ಇಸ್ಲಾಮಾಬಾದ್:‘ಕಾಶ್ಮೀರದ ಸಮಸ್ಯೆಯನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳಲು ಭಾರತದ ಜತೆ ಸಮಾನತೆ, ನ್ಯಾಯ ಮತ್ತು ಪರಸ್ಪರ ಗೌರವದ ತತ್ವಗಳ ಆಧಾರದ ಮೇಲೆ ಶಾಂತಿಯುತ ಸಂಬಂಧವನ್ನು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಬಯಸಿದ್ದಾರೆ’ ಎಂದುಮಾಧ್ಯಮ ವರದಿಗಳು ಶುಕ್ರವಾರ ಹೇಳಿವೆ.
ಕಾಶ್ಮೀರ ವಿಷಯದಲ್ಲಿ ಭಾರತ- ಪಾಕ್ ನಡುವಿನ ಶೀಥಲ ಪರಿಸ್ಥಿತಿ ತಡೆದು, ದ್ವಿಪಕ್ಷೀಯ ಸಂಬಂಧ ವೃದ್ಧಿಗೆ, ಗಡಿಯಾಚೆಗಿನ ಭಯೋತ್ಪಾದನೆ ನಿಗ್ರಹಿಸಲು ಹಾಗೂದಕ್ಷಿಣ ಏಷ್ಯಾದಲ್ಲಿ ದೀರ್ಘಕಾಲದ ಶಾಂತಿ ಮತ್ತು ಸ್ಥಿರತೆ ಖಾತ್ರಿಪಡಿಸುವ ಮಹತ್ವದ ಪಾತ್ರ ವಹಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಷರೀಫ್ ಮನವಿ ಮಾಡಿದ್ದಾರೆ.
ಪಾಕಿಸ್ತಾನಕ್ಕೆ ಹೊಸದಾಗಿ ನೇಮಕಗೊಂಡ ಆಸ್ಟ್ರೇಲಿಯಾದ ಹೈಕಮಿಷನರ್ ನೀಲ್ ಹಾಕಿನ್ಸ್ ಅವರ ಜತೆ ಗುರುವಾರ ನಡೆಸಿದ ಸಭೆಯಲ್ಲಿ ಷರೀಫ್ ಅವರು,ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಮತ್ತು ಕಾಶ್ಮೀರಿ ಜನರ ಆಶಯಗಳಿಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದ ಶಾಂತಿಯುತವಾಗಿ ಪರಿಹರಿಸುವುದು ಅಗತ್ಯ ಎಂದು ಹೇಳಿರುವುದಾಗಿ ಪ್ರಧಾನಿ ಕಚೇರಿಯ ಹೇಳಿಕೆ ಉಲ್ಲೇಖಿಸಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯವಾಗಿ ವಾಸಿಸುವ ಸ್ಥಳೀಯರಲ್ಲದವರು ಮತದಾರರ ಪಟ್ಟಿ ಸೇರಲು ಮತ್ತು ಕೇಂದ್ರಾಡಳಿತ ಪ್ರದೇಶದ ಚುನಾವಣೆಯಲ್ಲಿ ಮತ ಚಲಾಯಿಸಲು ಕೇಂದ್ರ ಸರ್ಕಾರ ಅನುಮತಿಸಿದ ಕೆಲವೇ ದಿನಗಳಲ್ಲಿ ಷರೀಫ್ ಅವರ ಈ ಹೇಳಿಕೆ ಹೊರಬಿದ್ದಿದೆ.
ಕಾಶ್ಮೀರದಲ್ಲಿ ಜನಸಂಖ್ಯಾ ಬದಲಾವಣೆಗಳನ್ನುಕಾನೂನುಬಾಹಿರವಾಗಿ ಜಾರಿಗೆ ತರುತ್ತಿರುವ ಭಾರತದ ಪ್ರಯತ್ನಗಳನ್ನು ತಕ್ಷಣವೇ ಗಮನಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಪಾಕ್ ವಿದೇಶಾಂಗ ಸಚಿವಾಲಯ ಮನವಿ ಮಾಡಿದೆ.
‘ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ನೆರೆಯ ದೇಶಗಳೊಂದಿಗೆ ಸಹಜ ಸಂಬಂಧವನ್ನು ಭಾರತ ಬಯಸುತ್ತದೆ. ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣ ಸೃಷ್ಟಿ ಪಾಕಿಸ್ತಾನದ ಜವಾಬ್ದಾರಿ’ ಎಂದು ಭಾರತ ಪುನರುಚ್ಚರಿಸಿದೆ.
‘ಜಮ್ಮು ಮತ್ತು ಕಾಶ್ಮೀರವು ದೇಶದ ಅವಿಭಾಜ್ಯ ಅಂಗ. ಈ ವಾಸ್ತವ ಒಪ್ಪಿಕೊಂಡು, ಭಾರತ ವಿರೋಧಿ ಪ್ರಚಾರ ನಿಲ್ಲಿಸಬೇಕು’ ಎಂದು ಭಾರತ ಪಾಕ್ಗೆ ಕಿವಿ ಮಾತು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.