ADVERTISEMENT

ನಾನೂ ಟ್ರೋಲ್ ಆದಾಗ...

ಉಷಾ ಕಟ್ಟೆಮನೆ
Published 8 ಮಾರ್ಚ್ 2019, 4:10 IST
Last Updated 8 ಮಾರ್ಚ್ 2019, 4:10 IST
   

ಬಹುಶಃ ಇದೆಲ್ಲಾ ಆರಂಭವಾಗಿದ್ದು. ೨೦೧೪ರಲ್ಲಿ. ಅದೇವರ್ಷ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರವು ಅಧಿಕಾರವನ್ನು ಹಿಡಿದಿತ್ತು. ಅಲ್ಲಿಯವರೆಗೆ ಬೇರೆಯವರ ದೃಷ್ಟಿಯಲ್ಲಿ ನಾನೊಬ್ಬಳು ಸೂಕ್ಷ್ಮ ಸಂವೇದಿ ಬರಹಗಾರಳಾಗಿದ್ದೆ. ‘ಉಷಕ್ಕಾ’ ಎಂದು ಪ್ರೀತಿಯಿಂದ ಕರೆಯುವ, ಮಾತಾಡಿಸುವ ಕಿರಿಯ ಗೆಳೆಯ-ಗೆಳತಿಯರ ಪುಟ್ಟ ಸಮೂಹವೊಂದು ನನ್ನೊಡನ್ನಿತ್ತು. ನನ್ನ ಬ್ಲಾಗ್ ಬರಹಗಳನ್ನು ಅವರೆಲ್ಲಾ ಪ್ರೀತಿ, ಅಭಿಮಾನ, ಗೌರವಗಳಿಂದ ಓದುತ್ತಿದ್ದರು.

ಈ ಐದು ವರ್ಷಗಳಲ್ಲಿ ಬ್ಲಾಗ್‍ಗಳೆಲ್ಲಾ ಹಿನ್ನೆಲೆಗೆ ಸರಿದು ಫೇಸ್ಬುಕ್ ಟಿಟ್ವರ್‌ನಂತಹ ಸೋಷಿಯಲ್ ಮಿಡಿಯಾಗಳು ಮುನ್ನೆಲೆಗೆ ಬಂದವು. ಈ ಕಾಲಚಲನೆಯಲ್ಲಿ ಅದೇ ನನ್ನ ಪ್ರೀತಿಯ ಬಳಗ ಈಗ ಕಾಂಗಿ, ಗಂಜಿ ಗಿರಾಕಿ,ಪ್ರೆಸ್ಟಿಟ್ಯೂಟ್ ಎಂದೆಲ್ಲಾ ಹಿಯಾಳಿಸಿ ಕರೆಯುತ್ತಿದೆ’ ಅಕ್ಕಾ ಎಂದ ಬಾಯಿ ಈಗ ಅಕ್ಕನ್ ಎನ್ನುತ್ತಿದೆ. ಈ ದಿಢೀರ್ ಬದಲಾವಣೆಗೆ ಕಾರಣವಾದರೂ ಏನು?

ನಿಮಗೆ ನೆನಪಿರಬಹುದು, 2014ರಲ್ಲಿ ಶಿವಮೊಗ್ಗಾ ಜಿಲ್ಲೆಯ ಹೊಸನಗರದಲ್ಲಿರುವ ರಾಮಚಂದ್ರಾಪುರ ಮಠದಲ್ಲಿ ರಾಮಕಥಾ ಗಾಯಕಿಯಾಗಿದ್ದ ಪ್ರೇಮಲತಾ ಎಂಬಾಕೆ ತನ್ನ ಮೇಲೆ ಮಠದ ಸ್ವಾಮೀಜಿಯಾದ ರಾಘವೇಶ್ವರ ಭಾರತಿಯವರು ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆಂದು ಕೋರ್ಟ್ ಮೆಟ್ಟಲೇರಿದರು. ವಿಚಾರಣೆಗಾಗಿ ಕೋರ್ಟ್ ಸ್ವಾಮೀಜಿಗೆ ನೋಟೀಸ್ ನೀಡಿತು. ಆದರೆ ಸ್ವಾಮೀಜಿ ಅನೇಕ ಸಬೂಬುಗಳನ್ನು ಹೇಳುತ್ತಾ ದೈಹಿಕ ಪರೀಕ್ಷೆಗೆ ಒಳಗಾಗಲೇ ಇಲ್ಲ.[ ಇವತ್ತಿನವರೆಗೂ] ಮಾತ್ರವಲ್ಲ ನ್ಯಾಯಾಧೀಶರ ಮೇಲೆಯೇ ಒತ್ತಡ ತಂದು ಆರು ನ್ಯಾಯಾಧೀಶರು ಈ ಪ್ರಕರಣದಿಂದ ಹಿಂದೆ ಸರಿಯುವಂತೆ ಮಾಡಿದರು. ಹಾಗೂ ತನ್ನ ವಿರುದ್ಧವಾಗಿ ಮಾಧ್ಯಮಗಳಲ್ಲಿ ಯಾವ ವರದಿಯೂ ಪ್ರಕಟವಾಗದಂತೆ ನೋಡಿಕೊಂಡರು . ನ್ಯಾಯಾಲಯದಿಂದಲೂ ಸ್ಟೇ ತಂದುಕೊಂಡು ಈ ಪ್ರಕರಣದ ಬೆಳವಣಿಗೆಗಳನ್ನು ಸಾರ್ವಜನಿಕರ ಕಣ್ಣಿಂದ ಅಜ್ನಾತವಾಗಿರಿಸಲು ಪ್ರಯತ್ನಪಟ್ಟರು. ಆದರೆ ಈ ಪ್ರಕರಣದ ವಿಶ್ಲೇಶಣಾ ಬರಹವೊಂದನ್ನು ಬರೆದು ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದೆ. ಅದನ್ನು ನನ್ನ ಫೇಸ್‍ಬುಕ್ ನಲ್ಲಿಯೂಹಂಚಿಕೊಂಡಾಗ ಅದಕ್ಕೆ ಸ್ವಾಮೀಜಿಯ ಭಕ್ತರಿಂದ ಬಲವಾದ ವಿರೋಧ ವ್ಯಕ್ತವಾಯ್ತು.

ADVERTISEMENT

ಈ ಪ್ರಕರಣಕ್ಕಿಂತ ಎರಡು ವರ್ಷದ ಹಿಂದೆ ಬಿಡದಿಯ ನಿತ್ಯಾನಂದ ಸ್ವಾಮೀಜಿಯೂ ಅತ್ಯಾಚಾರ ಪ್ರಕರಣ ಸಿಕ್ಕಿಹಾಕಿಕೊಂಡಿದ್ದರು. ಆದರೆ ಅವರು ಕೋರ್ಟ್ ನೋಟೀಸ್ ನೀಡಿದಾಗಲೆಲ್ಲ ನ್ಯಾಯಾಲಯದ ಮುಂದೆ ಹಾಜರಾಗಿದ್ದು ಮಾತ್ರವಲ್ಲ ಮಾಧ್ಯಮಗಳು ಕೇಳಿದ್ದ ಪ್ರಶ್ನೆಗಳಿಗೆಲ್ಲಾ ನಗುನಗುತ್ತಲೇ ಉತ್ತರಿಸುತ್ತಿದ್ದರು. ಅದನ್ನೆಲ್ಲಾ ಗಮನಿಸಿದ ನಾನು ನನ್ನ ಫೇಸ್ಬುಕ್ ಅಕೌಂಟಿನಲ್ಲಿ ‘…ರಾಘವೇಶ್ವರ ಭಾರತಿಗಿಂತ ನಿತ್ಯಾನಂದನೇ ಹೆಚ್ಚು ಡೆಮಾಕ್ರಾಟಿಕ್ ಎನಿಸುತ್ತದೆ’ ಎಂದು ಬರೆದೆ. ಇದು ರಾಘವೇಶ್ವರ ಭಾರತಿಯವರ ಭಕ್ತರನ್ನು ಇನ್ನೊಮ್ಮೆ ಕೆರಳಿಸಿತು. ಅವರ ಹವ್ಯಕ ಭಕ್ತರು ನನ್ನ ಮೇಲೆ ಮುಗಿ ಬಿದ್ದರು. ಸ್ತ್ರೀ-ಪುರುಷ ಭೇದವಿಲ್ಲದೆ ಎಲ್ಲರೂ ನನ್ನ ವಾಲ್ ಗೆ ದಾಳಿಯಿಟ್ಟು ಅಶ್ಲೀಲ ನಿಂದನೆಗೆ ಇಳಿದರು. ಅವರಲ್ಲಿ ರಾಘವೇಂದ್ರ ಸುಬ್ರಹಣ್ಯ ಎಂಬಾತ ಕತ್ತೆಮನೆ ಲಾಜಿಕ್ ಎಂಬ ಹ್ಯಾಶ್ ಟ್ಯಾಗ್ ಸೃಷ್ಟಿಸಿದ. ಆತನ ಹಿಂಬಾಲಕರು ಇದನ್ನು ಬಳಸಿಕೊಂಡು ಟ್ರೋಲ್ ಮಾಡತೊಡಗಿದರು, ಚಾರಿತ್ರ್ಯವಧೆಗೆ ಇಳಿದರು.

ಭಕ್ತರು ಎಂಬ ವರ್ಗವೇ ಹಾಗೆ, ಅವರು ಹಿಂಬಾಲಕರು. ಅವರ ತಲೆಯಲ್ಲಿ ಮಿದುಳೆಂಬುದು ಇರುವುದಿಲ್ಲ. ಅದರಲ್ಲೂ ಬ್ರಾಹ್ಮಣ್ಯವನ್ನು ತಲೆಗೇರಿಸಿಕೊಂಡ ಒಂದು ವರ್ಗವಿದೆ. ಅದು ಎಲ್ಲಾ ಜಾತಿಯಲ್ಲೂ ಇರುತ್ತದೆ. ಅವರು ವ್ಯವಸ್ಥೆಯ ಪೋಷಕರು. ಅವರ ದೃಷ್ಟಿಯಲ್ಲಿ ಹೆಣ್ಣು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ವಾಹಕಳಷ್ಟೇ. ಅವಳೆಲ್ಲಾದರೂ ಸ್ವಂತಿಕೆಯನ್ನು ಮೈಗೂಡಿಸಿಕೊಂಡರೆ, ಪ್ರಶ್ನಿಸಿಸಲು ಆರಂಭಿಸಿದರೆ ಅವಳು ‘ಸಂಸ್ಕೃತಿ ಹೀನಳು’ ಎಂದು ಪ್ರಚಾರ ಮಾಡಿಅವಳನ್ನು ಎಲ್ಲಾ ರೀತಿಯಲ್ಲೂ ಹಣಿಯಲು ಈ ಭಕ್ತಪಡೆ ಸನ್ನದ್ದವಾಗುತ್ತದೆ.
ಮೇಲೆ ಹೇಳಿದ ಭಕ್ತ ಪಡೆಯ ಮಾತುಬಿಡಿ. ವಿಶ್ವೇಶ್ವರ ಭಟ್ಟರಂತ ಹಿರಿಯ ಪತ್ರಕರ್ತರು, ಪವನಜ, ಶ್ರೀವತ್ಸ ಜೋಶಿಯಂತಹ ಬರಹಗಾರರೂ ಕೂಡಾ ಕೂಡಾ ಈ ಹ್ಯಾಶ್ ಟ್ಯಾಗ್ ಅನ್ನು ಒಪ್ಪಿಕೊಂಡು ನನ್ನ ಚಾರಿತ್ರ್ಯಕ್ಕಿಳಿದರೆಂದರೆ ಈ ಮನೋಭಾವನೆಯನ್ನು ಯಾವ ವ್ಯಾಧಿಗೆ ಹೋಲಿಸಬೇಕೆಂಬುದೇ ನನಗೆ ತಿಳಿಯುತ್ತಿಲ್ಲ. ಪಿತೃಪ್ರಧಾನ ಸಮಾಜದ ಅಲಿಖಿತ ಕಾನೂನನ್ನು ಮೈಗೂಡಿಸಿಕೊಂಡಿರುವ ನಮ್ಮ ಗಂಡಸರೆಲ್ಲರೂ ಹೆಣ್ಣುಮಕ್ಕಳ ಮೇಲೆ ಒಂದು ರೀತಿಯ ಸಾಮೂಹಿಕ ಮಾಲೀಕತ್ವವನ್ನು ಹೊಂದಿರುವ ಹಾಗೆ ವರ್ತಿಸುತ್ತಾರೆ. ಇದರ ಬಲದಿಂದಲೇ ಗಾಯಕಿ ಪಲ್ಲವಿ ಅರುಣ್ ರಂತಹ ಸ್ವಂತ ಅಭಿಪ್ರಾಯವಿರುವ, ಸ್ವಾವಲಂಬಿ ಮಹಿಳೆಗೆ, ಯಾರೂ ಅಲ್ಲದ ಒಬ್ಬ ಗಂಡಸು, ‘ನೀವು ಇಂತದ್ದನ್ನೆಲ್ಲ ಹೇಳುವುದನ್ನು ಬಿಟ್ಟು ಹಾಡು ಹೇಳಿಕೊಂಡೇ ಇರಿ’ ಎಂದು ಉಚಿತ ಸಲಹೆ ನೀಡುವಷ್ಟು ಕೊಬ್ಬು ತೋರಿಸಬಲ್ಲರು!

ಮೊದ ಮೊದಲಿಗೆ ಇದಕ್ಕೆ ನಾನು ನನ್ನ ವಾಲ್ ನಲ್ಲಿ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದೆ. ಅನಂತರದಲ್ಲಿ ಇವೆಲ್ಲಾ ‘ನಮೋ ಬ್ರಿಗೇಡ್’ ಎಂಬ ಕೇಸರಿಪಡೆಯ ಗರಡಿಯಲ್ಲಿ ಪಳಗಿದ ಅಥವಾ ಅದರ ಪ್ರಭಾವವಲಯಕ್ಕೆ ಸಿಲುಕಿದ ಎಳೆಲಿಂಬೆಕಾಯಿಗಳು ಎಂಬುದು ಅರಿವಿಗೆ ಬರುತ್ತಲೇ ಅವರೆಲ್ಲರನ್ನು ಅನ್ಪ್ರೆಂಡ್ ಮಾಡುತ್ತಾ ಬಂದೆ. ತೀರಾ ಅಶ್ಲೀಲ ಭಾಷೆ ಬಳಸಿದವರನ್ನು ಬ್ಲಾಕ್ ಮಾಡಲಾರಂಭಿಸಿದೆ. ಇದಕ್ಕಿಂತಲೂ ಹೆಚ್ಚಿನದನ್ನು ಮಾಡಲು ಸಾಧ್ಯವಿರಲಿಲ್ಲ. ಯಾಕೆಂದರೆ ಇಂತವರೆಲ್ಲಾ ರಾಜಕೀಯಾಶ್ರಿತರು. ಪ್ರಭಾವಿ ರಾಜಕಾರಣಿಗರು ಇವರ ಹಿತ ಕಾಯುತ್ತಿದ್ದರು. ಮಹಿಳೆಯರನ್ನು, ದಲಿತರನ್ನು, ಅಲ್ಪಸಂಖ್ಯಾತರನ್ನು, ಅಸಹಾಯಕರನ್ನು ಟ್ರೋಲ್ ಮಾಡುವ ಕೆಲವು ವ್ಯಕ್ತಿಗಳನ್ನು ಸ್ವತಃ ನಮ್ಮ ಪ್ರಧಾನಮಂತ್ರಿಗಳೇ ಫಾಲೋ ಮಾಡುತ್ತಿರುವುದನ್ನು ಸ್ವಾತಿ ಚತ್ರುವೇದಿ ಎಂಬ ಪತ್ರಕರ್ತೆ ತನ್ನ ತನ್ನ ‘I Am A Troll’ ಎಂಬ ಪುಸ್ತಕದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟದ್ದನ್ನು ನಾನು ಓದಿದ್ದೆ. ಹಾಗಾಗಿ ನಮ್ಮಂತವರು ನ್ಯಾಯಕ್ಕಾಗಿ ಯಾರತ್ತ ನೋಡಬೇಕು? ‘ಹರ ಕೊಲ್ಲಲ್ ಪರ ಕಾಯ್ವನೇ?’

ಪ್ರತಿಯೊಬ್ಬರಿಗೂ ರಾಜಕೀಯ ಪ್ರಜ್ಞೆ ಇರಲೇಬೇಕು. ಆಗ ನಾವು ಉತ್ತಮ ಜನಪ್ರತಿನಿಧಿಯನ್ನು ಆಯ್ಕೆಮಾಡಿಕೊಳ್ಳಬಹುದು. ಒಳ್ಳೆಯ ಸಮಾಜವನ್ನು ಕಟ್ಟಬಹುದು. ಬರಹಗಾರರಿಗಂತೂ ಇದು ಇನ್ನೂ ಪ್ರಖರವಾಗಿರಬೇಕು. ಆದರೆ ಮಹಿಳೆಯರು ರಾಜಕೀಯ ಪ್ರಜ್ನೆ ಬೆಳೆಸಿಕೊಳ್ಳುವುದನ್ನು ಸಧ್ಯದ ನಮ್ಮ ಸಮಾಜ ಒಪ್ಪುತ್ತಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ನೀವು ಹೂ-ಹಣ್ಣು ಪ್ರೇಮ-ಪ್ರೀತಿಯ ಬಗ್ಗೆ ಕವನಗಳನ್ನು ಬರೆದು ಹಾಯಾಗಿರಬಹುದು, ಒಳ್ಳೆಯ ಪೋಟೋಗಳನ್ನು ಅಪ್ಲೋಡ್ ಮಾಡಿ ಖುಷಿ ಹಂಚಬಹುದು. ತನ್ನನ್ನು ತಾನು ಮಾರ್ಕೆಟ್ಮಾಡಿಕೊಳ್ಳಲು ತಮ್ಮ ವಿವಿಧ ಭಂಗಿಯ ಸೌಂದರ್ಯ ಸೂಸುವ ಪೋಟೋಗಳನ್ನು ಹಾಕಿ ಅಪಾರ ಲೈಕ್ , ಕಾಮೆಂಟ್ ಗಳನ್ನು ಪಡೆದುಕೊಳ್ಳಬಹುದು. ಆದರೆ ರಾಜಕೀಯ ನಿಲುವುಳ್ಳ, ಸಮ ಸಮಾಜದ ಕಟ್ಟುವ ತುಡಿತದ ಪೋಸ್ಟ್ ಗಳನ್ನು ಹಾಕಿದರೆ ಸಾಕು ಎಲ್ಲೆಲ್ಲಿಂದಲೋ ರಣಹದ್ದುಗಳಂತೆ ಭಕ್ತರ ಪಡೆ ಧಾವಿಸಿ ಬರುತ್ತದೆ. ವಾಲ್ ತುಂಬಾ ಹಿಕ್ಕೆ ಹಾಕುತ್ತದೆ. ಇದರಲ್ಲಿ ಗಂಡು ಹೆಣ್ಣೆಂಬ ಬೇಧವಿಲ್ಲ. ಎಲ್ಲರು ಪುರುಷ ಮನಸ್ಥಿತಿಯವರೇ, ಈಗೀಗ ಮಹಿಳೆಯರು ನನ್ನ ವಾಲ್ ಗೆ ಬರುವುದು ಕಡಿಮೆಯಾಗಿದೆ.
ನನಗೆ ಸ್ಪಷ್ಟವಾದ ರಾಜಕೀಯ ಮತ್ತು ಧಾರ್ಮಿಕ ನಿಲವುಗಳಿವೆ. ನನ್ನದೇ ಬದುಕನ್ನು ನಾನು ಬದುಕುತ್ತಿದ್ದೇನೆ ಎಂಬ ಎಚ್ಚರವಿದೆ. ಇಂತಹ ನಿಲುವನ್ನು ಭಾರತೀಯ ಸಾಂಪ್ರಧಾಯಿಕ ಮನಸು ಒಪ್ಪುತ್ತಿಲ್ಲ. ಹಾಗಾಗಿ ಕೇಸರಿಪಡೆ ನಮ್ಮಂತವರನ್ನು ಟ್ರೋಲ್ ಮಾಡುತ್ತಿದೆ. ಆದರೆ ಎಂತಹ ವೈಯಕ್ತಿಕ ನಿಂದನೆಗಿಳಿದರೂ ನಾವು ಜಗ್ಗಲಾರೆವು ಬಗ್ಗಲಾರೆವು, ಭೂಮಿಯಲ್ಲಿ ಕಾಲೂರಿ ನಿಂತು ಆಕಾಶದತ್ತ ಮುಖಮಾಡಿರುವ ಹತ್ತಾರು ಕೈಗಳನ್ನು ಹೊಂದಿರುವ ಸಮಚಿತ್ತದ ಏಕಾಂಗಿಯರು ನಾವು. ನಮ್ಮನ್ನು ನೀವು ಏನೂ ಮಾಡಲಾರಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.