ಕನ್ನಡದ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಸಂತೋಷ ಕುಮಾರ ಮೆಹೆಂದಳೆ ಅವರ ನೂತನ ಕಾದಂಬರಿ ‘ವೈಜಯಂತಿಪುರ’ ಕದಂಬ ಸಾಮ್ರಾಟ ಮಯೂರವರ್ಮನ ಮಹಾ ಚರಿತ್ರೆಯಾಗಿದೆ. ವರದಾ ನದಿ ತಟದಲ್ಲಿ ಘಟಿಸುವ ಮಹಾಕಥನವು ಸಣ್ಣ ಸಣ್ಣ ಅಧ್ಯಾಯಗಳ ರೂಪದಲ್ಲಿದ್ದರೂ, ಇಡೀ ಕೃತಿ ಸಾಕಷ್ಟು ಸಂಶೋಧನೆಗಳನ್ನು ಒಳಗೊಂಡಿದೆ ಎಂಬುದು ಓದುತ್ತ ಹೋದಂತೆ ತಿಳಿಯುತ್ತದೆ.
ಲೇಖಕರು ಮಯೂರವರ್ಮನ ಕಥೆಯ ಮೂಲಕ ಕದಂಬ ಸಾಮ್ರಾಜ್ಯವನ್ನು ಓದುಗರಿಗೆ ಪರಿಚಯಿಸುತ್ತ ಹೋಗುತ್ತಾರೆ. ಕನ್ನಡ ಮತ್ತು ಕರ್ನಾಟದಕ ಅಸ್ಮಿತೆಗೆ ಒಂದು ಸಾಮ್ರಾಜ್ಯ ಹೇಗೆ ಕಾರಣವಾಯಿತು ಎಂಬುದರ ವಿವರ ಕಾಣಿಸುತ್ತದೆ. ‘ಇತಿಹಾಸವು ದಾರಿದೀಪವಿದ್ದಂತೆ. ತನ್ನನ್ನು ತಾನು ತೋರಿಸಿಕೊಳ್ಳುತ್ತಾ ಸಾಧನಾ ಪಥದಲ್ಲಿ ಮುನ್ನಡೆಯುವವರಿಗೆ ಇತಿಹಾಸವು ಮಾರ್ಗದರ್ಶಕ ದೀಪವಾಗುತ್ತದೆ. ಇತಿಹಾಸದ ಪ್ರತಿಯೊಂದು ಪುಟದಲ್ಲಿಯೂ ಸ್ವರ್ಣಾಕ್ಷರದಿಂದ ಕಂಗೊಳಿಸಬೇಕಾದ ಹೆಸರು ಮಯೂರವರ್ಮ’ ಎಂದು ಸ್ವರ್ಣವಲ್ಲಿಯ ಗಂಗಾಧರೇಂದ್ರ ಶ್ರೀಗಳು ಕೃತಿಯ ಬೆನ್ನುಡಿಯಲ್ಲಿ ಹೇಳುತ್ತಾರೆ.
‘ಶಾಸನಗಳನ್ನೂ ಒಳಗೊಂಡಂತೆ, ಸಂಶೋಧನಾ ಕೃತಿಗಳನ್ನು ಅಧ್ಯಯನ ಮಾಡಿರುವುದಕ್ಕೆ ಸಾಕ್ಷ್ಯವೆಂಬಂತೆ ಅಡಿ ಟಿಪ್ಪಣಿಯಲ್ಲಿ ಕೃತಿಸೂಚಿಯನ್ನು ಕೊಡಲಾಗಿದೆ. ಅಂದರೆ ಮೂಲ ಎಳೆಯಿಂದಲೇ ಕಾದಂಬರಿ ಬೆಳೆ ಬಂದಿದೆ ಎಂಬುದನ್ನೂ ಖಚಿತಪಡಿಸಲಾಗಿದೆ’ ಎಂದು ಬರಗೂರು ರಾಮಚಂದ್ರಪ್ಪ ಬರೆಯುತ್ತಾರೆ.
ಕದಂಬ ಸಾಮಾಜ್ಯ, ಆ ಕಾಲಘಟ್ಟ, ಸುತ್ತಮುತ್ತಲಿನ ಪರಿಸರ, ಮಯೂರ ವರ್ಮನ ಚರಿತ್ರೆ ಕುರಿತು ಅಧ್ಯಯನಯೋಗ್ಯ ಕೃತಿಯೂ ಹೌದು. ಜೊತೆಗೆ ಕಾದಂಬರಿಯಾಗಿಯೂ ಓದನ್ನು ಸವಿಯಬಹುದು ಎನ್ನುವಂತಹ ಕೃತಿಯಿದು.