<p>ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಹೋಗುವ ದಾರಿಯಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಚಾಚಿದಷ್ಟೂ ದೂರ ಭತ್ತದ ಗದ್ದೆಗಳು, ಅಡಿಕೆ ತೋಟಗಳು ಕಂಗೊಳಿಸುತ್ತವೆ. ಆದರೆ ಈ ಹಸಿರು ಜಗತ್ತಿನ ಮಧ್ಯೆ ಅಚ್ಚರಿಯೊಂದು ಕಣ್ಣಿಗೆ ಬೀಳುತ್ತದೆ. ಅದೇ ಉಪ್ಪಿನ ಗುಡ್ಡೆಗಳು. ಬಿಸಿಲಿನಲ್ಲಿ ಝಳ ಝಳ ಹೊಳೆಯುವ ಆ ಗದ್ದೆಗಳಲ್ಲಿ, ಕೆಲಸಗಾರರು ಕೈಯಲ್ಲಿ ಕೋಲ ಹಿಡಿದು ಚೌಕಾಕಾರದ ಕಟ್ಟೆಗಳಲ್ಲಿ ಸಂಗ್ರಹಿಸಿದ ನೀರಿನಿಂದ ಕಂದು ಬಣ್ಣದ ಉಪ್ಪನ್ನು ತೆಗೆಯುತ್ತಿರುವ ದೃಶ್ಯ, ‘ಉಪ್ಪನ್ನೂ ಹೀಗೆ ಗದ್ದೆಯಲ್ಲಿ ಬೆಳೆಯುತ್ತಾರಾ?’ ಎಂಬ ಕುತೂಹಲ ಹುಟ್ಟಿಸುತ್ತದೆ.</p>.<p>ಈ ಕುತೂಹಲ ಭರಿತ ಪ್ರಶ್ನೆಗೆ ಉತ್ತರ ಸಿಗುವುದು ಕುಮಟಾ ಸಮೀಪದ ಆಗರ ಸಾಣಿಕಟ್ಟಾದಲ್ಲಿ. ಇಲ್ಲಿನ ಗಜನಿ ಭೂಮಿಯಲ್ಲಿ ಭತ್ತವೋ, ಅಡಕೆಯೋ ಬೆಳೆಯುವುದಿಲ್ಲ; ಬದಲಿಗೆ ನೈಸರ್ಗಿಕವಾಗಿ ಉಪ್ಪು ‘ಬೆಳೆಯುತ್ತದೆ’. ಪಶ್ಚಿಮಘಟ್ಟಗಳಿಂದ ಹರಿದುಬರುವ ಅಘನಾಶಿನಿ ನದಿ ತನ್ನ ದಾರಿಯಲ್ಲಿ ಅನೇಕ ಔಷಧೀಯ ಸಸ್ಯಗಳ ಸಾರವನ್ನು ಹೊತ್ತುಕೊಂಡು ಬರುತ್ತದೆ. ಅದೇ ನೀರನ್ನು ಬಳಸಿಕೊಂಡು ಸಾಣಿಕಟ್ಟಾದಲ್ಲಿ ವಿಶಿಷ್ಟ ಕಂದು ಬಣ್ಣದ ಉಪ್ಪು ತಯಾರಿಸಲಾಗುತ್ತದೆ.</p>.<p>ಈ ಉದ್ಯಮದ ಇತಿಹಾಸವೇ ವಿಶಿಷ್ಟ. 1720ರಲ್ಲೇ ಇಲ್ಲಿ ಉಪ್ಪು ಉತ್ಪಾದನೆ ಆರಂಭವಾಗಿದೆ ಎಂಬುದು ಸ್ಥಳೀಯ ದಾಖಲೆಗಳು ಮತ್ತು ಅಧ್ಯಯನಗಳು ಸೂಚಿಸುತ್ತವೆ. ಆರಂಭದಲ್ಲಿ ಸುಮಾರು 50 ಎಕರೆಯಲ್ಲಿ ಪ್ರಾರಂಭವಾದ ಈ ಕಸುಬು, ಕಾಲಕ್ರಮೇಣ 400–450 ಎಕರೆಗಳಿಗೆ ವಿಸ್ತರಿಸಿದೆ. ಮೊದಲು ನೂರಾರು ಕುಟುಂಬಗಳು ತಮ್ಮ ತಮ್ಮ ಗದ್ದೆಗಳಲ್ಲಿ ಸ್ವತಂತ್ರವಾಗಿ ಉಪ್ಪು ತಯಾರಿಸುತ್ತಿದ್ದವು. ಆದರೆ, ಉದ್ಯೋಗದ ಅನ್ವೇಷಣೆಯಲ್ಲಿ ಹೊರ ಊರುಗಳಿಗೆ ವಲಸೆ ಹೆಚ್ಚಾದಂತೆ, ಈ ಉದ್ಯಮ ಕುಂಠಿತವಾಗುವ ಸಾಧ್ಯತೆ ಎದುರಾಯಿತು.</p>.<p>ಅದೇ ಸಮಯದಲ್ಲಿ 1952ರಲ್ಲಿ ‘ನಾಗರಬೈಲ್ ಉಪ್ಪಿನ ಸಹಕಾರಿ ಸಂಘ’ ಸ್ಥಾಪನೆಯಾಗಿ, ಉಪ್ಪು ಉತ್ಪಾದನೆಗೆ ಹೊಸ ದಿಕ್ಕು ನೀಡಿತು. ಸಹಕಾರಿ ಪದ್ಧತಿಯಲ್ಲಿ ಗದ್ದೆಗಳನ್ನು ಒಟ್ಟುಗೂಡಿಸಿ, ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ವ್ಯವಸ್ಥಿತಗೊಳಿಸಲಾಯಿತು. ಇಂದಿಗೂ ಈ ಸಂಘವೇ ಸಾಣಿಕಟ್ಟಾ ಉಪ್ಪಿನ ಬೆನ್ನೆಲುಬಾಗಿದೆ.</p>.<p>ಉಪ್ಪು ತಯಾರಿಕೆಯ ವಿಧಾನ ನೈಸರ್ಗಿಕವಾದದ್ದು. ಸಮುದ್ರದ ಹಿನ್ನೀರನ್ನು ಕಾಲುವೆಗಳ ಮೂಲಕ ಗದ್ದೆಗಳಿಗೆ ಹರಿಸಿ, ಮೊದಲು ಆಳವಾದ ಕಟ್ಟೆಗಳಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ಹಂತ ಹಂತವಾಗಿ ನೀರನ್ನು ಕಡಿಮೆ ಆಳದ ಕಟ್ಟೆಗಳಿಗೆ ಬಿಡಲಾಗುತ್ತದೆ. 12 ಇಂಚಿನಿಂದ 8 ಇಂಚು, ನಂತರ 6 ಇಂಚು. ಸೂರ್ಯನ ಬಿಸಿಲಿಗೆ ನೀರು ನಿಧಾನವಾಗಿ ಆವಿಯಾಗುತ್ತಾ, ಉಪ್ಪಿನ ಅಂಶ ಮಾತ್ರ ಉಳಿಯುತ್ತದೆ. ಸುಮಾರು 25 ದಿನಗಳ ನಂತರ ಉಪ್ಪು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಬಳಿಕ ಅದನ್ನು ಕೈಯಿಂದ ಸಂಗ್ರಹಿಸಿ, ಅಗತ್ಯ ಪ್ರಮಾಣದಲ್ಲಿ ಆಯೋಡಿನ್ ಸೇರಿಸಿ ಪ್ಯಾಕಿಂಗ್ ಮಾಡಲಾಗುತ್ತದೆ.</p>.<p>ಈ ಪ್ರಕ್ರಿಯೆ ಸಂಪೂರ್ಣವಾಗಿ ಹವಾಮಾನದ ಮೇಲೆ ಅವಲಂಬಿತವಾಗಿದೆ. ಸಾಮಾನ್ಯವಾಗಿ ಫೆಬ್ರುವರಿಯಿಂದ ಮೇ ತನಕ ಸುಮಾರು ನೂರು ದಿನಗಳು ಉಪ್ಪಿನ ಸೀಸನ್ ಇರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳು ಅತ್ಯಧಿಕ ಉತ್ಪಾದನೆಯ ಕಾಲ. ಆದರೆ ಅಕಾಲಿಕ ಮಳೆ ಬಂದರೆ, ಸಂಪೂರ್ಣ ಗದ್ದೆಯೇ ಹಾನಿಯಾಗಬಹುದು. ಸ್ಥಳೀಯ ಕೆಲಸಗಾರರ ಅನುಭವ ಪ್ರಕಾರ, ಕೆಲವೊಮ್ಮೆ ಫೆಬ್ರುವರಿಯಲ್ಲಿ ಸಿಗಬೇಕಾದ ಉಪ್ಪು ಮಾರ್ಚ್ಗೆ ಮುಂದೂಡಲ್ಪಡುತ್ತದೆ.</p>.<p>'ಹವಾಮಾನದ ಪರಿಣಾಮ ಬೆಲೆಯ ಮೇಲೂ ಕಾಣಿಸುತ್ತದೆ. ಒಂದು ಕಾಲದಲ್ಲಿ ₹10–13 ಕೆಜಿಗೆ ಸಿಗುತ್ತಿದ್ದ ಉಪ್ಪು, ಈಗ ಉತ್ಪಾದನಾ ವೆಚ್ಚ ಮತ್ತು ಬೇಡಿಕೆಯ ಪರಿಣಾಮವಾಗಿ ₹25–30ಗೆ ಏರಿದೆ. ಮಾರುಕಟ್ಟೆಯಲ್ಲಿ ₹35–50ಗೆ ಮಾರಾಟವಾಗುತ್ತದೆ’ ಎನ್ನುತ್ತಾರೆ ಕಿರಾಣಿ ಮಾಲೀಕರಾದ ಭಗೀರಥ ಕಾಮತ್.</p>.<p>ಈ ಉಪ್ಪಿನ ಹಿಂದೆ ನಿಂತಿರುವುದು ‘ಆಗೇರ’ ಸಮುದಾಯ. ತಲೆಮಾರಿನಿಂದ ತಲೆಮಾರಿಗೆ ಈ ಕಸುಬನ್ನು ಮುಂದುವರೆಸುತ್ತಿರುವ ಇವರು, ಗದ್ದೆ ತಯಾರಿಕೆಯಿಂದ ಹಿಡಿದು ಉಪ್ಪು ಸಂಗ್ರಹಿಸುವವರೆಗೂ ಎಲ್ಲಾ ಹಂತಗಳಲ್ಲಿ ಪರಿಣತಿ ಹೊಂದಿದ್ದಾರೆ. ಹಿರಿಯ ಸಾಹಿತಿ ರಾಮಕೃಷ್ಣ ಗುಂದಿ ಅವರ ಪ್ರಕಾರ, ಉಪ್ಪಿನ ಆಗರಗಳಲ್ಲಿ ವಾಸಿಸುತ್ತಿದ್ದ ಕಾರಣದಿಂದಲೇ ಈ ಸಮುದಾಯಕ್ಕೆ ‘ಆಗೇರರು’ ಎಂಬ ಹೆಸರು ಬಂದಿತು ಎನ್ನಲಾಗುತ್ತದೆ.</p>.<p>ಸಾಣಿಕಟ್ಟಾ ಉಪ್ಪಿನ ಮತ್ತೊಂದು ವಿಶೇಷತೆ ಅದರ ರುಚಿ ಮತ್ತು ಗುಣ. ಅಘನಾಶಿನಿ ನದಿ ಪಶ್ಚಿಮಘಟ್ಟದ ಔಷಧೀಯ ಸಸ್ಯಗಳ ನಡುವೆ ಹರಿಯುವುದರಿಂದ, ಅದರ ನೀರಿನಲ್ಲಿ ಖನಿಜಾಂಶಗಳಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ನಂಬಿಕೆ. ಇದರಿಂದ ಈ ಉಪ್ಪು ಸಾಮಾನ್ಯ ಉಪ್ಪಿಗಿಂತ ಸ್ವಲ್ಪ ವಿಭಿನ್ನ ರುಚಿ ಹೊಂದಿದೆ. ಮಾವಿನ ಉಪ್ಪಿನಕಾಯಿ, ಒಣಮೀನು ತಯಾರಿಕೆ ಮತ್ತು ಅಡುಗೆಯಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಆಯುಷ್ ಚಿಕಿತ್ಸೆಯಲ್ಲಿ, ವಿಶೇಷವಾಗಿ ಸೂರ್ಯಸ್ನಾನ ಮತ್ತು ಕೆಲವು ನೈಸರ್ಗಿಕ ಚಿಕಿತ್ಸಾ ವಿಧಾನಗಳಲ್ಲಿ ಇದರ ಬಳಕೆ ಕಂಡುಬರುತ್ತದೆ.</p>.<p>ಮಾರುಕಟ್ಟೆಯ ವಿಚಾರಕ್ಕೆ ಬಂದರೆ, ಸಾಣಿಕಟ್ಟಾ ಉಪ್ಪು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲೇ ಅಲ್ಲದೇ, ಪಕ್ಕದ ಗೋವಾ ರಾಜ್ಯಕ್ಕೂ ಸರಬರಾಜಾಗುತ್ತದೆ. ಹುಬ್ಬಳ್ಳಿ-ಧಾರವಾಡ, ಹಾವೇರಿ, ಹಾನಗಲ್ ಭಾಗಗಳಲ್ಲಿ ಇದಕ್ಕೆ ವಿಶೇಷ ಬೇಡಿಕೆ ಇದೆ. ಸ್ಥಳೀಯ ಕಿರಾಣಿ ವ್ಯಾಪಾರಿಗಳು ಇದನ್ನು ಕ್ವಿಂಟಲ್ಗಳಲ್ಲಿ ಖರೀದಿಸಿ ಚಿಲ್ಲರೆ ಮಾರಾಟ ಮಾಡುತ್ತಾರೆ.</p>.<p>ಈ ಉಪ್ಪಿನ ಉದ್ಯಮಕ್ಕೆ ಇತಿಹಾಸದ ಇನ್ನೊಂದು ಮುಖವೂ ಇದೆ. ಪ್ರಾದೇಶಿಕ ಆಡಳಿತದ ಕಾಲದಲ್ಲಿ ಇದು ಬೈಂದೂರು ಅರಸರ ಅಧೀನದಲ್ಲಿದ್ದು, ನಂತರ ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಅವರ ಆಳ್ವಿಕೆಗೆ ಒಳಪಟ್ಟಿತು. ಟಿಪ್ಪು ಸುಲ್ತಾನ್ ಕಾಲದಲ್ಲೇ ಉಪ್ಪಿಗೆ ತೆರಿಗೆ ವಿಧಿಸಲಾಗಿತ್ತು ಎಂಬ ಉಲ್ಲೇಖಗಳು ದೊರೆಯುತ್ತವೆ. ನಂತರ ಬ್ರಿಟಿಷರ ಆಳ್ವಿಕೆಯಲ್ಲಿ ಉಪ್ಪಿನ ಮೇಲಿನ ತೆರಿಗೆ ಹೆಚ್ಚಾಗಿ, ಸಾಮಾನ್ಯ ಜನರಿಗೆ ಭಾರವಾಗಿತ್ತು.</p>.<p>1930ರ ಕಾಲಘಟ್ಟದಲ್ಲಿ ಮಹಾತ್ಮ ಗಾಂಧಿ ಅವರ ಉಪ್ಪಿನ ಸತ್ಯಾಗ್ರಹದಿಂದ ಪ್ರೇರಿತರಾಗಿ, ಈ ಭಾಗದಲ್ಲೂ ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ ಹೋರಾಟಗಳು ನಡೆದವು. ಅದರ ಪರಿಣಾಮವಾಗಿ ಪಕ್ಕದ ಅಂಕೋಲಾ ಭಾಗಕ್ಕೆ ‘ಕರ್ನಾಟಕದ ಬಾರ್ಡೋಲಿ’ ಎಂಬ ಹೆಸರೇ ಬಂದಿದೆ ಎನ್ನುವುದು ಸ್ಥಳೀಯರ ಮಾತು.</p>.<p>ಇಂದಿಗೂ ಸಾಣಿಕಟ್ಟಾದಲ್ಲಿ ಸಾವಿರಾರು ಮೆಟ್ರಿಕ್ ಟನ್ ಉಪ್ಪು ಉತ್ಪಾದನೆಯಾಗುತ್ತಿದ್ದು, ನೂರಾರು ಕುಟುಂಬಗಳು ಇದರ ಮೇಲೆ ಅವಲಂಬಿತವಾಗಿವೆ. ನೈಸರ್ಗಿಕ ವಿಧಾನ, ಪಾರಂಪರಿಕ ಜ್ಞಾನ ಮತ್ತು ಸಹಕಾರಿ ವ್ಯವಸ್ಥೆಯ ಸಂಗಮವೇ ಈ ಉದ್ಯಮವನ್ನು ಇಂದಿಗೂ ಜೀವಂತವಾಗಿರಿಸಿದೆ.</p>.<p>ಸಾಣಿಕಟ್ಟಾ ಉಪ್ಪು ಕೇವಲ ಅಡುಗೆ ಮನೆಯ ಒಂದು ಪದಾರ್ಥವಲ್ಲ; ಅದು ಪಶ್ಚಿಮಘಟ್ಟದ ನೈಸರ್ಗಿಕ ಸೊಗಡು, ತಲೆಮಾರಿನ ಶ್ರಮ, ಇತಿಹಾಸದ ಹಾದಿ ಮತ್ತು ಸ್ಥಳೀಯ ಸಂಸ್ಕೃತಿಯ ಜೀವಂತ ಗುರುತು. ಒಂದು ಚಿಟಿಕೆ ಉಪ್ಪಿನಲ್ಲೇ ಈ ನೆಲದ ರುಚಿ, ಜನರ ಶ್ರಮ ಮತ್ತು ಕಾಲದ ಕಥನಗಳು ಬೆರೆತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಹೋಗುವ ದಾರಿಯಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಚಾಚಿದಷ್ಟೂ ದೂರ ಭತ್ತದ ಗದ್ದೆಗಳು, ಅಡಿಕೆ ತೋಟಗಳು ಕಂಗೊಳಿಸುತ್ತವೆ. ಆದರೆ ಈ ಹಸಿರು ಜಗತ್ತಿನ ಮಧ್ಯೆ ಅಚ್ಚರಿಯೊಂದು ಕಣ್ಣಿಗೆ ಬೀಳುತ್ತದೆ. ಅದೇ ಉಪ್ಪಿನ ಗುಡ್ಡೆಗಳು. ಬಿಸಿಲಿನಲ್ಲಿ ಝಳ ಝಳ ಹೊಳೆಯುವ ಆ ಗದ್ದೆಗಳಲ್ಲಿ, ಕೆಲಸಗಾರರು ಕೈಯಲ್ಲಿ ಕೋಲ ಹಿಡಿದು ಚೌಕಾಕಾರದ ಕಟ್ಟೆಗಳಲ್ಲಿ ಸಂಗ್ರಹಿಸಿದ ನೀರಿನಿಂದ ಕಂದು ಬಣ್ಣದ ಉಪ್ಪನ್ನು ತೆಗೆಯುತ್ತಿರುವ ದೃಶ್ಯ, ‘ಉಪ್ಪನ್ನೂ ಹೀಗೆ ಗದ್ದೆಯಲ್ಲಿ ಬೆಳೆಯುತ್ತಾರಾ?’ ಎಂಬ ಕುತೂಹಲ ಹುಟ್ಟಿಸುತ್ತದೆ.</p>.<p>ಈ ಕುತೂಹಲ ಭರಿತ ಪ್ರಶ್ನೆಗೆ ಉತ್ತರ ಸಿಗುವುದು ಕುಮಟಾ ಸಮೀಪದ ಆಗರ ಸಾಣಿಕಟ್ಟಾದಲ್ಲಿ. ಇಲ್ಲಿನ ಗಜನಿ ಭೂಮಿಯಲ್ಲಿ ಭತ್ತವೋ, ಅಡಕೆಯೋ ಬೆಳೆಯುವುದಿಲ್ಲ; ಬದಲಿಗೆ ನೈಸರ್ಗಿಕವಾಗಿ ಉಪ್ಪು ‘ಬೆಳೆಯುತ್ತದೆ’. ಪಶ್ಚಿಮಘಟ್ಟಗಳಿಂದ ಹರಿದುಬರುವ ಅಘನಾಶಿನಿ ನದಿ ತನ್ನ ದಾರಿಯಲ್ಲಿ ಅನೇಕ ಔಷಧೀಯ ಸಸ್ಯಗಳ ಸಾರವನ್ನು ಹೊತ್ತುಕೊಂಡು ಬರುತ್ತದೆ. ಅದೇ ನೀರನ್ನು ಬಳಸಿಕೊಂಡು ಸಾಣಿಕಟ್ಟಾದಲ್ಲಿ ವಿಶಿಷ್ಟ ಕಂದು ಬಣ್ಣದ ಉಪ್ಪು ತಯಾರಿಸಲಾಗುತ್ತದೆ.</p>.<p>ಈ ಉದ್ಯಮದ ಇತಿಹಾಸವೇ ವಿಶಿಷ್ಟ. 1720ರಲ್ಲೇ ಇಲ್ಲಿ ಉಪ್ಪು ಉತ್ಪಾದನೆ ಆರಂಭವಾಗಿದೆ ಎಂಬುದು ಸ್ಥಳೀಯ ದಾಖಲೆಗಳು ಮತ್ತು ಅಧ್ಯಯನಗಳು ಸೂಚಿಸುತ್ತವೆ. ಆರಂಭದಲ್ಲಿ ಸುಮಾರು 50 ಎಕರೆಯಲ್ಲಿ ಪ್ರಾರಂಭವಾದ ಈ ಕಸುಬು, ಕಾಲಕ್ರಮೇಣ 400–450 ಎಕರೆಗಳಿಗೆ ವಿಸ್ತರಿಸಿದೆ. ಮೊದಲು ನೂರಾರು ಕುಟುಂಬಗಳು ತಮ್ಮ ತಮ್ಮ ಗದ್ದೆಗಳಲ್ಲಿ ಸ್ವತಂತ್ರವಾಗಿ ಉಪ್ಪು ತಯಾರಿಸುತ್ತಿದ್ದವು. ಆದರೆ, ಉದ್ಯೋಗದ ಅನ್ವೇಷಣೆಯಲ್ಲಿ ಹೊರ ಊರುಗಳಿಗೆ ವಲಸೆ ಹೆಚ್ಚಾದಂತೆ, ಈ ಉದ್ಯಮ ಕುಂಠಿತವಾಗುವ ಸಾಧ್ಯತೆ ಎದುರಾಯಿತು.</p>.<p>ಅದೇ ಸಮಯದಲ್ಲಿ 1952ರಲ್ಲಿ ‘ನಾಗರಬೈಲ್ ಉಪ್ಪಿನ ಸಹಕಾರಿ ಸಂಘ’ ಸ್ಥಾಪನೆಯಾಗಿ, ಉಪ್ಪು ಉತ್ಪಾದನೆಗೆ ಹೊಸ ದಿಕ್ಕು ನೀಡಿತು. ಸಹಕಾರಿ ಪದ್ಧತಿಯಲ್ಲಿ ಗದ್ದೆಗಳನ್ನು ಒಟ್ಟುಗೂಡಿಸಿ, ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ವ್ಯವಸ್ಥಿತಗೊಳಿಸಲಾಯಿತು. ಇಂದಿಗೂ ಈ ಸಂಘವೇ ಸಾಣಿಕಟ್ಟಾ ಉಪ್ಪಿನ ಬೆನ್ನೆಲುಬಾಗಿದೆ.</p>.<p>ಉಪ್ಪು ತಯಾರಿಕೆಯ ವಿಧಾನ ನೈಸರ್ಗಿಕವಾದದ್ದು. ಸಮುದ್ರದ ಹಿನ್ನೀರನ್ನು ಕಾಲುವೆಗಳ ಮೂಲಕ ಗದ್ದೆಗಳಿಗೆ ಹರಿಸಿ, ಮೊದಲು ಆಳವಾದ ಕಟ್ಟೆಗಳಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ಹಂತ ಹಂತವಾಗಿ ನೀರನ್ನು ಕಡಿಮೆ ಆಳದ ಕಟ್ಟೆಗಳಿಗೆ ಬಿಡಲಾಗುತ್ತದೆ. 12 ಇಂಚಿನಿಂದ 8 ಇಂಚು, ನಂತರ 6 ಇಂಚು. ಸೂರ್ಯನ ಬಿಸಿಲಿಗೆ ನೀರು ನಿಧಾನವಾಗಿ ಆವಿಯಾಗುತ್ತಾ, ಉಪ್ಪಿನ ಅಂಶ ಮಾತ್ರ ಉಳಿಯುತ್ತದೆ. ಸುಮಾರು 25 ದಿನಗಳ ನಂತರ ಉಪ್ಪು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಬಳಿಕ ಅದನ್ನು ಕೈಯಿಂದ ಸಂಗ್ರಹಿಸಿ, ಅಗತ್ಯ ಪ್ರಮಾಣದಲ್ಲಿ ಆಯೋಡಿನ್ ಸೇರಿಸಿ ಪ್ಯಾಕಿಂಗ್ ಮಾಡಲಾಗುತ್ತದೆ.</p>.<p>ಈ ಪ್ರಕ್ರಿಯೆ ಸಂಪೂರ್ಣವಾಗಿ ಹವಾಮಾನದ ಮೇಲೆ ಅವಲಂಬಿತವಾಗಿದೆ. ಸಾಮಾನ್ಯವಾಗಿ ಫೆಬ್ರುವರಿಯಿಂದ ಮೇ ತನಕ ಸುಮಾರು ನೂರು ದಿನಗಳು ಉಪ್ಪಿನ ಸೀಸನ್ ಇರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳು ಅತ್ಯಧಿಕ ಉತ್ಪಾದನೆಯ ಕಾಲ. ಆದರೆ ಅಕಾಲಿಕ ಮಳೆ ಬಂದರೆ, ಸಂಪೂರ್ಣ ಗದ್ದೆಯೇ ಹಾನಿಯಾಗಬಹುದು. ಸ್ಥಳೀಯ ಕೆಲಸಗಾರರ ಅನುಭವ ಪ್ರಕಾರ, ಕೆಲವೊಮ್ಮೆ ಫೆಬ್ರುವರಿಯಲ್ಲಿ ಸಿಗಬೇಕಾದ ಉಪ್ಪು ಮಾರ್ಚ್ಗೆ ಮುಂದೂಡಲ್ಪಡುತ್ತದೆ.</p>.<p>'ಹವಾಮಾನದ ಪರಿಣಾಮ ಬೆಲೆಯ ಮೇಲೂ ಕಾಣಿಸುತ್ತದೆ. ಒಂದು ಕಾಲದಲ್ಲಿ ₹10–13 ಕೆಜಿಗೆ ಸಿಗುತ್ತಿದ್ದ ಉಪ್ಪು, ಈಗ ಉತ್ಪಾದನಾ ವೆಚ್ಚ ಮತ್ತು ಬೇಡಿಕೆಯ ಪರಿಣಾಮವಾಗಿ ₹25–30ಗೆ ಏರಿದೆ. ಮಾರುಕಟ್ಟೆಯಲ್ಲಿ ₹35–50ಗೆ ಮಾರಾಟವಾಗುತ್ತದೆ’ ಎನ್ನುತ್ತಾರೆ ಕಿರಾಣಿ ಮಾಲೀಕರಾದ ಭಗೀರಥ ಕಾಮತ್.</p>.<p>ಈ ಉಪ್ಪಿನ ಹಿಂದೆ ನಿಂತಿರುವುದು ‘ಆಗೇರ’ ಸಮುದಾಯ. ತಲೆಮಾರಿನಿಂದ ತಲೆಮಾರಿಗೆ ಈ ಕಸುಬನ್ನು ಮುಂದುವರೆಸುತ್ತಿರುವ ಇವರು, ಗದ್ದೆ ತಯಾರಿಕೆಯಿಂದ ಹಿಡಿದು ಉಪ್ಪು ಸಂಗ್ರಹಿಸುವವರೆಗೂ ಎಲ್ಲಾ ಹಂತಗಳಲ್ಲಿ ಪರಿಣತಿ ಹೊಂದಿದ್ದಾರೆ. ಹಿರಿಯ ಸಾಹಿತಿ ರಾಮಕೃಷ್ಣ ಗುಂದಿ ಅವರ ಪ್ರಕಾರ, ಉಪ್ಪಿನ ಆಗರಗಳಲ್ಲಿ ವಾಸಿಸುತ್ತಿದ್ದ ಕಾರಣದಿಂದಲೇ ಈ ಸಮುದಾಯಕ್ಕೆ ‘ಆಗೇರರು’ ಎಂಬ ಹೆಸರು ಬಂದಿತು ಎನ್ನಲಾಗುತ್ತದೆ.</p>.<p>ಸಾಣಿಕಟ್ಟಾ ಉಪ್ಪಿನ ಮತ್ತೊಂದು ವಿಶೇಷತೆ ಅದರ ರುಚಿ ಮತ್ತು ಗುಣ. ಅಘನಾಶಿನಿ ನದಿ ಪಶ್ಚಿಮಘಟ್ಟದ ಔಷಧೀಯ ಸಸ್ಯಗಳ ನಡುವೆ ಹರಿಯುವುದರಿಂದ, ಅದರ ನೀರಿನಲ್ಲಿ ಖನಿಜಾಂಶಗಳಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ನಂಬಿಕೆ. ಇದರಿಂದ ಈ ಉಪ್ಪು ಸಾಮಾನ್ಯ ಉಪ್ಪಿಗಿಂತ ಸ್ವಲ್ಪ ವಿಭಿನ್ನ ರುಚಿ ಹೊಂದಿದೆ. ಮಾವಿನ ಉಪ್ಪಿನಕಾಯಿ, ಒಣಮೀನು ತಯಾರಿಕೆ ಮತ್ತು ಅಡುಗೆಯಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಆಯುಷ್ ಚಿಕಿತ್ಸೆಯಲ್ಲಿ, ವಿಶೇಷವಾಗಿ ಸೂರ್ಯಸ್ನಾನ ಮತ್ತು ಕೆಲವು ನೈಸರ್ಗಿಕ ಚಿಕಿತ್ಸಾ ವಿಧಾನಗಳಲ್ಲಿ ಇದರ ಬಳಕೆ ಕಂಡುಬರುತ್ತದೆ.</p>.<p>ಮಾರುಕಟ್ಟೆಯ ವಿಚಾರಕ್ಕೆ ಬಂದರೆ, ಸಾಣಿಕಟ್ಟಾ ಉಪ್ಪು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲೇ ಅಲ್ಲದೇ, ಪಕ್ಕದ ಗೋವಾ ರಾಜ್ಯಕ್ಕೂ ಸರಬರಾಜಾಗುತ್ತದೆ. ಹುಬ್ಬಳ್ಳಿ-ಧಾರವಾಡ, ಹಾವೇರಿ, ಹಾನಗಲ್ ಭಾಗಗಳಲ್ಲಿ ಇದಕ್ಕೆ ವಿಶೇಷ ಬೇಡಿಕೆ ಇದೆ. ಸ್ಥಳೀಯ ಕಿರಾಣಿ ವ್ಯಾಪಾರಿಗಳು ಇದನ್ನು ಕ್ವಿಂಟಲ್ಗಳಲ್ಲಿ ಖರೀದಿಸಿ ಚಿಲ್ಲರೆ ಮಾರಾಟ ಮಾಡುತ್ತಾರೆ.</p>.<p>ಈ ಉಪ್ಪಿನ ಉದ್ಯಮಕ್ಕೆ ಇತಿಹಾಸದ ಇನ್ನೊಂದು ಮುಖವೂ ಇದೆ. ಪ್ರಾದೇಶಿಕ ಆಡಳಿತದ ಕಾಲದಲ್ಲಿ ಇದು ಬೈಂದೂರು ಅರಸರ ಅಧೀನದಲ್ಲಿದ್ದು, ನಂತರ ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಅವರ ಆಳ್ವಿಕೆಗೆ ಒಳಪಟ್ಟಿತು. ಟಿಪ್ಪು ಸುಲ್ತಾನ್ ಕಾಲದಲ್ಲೇ ಉಪ್ಪಿಗೆ ತೆರಿಗೆ ವಿಧಿಸಲಾಗಿತ್ತು ಎಂಬ ಉಲ್ಲೇಖಗಳು ದೊರೆಯುತ್ತವೆ. ನಂತರ ಬ್ರಿಟಿಷರ ಆಳ್ವಿಕೆಯಲ್ಲಿ ಉಪ್ಪಿನ ಮೇಲಿನ ತೆರಿಗೆ ಹೆಚ್ಚಾಗಿ, ಸಾಮಾನ್ಯ ಜನರಿಗೆ ಭಾರವಾಗಿತ್ತು.</p>.<p>1930ರ ಕಾಲಘಟ್ಟದಲ್ಲಿ ಮಹಾತ್ಮ ಗಾಂಧಿ ಅವರ ಉಪ್ಪಿನ ಸತ್ಯಾಗ್ರಹದಿಂದ ಪ್ರೇರಿತರಾಗಿ, ಈ ಭಾಗದಲ್ಲೂ ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ ಹೋರಾಟಗಳು ನಡೆದವು. ಅದರ ಪರಿಣಾಮವಾಗಿ ಪಕ್ಕದ ಅಂಕೋಲಾ ಭಾಗಕ್ಕೆ ‘ಕರ್ನಾಟಕದ ಬಾರ್ಡೋಲಿ’ ಎಂಬ ಹೆಸರೇ ಬಂದಿದೆ ಎನ್ನುವುದು ಸ್ಥಳೀಯರ ಮಾತು.</p>.<p>ಇಂದಿಗೂ ಸಾಣಿಕಟ್ಟಾದಲ್ಲಿ ಸಾವಿರಾರು ಮೆಟ್ರಿಕ್ ಟನ್ ಉಪ್ಪು ಉತ್ಪಾದನೆಯಾಗುತ್ತಿದ್ದು, ನೂರಾರು ಕುಟುಂಬಗಳು ಇದರ ಮೇಲೆ ಅವಲಂಬಿತವಾಗಿವೆ. ನೈಸರ್ಗಿಕ ವಿಧಾನ, ಪಾರಂಪರಿಕ ಜ್ಞಾನ ಮತ್ತು ಸಹಕಾರಿ ವ್ಯವಸ್ಥೆಯ ಸಂಗಮವೇ ಈ ಉದ್ಯಮವನ್ನು ಇಂದಿಗೂ ಜೀವಂತವಾಗಿರಿಸಿದೆ.</p>.<p>ಸಾಣಿಕಟ್ಟಾ ಉಪ್ಪು ಕೇವಲ ಅಡುಗೆ ಮನೆಯ ಒಂದು ಪದಾರ್ಥವಲ್ಲ; ಅದು ಪಶ್ಚಿಮಘಟ್ಟದ ನೈಸರ್ಗಿಕ ಸೊಗಡು, ತಲೆಮಾರಿನ ಶ್ರಮ, ಇತಿಹಾಸದ ಹಾದಿ ಮತ್ತು ಸ್ಥಳೀಯ ಸಂಸ್ಕೃತಿಯ ಜೀವಂತ ಗುರುತು. ಒಂದು ಚಿಟಿಕೆ ಉಪ್ಪಿನಲ್ಲೇ ಈ ನೆಲದ ರುಚಿ, ಜನರ ಶ್ರಮ ಮತ್ತು ಕಾಲದ ಕಥನಗಳು ಬೆರೆತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>