ಚನ್ನಮ್ಮನ ಕಿತ್ತೂರು: ‘ಕಳೆದ ಮೂರು ತಿಂಗಳಿನಿಂದ ಕುಡಿಯುವ ನೀರು ಸಮರ್ಪಕ ಪೂರೈಕೆ ಮಾಡುತ್ತಿಲ್ಲ, ಸವಳು ನೀರು ಕುಡಿಯುವುದು ನಮ್ಮ ಕರ್ಮವಾಗಿದೆ’ ಎಂದು ಇಲ್ಲಿಯ ಸೋಮವಾರ ಪೇಟೆಯ ನೇಕಾರ ಓಣಿಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತದಾನದ ಜಾಗೃತಿಗಾಗಿ ಪಟ್ಟಣದಲ್ಲಿ ಹೊರಟಿದ್ದ ಪಂಚಾಯ್ತಿ ಮುಖ್ಯಾಧಿಕಾರಿ ಐ. ಕೆ. ಗುಡದಾರಿ ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ಮಹಿಳೆಯರು ಮತ್ತು ಯುವಕರು, ‘ಇದೇ ಪರಿಸ್ಥಿತಿ ಮುಂದುವರೆದರೆ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬೇಕಾದೀತು’ ಎಂದು ಎಚ್ಚರಿಸಿದರು.
‘ನೀರಿನ ಸಮಸ್ಯೆ ಬಗ್ಗೆ ಅನೇಕ ಬಾರಿ ನಿಮಗೆ ತಿಳಿಸಿದ್ದೇವೆ. ಏನೂ ಕ್ರಮ ಕೈಗೊಳ್ಳುತ್ತಿಲ್ಲ. ಪಂಚಾಯ್ತಿ ಅಧ್ಯಕ್ಷರು ಹೆಸರಿಗೆ ಮಾತ್ರ ಇದ್ದಾರೆ. ನಮ್ಮ ಶಾಸಕ ಯಾರೆಂದು ನಮಗೆ ಗೊತ್ತಿಲ್ಲ’ ಎಂದು ಯುವಕರು ಆಕ್ರೋಶದಿಂದ ನುಡಿದರು.
‘ಮೊದಲು ಸಮರ್ಪಕ ನೀರಿನ ವ್ಯವಸ್ಥೆ ಮಾಡಿ. ನಲ್ಲಿಯ ನೀರು ಪೂರೈಕೆ ಮಾಡಲು ಸಾಧ್ಯವಾಗದಿದ್ದರೆ ಟ್ಯಾಂಕರ್ ಮೂಲಕವಾದರೂ ನೀರು ಸರಬರಾಜು ಮಾಡಬೇಕು’ ಎಂದು ಯುವಕರು ಮುಖ್ಯಾಧಿಕಾರಿ ಅವರಿಗೆ ಆಗ್ರಹಿಸಿದರು.
ಸಮಸ್ಯೆ ಆದಷ್ಟು ಬೇಗ ಪರಿಹರಿಸುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದ ನಂತರ ಯುವಕರು ಸಮಾಧಾನ
ಗೊಂಡು, ಜಾಗೃತಿ ಕಾರ್ಯಕ್ಕೆ ಅನುವು ಮಾಡಿಕೊಟ್ಟರು.ಕೃಷ್ಣ ಭಂಡಾರಿ, ರಾಹುಲ್ ಸೊಂಟಕ್ಕಿ ಸೇರಿದಂತೆ ಯುವಕರು, ಮಹಿಳೆಯರು ಇದ್ದರು.