Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 25 ಜೂನ್‌ 2023

ಪ್ರಜಾವಾಣಿ ವಿಶೇಷ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಜಿಪ್ಟ್ ದೇಶದ ಅತ್ಯುನ್ನತ ಗೌರವವಾದ 'ಆರ್ಡರ್ ಆಫ್ ದಿ ನೈಲ್' (Order of the Nile) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈಜಿಪ್ಟ್ ಅಧ್ಯಕ್ಷ ಅಬ್ದೆಲ್‌ ಫತ್ತಾಹ್ ಎಲ್‌–ಸಿಸಿ ಅವರು ಮೋದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆದರಿಕೆಯಂತೆ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿಯನ್ನು ನೀಡಲು ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ರೆಡ್‌ ಬರ್ಡ್‌ ಏವಿಯೇಷನ್ ಅಕಾಡೆಮಿಯ ತರಬೇತಿ ವಿಮಾನ ಕಲಬುರಗಿಯ ಚಿತ್ತಾಪುರ ತಾಲ್ಲೂಕಿನ ಪೇಟೆ ಸೀರೂರ್ ಗ್ರಾಮದ ಜಮೀನೊಂದರಲ್ಲಿ ಭಾನುವಾರ ತುರ್ತು ಭೂಸ್ಪರ್ಶ ಮಾಡಿದೆ.

ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ತುರ್ತಾಗಿ ಇಳಿಯಬೇಕಾಯಿತು.

ಮಣಿಪುರದಲ್ಲಿ ಮಹಿಳೆಯರ ಪ್ರತಿಭಟನೆಗೆ ಮಣಿದ ಸೇನಾ ಯೋಧರು ಬಂಧಿಸಿದ್ದ 12 ಬಂಡುಕೋರರನ್ನು ಬಿಡುಗಡೆ ಮಾಡಿದ್ದಾರೆ. ಇಥಾಮ್‌ ಗ್ರಾಮದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಸೇನಾ ಯೋಧರು 12 ಬಂಡುಕೋರರನ್ನು ಬಂಧಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಬೇಕಿದ್ದ ಬಾಕಿ ಮೊತ್ತ ಇತ್ಯರ್ಥವಾಗದ ಕಾರಣ 2022–23ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿಸಿದ್ದ ಭತ್ತವನ್ನು ಹಲ್ಲಿಂಗ್‌ ಮಾಡಲು (ಭತ್ತವನ್ನು ಅಕ್ಕಿ ಮಾಡಿಕೊಡುವ ಪ್ರಕ್ರಿಯೆ) ಅಕ್ಕಿ ಗಿರಣಿಗಳ ಮಾಲೀಕರು ನಿರಾಕರಿಸಿದ್ದು, 1.90 ಲಕ್ಷ ಟನ್‌ ಭತ್ತ ಗೋದಾಮುಗಳಲ್ಲೇ ಉಳಿದಿದೆ.

ಎರಡು ದಿನಗಳ ಈಜಿಪ್ಟ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೆಲಿಯೊಪೊಲಿಸ್ ಯುದ್ಧ ಸ್ಮಾರಕಕ್ಕೆ ತೆರಳಿ ಮೊದಲನೇ ಮಹಾಯುದ್ಧದಲ್ಲಿ ಪ್ರಾಣ ತೆತ್ತಿದ್ದ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸಿದರು.

ಗಾಜಿನ ಮನೆಯಲ್ಲಿ ವಾಸಿಸುವವರು ಕಲ್ಲು ಎಸೆಯಬಾರದು ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಠಾಕ್ರೆ ನಡುವಿನ ವಾಗ್ದಾಳಿ ತೀರಾ ವೈಯಕ್ತಿಕ ಮಟ್ಟಕ್ಕೆ ಇಳಿದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಒಂಡಾದಲ್ಲಿ ಭಾನುವಾರ ಸರಕು ಸಾಗಣೆ ರೈಲೊಂದು ನಿಂತಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಆಗ್ನೇಯ ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭಾನುವಾರವೂ ಮುಂದುವರಿದಿದ್ದು, ನೀರಿನ ಮಟ್ಟ ಇಳಿಮುಖವಾಗುತ್ತಿದ್ದರೂ ಒಂಬತ್ತು ಜಿಲ್ಲೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರ್ಮಾಪಕ ವಿಜಯ್‌ ಕಿರಗಂದೂರು ಒಡೆತನದ ಸಂಸ್ಥೆ, ಕ್ರಿಕೆಟ್‌ ಕುರಿತಾದ ಚಿತ್ರವೊಂದಕ್ಕೆ ಸಜ್ಜಾಗಿದೆ. ತನ್ನ ಅಂಗಸಂಸ್ಥೆ ಕೆಆರ್‌ಜಿ ಸ್ಟುಡಿಯೋಸ್‌ ಮೂಲಕ ‘ಕಿರಿಕ್‌–ಎಟ್‌’ ಎಂಬ ಶೀರ್ಷಿಕೆಯುಳ್ಳ ಸಿನಿಮಾ ಘೋಷಿಸಿದೆ. ನಟರಾದ ದಾನೀಶ್‌ ಸೇಟ್‌ ಹಾಗೂ ನವೀನ್‌ ಶಂಕರ್‌ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ಕನ್ನಡಿಗ, ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಬದುಕಿನ ಕಥೆಯನ್ನು ಹೇಳಲಿದೆ ಎನ್ನುತ್ತಿವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.