ರಸಪ್ರಶ್ನೆ ಸ್ಪರ್ಧೆ, ಲಾಟರಿ.... ಹೀಗೆ ಯಾವುದಾದರೊಂದು ಸ್ಪರ್ಧೆಯಲ್ಲಿ ಶಾಲಾ ಮಕ್ಕಳು ಬಹುಮಾನ ಗೆದ್ದರೆ, ‘ಆ ಹಣವನ್ನು ಏನು ಮಾಡುತ್ತೀರಿ’ ಎಂದು ಯಾರಾದರೂ ಕೇಳಿದರೆ, ‘ಹೊಸ ಸೈಕಲ್, ಹೊಸಬಟ್ಟೆ, ಹೊಸ ಶೂ, ಡ್ರಾಯಿಂಗ್ ಬುಕ್ .... ಹೀಗೆ ತಮಗೆ ಏನೂ ಬೇಕೋ ಅದನ್ನು ಕೊಳ್ಳುತ್ತೇವೆ’ ಎನ್ನಬಹುದು. ಆದರೆ, ಚಿತ್ರನಟ ಪುನೀತ್ ರಾಜ್ಕುಮಾರ್ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ₹6.4 ಲಕ್ಷ ನಗದು ಬಹುಮಾನ ಗೆದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ, ಬಹುಮಾನದ ಹಣವನ್ನು ತಾನು ಓದುತ್ತಿರುವ ಶಾಲೆ ಆವರಣದಲ್ಲಿ ಬೆಳೆದಿರುವ ಗಿಡಮರಗಳ ರಕ್ಷಣೆಗೆ ಕಾಂಪೌಂಡ್ ಕಟ್ಟಿಸಲು ಮತ್ತು ತನ್ನ ಅಕ್ಕನ ಮದುವೆಗೆ ವಿನಿಯೋಗಿಸುವುದಾಗಿ ಹೇಳಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದಾನೆ. ನಾಡಿನ ಜನಮನ ಗೆದ್ದ ಆ ಬಾಲಕ ಮತ್ಯಾರೂ ಅಲ್ಲ, ಹಾಸನ ಜಿಲ್ಲೆಯ ಕಟ್ಟಾಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕೆ.ಎನ್.ತೇಜಸ್.