್ತು ಆತ್ಮತೃಪ್ತಿಯಿಂದ ನುಡಿಯುತ್ತಾರೆ ಜಾನಪದ ಗಾಯನದ ಮೂಲಕ ಹೆಸರು ಮಾಡಿರುವ ನಿರ್ಮಲಾ ಡಿ.ಆರ್‌.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನವರಾದ ನಿರ್ಮಲಾ ಮೇಲೆ ಅವರ ಅಜ್ಜಿಯ ಪ್ರಭಾವ ಹೆಚ್ಚಿದೆಯಂತೆ. ಅಜ್ಜಿಯಿಂದಲೇ ನಿರ್ಮಲಾ ಅವರಿಗೆ ಗಾಯನದ ಕಡೆ ಆಸಕ್ತಿ ಮೂಡಿದ್ದು. ಶಾಲೆಗಳಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ನಿರ್ಮಲಾ ಅವರ ಗಾಯನವನ್ನು ಒಮ್ಮೆ ಒಬ್ಬರು ಶಾಲಾ ಇನ್‌ಸ್ಪೆಕ್ಟರ್‌ ಕೇಳಿ, ಇವರ ಹೆಸರಲ್ಲಿ ₹ 10 ಸಾವಿರ ಠೇವಣಿ ಇಟ್ಟಿದ್ದರಂತೆ. ‘ನನ್ನ ಏಳಿಗೆಯ ಉದ್ದಕ್ಕೂ ಈ ರೀತಿಯಾಗಿ ನನಗೆ ಹಲವರು ಹೆಚ್ಚಿನ ಸಹಾಯ ಮಾಡಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿ’ ಎಂದು ಅವರು ಸ್ಮರಿಸುತ್ತಾರೆ. ತಮ್ಮ ಸಾಧನೆಯಲ್ಲಿ ಗುರು ಕೆ. ಮಹಲಿಂಗಯ್ಯ ಅವರು ಪಾತ್ರ ಹೆಚ್ಚಿದೆ ಎನ್ನಲು ಮರೆಯುವುದಿಲ್ಲ.

ನಿರ್ಮಲಾ ಶಾಲಾ– ಕಾಲೇಜು ದಿನಗಳಿಂದಲೇ ಜಾನಪದ ಹಾಡುಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ. ಅಲ್ಲಿಂದ ಪ್ರಾರಂಭವಾದ ಅವರ ಸಂಗೀತ ಯಾನ, ಇಂದು ರಾಜ್ಯದಾದ್ಯಂತ ಎರಡು ಸಾವಿರಕ್ಕೂ ಹೆಚ್ಚಿನ ಕಾರ್ಯಕ್ರಮವನ್ನು ದಾಟಿ ಮುನ್ನಡೆಯುತ್ತಿದೆ. ಖಾಸಗಿ ವಾಹಿನಿಯ ‘ಕನ್ನಡ ಕೋಗಿಲೆ’ ಎನ್ನುವ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕೂಡ ಇವರು ಅಭ್ಯಾಸ ಮಾಡಿದ್ದಾರೆ. 2017ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯೆಯಾಗಿ ಬಹಳ ಸಣ್ಣ ವಯಸ್ಸಿನಲ್ಲೇ ನೇಮಕಗೊಂಡಿದ್ದರು.

ADVERTISEMENT

‘ಮನಸಿಗಂಟಿದ ಕೊಳೆಯ ತಿಕ್ಕಿ ತೊಳೆದುಕೊ...’ ಎಂದು ನಿರ್ಮಲಾ ಅವರು ಹಾಡಿದ ಹಾಡು ಇತ್ತೀಚೆಗೆ ವೈರಲ್‌ ಆಗಿತ್ತು. ಮನುಷ್ಯ ತನ್ನ ಸಂಕುಚಿತ ಭಾವನೆಯೊಂದ ಹೊರಬಂದು, ಸಹಬಾಳ್ವೆ, ಪ್ರೀತಿಯಿಂದ ಬದುಕಬೇಕು ಎನ್ನುವ ಸಂದೇಶ ಇರುವ ಈ ಗೀತೆಯನ್ನು ಬಹಳ ಅದ್ಭುತವಾಗಿ ಹಾಡಿದ್ದಾರೆ ನಿರ್ಮಲಾ.

‘ಗಾಯನವೂ ಒಂದು ಶಕ್ತಿಯುತವಾದ ಮನರಂಜನಾ ಮಾಧ್ಯಮ. ಇದನ್ನು ಜನರ ಮನಪರಿವರ್ತನೆಗೆ ಸಮರ್ಥವಾಗಿ ಬಳಸಿಕೊಳ್ಳಬೇಕು. ಇದನ್ನೇ ನಾನು ‘ಭೂಮ್ತಾಯಿ ಬಳಗ’ ಎನ್ನುವ ತಂಡದ ಮೂಲಕ ಸಾಧಿಸ ಹೊರಟಿದ್ದೇನೆ’ ಎನ್ನುತ್ತಾರೆ ಅವರು. ಈ ಬಳಗವು ರಾಜ್ಯದಾದ್ಯಂತ ಸಂಚರಿಸಿ ಪರಿಸರ ಗೀತೆ, ಜಾನಪದ ಗೀತೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ತಮ್ಮ ಗುರು ಜನಾರ್ದನ್‌ ಕೆಸರಗದ್ದೆ ಅವರು ಸ್ಥಾಪಿಸಿದ ‘ಭೂಮ್ತಾಯಿ ಬಳಗ’ ತಂಡವನ್ನು ನಿರ್ಮಲಾ ಅವರು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ‘ಹೆಣ್ಣೊಬ್ಬಳು ಗಂಡು ಮಕ್ಕಳೇ ಹೆಚ್ಚಿರುವ ತಂಡವನ್ನು ಮುನ್ನಡೆಸುವುದು ಎಂದರೆ ಸವಾಲಿನ ಕೆಲಸವೇ ಹೌದು. ಏಕೆಂದರೆ ಸಮಾಜದಲ್ಲಿ ಬಹುತೇಕರು ಇಂಥದ್ದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಹೊಂದಿಲ್ಲ. ಆದರೆ, ನಮ್ಮ ತಂಡ ಇದಕ್ಕೆ ವ್ಯತಿರಿಕ್ತವಾದುದು. ನನ್ನನ್ನು ಬಹಳ ಪ್ರೀತಿ ಮತ್ತು ಗೌರವದಿಂದ ನಡೆಸಿಕೊಳ್ಳುತ್ತಾರೆ’ ಎಂದು ಬಹಳ ಪ್ರೀತಿಯಿಂದ ಹೇಳುತ್ತಾರೆ ನಿರ್ಮಲಾ.

‘ನನಗಿಂತ ಹೆಚ್ಚು ಚೆನ್ನಾಗಿ ಹಾಡುವ ನನ್ನ ಸ್ನೇಹಿತೆಯರು ಇದ್ದಾರೆ. ಅವರು ಈಗ ಗೃಹಿಣಿಯರು. ಆದರೆ, ನನ್ನ ಕುಟುಂಬ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ನನ್ನ ಗಂಡ ರವಿಶಾಸ್ತ್ರಿ, ನನ್ನ ತಾಯಿ ವಿಜಯಲಕ್ಷ್ಮೀ ಎಲ್ಲರೂ ನನಗೆ ಸಹಾಯ ಮಾಡುತ್ತಾರೆ. ನೀನು ಇನ್ನಷ್ಟು ಮುಂದೆ ಹೋಗಬೇಕು ಎಂದು ಪ್ರೋತ್ಸಾಹಿಸುತ್ತಾರೆ’ ಎನ್ನುತ್ತಾರೆ ನಿರ್ಮಲಾ.

ಜನಪರವಾದ ಎಲ್ಲ ಹೋರಾಟಗಳಲ್ಲೂ ನಿರ್ಮಲಾ ಭಾಗವಹಿಸಿ ಗೀತೆಗಳನ್ನು ಹಾಡಿದ್ದಾರೆ. 2006ರಲ್ಲಿ ಕರ್ನಾಟಕ ಸರ್ಕಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ಜಾನಪದ ಗಾಯನದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.