ಇಲ್ಲಿನ ಬಿಡುಗಡೆ ಭೌತಿಕ–ಮಾನಸಿಕ ರೂಪದ್ದೂ ಹೌದು, ತಾತ್ವಿಕ ನೆಲೆಗಟ್ಟಿನದೂ ಹೌದು. ಮಗುವಿನ ಸಿಂಗಾರದ ಪ್ರಕ್ರಿಯೆಯನ್ನು ಚಿತ್ರಿಸುವ ‘ನವಜಾತ ಕವನ’ ಎನ್ನುವ ರಚನೆ, ಸಿಂಗರದ ಸಂಭ್ರಮದ ತುದಿಯಲ್ಲಿ, ‘ಇನ್ನೀಗ ನೀನು ಜಗದ ಕೂಸು’ ಎನ್ನುತ್ತದೆ. ತಾಯೊಬ್ಬಳ ವಾತ್ಸಲ್ಯದ ಚೌಕಟ್ಟಿನ ವಿಸ್ತರಣೆಯಂತೆ ಕಾಣಿಸುವ ಈ ರಚನೆ, ಮಗುವಿಗೂ ತಾಯಿಗೂ ಒಂದು ಬಗೆಯ ಬಿಡುಗಡೆಯೂ ಹೌದು. ‘ನೆಲದಲ್ಲಿ ಸಿಕ್ಕ ನಗೆ’ ಕವಿತೆಯನ್ನು ಗಮನಿಸಿ. ಹೂವಿನ ನೆಪದಲ್ಲಿ ಅಜ್ಜಿ–ಅಮ್ಮನ ಕಳ್ಳುಬಳ್ಳಿ ನೆನಪುಗಳನ್ನು ಕವಯಿತ್ರಿಯಲ್ಲಿ ಮೊಳೆಯಿಸುವ ಈ ಕವಿತೆ, ಗಿಡದೊಂದಿಗೆ ಹೂವು ತೊಟ್ಟು ಮುರಿದುಕೊಳ್ಳುವ ಗಳಿಗೆಯನ್ನು – ಅಂಗಿ ಕಳಚಿದ ಹಾಗೆ ತೊಟ್ಟು ಕಳಚುವೆಯಲ್ಲ’ ಎಂದು ಉದ್ಗರಿಸುತ್ತ, ‘ಬದುಕ ಮೋಹದ ಮರದಲಿರುವವರಿಗೆಲ್ಲ ನಿನ್ನ ದರ್ಶನವಾಗಲೊಮ್ಮೆ’ ಎಂದು ಹಂಬಲಿಸುತ್ತ, ‘ಬಿಟ್ಟು ಹೊರಡುವುದು ಯಾರಿಗೂ ಕಷ್ಟವಲ್ಲ’ ಎನ್ನುವ ಬಿಡುಗಡೆಯ ಅನಿವಾರ್ಯತೆಯನ್ನು ಕಾಣಿಸುತ್ತದೆ.