<p><em><strong>ಹಿಂದಿಯಲ್ಲಿ: ನಂದಕಿಶೋರ್ ನಂದನ್</strong></em></p><p><em><strong>ಕನ್ನಡಕ್ಕೆ: ಡಿ.ಎನ್. ಶ್ರೀನಾಥ್</strong></em></p>.<p>ಅವನು ಕಡೆಗಂತೂ ದಿಲ್ಲಿಗೆ ಹೋಗಲೇಬೇಕಾಯಿತು. ತನ್ನ ನಗರದಿಂದ ಹೊರ ಹೋಗುತ್ತಲೇ ಅವನಿಗೆ ಭಯ ಆವರಿಸುತ್ತಿತ್ತು. ತನ್ನ ಮನೆಯಿಂದ ಕಚೇರಿಗೆ ಮತ್ತು ಕಚೇರಿಯಿಂದ ಮನೆಗೆ ಬಂದು-ಹೋಗುವ ಮಾರ್ಗವೇ ಅವನ ವಿಶೇಷ ಸ್ಥಳವಾಗಿತ್ತು. ಅವನು ಮಾರ್ಕೆಟ್ಗೆ ಹೋಗುವಾಗಲೂ ಹೆದರುತ್ತಿದ್ದ. ಅವನು ಪ್ರತಿ ಕ್ಷಣವೂ ತಾನು ಅಸುರಕ್ಷಿತ ಎಂಬುದನ್ನು ಮನಗಾಣುತ್ತಿದ್ದ; ಅವನು ತನ್ನ ಮನೆಗೆ ಬಂದು ಬಾಗಿಲನ್ನು ಮುಚ್ಚುವವರೆಗೆ ಭಯದಿಂದ ಕಂಪಿಸುತ್ತಿದ್ದ. ಕಚೇರಿಯಿಂದ ಮರಳಿ ಬಂದು ಪತ್ರಿಕೆಯ ಪುಟಗಳನ್ನು ತೆರೆದಾಗ ಕೊಲೆಯ ಸುದ್ದಿಗಳೆಡೆಗೆ ಅವನ ದೃಷ್ಟಿ ಹರಿಯುತ್ತಿತ್ತು, ಅದನ್ನು ಓದಿ ಕಂಪಿಸುತ್ತಿದ್ದ. ಅದೆಷ್ಟೋ ಸಲ ಅವನ ಹೆಂಡತಿ, ಅವನು ಕಂಪಿಸುವ ಕಾರಣ ಕೇಳಿದಾಗ ಅವನು ಮುಗುಳ್ನಗುತ್ತ ವಿಷಯಾಂತರ ಮಾಡುತ್ತಿದ್ದ. ಆಗಾಗ ಅವನು, ಹಿಂದೂಸ್ತಾನ ಮೊದಲಿನಂತೆಯೇ ಗುಲಾಮಗಿರಿಯ ಅಡಿಯಲ್ಲೇಕೆ ಇರುವುದಿಲ್ಲವೆಂಬ ಕೆಟ್ಟ ಅಪೇಕ್ಷೆಯನ್ನು ಸಹ ಮಾಡುತ್ತಿದ್ದ. ಕಡೇ ಪಕ್ಷ ಹಗಲು ವೇಳೆಯಲ್ಲಿ ಸಂಭವಿಸುವ ಕೊಲೆ, ಸುಲಿಗೆ ಮತ್ತು ಬಲಾತ್ಕಾರದಿಂದ ಮುಕ್ತಿ ಸಿಗುತ್ತಿತ್ತು! ಜೀವನಕ್ಕೆ ರಕ್ಷಣೆಯೇ ಇಲ್ಲದ ಈ ಸ್ವಾತಂತ್ರ್ಯದಿಂದೇನು ಉಪಯೋಗ?</p><p>ಅವನಿಗೆ ದಿಲ್ಲಿ ಹೊಸ ಸ್ಥಳವಾಗಿದ್ದು, ಸರ್ವಥಾ ಅಪರಿಚಿತವಾಗಿತ್ತು. ತನ್ನ ಚಿಕ್ಕ ಕಸಬಾ ನಗರದ ನಂತರ ದಿಲ್ಲಿ ಮಹಾನಗರದ ಸ್ಟೇಷನ್ನಲ್ಲಿ ಇಳಿಯುವಾಗ ಅವನಿಗೆ, ತಾನು ಮೂರ್ಛಾವಸ್ಥೆಯಲ್ಲಿರುವ ಜನರ ನಡುವೆ ತಳ್ಳಲ್ಪಟ್ಟಿದ್ದೇನೆಂದು ಅನ್ನಿಸಿತು. ಯಾರಿಗೂ ಯಾರ ಬಗ್ಗೆ ಚಿಂತೆಯಿಲ್ಲ. ನಿರಂತರವಾಗಿ ಓಡುವ ಜನ. ಅವನು ಅದೆಷ್ಟೋ ಹೊತ್ತು ಸ್ಟೇಷನ್ನಿನ ಗುಂಪಿನಲ್ಲಿ ನಿಂತು ಯೋಚಿಸುತ್ತಿದ್ದ. ರಾತ್ರಿಯ ವೇಳೆ, ತಾನು ಇಲ್ಲಿಂದ ಎಲ್ಲಿಗೆ ಹೋಗುವುದು? ಕಚೇರಿ ಮುಚ್ಚಿರಬೇಕು. ಈ ಅಧಿಕಾರಿಗಳು ಸಹ ಎಷ್ಟು ಕಠೋರ ಜನ! ಅವನು ಕೈಮುಗಿದು ಹೇಳಿದ್ದ, “ಸರ್, ನನ್ನನ್ನು ಕಳುಹಿಸಬೇಡಿ. ನಾನೆಂದೂ ದಿಲ್ಲಿಗೆ ಹೋಗಿಲ್ಲ.” ಆದರೆ ಸಾಹೇಬರು ಬೇರೊಬ್ಬನನ್ನು ಕಳುಹಿಸಲು ಒಪ್ಪಲಿಲ್ಲ. ಅವನು ಮನಸ್ಸಿನಲ್ಲಿ ತನ್ನನ್ನು ತಾನೇ ಹಳಿದುಕೊಂಡ. ದಿಲ್ಲಿಗೆ ಹೋಗುವಲ್ಲಿ ತನ್ನಿಚ್ಛೆ ಈಡೇರುತ್ತಿರಲಿಲ್ಲವೇ? ದಿಲ್ಲಿ ನೋಡಬೇಕೆಂಬುದು ಸಹ ತನ್ನಿಚ್ಛೆಯೇ ಆಗಿತ್ತು. ಆಗ ಅವನಿಗೆ ಖುಷಿಯೂ ಆಗಿತ್ತು. ಅನೇಕ ಅಂತಸ್ತುಗಳ, ಹೊಳೆಯುವ ಕಟ್ಟಡಗಳು, ಅಂಗಡಿಗಳು. ಶೃಂಗರಿಸಿಕೊಂಡ ಹುಡುಗಿಯರು ಮತ್ತು ಮಹಿಳೆಯರು. ಅವನು ಕೆಲವು ಕ್ಷಣ ಗುಂಪಿನ ಮಹಾಸಮುದ್ರವನ್ನು ಮರೆತು ಮುಗ್ಧಭಾವನೆಯಿಂದ ಎಲ್ಲಾ ದೃಶ್ಯಗಳನ್ನು ನೋಡುತ್ತಿದ್ದ. ದಿಲ್ಲಿ ಮುಗುಳ್ನಗೆ ತುಂಬಿದ ನಗರ! ಹೀಗೆಂದು ಎಲ್ಲೋ ಓದಿದ್ದ. ವಾಸ್ತವವಾಗಿಯೂ ದಿಲ್ಲಿ ಮುಗುಳ್ನಗೆ ತುಂಬಿದ ನಗರ. ಆಗಲೇ ಅವನಿಗೆ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಧ್ವನಿ ಕೇಳಿಸಿತು. ಅವನು ತಾನು ಉಳಿಯುವ ಸ್ಥಳದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿರಲಿಲ್ಲ, ಹೀಗಾಗಿ ಭಯವಾಯಿತು. ಹೋಟೆಲ್ನಲ್ಲಿ ಉಳಿಯುವ ಸಾಮರ್ಥ್ಯ ತನ್ನಲ್ಲಿ ಎಲ್ಲಿದೆ? ಸಾಹೇಬರು ಬಂದು-ಹೋಗುವ ಖರ್ಚನ್ನಷ್ಟೇ ಕೊಟ್ಟಿದ್ದಾರೆ. ಹೋಟೆಲ್ನಲ್ಲಿ ಸಹ ಕೊಲೆಗಳಾಗುತ್ತವೆ. ಪಟ್ನಾದ ಒಂದು ಹೋಟೆಲ್ನಲ್ಲಿ ಅನೇಕ ಯಾತ್ರಿಕರ ಶವಗಳು ಸಿಕ್ಕಿದ್ದವು. ಅವನು ಧರ್ಮಶಾಲೆಯಲ್ಲಿಯೇ ಉಳಿಯಲು ನಿರ್ಧರಿಸಿದ್ದ.</p><p>ಅವನು ಎದುರಿಗೆ ನಿಂತಿದ್ದ ಟ್ರಾಫಿಕ್ ಪೊಲೀಸರ ಸಮೀಪಕ್ಕೆ ಹೋದ. ಅವರಿಗೆ, “ನಾನು ದಿಲ್ಲಿಗೆ ಮೊದಲ ಬಾರಿಗೆ ಬಂದಿದ್ದೇನೆ, ಯಾವುದಾದರೂ ಧರ್ಮಶಾಲೆಯ ವಿಳಾಸ ಹೇಳಿ, ನಾನು ಅಲ್ಲಿ ರಾತ್ರಿ ಕಳೆಯಬೇಕಿದೆ” ಎಂದ. ಟ್ರಾಫಿಕ್ ಪೊಲೀಸ್ ಅವನನ್ನು ಆಪಾದಮಸ್ತಕ ನೋಡಿ, ಕೈಯೆತ್ತಿ ಒಂದು ಆಟೋರಿಕ್ಷಾವನ್ನು ಕರೆದ. ಅದರ ಡ್ರೈವರ್ನೊಂದಿಗೆ ಕಣ್ಣುಗಳಿಂದಲೇ ಮಾತನಾಡಿ, ಅವನಿಗೆ ರಿಕ್ಷಾದಲ್ಲಿ ಕೂರಲು ಹೇಳಿದ. ತಾನು ರಿಕ್ಷಾದಲ್ಲಿ ಕೂತು, ಧರ್ಮಶಾಲೆಗೆ ಹೋದಾಗ ಡ್ರೈವರ್ ಹೆಚ್ಚು ಬಾಡಿಗೆ ಕೇಳಿದರೆ ಎಂದು ಕೂರುತ್ತಾ ಭಯಪಟ್ಟ. ಆಟೋರಿಕ್ಷಾ ಒಂದಾದ ನಂತರ ಒಂದರಂತೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಮಾರ್ಕೆಟ್ಗಳಿಂದ ಹಾದು ಬಿರ್ಲಾ ಧರ್ಮಶಾಲೆಗೆ ಬಂತು. ಎದುರಿಗೆ ಬಣ್ಣ-ಬಣ್ಣದ ಬಲ್ಬ್ಗಳಿಂದ ಅಲಂಕರಿಸಿದ ಒಂದು ವಿಶಾಲ ಭವ್ಯ ಮಂದಿರವಿತ್ತು.</p><p>“ಇಲ್ಲಿ ದೇವಸ್ಥಾನವೂ ಇದೆ, ಧರ್ಮಶಾಲೆಯೂ ಇದೆ...” ಆಟೋರಿಕ್ಷಾ ಡ್ರೈವರ್ ಅವನಿಗೆ ಹೇಳುತ್ತಿದ್ದ.<br>“ಎಷ್ಟಾಯ್ತು?” ಅವನು ಕೇಳಿದ.<br>“ನೂರು ರೂಪಾಯಿ.” ಆಟೋ ಡ್ರೈವರ್ ಮೀಟರ್ ನೋಡಿ ಹೇಳಿದ.<br>“ನೂರು ರೂಪಾಯಿ?” ಅವನಿಗೆ ಆಶ್ಚರ್ಯವಾಯಿತು. ದುಃಖವೂ ಆಯಿತು. ಆಟೋರಿಕ್ಷಾದವನ ದೊಡ್ಡ-ದೊಡ್ಡ ಕಣ್ಣುಗಳು ಮತ್ತು ಅವನ ಕರ್ಕಶ ಧ್ವನಿ ಕೇಳಿ, ಬಾಡಿಗೆ ಕಡಿಮೆ ಮಾಡು ಎಂದು ಹೇಳುವ ಧೈರ್ಯವಾಗಲಿಲ್ಲ. ಅವನು ಸಿಟ್ಟಿನಿಂದ ತನ್ನ ಮೂರ್ಖತನಕ್ಕೆ ತಾನೇ ಹಳಿದುಕೊಳ್ಳುತ್ತಾ ಜೇಬಿನಿಂದ ನೂರರ ನೋಟನ್ನು ತೆಗೆದು ಅವನೆಡೆಗೆ ಎಸೆದ. ಆಟೋರಿಕ್ಷಾದ ಡ್ರೈವರ್ ಅವನ ಈ ವರ್ತನೆಗೆ ಅವನನ್ನು ದುರುಗುಟ್ಟಿ ನೋಡಿ, ನೋಟನ್ನು ತೆಗೆದುಕೊಂಡು ಹೊರಟು ಹೋದ. ತಾನು ಹೀಗೆ ನೋಟನ್ನು ಎಸೆಯಬಾರದಿತ್ತು ಎಂದು ಯೋಚಿಸಿದ. ಇದು ತನಗಾದ ಅವಮಾನವೆಂದು ತಿಳಿದು ಡ್ರೈವರ್ ತನ್ನ ಮೇಲೆ ಕೈ ಮಾಡಿದ್ದರೆ? ಅವನು ಭಯದಿಂದ ಥರಥರ ಕಂಪಿಸಿದ, ನಂತರ ಈಗೇನು ಮಾಡಬೇಕೆಂದು ಯೋಚಿಸಿದ. ತಾನು ದೇವಸ್ಥಾನದ ಒಳಗೆ ಹೋಗಿ ದೇವರ ದರ್ಶನ ಮಾಡುವುದೋ ಅಥವಾ ಧರ್ಮಶಾಲೆಯಲ್ಲಿ ಉಳಿಯಲು ಜಾಗ ನೋಡುವುದೋ? ಎರಡು-ಮೂರು ನಿಮಿಷಗಳ ನಂತರ ಹೊರಬಂದು ಜನರು ಕಳಚಿಟ್ಟಿದ್ದ ಚಪ್ಪಲಿಗಳ ಜಾಗಕ್ಕೆ ಬಂದು, ತನ್ನ ಚಪ್ಪಲಿಗಳನ್ನು ಕಳಚಿಟ್ಟು ದೇವಸ್ಥಾನದೊಳಗೆ ಹೋದ.</p><p>ಅವನು ದೇವಸ್ಥಾನದಿಂದ ಹೊರಬಂದಾಗ, ಇದು ಬಂಡವಾಳಶಾಹಿ ಕಟ್ಟಿಸಿದ, ಐಶ್ವರ್ಯ ಮತ್ತು ವೈಭವದ ವಿರಾಟ ಪ್ರದರ್ಶನ ಎಂಬುದನ್ನು ಮರೆತ. ಅವನು ದೇವಸ್ಥಾನವನ್ನು ಕಟ್ಟಿಸಿದವರ ಬಗ್ಗೆ ಕೃತಜ್ಞತಾಭಾವನೆಯಿಂದ ಬೀಗುತ್ತಿದ್ದ. ಧರ್ಮಶಾಲೆಯ ಕಡೆಗೆ ಹೋಗುವ ಮಾರ್ಗದಲ್ಲಿ ಒಂದು ಸಣ್ಣ ಅಂಗಡಿಯಿತ್ತು. ಅವನು ಆ ಅಂಗಡಿಯಲ್ಲಿ ಒಂದು ದಿಲ್ಲಿ-ಗೈಡ್ ಪುಸ್ತಕವನ್ನು ಕೊಂಡ. ನಾಳೆ ಯಾವುದೇ ವೇಳೆಯಲ್ಲಿ ಕೆಲಸವಾಗಬಹುದು. ಅವನು ಮೊದಲು ಎದ್ದು ಬೆಳಿಗ್ಗೆ ರಾಜಘಾಟ್ಗೆ ಹೋಗುತ್ತಾನೆ. ಅಲ್ಲಿಯ ರಾಷ್ಟ್ರಪಿತ ಅವರ ಸಮಾಧಿಗೆ ಹೂಮಾಲೆಗಳನ್ನು ಅರ್ಪಿಸುತ್ತಾನೆ. ಅಶುಭ ಗಳಿಗೆಯಾಗಿತ್ತೆ? 48 ವರ್ಷಗಳ ಹಿಂದೆ ತಂದೆಯವರು ಹೇಳಿದ ಒಂದು ಅಶುಭ ಘಟನೆಯ ಬಗ್ಗೆ ಗಮನ ಹರಿಯಿತು, ಆಗ ಅವರು ಕಚೇರಿಯಿಂದ ಮರಳಿ ಬರುತ್ತಿದ್ದರು. ರಸ್ತೆಯಲ್ಲಿದ್ದ ಅಂಗಡಿಗಳು ಮುಚ್ಚುತ್ತಿರುವುದನ್ನು ನೋಡಿ ಅವರಿಗೆ, ಅಂಗಡಿಗಳೆಲ್ಲವೂ ಇದ್ದಕ್ಕಿದ್ದಂತೆ ಏಕೆ ಮುಚ್ಚುತ್ತಿವೆ? ನಗರದ ನಾಲ್ಕೂ ಕಡೆ ಏಕೆ ಅಂಧಕಾರವಿದೆ? ಎಂಬುದು ಅರ್ಥವಾಗುತ್ತಿರಲಿಲ್ಲ. ನಾಥೂರಾಮ ಎಂಬುವವನು ಗುಂಡು ಹೊಡೆದು ರಾಷ್ಟ್ರಪಿತನನ್ನು ಕೊಂದಿರುವ ವಿಷಯ ತಿಳಿದು ಅವರು ಗಾಢ ಖಿನ್ನತೆಗೆ ಒಳಗಾಗಿದ್ದರು. ಅವನು ಸಹ ಈ ನೆನಪಿನಿಂದಾಗಿ ವಿಚಲಿತನಾದ.</p><p>ಧರ್ಮಶಾಲೆಯ ಹೊರಗೆ ಒಬ್ಬ ಕಾವಲುಗಾರ ನಿಂತಿದ್ದ. ಕಾವಲುಗಾರ ಅವನನ್ನು ಒಳಹೋಗಲು ಬಿಡಲಿಲ್ಲ. ಅವನಿಗೆ ಆಶ್ಚರ್ಯವಾಯಿತು. ಅವನು ತನ್ನ ಉಡುಪುಗಳನ್ನು ನೋಡಿಕೊಂಡ. ಅವನು ಖಾದಿಯ ದಪ್ಪ ಪಂಚೆ ಮತ್ತು ಕುರ್ತಾ ಧರಿಸಿದ್ದ. ಉಡುಪು ರೈಲಿನ ಜನಸಂದಣಿಯಲ್ಲಿ ಸುಕ್ಕು-ಸುಕ್ಕಾಗಿತ್ತು. ಉಡುಪುಗಳಿಗೇ ಮಹತ್ವವಿದೆ ಎಂಬುದು ಅವನಿಗೆ ಅರಿವಾಯಿತು. ಇಂದಿನ ಹಿಂದೂಸ್ತಾನದಲ್ಲಿ ಮನುಷ್ಯನಿಗಿಂತ ಅವನ ಬಟ್ಟೆಗಳಿಗೇ ಮಹತ್ವವಿದೆ. ಅವನು ಈ ಆಘಾತದಿಂದ ಇನ್ನೂ ಹೊರಬಂದಿರಲಿಲ್ಲ, ಆಗಲೇ ಸೂಟು-ಬೂಟು ಧರಿಸಿದ್ದ ಒಬ್ಬ ದರ್ಪದ ಮನುಷ್ಯ ಕೈಯಲ್ಲಿ ಬ್ರೀಫ್ಕೇಸ್ ಹಿಡಿದು ಒಳಗೆ ಹೋದ. ಕಾವಲುಗಾರ ಅವನನ್ನು ತಡೆಯದೆ, ತಲೆಬಾಗಿ ನಮಸ್ಕರಿಸಿದ. ಅವನು ಸಹ ಧೈರ್ಯವಹಿಸಿ ಕಾವಲುಗಾರ ತಡೆದಿದ್ದಾಗ್ಯೂ ಒಳಗೆ ಹೋದ. ಅವನು ನೇರವಾಗಿ ಕೊಠಡಿಗಳನ್ನು ಹಂಚುತ್ತಿದ್ದವನ ಬಳಿಗೆ ಹೋದ. ಒಂದು ಸಣ್ಣ ಕೊಠಡಿಯಲ್ಲಿ ಕಚೇರಿಯಿತ್ತು. ಅಧಿಕಾರಿಯ ಕುರ್ಚಿಯಲ್ಲಿ ಕೂತಿದ್ದ ವ್ಯಕ್ತಿ, ಅವನು ಹೇಳುವುದಕ್ಕೆ ಮೊದಲೇ ರೇಗುತ್ತಾ, “ಧರ್ಮಶಾಲೆಯಲ್ಲಿ ಯಾವ ರೂಮೂ ಖಾಲಿಯಿಲ್ಲ” ಎಂದ. ನಂತರ ಅವನು ಸೂಟು-ಬೂಟುಧಾರಿ ವ್ಯಕ್ತಿಯೊಂದಿಗೆ ನಗುನಗುತ್ತಾ ಮಾತನಾಡಲಾರಂಭಿಸಿದ. ಅವನಿಗೆ ಕರೆಂಟ್ ಶಾಕ್ ಹೊಡೆದಂತಾಯಿತು. ಈಗ? ಈಗೆಲ್ಲಿಗೆ ಹೋಗುವುದು? ಈಗ ಅವನ ಸೂಟ್ಕೇಸಿನಲ್ಲಿ ಕಚೇರಿಯ ಅಗತ್ಯ ಪತ್ರಗಳು, ಪಂಚೆ-ಕುರ್ತಾ, ರಗ್ಗು ಮತ್ತು ಕೆಲವು ನೂರರ ನೋಟುಗಳಿದ್ದವು; ಅವನು ಆ ಸೂಟ್ಕೇಸಿನೊಂದಿಗೆ ಮೆಲ್ಲಮೆಲ್ಲನೆ ರಸ್ತೆಗೆ ಬಂದ. ಅಲ್ಲಿ ಎರಡು-ಮೂರು ಟ್ಯಾಕ್ಸಿಗಳು ಮತ್ತು ನಾಲ್ಕೈದು ಆಟೋರಿಕ್ಷಾಗಳು ನಿಂತಿದ್ದವು. ದೇವಸ್ಥಾನಕ್ಕೆ ಬರುವವರ ಗುಂಪು ಕಲೆಯುತ್ತಿತ್ತು.</p><p>ಅವನು ತುಂಬಾ ವ್ಯಗ್ರನಾಗಿ ಮತ್ತು ಹೆದರಿ ದಿಲ್ಲಿಗೆ ಬಂದ ತಪ್ಪಿಗೆ ತನ್ನನ್ನು ತಾನೇ ಹಳಿದುಕೊಳ್ಳುತ್ತಿದ್ದ. ಸಾಹೇಬರು ತನ್ನನ್ನು ನೌಕರಿಯಿಂದಂತೂ ತೆಗೆದು ಹಾಕುತ್ತಿರಲಿಲ್ಲ! ಅವನಿಗೆ ತನ್ನ ದೌರ್ಬಲ್ಯದ ಬಗ್ಗೆ ಸಿಟ್ಟು ಬರುತ್ತಿತ್ತು. ಅವನೆಂದೂ ಬಹಿರಂಗವಾಗಿ ತನ್ನ ಬಗ್ಗೆ ಹೇಳುವುದಿಲ್ಲ. ಹೇಳಿದ್ದರೂ ಅದಕ್ಕೆ ಅಂಟಿಕೊಂಡಿರುವುದಿಲ್ಲ. ಅವನ ಹೆಂಡತಿ ಹೇಳಿದ್ದಳು–<br>“ನೋಡಿ, ಮಗುವಿನ ಆರೋಗ್ಯ ಸರಿಯಿಲ್ಲ. ದಿಲ್ಲಿಗೆ ಹೋಗೋದಕ್ಕೆ ಬೇರೆಯವರಿಲ್ಲವೇ? ನನ್ನ ಆರೋಗ್ಯ ಸಹ ಸರಿ ಇಲ್ಲ.”<br>ಆದರೆ ಅವನು ಹೆಂಡತಿಗೆ ಗದರಿದ್ದ–<br>“ನಾನು ನೌಕರಿಯನ್ನು ಬಿಡಲೆಂದು ನೀನಿಷ್ಟಪಡ್ತೀಯಾ? ಸಾಹೇಬರ ಮಾತನ್ನು ಅಲ್ಲಗಳೆದು ಕಚೇರಿಯಲ್ಲಿ ಯಾರು ಉಳಿದಿದ್ದಾರೆ?”</p><p>ನಂತರ ಅವನು ಯೋಚಿಸಿದ; ತನಗೆ ದಿಲ್ಲಿಗೆ ಹೋಗುವ ಆಸೆ ಇರಲಿಲ್ಲವೇ? ಹೆಂಡತಿಗೆ ಗದರಿದ ನಂತರ ಅವನು ಒಳಗೊಳಗೇ ಮುಗುಳ್ನಗುತ್ತಿದ್ದ. ನೀನು ಹೆಂಗಸು, ದಿಲ್ಲಿಯಲ್ಲಿ ಏನಿದೆ ಎಂದು ನಿನಗೇನು ಗೊತ್ತು? ದಿಲ್ಲಿ ನಮ್ಮ ದೇಶದ ರಾಜಧಾನಿ. ಇತಿಹಾಸಗಳ ನಗರ; ಉತ್ಥಾನ ಮತ್ತು ಪತನಕ್ಕೆ ದಿಲ್ಲಿ ಸಾಕ್ಷಿಯಾಗಿದೆ. ಇಲ್ಲಿಂದಲೇ ದೇಶದ ರಾಜಕೀಯ ನಡೆಯುತ್ತದೆ, ದಿಲ್ಲಿ ಕೋಟ್ಯಂತರ ಜನರ ಜೀವನಮಟ್ಟ ಸುಧಾರಿಸುವ ಬಗ್ಗೆ ಹೇಳುತ್ತದೆ. ಪತ್ರಿಕೆಗಳ ಮುಖಪುಟದಲ್ಲಿ ದಪ್ಪ ಅಕ್ಷರಗಳಲ್ಲಿ ರಾರಾಜಿಸುವ ದಿಲ್ಲಿಯನ್ನು ನೋಡುವ ಅವಕಾಶವನ್ನು ಹೇಗೆ ತಪ್ಪಿಸಿಕೊಳ್ಳಲಿ?</p><p>ಅವನು ಸಿಟ್ಟಿನ ಭರದಲ್ಲಿ ಎರಡು-ಮೂರು ಫರ್ಲಾಂಗ್ ಮುಂದಕ್ಕೆ ಬಂದಿದ್ದ, ಆಗ ಅವನಿಗೆ ತಾನು ಬೇರೊಂದು ಧರ್ಮಶಾಲೆಯನ್ನು ಹುಡುಕಬೇಕು ಎಂಬ ಯೋಚನೆ ಬಂತು. ಅವನು ಮರಳಿ ಬಂದು ಒಬ್ಬ ಆಟೋರಿಕ್ಷಾ ಚಾಲಕನಲ್ಲಿ ಪ್ರಾರ್ಥಿಸುತ್ತಾ ಹೇಳಿದ, “ಭಯ್ಯಾ, ಬಿರ್ಲಾ ಧರ್ಮಶಾಲೆಯನ್ನು ಬಿಟ್ಟು, ಬೇರೆ ಧರ್ಮಶಾಲೆಯ ಹೆಸರನ್ನು ಹೇಳ್ತೀರ?” ಚಾಲಕ ಕಟ್ಟುಮಸ್ತಾದ ವ್ಯಕ್ತಿಯೊಬ್ಬನೊಂದಿಗೆ ಮಾತನಾಡುತ್ತಿದ್ದ, ಬಹುಶಃ ಅವನು ಸಹ ಎಲ್ಲಿಗೋ ಹೋಗಬೇಕಿತ್ತು. ಅವನು ತನ್ನ ಮಾತನ್ನು ಪುನರುಚ್ಚಿಸಿದ.</p><p>“ಈಗ ಧರ್ಮಶಾಲೆಯಲ್ಲಿ ಜಾಗ ಸಿಗಲ್ಲ.” ಚಾಲಕ ಬೀಡಿ ಹೊತ್ತಿಸುತ್ತಾ ಹೇಳಿದ, “ರಾಷ್ಟ್ರಮಟ್ಟದ ಕ್ರೀಡೆಗಳು ನಡೆಯುತ್ತಿದೆಯಲ್ಲ!” ಚಾಲಕ ಅವನ ಕೈಯಲ್ಲಿದ್ದ ಸೂಟ್ಕೇಸನ್ನು ನೋಡಿದ. ತಾನು ತಪ್ಪು ವ್ಯಕ್ತಿಯ ಬಳಿಗೆ ಬಂದಿದ್ದೇನೆ ಎಂದು ಅವನಿಗೆ ಅನ್ನಿಸಿತು. ಅವನು ಹೊರಡಲನುವಾದಾಗ ಚಾಲಕ ಕೇಳಿದ, “ನೀವು ಯಾವ ರಾಜ್ಯದಿಂದ ಬಂದಿದ್ದೀರ? ನಿಮ್ಮ ರಾಜ್ಯದ ಭವನದಲ್ಲಿಯೇ ಏಕೆ ಉಳಿಯಬಾರದು?” ಈಗ ಚಾಲಕನ ಧ್ವನಿಯಲ್ಲಿ ಆತ್ಮೀಯತೆ ಇತ್ತು.<br>“ಬಿಹಾರದಿಂದ ಬಂದಿದ್ದೇನೆ.” ಅವನು ಉದಾಸೀನತೆಯಿಂದ ಚಾಲಕನನ್ನು ನೋಡಿದ. ಚಾಲಕ ಮುಗುಳ್ನಗುತ್ತಿದ್ದ.<br>“ಕೂತ್ಕೊಳ್ಳಿ, ಈಗಲೇ ಬಿಹಾರ ಭವನಕ್ಕೆ ಬಿಡ್ತೀನಿ.” ಎಂದ ಚಾಲಕ.</p><p>ರಾತ್ರಿಯಾಗಿದೆ. ಎಲ್ಲೆಲ್ಲಿ ಅಲೆಯುವುದು, ಎಲ್ಲಾದರೂ ಉಳಿಯಲು ಜಾಗ ಸಿಕ್ಕರೆ ಸಾಕೆಂದು ಯೋಚಿಸಿ, ಅವನು ಆಟೋರಿಕ್ಷಾದಲ್ಲಿ ಕೂರಲು ಹೋದಾಗ, ಆ ಕಟ್ಟುಮಸ್ತಾದ ಕಪ್ಪು ವ್ಯಕ್ತಿ ಸಹ ತನ್ನ ಸಮೀಪದಲ್ಲಿ ಕೂರುತ್ತಿರುವುದನ್ನು ನೋಡಿ ಹೆದರಿದ. ಅವನಿಡೀ ಶರೀರ ಒಮ್ಮೆಲೆ ಕಂಪಿಸಿತು. ಅವನ ರೋಮರೋಮಗಳು ಸೆಟೆದುಕೊಂಡವು. ಆಟೋರಿಕ್ಷಾ ಬಣ್ಣ-ಬಣ್ಣದ ಬೆಳಕಿನಲ್ಲಿ ಹೊಳೆಯುತ್ತಿದ್ದ ಸಣ್ಣ-ದೊಡ್ಡ ಕಟ್ಟಡಗಳು ಮತ್ತು ಅಂಗಡಿಗಳನ್ನು ಹಿಂದಕ್ಕೆ ಹಾಕುತ್ತಾ ವೇಗವಾಗಿ ಹೋಗುತ್ತಿತ್ತು, ಅವನು ದಿಲ್ಲಿಯನ್ನು ನೋಡುವಲ್ಲಿ ಕಳೆದುಹೋದ. ಬೆಳಕಿನ ಬದಲು ರಸ್ತೆಯ ಇಬ್ಬದಿಯಲ್ಲಿ ಅಂಧಕಾರ ಮತ್ತು ಕಾಡು-ಮರ-ಗಿಡ-ಪೊದೆಗಳು ಕಾಣಬರಲಾರಂಭಿಸಿದಾಗ ಕಂಪಿಸಿದ. ನಿಮಿಷ-ಎರಡು ನಿಮಿಷಗಳ ಅಂತರದಲ್ಲಿ ಕಾರುಗಳು ಅತಿ ವೇಗವಾಗಿ ರಿಕ್ಷಾವನ್ನು ದಾಟಿ ಹೋಗುತ್ತಿದ್ದವು. ಅವು ಮುಂದೆ ಹೋದಾಗ ಕಾರುಗಳ ಬ್ಯಾಕ್ಲೈಟ್ಗಳು ಮಾತ್ರ ಕಾಣ ಬರುತ್ತಿದ್ದವು. ಗಾಢ ಅಂಧಕಾರದಲ್ಲಿ ಹೊಳೆಯುವ ಎರಡು ಕೆಂಪು ಬಿಂದುಗಳು! ಅವನಿಗೆ ಇದ್ದಕ್ಕಿದ್ದಂತೆ, ಪಕ್ಕದಲ್ಲಿದ್ದ ಕಪ್ಪು ಮನುಷ್ಯ ತನ್ನ ಸೂಟ್ಕೇಸ್ನಡೆಗೆ ಕೈ ಚಾಚುತ್ತಿದ್ದಾನೆ ಎಂದು ಅನ್ನಿಸಿತು. ಅವನು ದಂಗಾದ. ಅವನ ಹೃದಯ ಗಟ್ಟಿಯಾಗಿ ಬಡಿದುಕೊಳ್ಳಲಾರಂಭಿಸಿತು. ಚಳಿಗಾಲವಿದ್ದಾಗ್ಯೂ ತಾನು ಬೆವರುತ್ತಿದ್ದೇನೆ ಎಂಬ ಅನುಭವವಾಯಿತು. ಇನ್ನು ಬೇರೆ ಮಾರ್ಗವಿಲ್ಲ. ಖಂಡಿತ ಚಾಲಕ ಮತ್ತು ಈ ಕಪ್ಪು ವ್ಯಕ್ತಿ ಒಂದಾಗಿದ್ದಾರೆ. ಈ ನಿರ್ಜನ ರಸ್ತೆಯಲ್ಲಿ ತನ್ನನ್ನು ಕರೆತರುವ ಉದ್ದೇಶ ಬೇರೇನಿದೆ? ಇಂದು ಅವನು ರೈಲಿನಲ್ಲಿ ಓದಿದ್ದ. ಬಿಜನೋರಿನಲ್ಲಿ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕರನ್ನು ಲೂಟಿ ಮಾಡಿದ್ದಲ್ಲದೆ ಇಬ್ಬರನ್ನು ಪಿಸ್ತೂಲಿನ ಗುಂಡಿನಿಂದ ಬಲಿ ತೆಗೆದುಕೊಂಡಿದ್ದ. ಅವನು ಒಮ್ಮೆಲೆ ನರ್ವಸ್ ಆದ. ಈಗ ಅವನು ಪಾರಾಗುವ ಉಪಾಯವನ್ನು ಯೋಚಿಸಲಾರಂಭಿಸಿದ. ಕಾರೊಂದು ಸಮೀಪದಿಂದ ಹಾದು ಹೋಗುವಾಗ ತಾನೇಕೆ ಗಟ್ಟಿಯಾಗಿ, “ನನ್ನನ್ನು ಪಾರು ಮಾಡಿ, ನನ್ನನ್ನು ಪಾರು ಮಾಡಿ!” ಎಂದು ಕಿರುಚಬಾರದು? ಅವನು ಭಯದಿಂದ ಹಿಂದಕ್ಕೆ ಹೊರಳಿ ನೋಡಿದ. ವಾಸ್ತವವಾಗಿಯೂ, ಕಾರೊಂದು ಬರುತ್ತಿತ್ತು. ಅವನಿಗೆ ಧೈರ್ಯ ಬಂತು, ಆದರೆ ಕಾರು ಗಾಳಿಯಂತೆ ಬರ್ರನೆ ಹಾದು ಹೋಯಿತು. ಅವನು ಪ್ರಯತ್ನಿಸಿದ್ದಾಗ್ಯೂ ಕಿರುಚಲಾಗಲಿಲ್ಲ. ಅವನ ಧ್ವನಿ ಅದೇ ವೇಳೆಗೆ ಗಂಟಲಿನಲ್ಲಿ ಸಿಲುಕಿಕೊಂಡಿತು. ಅವನಿಗೆ ತನ್ನ ಬಗ್ಗೆ ಯೋಚಿಸಿಯೇ ಅಳು ಬಂತು.</p><p>ಅವನ ಕಣ್ಣುಗಳು ಒದ್ದೆಯಾದವು. ಅವನು ಒಳಗೊಳಗೇ ಬಿಕ್ಕಳಿಸಿದ. ಚಾಲಕನೆದುರು ತಾನು ಸರೆಂಡರ್ ಆಗಬೇಕೆಂದು ಬಯಸಿದ. ನನ್ನ ಬಳಿ ಇರುವಷ್ಟು ಹಣವನ್ನು ನೀನು ತೆಗೆದುಕೋ, ಆದರೆ ನನ್ನ ಜೀವವನ್ನು ಮಾತ್ರ ತೆಗೆದುಕೊಳ್ಳಬೇಡ. ನನಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಗೆ ಬಂದ ಮಗಳಿದ್ದಾಳೆ. ನನ್ನ ನಂತರ ನನ್ನ ಕುಟುಂಬವನ್ನು ನೋಡಿಕೊಳ್ಳುವವರು ಯಾರಿಲ್ಲ ಎಂದು ಹೇಳಬೇಕೆಂದಿದ್ದ, ಆಗಲೇ ಪಕ್ಕದಲ್ಲಿದ್ದ ಕಟ್ಟುಮಸ್ತಾದ ಕಪ್ಪು ವ್ಯಕ್ತಿ ಬೀಡಿ ಹೊತ್ತಿಸಿ ಸೇದಲಾರಂಭಿಸಿದ್ದ. ಬೆಂಕಿಕಡ್ಡಿಯನ್ನು ಗೀರಿದಾಗ ಅವನ ಭಯಾನಕ ಮುಖ ಹೊಳೆದಿತ್ತು. ಕಪ್ಪು ವರ್ಣದ ಶರೀರ. ದೊಡ್ಡ-ದೊಡ್ಡ ಒಳಗೆ ಹೂತುಹೋದ ಕೆಂಪು ಕಣ್ಣುಗಳು. ದಪ್ಪ ಮೀಸೆಗಳು. ಕೊಳಕಾದ ಖಾಕಿ ಪ್ಯಾಂಟ್ ಮತ್ತು ಶರ್ಟ್. ಅವನು ತನ್ನ ಹೆಂಡತಿ ಮತ್ತು ಮಕ್ಕಳನ್ನು ನೆನೆದು ಬಿಕ್ಕಳಿಸಿದ.</p><p>ಕೆಲವೇ ನಿಮಿಷಗಳ ನಂತರ ಆಟೋರಿಕ್ಷಾ ಬಿಹಾರ ಭವನದ ಎದುರು ರಸ್ತೆಗೆ ಬಂತು. ಚಾಲಕ ಹಿಂದಕ್ಕೆ ನೋಡದೆ ಹೇಳುತ್ತಿದ್ದ, “ಇಳೀರಿ ಸರ್! ನಿಮ್ಮ ಬಿಹಾರ ಭವನ ಬಂದಿದೆ.”<br>ಎರಡು-ಮೂರು ನಿಮಿಷಗಳ ನಂತರವೂ ಅವನು ಆಟೋರಿಕ್ಷಾದಿಂದ ಇಳಿಯದಿದ್ದಾಗ ಚಾಲಕ ಹೊರಳಿ ಅವನೆಡೆಗೆ ನೋಡಿದ. ಅವನ ಹಿಂದಿನ ಸೀಟಿನಲ್ಲಿ ಮಲಗಿ ಮೂರ್ಛಾವಸ್ಥೆಯಲ್ಲಿ ಬಡಬಡಿಸುತ್ತಿದ್ದ, “ನನ್ನನ್ನು ಬಿಟ್ಟು ಬಿಡಿ, ನನಗೆ ಹೊಡೆಯಬೇಡಿ...”<br>ಆಟೋರಿಕ್ಷಾ ಚಾಲಕ ಆಶ್ಚರ್ಯದಿಂದ ಅವನನ್ನೇ ನೋಡುತ್ತಾ ನಿಂತ.<br>***</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಹಿಂದಿಯಲ್ಲಿ: ನಂದಕಿಶೋರ್ ನಂದನ್</strong></em></p><p><em><strong>ಕನ್ನಡಕ್ಕೆ: ಡಿ.ಎನ್. ಶ್ರೀನಾಥ್</strong></em></p>.<p>ಅವನು ಕಡೆಗಂತೂ ದಿಲ್ಲಿಗೆ ಹೋಗಲೇಬೇಕಾಯಿತು. ತನ್ನ ನಗರದಿಂದ ಹೊರ ಹೋಗುತ್ತಲೇ ಅವನಿಗೆ ಭಯ ಆವರಿಸುತ್ತಿತ್ತು. ತನ್ನ ಮನೆಯಿಂದ ಕಚೇರಿಗೆ ಮತ್ತು ಕಚೇರಿಯಿಂದ ಮನೆಗೆ ಬಂದು-ಹೋಗುವ ಮಾರ್ಗವೇ ಅವನ ವಿಶೇಷ ಸ್ಥಳವಾಗಿತ್ತು. ಅವನು ಮಾರ್ಕೆಟ್ಗೆ ಹೋಗುವಾಗಲೂ ಹೆದರುತ್ತಿದ್ದ. ಅವನು ಪ್ರತಿ ಕ್ಷಣವೂ ತಾನು ಅಸುರಕ್ಷಿತ ಎಂಬುದನ್ನು ಮನಗಾಣುತ್ತಿದ್ದ; ಅವನು ತನ್ನ ಮನೆಗೆ ಬಂದು ಬಾಗಿಲನ್ನು ಮುಚ್ಚುವವರೆಗೆ ಭಯದಿಂದ ಕಂಪಿಸುತ್ತಿದ್ದ. ಕಚೇರಿಯಿಂದ ಮರಳಿ ಬಂದು ಪತ್ರಿಕೆಯ ಪುಟಗಳನ್ನು ತೆರೆದಾಗ ಕೊಲೆಯ ಸುದ್ದಿಗಳೆಡೆಗೆ ಅವನ ದೃಷ್ಟಿ ಹರಿಯುತ್ತಿತ್ತು, ಅದನ್ನು ಓದಿ ಕಂಪಿಸುತ್ತಿದ್ದ. ಅದೆಷ್ಟೋ ಸಲ ಅವನ ಹೆಂಡತಿ, ಅವನು ಕಂಪಿಸುವ ಕಾರಣ ಕೇಳಿದಾಗ ಅವನು ಮುಗುಳ್ನಗುತ್ತ ವಿಷಯಾಂತರ ಮಾಡುತ್ತಿದ್ದ. ಆಗಾಗ ಅವನು, ಹಿಂದೂಸ್ತಾನ ಮೊದಲಿನಂತೆಯೇ ಗುಲಾಮಗಿರಿಯ ಅಡಿಯಲ್ಲೇಕೆ ಇರುವುದಿಲ್ಲವೆಂಬ ಕೆಟ್ಟ ಅಪೇಕ್ಷೆಯನ್ನು ಸಹ ಮಾಡುತ್ತಿದ್ದ. ಕಡೇ ಪಕ್ಷ ಹಗಲು ವೇಳೆಯಲ್ಲಿ ಸಂಭವಿಸುವ ಕೊಲೆ, ಸುಲಿಗೆ ಮತ್ತು ಬಲಾತ್ಕಾರದಿಂದ ಮುಕ್ತಿ ಸಿಗುತ್ತಿತ್ತು! ಜೀವನಕ್ಕೆ ರಕ್ಷಣೆಯೇ ಇಲ್ಲದ ಈ ಸ್ವಾತಂತ್ರ್ಯದಿಂದೇನು ಉಪಯೋಗ?</p><p>ಅವನಿಗೆ ದಿಲ್ಲಿ ಹೊಸ ಸ್ಥಳವಾಗಿದ್ದು, ಸರ್ವಥಾ ಅಪರಿಚಿತವಾಗಿತ್ತು. ತನ್ನ ಚಿಕ್ಕ ಕಸಬಾ ನಗರದ ನಂತರ ದಿಲ್ಲಿ ಮಹಾನಗರದ ಸ್ಟೇಷನ್ನಲ್ಲಿ ಇಳಿಯುವಾಗ ಅವನಿಗೆ, ತಾನು ಮೂರ್ಛಾವಸ್ಥೆಯಲ್ಲಿರುವ ಜನರ ನಡುವೆ ತಳ್ಳಲ್ಪಟ್ಟಿದ್ದೇನೆಂದು ಅನ್ನಿಸಿತು. ಯಾರಿಗೂ ಯಾರ ಬಗ್ಗೆ ಚಿಂತೆಯಿಲ್ಲ. ನಿರಂತರವಾಗಿ ಓಡುವ ಜನ. ಅವನು ಅದೆಷ್ಟೋ ಹೊತ್ತು ಸ್ಟೇಷನ್ನಿನ ಗುಂಪಿನಲ್ಲಿ ನಿಂತು ಯೋಚಿಸುತ್ತಿದ್ದ. ರಾತ್ರಿಯ ವೇಳೆ, ತಾನು ಇಲ್ಲಿಂದ ಎಲ್ಲಿಗೆ ಹೋಗುವುದು? ಕಚೇರಿ ಮುಚ್ಚಿರಬೇಕು. ಈ ಅಧಿಕಾರಿಗಳು ಸಹ ಎಷ್ಟು ಕಠೋರ ಜನ! ಅವನು ಕೈಮುಗಿದು ಹೇಳಿದ್ದ, “ಸರ್, ನನ್ನನ್ನು ಕಳುಹಿಸಬೇಡಿ. ನಾನೆಂದೂ ದಿಲ್ಲಿಗೆ ಹೋಗಿಲ್ಲ.” ಆದರೆ ಸಾಹೇಬರು ಬೇರೊಬ್ಬನನ್ನು ಕಳುಹಿಸಲು ಒಪ್ಪಲಿಲ್ಲ. ಅವನು ಮನಸ್ಸಿನಲ್ಲಿ ತನ್ನನ್ನು ತಾನೇ ಹಳಿದುಕೊಂಡ. ದಿಲ್ಲಿಗೆ ಹೋಗುವಲ್ಲಿ ತನ್ನಿಚ್ಛೆ ಈಡೇರುತ್ತಿರಲಿಲ್ಲವೇ? ದಿಲ್ಲಿ ನೋಡಬೇಕೆಂಬುದು ಸಹ ತನ್ನಿಚ್ಛೆಯೇ ಆಗಿತ್ತು. ಆಗ ಅವನಿಗೆ ಖುಷಿಯೂ ಆಗಿತ್ತು. ಅನೇಕ ಅಂತಸ್ತುಗಳ, ಹೊಳೆಯುವ ಕಟ್ಟಡಗಳು, ಅಂಗಡಿಗಳು. ಶೃಂಗರಿಸಿಕೊಂಡ ಹುಡುಗಿಯರು ಮತ್ತು ಮಹಿಳೆಯರು. ಅವನು ಕೆಲವು ಕ್ಷಣ ಗುಂಪಿನ ಮಹಾಸಮುದ್ರವನ್ನು ಮರೆತು ಮುಗ್ಧಭಾವನೆಯಿಂದ ಎಲ್ಲಾ ದೃಶ್ಯಗಳನ್ನು ನೋಡುತ್ತಿದ್ದ. ದಿಲ್ಲಿ ಮುಗುಳ್ನಗೆ ತುಂಬಿದ ನಗರ! ಹೀಗೆಂದು ಎಲ್ಲೋ ಓದಿದ್ದ. ವಾಸ್ತವವಾಗಿಯೂ ದಿಲ್ಲಿ ಮುಗುಳ್ನಗೆ ತುಂಬಿದ ನಗರ. ಆಗಲೇ ಅವನಿಗೆ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಧ್ವನಿ ಕೇಳಿಸಿತು. ಅವನು ತಾನು ಉಳಿಯುವ ಸ್ಥಳದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿರಲಿಲ್ಲ, ಹೀಗಾಗಿ ಭಯವಾಯಿತು. ಹೋಟೆಲ್ನಲ್ಲಿ ಉಳಿಯುವ ಸಾಮರ್ಥ್ಯ ತನ್ನಲ್ಲಿ ಎಲ್ಲಿದೆ? ಸಾಹೇಬರು ಬಂದು-ಹೋಗುವ ಖರ್ಚನ್ನಷ್ಟೇ ಕೊಟ್ಟಿದ್ದಾರೆ. ಹೋಟೆಲ್ನಲ್ಲಿ ಸಹ ಕೊಲೆಗಳಾಗುತ್ತವೆ. ಪಟ್ನಾದ ಒಂದು ಹೋಟೆಲ್ನಲ್ಲಿ ಅನೇಕ ಯಾತ್ರಿಕರ ಶವಗಳು ಸಿಕ್ಕಿದ್ದವು. ಅವನು ಧರ್ಮಶಾಲೆಯಲ್ಲಿಯೇ ಉಳಿಯಲು ನಿರ್ಧರಿಸಿದ್ದ.</p><p>ಅವನು ಎದುರಿಗೆ ನಿಂತಿದ್ದ ಟ್ರಾಫಿಕ್ ಪೊಲೀಸರ ಸಮೀಪಕ್ಕೆ ಹೋದ. ಅವರಿಗೆ, “ನಾನು ದಿಲ್ಲಿಗೆ ಮೊದಲ ಬಾರಿಗೆ ಬಂದಿದ್ದೇನೆ, ಯಾವುದಾದರೂ ಧರ್ಮಶಾಲೆಯ ವಿಳಾಸ ಹೇಳಿ, ನಾನು ಅಲ್ಲಿ ರಾತ್ರಿ ಕಳೆಯಬೇಕಿದೆ” ಎಂದ. ಟ್ರಾಫಿಕ್ ಪೊಲೀಸ್ ಅವನನ್ನು ಆಪಾದಮಸ್ತಕ ನೋಡಿ, ಕೈಯೆತ್ತಿ ಒಂದು ಆಟೋರಿಕ್ಷಾವನ್ನು ಕರೆದ. ಅದರ ಡ್ರೈವರ್ನೊಂದಿಗೆ ಕಣ್ಣುಗಳಿಂದಲೇ ಮಾತನಾಡಿ, ಅವನಿಗೆ ರಿಕ್ಷಾದಲ್ಲಿ ಕೂರಲು ಹೇಳಿದ. ತಾನು ರಿಕ್ಷಾದಲ್ಲಿ ಕೂತು, ಧರ್ಮಶಾಲೆಗೆ ಹೋದಾಗ ಡ್ರೈವರ್ ಹೆಚ್ಚು ಬಾಡಿಗೆ ಕೇಳಿದರೆ ಎಂದು ಕೂರುತ್ತಾ ಭಯಪಟ್ಟ. ಆಟೋರಿಕ್ಷಾ ಒಂದಾದ ನಂತರ ಒಂದರಂತೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಮಾರ್ಕೆಟ್ಗಳಿಂದ ಹಾದು ಬಿರ್ಲಾ ಧರ್ಮಶಾಲೆಗೆ ಬಂತು. ಎದುರಿಗೆ ಬಣ್ಣ-ಬಣ್ಣದ ಬಲ್ಬ್ಗಳಿಂದ ಅಲಂಕರಿಸಿದ ಒಂದು ವಿಶಾಲ ಭವ್ಯ ಮಂದಿರವಿತ್ತು.</p><p>“ಇಲ್ಲಿ ದೇವಸ್ಥಾನವೂ ಇದೆ, ಧರ್ಮಶಾಲೆಯೂ ಇದೆ...” ಆಟೋರಿಕ್ಷಾ ಡ್ರೈವರ್ ಅವನಿಗೆ ಹೇಳುತ್ತಿದ್ದ.<br>“ಎಷ್ಟಾಯ್ತು?” ಅವನು ಕೇಳಿದ.<br>“ನೂರು ರೂಪಾಯಿ.” ಆಟೋ ಡ್ರೈವರ್ ಮೀಟರ್ ನೋಡಿ ಹೇಳಿದ.<br>“ನೂರು ರೂಪಾಯಿ?” ಅವನಿಗೆ ಆಶ್ಚರ್ಯವಾಯಿತು. ದುಃಖವೂ ಆಯಿತು. ಆಟೋರಿಕ್ಷಾದವನ ದೊಡ್ಡ-ದೊಡ್ಡ ಕಣ್ಣುಗಳು ಮತ್ತು ಅವನ ಕರ್ಕಶ ಧ್ವನಿ ಕೇಳಿ, ಬಾಡಿಗೆ ಕಡಿಮೆ ಮಾಡು ಎಂದು ಹೇಳುವ ಧೈರ್ಯವಾಗಲಿಲ್ಲ. ಅವನು ಸಿಟ್ಟಿನಿಂದ ತನ್ನ ಮೂರ್ಖತನಕ್ಕೆ ತಾನೇ ಹಳಿದುಕೊಳ್ಳುತ್ತಾ ಜೇಬಿನಿಂದ ನೂರರ ನೋಟನ್ನು ತೆಗೆದು ಅವನೆಡೆಗೆ ಎಸೆದ. ಆಟೋರಿಕ್ಷಾದ ಡ್ರೈವರ್ ಅವನ ಈ ವರ್ತನೆಗೆ ಅವನನ್ನು ದುರುಗುಟ್ಟಿ ನೋಡಿ, ನೋಟನ್ನು ತೆಗೆದುಕೊಂಡು ಹೊರಟು ಹೋದ. ತಾನು ಹೀಗೆ ನೋಟನ್ನು ಎಸೆಯಬಾರದಿತ್ತು ಎಂದು ಯೋಚಿಸಿದ. ಇದು ತನಗಾದ ಅವಮಾನವೆಂದು ತಿಳಿದು ಡ್ರೈವರ್ ತನ್ನ ಮೇಲೆ ಕೈ ಮಾಡಿದ್ದರೆ? ಅವನು ಭಯದಿಂದ ಥರಥರ ಕಂಪಿಸಿದ, ನಂತರ ಈಗೇನು ಮಾಡಬೇಕೆಂದು ಯೋಚಿಸಿದ. ತಾನು ದೇವಸ್ಥಾನದ ಒಳಗೆ ಹೋಗಿ ದೇವರ ದರ್ಶನ ಮಾಡುವುದೋ ಅಥವಾ ಧರ್ಮಶಾಲೆಯಲ್ಲಿ ಉಳಿಯಲು ಜಾಗ ನೋಡುವುದೋ? ಎರಡು-ಮೂರು ನಿಮಿಷಗಳ ನಂತರ ಹೊರಬಂದು ಜನರು ಕಳಚಿಟ್ಟಿದ್ದ ಚಪ್ಪಲಿಗಳ ಜಾಗಕ್ಕೆ ಬಂದು, ತನ್ನ ಚಪ್ಪಲಿಗಳನ್ನು ಕಳಚಿಟ್ಟು ದೇವಸ್ಥಾನದೊಳಗೆ ಹೋದ.</p><p>ಅವನು ದೇವಸ್ಥಾನದಿಂದ ಹೊರಬಂದಾಗ, ಇದು ಬಂಡವಾಳಶಾಹಿ ಕಟ್ಟಿಸಿದ, ಐಶ್ವರ್ಯ ಮತ್ತು ವೈಭವದ ವಿರಾಟ ಪ್ರದರ್ಶನ ಎಂಬುದನ್ನು ಮರೆತ. ಅವನು ದೇವಸ್ಥಾನವನ್ನು ಕಟ್ಟಿಸಿದವರ ಬಗ್ಗೆ ಕೃತಜ್ಞತಾಭಾವನೆಯಿಂದ ಬೀಗುತ್ತಿದ್ದ. ಧರ್ಮಶಾಲೆಯ ಕಡೆಗೆ ಹೋಗುವ ಮಾರ್ಗದಲ್ಲಿ ಒಂದು ಸಣ್ಣ ಅಂಗಡಿಯಿತ್ತು. ಅವನು ಆ ಅಂಗಡಿಯಲ್ಲಿ ಒಂದು ದಿಲ್ಲಿ-ಗೈಡ್ ಪುಸ್ತಕವನ್ನು ಕೊಂಡ. ನಾಳೆ ಯಾವುದೇ ವೇಳೆಯಲ್ಲಿ ಕೆಲಸವಾಗಬಹುದು. ಅವನು ಮೊದಲು ಎದ್ದು ಬೆಳಿಗ್ಗೆ ರಾಜಘಾಟ್ಗೆ ಹೋಗುತ್ತಾನೆ. ಅಲ್ಲಿಯ ರಾಷ್ಟ್ರಪಿತ ಅವರ ಸಮಾಧಿಗೆ ಹೂಮಾಲೆಗಳನ್ನು ಅರ್ಪಿಸುತ್ತಾನೆ. ಅಶುಭ ಗಳಿಗೆಯಾಗಿತ್ತೆ? 48 ವರ್ಷಗಳ ಹಿಂದೆ ತಂದೆಯವರು ಹೇಳಿದ ಒಂದು ಅಶುಭ ಘಟನೆಯ ಬಗ್ಗೆ ಗಮನ ಹರಿಯಿತು, ಆಗ ಅವರು ಕಚೇರಿಯಿಂದ ಮರಳಿ ಬರುತ್ತಿದ್ದರು. ರಸ್ತೆಯಲ್ಲಿದ್ದ ಅಂಗಡಿಗಳು ಮುಚ್ಚುತ್ತಿರುವುದನ್ನು ನೋಡಿ ಅವರಿಗೆ, ಅಂಗಡಿಗಳೆಲ್ಲವೂ ಇದ್ದಕ್ಕಿದ್ದಂತೆ ಏಕೆ ಮುಚ್ಚುತ್ತಿವೆ? ನಗರದ ನಾಲ್ಕೂ ಕಡೆ ಏಕೆ ಅಂಧಕಾರವಿದೆ? ಎಂಬುದು ಅರ್ಥವಾಗುತ್ತಿರಲಿಲ್ಲ. ನಾಥೂರಾಮ ಎಂಬುವವನು ಗುಂಡು ಹೊಡೆದು ರಾಷ್ಟ್ರಪಿತನನ್ನು ಕೊಂದಿರುವ ವಿಷಯ ತಿಳಿದು ಅವರು ಗಾಢ ಖಿನ್ನತೆಗೆ ಒಳಗಾಗಿದ್ದರು. ಅವನು ಸಹ ಈ ನೆನಪಿನಿಂದಾಗಿ ವಿಚಲಿತನಾದ.</p><p>ಧರ್ಮಶಾಲೆಯ ಹೊರಗೆ ಒಬ್ಬ ಕಾವಲುಗಾರ ನಿಂತಿದ್ದ. ಕಾವಲುಗಾರ ಅವನನ್ನು ಒಳಹೋಗಲು ಬಿಡಲಿಲ್ಲ. ಅವನಿಗೆ ಆಶ್ಚರ್ಯವಾಯಿತು. ಅವನು ತನ್ನ ಉಡುಪುಗಳನ್ನು ನೋಡಿಕೊಂಡ. ಅವನು ಖಾದಿಯ ದಪ್ಪ ಪಂಚೆ ಮತ್ತು ಕುರ್ತಾ ಧರಿಸಿದ್ದ. ಉಡುಪು ರೈಲಿನ ಜನಸಂದಣಿಯಲ್ಲಿ ಸುಕ್ಕು-ಸುಕ್ಕಾಗಿತ್ತು. ಉಡುಪುಗಳಿಗೇ ಮಹತ್ವವಿದೆ ಎಂಬುದು ಅವನಿಗೆ ಅರಿವಾಯಿತು. ಇಂದಿನ ಹಿಂದೂಸ್ತಾನದಲ್ಲಿ ಮನುಷ್ಯನಿಗಿಂತ ಅವನ ಬಟ್ಟೆಗಳಿಗೇ ಮಹತ್ವವಿದೆ. ಅವನು ಈ ಆಘಾತದಿಂದ ಇನ್ನೂ ಹೊರಬಂದಿರಲಿಲ್ಲ, ಆಗಲೇ ಸೂಟು-ಬೂಟು ಧರಿಸಿದ್ದ ಒಬ್ಬ ದರ್ಪದ ಮನುಷ್ಯ ಕೈಯಲ್ಲಿ ಬ್ರೀಫ್ಕೇಸ್ ಹಿಡಿದು ಒಳಗೆ ಹೋದ. ಕಾವಲುಗಾರ ಅವನನ್ನು ತಡೆಯದೆ, ತಲೆಬಾಗಿ ನಮಸ್ಕರಿಸಿದ. ಅವನು ಸಹ ಧೈರ್ಯವಹಿಸಿ ಕಾವಲುಗಾರ ತಡೆದಿದ್ದಾಗ್ಯೂ ಒಳಗೆ ಹೋದ. ಅವನು ನೇರವಾಗಿ ಕೊಠಡಿಗಳನ್ನು ಹಂಚುತ್ತಿದ್ದವನ ಬಳಿಗೆ ಹೋದ. ಒಂದು ಸಣ್ಣ ಕೊಠಡಿಯಲ್ಲಿ ಕಚೇರಿಯಿತ್ತು. ಅಧಿಕಾರಿಯ ಕುರ್ಚಿಯಲ್ಲಿ ಕೂತಿದ್ದ ವ್ಯಕ್ತಿ, ಅವನು ಹೇಳುವುದಕ್ಕೆ ಮೊದಲೇ ರೇಗುತ್ತಾ, “ಧರ್ಮಶಾಲೆಯಲ್ಲಿ ಯಾವ ರೂಮೂ ಖಾಲಿಯಿಲ್ಲ” ಎಂದ. ನಂತರ ಅವನು ಸೂಟು-ಬೂಟುಧಾರಿ ವ್ಯಕ್ತಿಯೊಂದಿಗೆ ನಗುನಗುತ್ತಾ ಮಾತನಾಡಲಾರಂಭಿಸಿದ. ಅವನಿಗೆ ಕರೆಂಟ್ ಶಾಕ್ ಹೊಡೆದಂತಾಯಿತು. ಈಗ? ಈಗೆಲ್ಲಿಗೆ ಹೋಗುವುದು? ಈಗ ಅವನ ಸೂಟ್ಕೇಸಿನಲ್ಲಿ ಕಚೇರಿಯ ಅಗತ್ಯ ಪತ್ರಗಳು, ಪಂಚೆ-ಕುರ್ತಾ, ರಗ್ಗು ಮತ್ತು ಕೆಲವು ನೂರರ ನೋಟುಗಳಿದ್ದವು; ಅವನು ಆ ಸೂಟ್ಕೇಸಿನೊಂದಿಗೆ ಮೆಲ್ಲಮೆಲ್ಲನೆ ರಸ್ತೆಗೆ ಬಂದ. ಅಲ್ಲಿ ಎರಡು-ಮೂರು ಟ್ಯಾಕ್ಸಿಗಳು ಮತ್ತು ನಾಲ್ಕೈದು ಆಟೋರಿಕ್ಷಾಗಳು ನಿಂತಿದ್ದವು. ದೇವಸ್ಥಾನಕ್ಕೆ ಬರುವವರ ಗುಂಪು ಕಲೆಯುತ್ತಿತ್ತು.</p><p>ಅವನು ತುಂಬಾ ವ್ಯಗ್ರನಾಗಿ ಮತ್ತು ಹೆದರಿ ದಿಲ್ಲಿಗೆ ಬಂದ ತಪ್ಪಿಗೆ ತನ್ನನ್ನು ತಾನೇ ಹಳಿದುಕೊಳ್ಳುತ್ತಿದ್ದ. ಸಾಹೇಬರು ತನ್ನನ್ನು ನೌಕರಿಯಿಂದಂತೂ ತೆಗೆದು ಹಾಕುತ್ತಿರಲಿಲ್ಲ! ಅವನಿಗೆ ತನ್ನ ದೌರ್ಬಲ್ಯದ ಬಗ್ಗೆ ಸಿಟ್ಟು ಬರುತ್ತಿತ್ತು. ಅವನೆಂದೂ ಬಹಿರಂಗವಾಗಿ ತನ್ನ ಬಗ್ಗೆ ಹೇಳುವುದಿಲ್ಲ. ಹೇಳಿದ್ದರೂ ಅದಕ್ಕೆ ಅಂಟಿಕೊಂಡಿರುವುದಿಲ್ಲ. ಅವನ ಹೆಂಡತಿ ಹೇಳಿದ್ದಳು–<br>“ನೋಡಿ, ಮಗುವಿನ ಆರೋಗ್ಯ ಸರಿಯಿಲ್ಲ. ದಿಲ್ಲಿಗೆ ಹೋಗೋದಕ್ಕೆ ಬೇರೆಯವರಿಲ್ಲವೇ? ನನ್ನ ಆರೋಗ್ಯ ಸಹ ಸರಿ ಇಲ್ಲ.”<br>ಆದರೆ ಅವನು ಹೆಂಡತಿಗೆ ಗದರಿದ್ದ–<br>“ನಾನು ನೌಕರಿಯನ್ನು ಬಿಡಲೆಂದು ನೀನಿಷ್ಟಪಡ್ತೀಯಾ? ಸಾಹೇಬರ ಮಾತನ್ನು ಅಲ್ಲಗಳೆದು ಕಚೇರಿಯಲ್ಲಿ ಯಾರು ಉಳಿದಿದ್ದಾರೆ?”</p><p>ನಂತರ ಅವನು ಯೋಚಿಸಿದ; ತನಗೆ ದಿಲ್ಲಿಗೆ ಹೋಗುವ ಆಸೆ ಇರಲಿಲ್ಲವೇ? ಹೆಂಡತಿಗೆ ಗದರಿದ ನಂತರ ಅವನು ಒಳಗೊಳಗೇ ಮುಗುಳ್ನಗುತ್ತಿದ್ದ. ನೀನು ಹೆಂಗಸು, ದಿಲ್ಲಿಯಲ್ಲಿ ಏನಿದೆ ಎಂದು ನಿನಗೇನು ಗೊತ್ತು? ದಿಲ್ಲಿ ನಮ್ಮ ದೇಶದ ರಾಜಧಾನಿ. ಇತಿಹಾಸಗಳ ನಗರ; ಉತ್ಥಾನ ಮತ್ತು ಪತನಕ್ಕೆ ದಿಲ್ಲಿ ಸಾಕ್ಷಿಯಾಗಿದೆ. ಇಲ್ಲಿಂದಲೇ ದೇಶದ ರಾಜಕೀಯ ನಡೆಯುತ್ತದೆ, ದಿಲ್ಲಿ ಕೋಟ್ಯಂತರ ಜನರ ಜೀವನಮಟ್ಟ ಸುಧಾರಿಸುವ ಬಗ್ಗೆ ಹೇಳುತ್ತದೆ. ಪತ್ರಿಕೆಗಳ ಮುಖಪುಟದಲ್ಲಿ ದಪ್ಪ ಅಕ್ಷರಗಳಲ್ಲಿ ರಾರಾಜಿಸುವ ದಿಲ್ಲಿಯನ್ನು ನೋಡುವ ಅವಕಾಶವನ್ನು ಹೇಗೆ ತಪ್ಪಿಸಿಕೊಳ್ಳಲಿ?</p><p>ಅವನು ಸಿಟ್ಟಿನ ಭರದಲ್ಲಿ ಎರಡು-ಮೂರು ಫರ್ಲಾಂಗ್ ಮುಂದಕ್ಕೆ ಬಂದಿದ್ದ, ಆಗ ಅವನಿಗೆ ತಾನು ಬೇರೊಂದು ಧರ್ಮಶಾಲೆಯನ್ನು ಹುಡುಕಬೇಕು ಎಂಬ ಯೋಚನೆ ಬಂತು. ಅವನು ಮರಳಿ ಬಂದು ಒಬ್ಬ ಆಟೋರಿಕ್ಷಾ ಚಾಲಕನಲ್ಲಿ ಪ್ರಾರ್ಥಿಸುತ್ತಾ ಹೇಳಿದ, “ಭಯ್ಯಾ, ಬಿರ್ಲಾ ಧರ್ಮಶಾಲೆಯನ್ನು ಬಿಟ್ಟು, ಬೇರೆ ಧರ್ಮಶಾಲೆಯ ಹೆಸರನ್ನು ಹೇಳ್ತೀರ?” ಚಾಲಕ ಕಟ್ಟುಮಸ್ತಾದ ವ್ಯಕ್ತಿಯೊಬ್ಬನೊಂದಿಗೆ ಮಾತನಾಡುತ್ತಿದ್ದ, ಬಹುಶಃ ಅವನು ಸಹ ಎಲ್ಲಿಗೋ ಹೋಗಬೇಕಿತ್ತು. ಅವನು ತನ್ನ ಮಾತನ್ನು ಪುನರುಚ್ಚಿಸಿದ.</p><p>“ಈಗ ಧರ್ಮಶಾಲೆಯಲ್ಲಿ ಜಾಗ ಸಿಗಲ್ಲ.” ಚಾಲಕ ಬೀಡಿ ಹೊತ್ತಿಸುತ್ತಾ ಹೇಳಿದ, “ರಾಷ್ಟ್ರಮಟ್ಟದ ಕ್ರೀಡೆಗಳು ನಡೆಯುತ್ತಿದೆಯಲ್ಲ!” ಚಾಲಕ ಅವನ ಕೈಯಲ್ಲಿದ್ದ ಸೂಟ್ಕೇಸನ್ನು ನೋಡಿದ. ತಾನು ತಪ್ಪು ವ್ಯಕ್ತಿಯ ಬಳಿಗೆ ಬಂದಿದ್ದೇನೆ ಎಂದು ಅವನಿಗೆ ಅನ್ನಿಸಿತು. ಅವನು ಹೊರಡಲನುವಾದಾಗ ಚಾಲಕ ಕೇಳಿದ, “ನೀವು ಯಾವ ರಾಜ್ಯದಿಂದ ಬಂದಿದ್ದೀರ? ನಿಮ್ಮ ರಾಜ್ಯದ ಭವನದಲ್ಲಿಯೇ ಏಕೆ ಉಳಿಯಬಾರದು?” ಈಗ ಚಾಲಕನ ಧ್ವನಿಯಲ್ಲಿ ಆತ್ಮೀಯತೆ ಇತ್ತು.<br>“ಬಿಹಾರದಿಂದ ಬಂದಿದ್ದೇನೆ.” ಅವನು ಉದಾಸೀನತೆಯಿಂದ ಚಾಲಕನನ್ನು ನೋಡಿದ. ಚಾಲಕ ಮುಗುಳ್ನಗುತ್ತಿದ್ದ.<br>“ಕೂತ್ಕೊಳ್ಳಿ, ಈಗಲೇ ಬಿಹಾರ ಭವನಕ್ಕೆ ಬಿಡ್ತೀನಿ.” ಎಂದ ಚಾಲಕ.</p><p>ರಾತ್ರಿಯಾಗಿದೆ. ಎಲ್ಲೆಲ್ಲಿ ಅಲೆಯುವುದು, ಎಲ್ಲಾದರೂ ಉಳಿಯಲು ಜಾಗ ಸಿಕ್ಕರೆ ಸಾಕೆಂದು ಯೋಚಿಸಿ, ಅವನು ಆಟೋರಿಕ್ಷಾದಲ್ಲಿ ಕೂರಲು ಹೋದಾಗ, ಆ ಕಟ್ಟುಮಸ್ತಾದ ಕಪ್ಪು ವ್ಯಕ್ತಿ ಸಹ ತನ್ನ ಸಮೀಪದಲ್ಲಿ ಕೂರುತ್ತಿರುವುದನ್ನು ನೋಡಿ ಹೆದರಿದ. ಅವನಿಡೀ ಶರೀರ ಒಮ್ಮೆಲೆ ಕಂಪಿಸಿತು. ಅವನ ರೋಮರೋಮಗಳು ಸೆಟೆದುಕೊಂಡವು. ಆಟೋರಿಕ್ಷಾ ಬಣ್ಣ-ಬಣ್ಣದ ಬೆಳಕಿನಲ್ಲಿ ಹೊಳೆಯುತ್ತಿದ್ದ ಸಣ್ಣ-ದೊಡ್ಡ ಕಟ್ಟಡಗಳು ಮತ್ತು ಅಂಗಡಿಗಳನ್ನು ಹಿಂದಕ್ಕೆ ಹಾಕುತ್ತಾ ವೇಗವಾಗಿ ಹೋಗುತ್ತಿತ್ತು, ಅವನು ದಿಲ್ಲಿಯನ್ನು ನೋಡುವಲ್ಲಿ ಕಳೆದುಹೋದ. ಬೆಳಕಿನ ಬದಲು ರಸ್ತೆಯ ಇಬ್ಬದಿಯಲ್ಲಿ ಅಂಧಕಾರ ಮತ್ತು ಕಾಡು-ಮರ-ಗಿಡ-ಪೊದೆಗಳು ಕಾಣಬರಲಾರಂಭಿಸಿದಾಗ ಕಂಪಿಸಿದ. ನಿಮಿಷ-ಎರಡು ನಿಮಿಷಗಳ ಅಂತರದಲ್ಲಿ ಕಾರುಗಳು ಅತಿ ವೇಗವಾಗಿ ರಿಕ್ಷಾವನ್ನು ದಾಟಿ ಹೋಗುತ್ತಿದ್ದವು. ಅವು ಮುಂದೆ ಹೋದಾಗ ಕಾರುಗಳ ಬ್ಯಾಕ್ಲೈಟ್ಗಳು ಮಾತ್ರ ಕಾಣ ಬರುತ್ತಿದ್ದವು. ಗಾಢ ಅಂಧಕಾರದಲ್ಲಿ ಹೊಳೆಯುವ ಎರಡು ಕೆಂಪು ಬಿಂದುಗಳು! ಅವನಿಗೆ ಇದ್ದಕ್ಕಿದ್ದಂತೆ, ಪಕ್ಕದಲ್ಲಿದ್ದ ಕಪ್ಪು ಮನುಷ್ಯ ತನ್ನ ಸೂಟ್ಕೇಸ್ನಡೆಗೆ ಕೈ ಚಾಚುತ್ತಿದ್ದಾನೆ ಎಂದು ಅನ್ನಿಸಿತು. ಅವನು ದಂಗಾದ. ಅವನ ಹೃದಯ ಗಟ್ಟಿಯಾಗಿ ಬಡಿದುಕೊಳ್ಳಲಾರಂಭಿಸಿತು. ಚಳಿಗಾಲವಿದ್ದಾಗ್ಯೂ ತಾನು ಬೆವರುತ್ತಿದ್ದೇನೆ ಎಂಬ ಅನುಭವವಾಯಿತು. ಇನ್ನು ಬೇರೆ ಮಾರ್ಗವಿಲ್ಲ. ಖಂಡಿತ ಚಾಲಕ ಮತ್ತು ಈ ಕಪ್ಪು ವ್ಯಕ್ತಿ ಒಂದಾಗಿದ್ದಾರೆ. ಈ ನಿರ್ಜನ ರಸ್ತೆಯಲ್ಲಿ ತನ್ನನ್ನು ಕರೆತರುವ ಉದ್ದೇಶ ಬೇರೇನಿದೆ? ಇಂದು ಅವನು ರೈಲಿನಲ್ಲಿ ಓದಿದ್ದ. ಬಿಜನೋರಿನಲ್ಲಿ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕರನ್ನು ಲೂಟಿ ಮಾಡಿದ್ದಲ್ಲದೆ ಇಬ್ಬರನ್ನು ಪಿಸ್ತೂಲಿನ ಗುಂಡಿನಿಂದ ಬಲಿ ತೆಗೆದುಕೊಂಡಿದ್ದ. ಅವನು ಒಮ್ಮೆಲೆ ನರ್ವಸ್ ಆದ. ಈಗ ಅವನು ಪಾರಾಗುವ ಉಪಾಯವನ್ನು ಯೋಚಿಸಲಾರಂಭಿಸಿದ. ಕಾರೊಂದು ಸಮೀಪದಿಂದ ಹಾದು ಹೋಗುವಾಗ ತಾನೇಕೆ ಗಟ್ಟಿಯಾಗಿ, “ನನ್ನನ್ನು ಪಾರು ಮಾಡಿ, ನನ್ನನ್ನು ಪಾರು ಮಾಡಿ!” ಎಂದು ಕಿರುಚಬಾರದು? ಅವನು ಭಯದಿಂದ ಹಿಂದಕ್ಕೆ ಹೊರಳಿ ನೋಡಿದ. ವಾಸ್ತವವಾಗಿಯೂ, ಕಾರೊಂದು ಬರುತ್ತಿತ್ತು. ಅವನಿಗೆ ಧೈರ್ಯ ಬಂತು, ಆದರೆ ಕಾರು ಗಾಳಿಯಂತೆ ಬರ್ರನೆ ಹಾದು ಹೋಯಿತು. ಅವನು ಪ್ರಯತ್ನಿಸಿದ್ದಾಗ್ಯೂ ಕಿರುಚಲಾಗಲಿಲ್ಲ. ಅವನ ಧ್ವನಿ ಅದೇ ವೇಳೆಗೆ ಗಂಟಲಿನಲ್ಲಿ ಸಿಲುಕಿಕೊಂಡಿತು. ಅವನಿಗೆ ತನ್ನ ಬಗ್ಗೆ ಯೋಚಿಸಿಯೇ ಅಳು ಬಂತು.</p><p>ಅವನ ಕಣ್ಣುಗಳು ಒದ್ದೆಯಾದವು. ಅವನು ಒಳಗೊಳಗೇ ಬಿಕ್ಕಳಿಸಿದ. ಚಾಲಕನೆದುರು ತಾನು ಸರೆಂಡರ್ ಆಗಬೇಕೆಂದು ಬಯಸಿದ. ನನ್ನ ಬಳಿ ಇರುವಷ್ಟು ಹಣವನ್ನು ನೀನು ತೆಗೆದುಕೋ, ಆದರೆ ನನ್ನ ಜೀವವನ್ನು ಮಾತ್ರ ತೆಗೆದುಕೊಳ್ಳಬೇಡ. ನನಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಗೆ ಬಂದ ಮಗಳಿದ್ದಾಳೆ. ನನ್ನ ನಂತರ ನನ್ನ ಕುಟುಂಬವನ್ನು ನೋಡಿಕೊಳ್ಳುವವರು ಯಾರಿಲ್ಲ ಎಂದು ಹೇಳಬೇಕೆಂದಿದ್ದ, ಆಗಲೇ ಪಕ್ಕದಲ್ಲಿದ್ದ ಕಟ್ಟುಮಸ್ತಾದ ಕಪ್ಪು ವ್ಯಕ್ತಿ ಬೀಡಿ ಹೊತ್ತಿಸಿ ಸೇದಲಾರಂಭಿಸಿದ್ದ. ಬೆಂಕಿಕಡ್ಡಿಯನ್ನು ಗೀರಿದಾಗ ಅವನ ಭಯಾನಕ ಮುಖ ಹೊಳೆದಿತ್ತು. ಕಪ್ಪು ವರ್ಣದ ಶರೀರ. ದೊಡ್ಡ-ದೊಡ್ಡ ಒಳಗೆ ಹೂತುಹೋದ ಕೆಂಪು ಕಣ್ಣುಗಳು. ದಪ್ಪ ಮೀಸೆಗಳು. ಕೊಳಕಾದ ಖಾಕಿ ಪ್ಯಾಂಟ್ ಮತ್ತು ಶರ್ಟ್. ಅವನು ತನ್ನ ಹೆಂಡತಿ ಮತ್ತು ಮಕ್ಕಳನ್ನು ನೆನೆದು ಬಿಕ್ಕಳಿಸಿದ.</p><p>ಕೆಲವೇ ನಿಮಿಷಗಳ ನಂತರ ಆಟೋರಿಕ್ಷಾ ಬಿಹಾರ ಭವನದ ಎದುರು ರಸ್ತೆಗೆ ಬಂತು. ಚಾಲಕ ಹಿಂದಕ್ಕೆ ನೋಡದೆ ಹೇಳುತ್ತಿದ್ದ, “ಇಳೀರಿ ಸರ್! ನಿಮ್ಮ ಬಿಹಾರ ಭವನ ಬಂದಿದೆ.”<br>ಎರಡು-ಮೂರು ನಿಮಿಷಗಳ ನಂತರವೂ ಅವನು ಆಟೋರಿಕ್ಷಾದಿಂದ ಇಳಿಯದಿದ್ದಾಗ ಚಾಲಕ ಹೊರಳಿ ಅವನೆಡೆಗೆ ನೋಡಿದ. ಅವನ ಹಿಂದಿನ ಸೀಟಿನಲ್ಲಿ ಮಲಗಿ ಮೂರ್ಛಾವಸ್ಥೆಯಲ್ಲಿ ಬಡಬಡಿಸುತ್ತಿದ್ದ, “ನನ್ನನ್ನು ಬಿಟ್ಟು ಬಿಡಿ, ನನಗೆ ಹೊಡೆಯಬೇಡಿ...”<br>ಆಟೋರಿಕ್ಷಾ ಚಾಲಕ ಆಶ್ಚರ್ಯದಿಂದ ಅವನನ್ನೇ ನೋಡುತ್ತಾ ನಿಂತ.<br>***</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>