ADVERTISEMENT

ಮಹಿಳಾ ದಿನಾಚರಣೆ: ‘ಬನಶ್ರೀ’ ಕಟ್ಟಿದ ಭೂಮಿಕಾ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 6:10 IST
Last Updated 8 ಮಾರ್ಚ್ 2021, 6:10 IST
ಭೂಮಿಕಾ ಪ್ರಕಾಶ್‌
ಭೂಮಿಕಾ ಪ್ರಕಾಶ್‌   

ನಾಲ್ಕನೇ ತರಗತಿಯಲ್ಲಿರುವಾಗಲೇ ಹೊಲಿಗೆ ಕಲಿತ ಕೈಗಳು ಈಗ ನೂರಾರು ಬಡ ಮಹಿಳೆಯರಿಗೆ ದುಡಿಮೆಯ ದಾರಿ ತೋರಿವೆ. ದಾವಣಗೆರೆಯ ‘ಬನಶ್ರೀ ಗಾರ್ಮೆಂಟ್ಸ್‌’ನ ಒಡತಿ ಭೂಮಿಕಾ ಪ್ರಕಾಶ್‌ ಅವರ ಪರಿಶ್ರಮದ ಕಥೆ ನಾರಿಯರಿಗೆ ಸ್ಫೂರ್ತಿಯ ಚಿಲುಮೆ.

ಚನ್ನಗಿರಿಯವಳಾದ ನಾನು ಪಿಯುವರೆಗೆ ಶಿಕ್ಷಣ ಮುಗಿಸಿದಾಗ ಮನೆಯಲ್ಲಿ ಬಡತನದ ಬೇಗೆ. ಹೀಗಾಗಿ ಶಿವಮೊಗ್ಗದಲ್ಲಿ ಆಗ್ರೊ ಸೀಡ್ಸ್‌ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿ ಸಂಜೆಯ ವೇಳೆ ಓದಿ, ಎಟಿಎನ್‌ಸಿಸಿ ಕಾಲೇಜಿನಲ್ಲಿ ಬಿ.ಕಾಂ ಮಾಡಿದೆ. ಅಂಗಡಿಗಳ ಲೆಕ್ಕ ಬರೆದು ಅಷ್ಟಿಷ್ಟು ಹಣ ಗಳಿಸಿದೆ. ಅಳಿದುಳಿದ ಸಮಯದಲ್ಲೂ ಹೊಲಿಗೆ ನನ್ನ ಕೈಹಿಡಿಯಿತು.

2007ರಲ್ಲಿ ಅಕ್ಕಿ ವ್ಯಾಪಾರಿ ಪ್ರಕಾಶ್‌ ಕೆ.ಪಿ. ಅವರೊಂದಿಗೆ ವಿವಾಹವಾಗಿ ದಾವಣಗೆರೆಗೆ ಕಾಲಿಟ್ಟೆ. ಮೊದಲು ಸ್ಥಾಪಿಸಿದ್ದು ‘ಬನಶ್ರೀ ಮಹಿಳಾ ಸಂಸ್ಥೆ’. ಹೊಲಿಗೆ, ಹಪ್ಪಳ, ಸಂಡಿಗೆ, ಮೇಣದಬತ್ತಿ ತಯಾರಿಕೆ ಆರಂಭವಾದವು. 2012ರಲ್ಲಿ 5 ಹೊಲಿಗೆ ಯಂತ್ರಗಳನ್ನು ತಂದು ಗಾರ್ಮೆಂಟ್ಸ್‌ ಘಟಕ ಆರಂಭಿಸಿದೆ. 2015ರಲ್ಲಿ ಪುರುಷರ ಶರ್ಟ್‌ಗಳನ್ನು ‘ಸಾಲಿಡಿಟಿ ಲೈವ್‌ ಕನೆಕ್ಟ್‌ ಸ್ಟಿಚ್‌ ಆ್ಯಂಡ್‌ ಸ್ಟೈಲ್‌’ ಬ್ರ್ಯಾಂಡ್‌ನೇಮ್‌ನೊಂದಿಗೆ ಹೊಲಿಯಲು ಆರಂಭಿಸಿದೆವು. 2016ರಲ್ಲಿ ನನ್ನ ಸಾಧನೆಗೆ ‘ವಿನ್ನಿಂಗ್‌ ಆಫ್‌ ದಿ ವುಮನ್‌’ ಪ್ರಶಸ್ತಿ ಸಿಕ್ಕಿತು. ಕೆನರಾ ಬ್ಯಾಂಕ್‌ನಿಂದ ₹ 1 ಕೋಟಿ ಸಾಲ ಪಡೆದು 50 ಹೊಲಿಗೆ ಯಂತ್ರಗಳನ್ನು ಖರೀದಿಸಿ, ಗಾರ್ಮೆಂಟ್ಸ್‌ ಘಟಕಗಳಿಗೆ ಕಟ್ಟಡವೂ ಸಿದ್ಧವಾಯಿತು. ಈಗ ನಗರದ ಎಸ್‌.ಎಸ್‌. ಲೇಔಟ್‌ ಹಾಗೂ ಬಂಬೂ ಬಜಾರ್‌ಗಳಲ್ಲಿ ‘ಬನಶ್ರೀ ಗಾರ್ಮೆಂಟ್ಸ್‌’ನ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿವೆ. 70–80 ಮಹಿಳೆಯರು ಈ ಗಾರ್ಮೆಂಟ್ಸ್‌ ಘಟಕಗಳಲ್ಲಿ ದುಡಿಯುತ್ತಿದ್ದಾರೆ. ಪುರುಷರ ಶರ್ಟ್‌, ಪ್ಯಾಂಟ್‌, ಮಕ್ಕಳ ಶರ್ಟ್‌, ಪ್ಯಾಂಟ್‌ಗಳು ಇಲ್ಲಿ ಸಿದ್ಧವಾಗುತ್ತವೆ.ಕೋವಿಡ್‌ ಸಂದರ್ಭದಲ್ಲಿ 7000–8000 ಮಾಸ್ಕ್‌ಗಳನ್ನು ಹೊಲಿದು ವಿತರಿಸಿದೆವು. ಬಡ ಕುಟುಂಬಗಳಿಗೆ ಅಕ್ಕಿ– ರೇಷನ್‌ ಸಹ ವಿತರಿಸಿದೆವು.

‘ಬನಶ್ರೀ ಮಹಿಳಾ ಸಂಸ್ಥೆ’ಯ ಅಡಿ ಈಗ 350 ಮಹಿಳಾ ಸ್ವಸಹಾಯ ಸಂಘಗಳು ಇವೆ. 4,000 ಸದಸ್ಯೆಯರು ಇದ್ದಾರೆ. ಮಹಿಳೆಯರಿಗೆ ಕೌಶಲ ತರಬೇತಿ ನೀಡಿ, ಮಾರ್ಕೆಟಿಂಗ್‌ ಹೇಳಿಕೊಡುತ್ತೇವೆ. ಪತಿ ಪ್ರಕಾಶ್‌, ಸಹೋದರರಾದ ವೀರೇಶ್‌, ವಿಷ್ಣು ನನಗೆ ಸಹಾಯ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.