ಶಿಕ್ಷಣ ಕಥನ
ಲೇ: ನಿರಂಜನಾರಾಧ್ಯ ವಿ.ಪಿ.
ಪ್ರ: ಅಹರ್ನಿಶಿ ಪ್ರಕಾಶನ
ಸಂ: 9449174662
ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ನೀತಿ, ಕಾರ್ಯಕ್ರಮ ಮತ್ತು ಅವುಗಳ ಜಾರಿಗಾಗಿ ಹೂಡುವ ಸಂಪನ್ಮೂಲಗಳ ಸ್ಥಿತಿಗತಿ ಬಗ್ಗೆ ಬೆಳಕು ಚೆಲ್ಲುವ ಕೃತಿ ‘ಶಿಕ್ಷಣ ಕಥನ’. ನಮ್ಮ ನಾಡಿನ ಶಿಕ್ಷಣ ತಜ್ಞರಲ್ಲಿ ಒಬ್ಬರಾದ ನಿರಂಜನಾರಾಧ್ಯ ವಿ.ಪಿ. ಈ ಕೃತಿಯ ಲೇಖಕರು. ಶಿಕ್ಷಣಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ಆಯಾ ಕಾಲಘಟ್ಟದಲ್ಲಿ ಬರೆದ ಬಿಡಿ ಬಿಡಿ ಲೇಖನಗಳನ್ನು ಹೊಂದಿರುವ ಕೈಪಿಡಿಯಂತಹ ಕೃತಿಯಿದು.
‘ಸಾಂವಿಧಾನಿಕ ಮೌಲ್ಯಗಳ ನೆಲೆಯಲ್ಲಿ ಒಂದು ಸುಭದ್ರ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಮಾನತೆ ನೆಲೆಯಲ್ಲಿ ನೆರೆಹೊರೆಯ ಸಮಾನ ಶಾಲೆಯ ಚೌಕಟ್ಟಿನಲ್ಲಿ ಕಟ್ಟಿಕೊಳ್ಳುವ ಮೂಲಕ ಭಾರತವನ್ನು ಒಂದು ಸಾರ್ವಭೌಮ ಗಣರಾಜ್ಯವನ್ನಾಗಿಸುವ ಗಂಭೀರ ಚಿಂತನೆಗೆ ಸಕಾಲವಿದು. ಆ ನಿಟ್ಟಿನಲ್ಲಿನ ಬರಹಗಳನ್ನು ಈ ಕೃತಿ ಹೊಂದಿದೆ’ ಎಂದು ಲೇಖಕರು ಪ್ರಸ್ತಾವನೆಯಲ್ಲಿಯೇ ತಿಳಿಸಿದ್ದಾರೆ.
ಪುಸ್ತಕದಲ್ಲಿ ಆರು ವಿಭಾಗಗಳಿವೆ. ರಾಷ್ಟ್ರೀಯ ಶಿಕ್ಷಣ ನೀತಿಯ ಸುತ್ತಮುತ್ತಲಿನ ಚರ್ಚೆಗಳು ಮೊದಲ ವಿಭಾಗದಲ್ಲಿವೆ. ಈ ನೀತಿಯ ಆಗುಹೋಗುಗಳ ಕುರಿತಾದ ಸ್ಪಷ್ಟ ಚಿತ್ರವಣನ್ನು ಲೇಖಕರು ಕಟ್ಟಿಕೊಡುತ್ತಾರೆ. ನೀತಿಯ ಅವಸರದ ಅನುಷ್ಠಾನ ಹೇಗೆ ಅಸಾಂವಿಧಾನಿಕ ಎಂಬುದನ್ನು ಈ ವಿಭಾಗದಲ್ಲಿ ಚರ್ಚಿಸಿದ್ದಾರೆ. ಶಿಕ್ಷಣದಲ್ಲಿ ಭಾಷಾ ಮಾಧ್ಯಮ ಕುರಿತ ಚರ್ಚೆಗಳನ್ನು ಎರಡನೇ ಅಧ್ಯಾಯ ಹೊಂದಿದೆ. ಮಾತೃಭಾಷೆ ಶಿಕ್ಷಣದ ಪ್ರಾಮುಖ್ಯವನ್ನು ಇಲ್ಲಿನ ಲೇಖನಗಳು ವಿವರಿಸುತ್ತವೆ. ಕಲಿಕೆಯಲ್ಲಿ ಪರೀಕ್ಷೆಯ ಪಾತ್ರ, ಶಾಲಾ ಶಿಕ್ಷಣ ಮತ್ತು ಆಯವ್ಯಯ, ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಸುತ್ತಲಿನ ಪ್ರಶ್ನೆಗಳು, ಕೋವಿಡ್ ಕಾಲದಲ್ಲಿ ಶಿಕ್ಷಣದ ಕೂಗು ಸೇರಿದಂತೆ ಶಿಕ್ಷಣ ವ್ಯವಸ್ಥೆ ಸುತ್ತಲಿನ ಸಾಕಷ್ಟು ವಿಚಾರಗಳು ಕೃತಿಯಲ್ಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.