ಕೋಲಾರ: ಕೋಲಾರಮ್ಮ ಕೆರೆ ಜೊಂಡು ಸ್ವಚ್ಛತಾ ಆಂದೋಲನದಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿ ಭಾನುವಾರ ಪಾಲ್ಗೊಂಡು ಸ್ವಚ್ಛಗೊಳಿಸಿದರು. ನೀರಾವರಿ ಸಂಚಾಲಕ ವಿ.ಕೆ.ರಾಜೇಶ್ ಮಾತನಾಡಿ, ‘ಕೆರೆಯಲ್ಲಿ ಜೊಂಡು ಆವರಿಸಿಕೊಂಡಿದ್ದು, ದಿನಕ್ಕೆ ಒಂದೂವರೆ ಲೀಟರ್ನಷ್ಟು ನೀರನ್ನು ಹಿರಿಕೊಳ್ಳುತ್ತದೆ. ಸತತವಾಗಿ 27ದಿನಗಳಿಂದ ಅಂದೋಲನಾ ನಡೆಯುತ್ತಿದ್ದು, ವಿವಿಧ ಸಂಘ ಸಂಸ್ಥೆಗಳವರು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ಸ್ವಚ್ಛಗೊಳಿಸುತ್ತಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.
ಕೆರೆಯಲ್ಲಿ ಬೆಳೆದಿರುವ ಜಾಲಿಗಿಡಗಳನ್ನು ತೆರವುಗೊಳಿಸಲು ಹಾಗೂ ಇದಕ್ಕೆ ಸಂಪರ್ಕವಿರುವ ರಾಜಕಾಲುವೆ ಪುನಶ್ಚೇತನಗೊಳಿಸಲು ಆರ್.ಎಲ್.ಜಾಲಪ್ಪ ಅವರು ನಗರಸಭೆಗೆ ₹ 50 ಲಕ್ಷ ನೀಡಿದ್ದರು, ಅದರೆ ಕೇವಲ ₹ 25 ಲಕ್ಷ ವೆಚ್ಚ ಮಾಡಿ ಉಳಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಉಳಿದಿರುವ ಹಣವನ್ನು ಕೆರೆ ಸ್ವಚ್ಛತೆಗೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಬಹುತೇಕ ಕೆರೆಯ ನೀರು ಕಾಲಿಯಾಗಿದ್ದು, ಜೊಂಡನ್ನು ಸ್ವಚ್ಛಗೊಳಿಸದಿದ್ದಲ್ಲಿ ಕೆರೆಯು ಬೇಗನೆ ಬತ್ತಿಹೋಗಲಿದೆ. ಹಾಗಾಗಿ ನೀರನ್ನು ಉಳಿಸುವ ಪ್ರಜ್ಞಾವಂತರು, ಸಂಘಟನೆಗಳು ಆಂದೋಲನದಲ್ಲಿ ಭಾಗವಹಿಸಿ ಕೆರೆಯನ್ನು ರಕ್ಷಿಸಲು ಸಹಕಾರ ನೀಡಬೇಕು ಎಂದು ಕೋರಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸಂಚಲಾಕರಾದ ಪುಟ್ಟರಾಜು, ಮಾರುತಿ ಕುಮಾರ್, ವಕೀಲ ಅರುಣ್ ಕುಮಾರ್, ಶ್ರೀನಿವಾಸ್, ಪಾಂಡುರಂಗ, ಸತೀಶ್ ಕುಮಾರ್, ರಮೇಶ್, ನಾಗೇಶ್, ಚಲಪತಿ ಪಾಲ್ಗೊಂಡಿದ್ದರು.