ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರೆಯ ಪೋಷಕರಿಗೆ ಹೊರೆಯಾ?

Last Updated 4 ಮೇ 2019, 19:45 IST
ಅಕ್ಷರ ಗಾತ್ರ

ಕಾಲ ಕೆಟ್ಟುಹೋಯಿತು ಎಂದು ಎಲ್ಲಾ ತಲೆಮಾರಿನ ಹಿರಿಯರು ಹೇಳುತ್ತಲೇ ಬಂದಿದ್ದಾರೆ. ಆದರೆ, ಕಾಲಕಾಲಕ್ಕೆ ಆಗುವ ಬದಲಾವಣೆಗಳೆಲ್ಲಾ ಕೆಡುಕಿನದೇ ಎಂದು ಹೇಗೆ ಹೇಳುವುದು? ಅಥವಾ ಬದಲಾಗದೆ ಇರುವ ಕಾಲಘಟ್ಟ ಇರುವುದಾದರೂ ಸಾಧ್ಯವೆ?

ಇವತ್ತು ಬೀದಿಗಳಲ್ಲಿ, ಶಾಲಾ– ಕಾಲೇಜುಗಳ ಆವರಣದಲ್ಲಿ, ಹೋಟೆಲ್, ಮಾಲ್‌ಗಳಲ್ಲಿ, ಚಿತ್ರಮಂದಿರಗಳಲ್ಲಿ ಲಿಂಗಭೇದವಿಲ್ಲದೆ ಹದಿಹರೆಯದವರು ಮುಕ್ತವಾಗಿ ಬೆರೆಯುತ್ತಿರುವುದು ಹಳೆಯ ತಲೆಮಾರಿನವರಲ್ಲಿ ಆತಂಕ ಮೂಡಿಸುತ್ತಿದೆ. ಹೊಸ ತಲೆಮಾರಿನವರಲ್ಲಿ ವಿವಾಹಪೂರ್ವ ಲೈಂಗಿಕತೆಯ ಬಗೆಗಿನ ದೃಷ್ಟಿಕೋನ ಸ್ವಲ್ಪಮಟ್ಟಿಗೆ ಬದಲಾಗುತ್ತಿದೆ ಎನ್ನುವುದೇನೋ ನಿಜ.

ಆದರೆ, ಇದರಿಂದಾಗಿ ಮಕ್ಕಳು ನೈತಿಕವಾಗಿ ಅಧಃಪತನದ ಹಾದಿಯಲ್ಲಿದ್ದಾರೆ ಎಂದು ಕರುಬುವುದು ವಾಸ್ತವವೆ? ಬದಲಾವಣೆಗಳು ಅನಿವಾರ್ಯವೆಂದ ಮೇಲೆ ಅವುಗಳ ಪ್ರವಾಹದಲ್ಲಿ ಕೊಚ್ಚಿ ಹೋಗದೆ ಮಾನಸಿಕ ಸ್ಥಿಮಿತ ಕಾಯ್ದುಕೊಳ್ಳುವುದಕ್ಕೆ ಮಕ್ಕಳನ್ನು ನಾವು ಸಿದ್ಧಪಡಿಸುತ್ತಿದ್ದೇವೆಯೆ? ಮಕ್ಕಳನ್ನು ಹಾಗೆ ಸಿದ್ಧಪಡಿಸುವುದರ ಅಗತ್ಯ ಅಥವಾ ಸಾಧ್ಯತೆಗಳ ಬಗೆಗಾದರೂ ಇವತ್ತಿನ ಪೋಷಕರಿಗೆ ಅರಿವಿದೆಯೆ?

ಎಂಬತ್ತರ ದಶಕದಲ್ಲಿ ಆರಂಭವಾದ ಎಲೆಕ್ಟ್ರಾನಿಕ್ ಮತ್ತು ಸಂಪರ್ಕ ಕ್ರಾಂತಿಯ ಶಿಶುಗಳಾದ ಟಿ.ವಿ, ಕಂಪ್ಯೂಟರ್, ಮೊಬೈಲ್, ಅಂತರ್ಜಾಲ ತಾಣ ವಿಶ್ವದೆಲ್ಲೆಡೆಯ ಜೀವನಶೈಲಿಯನ್ನು ನಮಗೆ ಪರಿಚಯಿಸಿದವು. ನಂತರದ ಆರ್ಥಿಕ ಉದಾರೀಕರಣ ಅಂತಹ ಜೀವನಶೈಲಿಯು ನಮಗೂ ಸಾಧ್ಯ ಎನ್ನುವ ಆಸೆ ತೋರಿಸಿತು. ಇದಕ್ಕಾಗಿಯೇ ಕಾದಿದ್ದ ಬಹುರಾಷ್ಟ್ರೀಯ ಕಂಪನಿಗಳು ಅಗತ್ಯವಾದುದಕ್ಕಿಂತ ಹೆಚ್ಚಾಗಿ ನಿರುಪಯುಕ್ತವಾದ ಗ್ಯಾಜೆಟ್‌ಗಳಿಗೆ ನಮ್ಮಲ್ಲಿ ಮಾರುಕಟ್ಟೆಯನ್ನು ಹುಡುಕಿಕೊಂಡು ಭರಪೂರ ಲಾಭ ಪಡೆದುಕೊಳ್ಳತೊಡಗಿದವು.

ಕೇವಲ ಜಿಡಿಪಿ ಆಧಾರಿತ ಆರ್ಥಿಕ ವ್ಯವಸ್ಥೆಯ ನಶೆಯಲ್ಲಿದ್ದ ನಮ್ಮನ್ನಾಳುವವರೂ ತಮ್ಮ ಜೇಬು ತಂಬಿಕೊಳ್ಳುವುದರ ಬಗೆಗೆ ಮಾತ್ರ ನಿಗಾವಹಿಸಿದರೇ ಹೊರತು ಈ ಬದಲಾವಣೆಗಳ ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಸಂಬಂಧಿ ದುಷ್ಟರಿಣಾಮಗಳ ಬಗೆಗೆ ಕುರುಡಾಗಿದ್ದರು. ಇವತ್ತು ಪಾಶ್ಚಿಮಾತ್ಯರ ಗ್ಯಾಜೆಟ್‌ಗಳು, ಆರ್ಥಿಕ ನೀತಿ, ಉದ್ಯೋಗ, ಸಂಪತ್ತುಗಳೆಲ್ಲವೂ ನಮಗೆ ಬೇಕು. ಆದರೆ, ಅವುಗಳಿಗೆ ಅಂಟಿಕೊಂಡೇ ಬರುವ ಅವರ ಜೀವನಶೈಲಿ, ಪರಿಸರ ಮಾಲಿನ್ಯ ಮುಂತಾದವು ಮಾತ್ರ ಬೇಡ ಎನ್ನುವುದು ಅವಾಸ್ತವಿಕವಲ್ಲವೆ?

ಸ್ಮಾರ್ಟ್‌ಫೋನ್, ಅಂತರ್ಜಾಲದ ಮಾಯಾನಗರಿಯಲ್ಲಿ ಇವತ್ತಿನ ಹಿರಿಯರೇ ಕಳೆದುಹೋಗಿರುವಾಗ ಮಕ್ಕಳಿಗೆ ಅವರು ತೋರಿಸುತ್ತಿರುವ ಮಾದರಿಯಾದರೂ ಎಂತಹದು? ಇಂತಹ ಮಾಯಾನಗರಿಯಲ್ಲಿ ಇವತ್ತಿನ ಹದಿವಯಸ್ಸಿನವರು ತಮ್ಮ ಕಾಮನೆಗಳನ್ನು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯಕರವಾದ ರೀತಿಯಲ್ಲಿ ವ್ಯಕ್ತಪಡಿಸಬಲ್ಲರು ಎಂದು ನಿರೀಕ್ಷಿಸುವುದಾದರೂ ಹೇಗೆ?

ಜೀವವಿಕಾಸದ ಹಾದಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳಿಗೂ ಲಕ್ಷಾಂತರ ವರ್ಷಗಳ ಅಗತ್ಯವಿರುತ್ತದೆ. ಅಂದ ಮೇಲೆ ಕೇವಲ 30-40 ವರ್ಷಗಳಲ್ಲಿ ಮಾನವನ ದೇಹವಾಗಲಿ ಅಥವಾ ಮನೋಪ್ರಪಂಚವಾಗಲೀ ಆಮೂಲಾಗ್ರವಾಗಿ ಬದಲಾವಣೆ ಹೊಂದುವುದು ಸಾಧ್ಯವೇ ಇಲ್ಲ. ಅಂದಮೇಲೆ ಇವತ್ತಿನ ಮಿಲೆನಿಯಲ್ಸ್ ಮಕ್ಕಳು ಕೂಡ ಹಿಂದಿನ ತಲೆಮಾರಿನವರ ಹದಿವಯಸ್ಸಿನ ತವಕ, ತಲ್ಲಣಗಳನ್ನು ಮಾತ್ರ ಅನುಭವಿಸುತ್ತಿರುತ್ತಾರೆ.

ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಬದಲಾವಣೆಗಳಿಂದಾಗಿ ಅವುಗಳನ್ನು ವ್ಯಕ್ತಪಡಿಸುವ, ನಿಭಾಯಿಸುವ ರೀತಿ ಮಾತ್ರ ಬದಲಾಗಿರುವುದು ಸಾಧ್ಯ. ಮನೋಚಿಕಿತ್ಸೆಯ ವೃತ್ತಿಯಲ್ಲಿ ನೂರಾರು ಮಿಲೆನಿಯಲ್ಸ್ ಮಕ್ಕಳೊಡನೆ ಒಡನಾಡಿದ ನನ್ನ ಅನುಭವ ಇದು. ಮಕ್ಕಳನ್ನು ಶಿಸ್ತಿನಿಂದ ಬೆಳೆಸಿ, ಮೊಬೈಲ್, ಅಂತರ್ಜಾಲ ತಾಣದ ಬಳಕೆಯ ಬಗೆಗೆ ನಿಗಾ ಇಡಿ. ಅವರಿಗೆ ನೈತಿಕತೆಯ ಶಿಕ್ಷಣ ನೀಡಿ- ಎಂದೆಲ್ಲಾ ಉಪದೇಶಿಸುವವವರು ಬಹಳ ಜನರಿದ್ದಾರೆ.

ಆದರೆ, ಹದಿವಯಸ್ಸಿನ ಮಕ್ಕಳನ್ನು ಮನೆಯಲ್ಲಿ ನಿಭಾಯಿಸಿದ ಅನುಭವವಿರುವವರಿಗೆ ಇದರ ಕಷ್ಟಗಳು ತಿಳಿದಿರುತ್ತವೆ. ಹೆಚ್ಚಿನ ನಿಯಂತ್ರಣದಿಂದ ಮನೆ ರಣರಂಗವಾಗಿ ಮಕ್ಕಳು ಪೋಷಕರ ಮಧ್ಯೆ ದೊಡ್ಡ ಕಂದಕ ಏರ್ಪಡುತ್ತದೆ. ಹದಿವಯಸ್ಸಿನ ಆಕರ್ಷಣೆಗಳನ್ನು ಕೇವಲ ಶಿಸ್ತು, ನೀತಿ, ನಿಯಮ, ನಿಯಂತ್ರಣಗಳಿಂದ ನಿಭಾಯಿಸುವುದು ಸಾಧ್ಯವೆ? ಇಲ್ಲವೆಂದಾದರೆ ಪೋಷಕರು ಸಂಪೂರ್ಣ ಅಸಹಾಯಕರೆ?

ಮುಕ್ತವಾಗದ ಚಿಂತನೆ
ಸಮಾಜ, ಅವಕಾಶಗಳು, ಮಾಹಿತಿಗಳು ಮುಂತಾದವು ಮುಕ್ತವಾಗುತ್ತಾ ಬಂದಷ್ಟು ಹಿಂದಿನ ತಲೆಮಾರಿನವರ ಮಾನಸಿಕ ಪ್ರಪಂಚ, ನಡೆನುಡಿಗಳು ಮುಕ್ತವಾಗುತ್ತಾ ಬಂದಿಲ್ಲ. ಹಾಗಾಗಿ, ತಮ್ಮೊಳಗಿನ ಗೊಂದಲ, ಅನುಮಾನಗಳನ್ನು ಮಕ್ಕಳೊಡನೆ ಹಂಚಿಕೊಳ್ಳಲಾಗದ ಮತ್ತು ಅವರ ಅಂತರಂಗದ ತವಕ, ತಲ್ಲಣಗಳನ್ನು ಗ್ರಹಿಸಿ ಸ್ಪಂದಿಸಲಾಗದ ಇಕ್ಕಟ್ಟಿನಲ್ಲಿ ಇವತ್ತಿನ ಪೋಷಕರು
ಸಿಲುಕಿಕೊಂಡಿದ್ದಾರೆ.

ತಮ್ಮ ಕೈಮೀರಿ ಆಗುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಲೇ ಹೊಸ ತಲೆಮಾರಿನವರೊಡನೆ ಮಾನಸಿಕ ಸೇತುವೆ ಕಟ್ಟಿಕೊಳ್ಳುವ ದಾರಿಗಳು ತಿಳಿಯದೆ ಕೆಲವಷ್ಟು ಬದಲಾವಣೆಗಳ ಉಪಯೋಗ ಪಡೆಯುತ್ತಾ ತಮಗೆ ಸರಿ ಎನಿಸದ್ದನ್ನು ಮೇಲುನೋಟದಲ್ಲಿ ತಿರಸ್ಕರಿಸುತ್ತಾ ಹಳೆಯ ಕಾಲವನ್ನು ನೆನಪಿಸಿಕೊಂಡು ಅವರು ಕರುಬುತ್ತಿದ್ದಾರೆ.

ಮಿಲೆನಿಯಲ್ಸ್ ಮಕ್ಕಳೆದುರು ಕಂಗೆಡಿಸುವಷ್ಟು ಆಕರ್ಷಣೆಗಳನ್ನು ಹರಡುವ ಆರ್ಥಿಕ ವ್ಯವಸ್ಥೆಯನ್ನು ಒಪ್ಪಿಕೊಳ್ಳುತ್ತಲೇ ಅವುಗಳಿಂದ ಪ್ರಭಾವಿತರಾಗದೆ ಸಂಯಮವನ್ನು ಕಾಪಾಡಿಕೊಳ್ಳಿ ಎಂದು ಹೇಳುವುದು ನಿರುಪಯುಕ್ತವಾಗಬಹುದಲ್ಲವೆ?

ಮಕ್ಕಳೊಡನೆ ಸಂಪರ್ಕ ಸಾಧಿಸಲು ಉಪದೇಶ, ಬುದ್ಧಿವಾದ, ಶಿಸ್ತು, ನೀತಿನಿಯಮಗಳು ಉಪಯೋಗಕ್ಕೆ ಬಾರದು. ಇವತ್ತಿನ ಪೋಷಕರು ಮೊದಲು ತಮ್ಮ ಹದಿವಯಸ್ಸಿನ ಕಾಮನೆಗಳು, ಹಿಂಜರಿಕೆ, ಸಾಹಸ, ಸೋಲು, ಹತಾಶೆಗಳನ್ನು ನೆನಪಿಸಿಕೊಂಡು ಅದು ವಯೋಸಹಜವೆಂದು ಒಪ್ಪಿಕೊಳ್ಳುವ ಮನಸ್ಥಿತಿಗೆ ಬರಬೇಕು. ತಮ್ಮ ಹಳೆಯ ಅನುಭವಗಳು ಅವುಗಳ ಹಿಂದಿನ ಮನೋದೈಹಿಕ ಒತ್ತಡಗಳು ತಮ್ಮ ಕಾಲದ ಸಾಮಾಜಿಕ, ಸಾಂಸ್ಕೃತಿಕ ಅನಿವಾರ್ಯತೆಗಳು ಮುಂತಾದವುಗಳ ಬಗೆಗೆ ಮಕ್ಕಳೊಡನೆ ಮುಕ್ತವಾಗಿ ಚರ್ಚಿಸಬೇಕು.

ಪೋಷಕರು ತಮ್ಮ ಆಳದ ಆತ್ಮೀಯ ಅನುಭವಗಳನ್ನು ಮನಸ್ಸಿನ ತಿಜೋರಿಯಲ್ಲಿ ಭದ್ರವಾಗಿ ಮುಚ್ಚಿಟ್ಟು ಮಕ್ಕಳ ಅಂತರಂಗವನ್ನು ತಲುಪುವುದು ಅಸಾಧ್ಯ ಎನ್ನುವುದನ್ನು ಮನಗಾಣಬೇಕು. ಇವತ್ತು ಹಿಂತಿರುಗಿ ನೋಡಿದಾಗ ನಾವು ಯೌವನದಲ್ಲಿ ಎಡವಿದ್ದೆವು ಎಂದು ಪೋಷಕರಿಗೆ ಅನ್ನಿಸಿದರೆ ಅಂತಹ ಅನುಭವಗಳನ್ನೂ ಮಕ್ಕಳೊಡನೆ ಕುಳಿತು ವಿಶ್ಲೇಷಿಸಿಸಲು ಸಾಧ್ಯವಿದೆ. ತಮ್ಮ ವ್ಯಕ್ತಿತ್ವದ ಕತ್ತಲುಕೋಣೆಗೆ ಬೆಳಕನ್ನು ಚೆಲ್ಲಲು ಹಿರಿಯರು ಹಿಂಜರಿದರೆ ಮಕ್ಕಳೂ ತಮ್ಮ ಮಾನಸಿಕ ಪ್ರಪಂಚದಲ್ಲಿನ ಕಸಿವಿಸಿಗಳನ್ನು ಹಂಚಿಕೊಳ್ಳಲು ಸಿದ್ಧರಾಗಬಹುದು ಎಂದು ನಿರೀಕ್ಷಿಸುವುದಾದರೂ ಹೇಗೆ?

ಪ್ರಾಮಾಣಿಕವಾಗಿ ಅಂತರಂಗವನ್ನು ತೆರೆದಿಡುವುದರಿಂದ ಮಕ್ಕಳು ನಮ್ಮ ಬಗೆಗೆ ಅನಾದರ ತೋರಿಸಬಹುದು ಎನ್ನುವ ಭಯವೇ ಪೋಷಕರ ಹಿಂಜರಿಕೆಗೆ ಕಾರಣವಾಗುತ್ತದೆ. ಆದರೆ ಪೋಷಕರು ಮನಬಿಚ್ಚಿದಾಗ ಮಕ್ಕಳ ಗೌರವ ವಿಶ್ವಾಸವನ್ನು ಗಳಿಸಿಕೊಳ್ಳುತ್ತಾರೆ ಎನ್ನುವ ಸತ್ಯವನ್ನು ಅವರ ಆತಂಕ ಮರೆ ಮಾಡಿರುರುತ್ತದೆ. ಡೇವಿಡ್ ಶ್ನಾರ್ಕ್‌ ಎನ್ನುವ ಅಮೆರಿಕದ ಮನೋಚಿಕಿತ್ಸಕ ಹೇಳುವಂತೆ, ‘ಸಂಬಂಧಗಳಲ್ಲಿ ಆತ್ಮೀಯತೆಯನ್ನು ಹುಡುಕಿಕೊಳ್ಳಲು ಮುಖವಾಡಗಳನ್ನು ಕಳಚುವ ಕೆಚ್ಚೆದೆ ಬೇಕಾಗುತ್ತದೆ. ಪುಕ್ಕಲು ಹೃದಯಗಳಿಗೆ ಆತ್ಮೀಯ ಸಂಬಂಧಗಳು ಸಾಧ್ಯವಾಗುವುದಿಲ್ಲ’.

ಮಾಹಿತಿಯಿದೆ, ಜ್ಞಾನವಿಲ್ಲ
ಇವತ್ತು ಅಂತರ್ಜಾಲದಲ್ಲಿ ಮಾಹಿತಿಗಳ ಮಹಾಪೂರವೇ ಹರಿಯುತ್ತಿದೆ. ಆದರೆ, ಮಾಹಿತಿಗಳಿಂದ ಜ್ಞಾನದ ಹೆಚ್ಚಳ ಅಥವಾ ಜೀವನ ಶಿಕ್ಷಣ ಸಾಧ್ಯವಿಲ್ಲ. ಮಾಹಿತಿಗಳನ್ನು ಜ್ಞಾನವನ್ನಾಗಿ ಪರಿವರ್ತಿಸದಿದ್ದರೆ ಅವುಗಳಿಂದ ದಾರಿ ತಪ್ಪುವ ಸಾಧ್ಯತೆಗಳೇ ಹೆಚ್ಚು. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯೊಬ್ಬ ನನ್ನೊಡನೆ ಮಾತನಾಡುವಾಗ ತನ್ನ ಕಷ್ಟಗಳನ್ನು ಹಂಚಿಕೊಂಡಿದ್ದ. ಸಹಪಾಠಿಯನ್ನು ಅವನು ಪ್ರೇಮಿಸುತ್ತಿದ್ದು, ವಿವಾಹವಾಗುವವರೆಗೆ ದೈಹಿಕ ಸಂಬಂಧ ಮಾಡದಿರಲು ಇಬ್ಬರೂ ನಿರ್ಧರಿಸಿದ್ದರು. ಹಸ್ತಮೈಥುನ ಮಾಡುವಾಗ ತನ್ನ ಬಹುದಿನಗಳ ಪ್ರೇಯಸಿಯ ಹೊರತಾಗಿ ಇತರರನ್ನು ಕಲ್ಪಿಸಿಕೊಂಡಾಗ ಆವನು ಪಾಪಪ್ರಜ್ಞೆಯಿಂದ ನರಳುತ್ತಿದ್ದ. ಯಾವಾಗಲೂ ಪ್ರೇಯಸಿಯನ್ನು ಕಲ್ಪಿಸಿಕೊಳ್ಳುವುದರಿಂದ ಅವನ ಕಾಮಾನುಭವ ರೋಚಕತೆಯನ್ನು ಕಳೆದುಕೊಳ್ಳುತ್ತಿತ್ತು.

ಇಂತಹ ವಿರೋಧಾಭಾಸಗಳನ್ನು ನಿಭಾಯಿಸಲು ಅಂತರ್ಜಾಲದ ಮಾಹಿತಿಗಳು ಸಹಾಯ ಮಾಡುವುದಿಲ್ಲ. ಪೋಷಕರೊಡನೆ ಇದನ್ನು ಹಂಚಿಕೊಳ್ಳುವ ಮುಕ್ತ ವಾತಾವರಣವಿಲ್ಲದಿದ್ದಾಗ ಮಕ್ಕಳಿಗೆ ಸಹಾಯ ಮಾಡುವವರು ಯಾರು? ಮಕ್ಕಳ ಎಲ್ಲಾ ಗೊಂದಲ, ಅನುಮಾನಗಳಿಗೆ ಪೋಷಕರಲ್ಲಿ ಉತ್ತರವಿರಲೇಬೇಕಾಗಿಲ್ಲ. ಮಕ್ಕಳೊಡನೆ ಪೋಷಕರೂ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಿದೆ.

ತಮ್ಮ ಯೌವನದಲ್ಲಿ ಅನಗತ್ಯ ಎನ್ನಿಸಿದ ಜ್ಞಾನವನ್ನು ಈಗ ಅಗತ್ಯವೆನ್ನಿಸಿದಾಗ ಪಡೆದುಕೊಳ್ಳುವುದಕ್ಕೆ ಇರುವ ಏಕೈಕ ತೊಂದರೆ ಪೋಷಕರ ಮನೋಭಾವ. ತಮ್ಮ ಹಿಂಜರಿಕೆ, ಭಯಗಳಿಗೆ ಪೋಷಕರು ಮನವನ್ನೊಪ್ಪಿಸಿದರೆ ಮಕ್ಕಳನ್ನು ಅವರು ತಪ್ಪು ಮಾಹಿತಿಗಳ ವಶಕ್ಕೆ ಒಪ್ಪಿಸಿರುತ್ತಾರೆ. ಮುಕ್ತವಾಗಲು ಸಾಧ್ಯವಾಗದಿದ್ದಾಗ ತಮ್ಮ ಆತಂಕವನ್ನು ಮುಚ್ಚಿಟ್ಟುಕೊಳ್ಳಲು ಅವರಿಗೆ ಇರುವ ದಾರಿ ಮಕ್ಕಳನ್ನು ಎಲ್ಲಾ ಮಾಹಿತಿಗಳಿಂದ ನಿರ್ಬಂಧಿಸುವುದು ಮಾತ್ರ. ಆದರೆ, ಬೆರಳ ತುದಿಯಲ್ಲಿ ಪ್ರಪಂಚವನ್ನು ತೆರೆಯುವ ಇವತ್ತಿನ ಅಂತರ್ಜಾಲದಿಂದಾಗಿ ಮಕ್ಕಳನ್ನು ಮಾಹಿತಿಗಳಿಂದ ದೂರವಿಡುವುದು ಅಸಾಧ್ಯ.

ಮಕ್ಕಳೊಡನೆ ನೇರವಾದ ಮಾನಸಿಕ ಸಂಪರ್ಕ ಸಾಧಿಸುವುದು ಮತ್ತು ಅಂತಹ ಸಂಪರ್ಕವನ್ನು ಬಳಸಿ ಮಕ್ಕಳಿಗೆ ಸೂಕ್ತ ಲೈಂಗಿಕ ಶಿಕ್ಷಣ ನೀಡುವುದು ಸಾಧ್ಯವಾದರೆ ಪೋಷಕರು ಆತಂಕಗಳಿಂದ ಹಗುರಾಗುತ್ತಾರೆ. ಆಗ ಮಕ್ಕಳ ನಡವಳಿಕೆಗಳ ಬಗೆಗೆ ಪತ್ತೇದಾರಿಕೆ ಮಾಡುವ, ಅವರ ಮೇಲೆ ಅನಗತ್ಯ ನಿರ್ಬಂಧ ಹೇರುವ ಅಥವಾ ಅಸಹಾಯಕರಾಗಿ ಕಾಲ ಹಾಳಾಗುತ್ತಿರುವುದರ ಬಗೆಗೆ ಕರುಬುವ ಪ್ರಮೇಯವೇ ಉದ್ಭವವಾಗುವುದಿಲ್ಲ.

ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಮಕ್ಕಳನ್ನು ಸಿದ್ಧಪಡಿಸುವುದು ಸಾಧ್ಯವಾದರೆ ನಮಗೆ ಕಾಲ ಬದಲಾಗುತ್ತಿರುವುದು ಕಾಣುತ್ತದೆಯೇ ಹೊರತು ಹಾಳಾಗುತ್ತಿರುವುದಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT