ಎಲ್ಲ ರೀತಿಯ ಆಸೆಯ ವಾಸನೆಗಳಿಂದ ದೂರವಾದವನು ಅವಧೂತ. ಅವನಲ್ಲಿ ಯಾವ ದೋಷವೂ ಗೊಂದಲವೂ ಉದ್ವೇಗವೂ ಇರದು. ಭವಿಷ್ಯದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಈ ಕ್ಷಣದಲ್ಲಿ ಅವನು ಬದುಕುತ್ತಿರುತ್ತಾನೆ. ಲೋಕವ್ಯವಹಾರದ ಯಾವುದೇ ಅಳತೆಗೋಲಿಗೂ ಅವನು ಸಿಗುವುದಿಲ್ಲ. ಜ್ಞಾನಿಯಾಗಿ, ಹುಚ್ಚನಾಗಿ, ಮಗುವಿನಂತೆ – ಯಾವ ಸ್ವರೂಪದಲ್ಲೂ ಅವನು ಕಾಣಿಸಿಕೊಳ್ಳಬಹುದು. ಆನಂದವೊಂದೇ ಅವನ ದಿಟವಾದ ಸ್ವಭಾವ–ಸ್ವರೂಪವಾಗಿರುತ್ತದೆಯೇ ಹೊರತು, ಹೊರಗಿನ ವಿವರಗಳಿಂದ ಅವನನ್ನು ಅಳೆಯಲು ಆಗದು. ಹೀಗೆ ಲೋಕೋತ್ತರ ತತ್ತ್ವದ ಮೂರ್ತರೂಪವೇ ದತ್ತಾತ್ರೇಯ.