ಹೈದರಾಬಾದ್: ಜೋಧಪುರ್–ಯಶವಂತಪುರ ರೈಲಿನಲ್ಲಿ ಸಹಪ್ರಯಾಣಿಕರು ನೀಡಿದ ಬಿಸ್ಕತ್ ಸೇವಿಸಿದ ಸುಮಾರು 13 ಪ್ರಯಾಣಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಅವರ ಬಳಿ ಇದ್ದ ನಗದು, ಮೊಬೈಲ್ ಇತ್ಯಾದಿಗಳನ್ನು ದರೋಡೆ ಮಾಡಲಾಗಿದೆ.
ಗುರುವಾರ ಬೆಳಿಗ್ಗೆ ನೆಲ್ಲೂರು ಬಳಿ ಈ ಘಟನೆ ನಡೆದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಪ್ರಜ್ಞೆ ತಪ್ಪಿಸುವ ಪದಾರ್ಥ ಸೇರಿಸಿದ್ದ ಬಿಸ್ಕತ್ ಅನ್ನು ತಮ್ಮೊಂದಿಗಿದ್ದ ಸಹ ಪ್ರಯಾಣಿಕರು ನೀಡಿದರು. ಪ್ರಜ್ಞೆ ತಪ್ಪಿದ ನಂತರ, ತಮ್ಮ ಲಗೇಜ್, ಮೊಬೈಲ್ ಹಾಗೂ ಹಣ ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ’ ಎಂದು ಪ್ರಯಾಣಿಕರು ಹೇಳಿದ್ದಾರೆ.
ಇದೇ ವೇಳೆಗೆ ಬೀದರ್–ಯಶವಂತಪುರ ರೈಲಿನಲ್ಲಿನ ಇಬ್ಬರು ಪ್ರಯಾಣಿಕರ ವಸ್ತುಗಳನ್ನು ದುಷ್ಕರ್ಮಿಗಳು ತಾಟಿಚೆರ್ಲಾ ರೈಲು ನಿಲ್ದಾಣದಲ್ಲಿ ದರೋಡೆ ಮಾಡಿದ್ದಾರೆ.
ಘಟನೆಯ ವಿವರ: ಜನರಲ್ ಕಂಪಾರ್ಟ್ಮೆಂಟ್ನಲ್ಲಿದ್ದ ಈ ಇಬ್ಬರು ಪ್ರಯಾಣಿಕರನ್ನು ಸುಲಿಗೆ ಮಾಡಿದ ನಂತರ ದುಷ್ಕರ್ಮಿಗಳು ರೈಲಿನ ಚೈನ್ ಎಳೆದು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ರಿವಾಲ್ವರ್ ಇಲ್ಲದೇ ರಕ್ಷಣೆಗೆ ಬಂದ ರೈಲು ಭದ್ರತಾ ಪಡೆಯ ಅಧಿಕಾರಿ ವಿ.ಕೆ. ಮೀನಾ ಅವರಿಗೆ ಬೆದರಿಕೆ ಹಾಕಿ, ದ್ವಿಚಕ್ರ ವಾಹನ ಕದ್ದು ಪರಾರಿಯಾಗಿದ್ದಾರೆ.