ಶಾಂತಾದೇವಿ ಕಣವಿ ಅವರ ಹೆಸರು ಆಕಾಶವಾಣಿ ಶ್ರೋತೃಗಳಿಗೆ ಚಿರಪರಿಚಿತ. 1960ರ ದಶಕದಿಂದಲೇ ಅವರು ಬಾನುಲಿ ನಾಟಕಗಳ, ಭಾಷಣಗಳ, ಸಣ್ಣಕಥೆಗಳ ಮೂಲಕ ಛಾಪು ಮೂಡಿಸಿದವರು. ಮನಸ್ಸು ಕದಡುವಂಥ ಮೌಢ್ಯ, ಕೌಟುಂಬಿಕ ದೌರ್ಜನ್ಯಗಳನ್ನು ಖಂಡಿಸಿದ ಧ್ವನಿಯ ಅವರ ನಾಟಕಗಳು ಆ ಕಾಲಘಟ್ಟಕ್ಕೆ ತಕ್ಕಂತೆ ಅರ್ಥಪೂರ್ಣ ಧ್ವನಿ ಹೊಮ್ಮಿಸಿದ್ದವು. ಮೈಸೂರಿನ ‘ಸಂವಾದ’ ಅವರ ಬಾನುಲಿ ಸೃಜನಶೀಲ ಕೆಲಸಗಳೆಲ್ಲವನ್ನೂ ಅಡಕಮಾಡಿ, ‘ಬಾನುಲಿ ಧ್ವನಿ’ ಎಂಬ ಪುಸ್ತಕವಾಗಿ ಪ್ರಕಟಿಸಿದೆ.