ಬೆಂಗಳೂರು: ತಿರುಮಲಶೆಟ್ಟಿಹಳ್ಳಿಯ ಕೋಡಿಹಳ್ಳಿ ಬಳಿ ಬಿಜೆಪಿ ಕಾರ್ಯಕರ್ತ ರಾಮಯ್ಯ ಮೇಲೆ ಬುಧವಾರ ಗುಂಡು ಹಾರಿಸಿ ಕೊಲೆಗೆ ಯತ್ನಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ರಾಮಯ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆಯ ವೈಷಮ್ಯದಿಂದ ಈ ಘಟನೆ ನಡೆದಿರುವ ಅನುಮಾನವಿದೆ ಎಂದು ಪೊಲೀಸರು ತಿಳಿಸಿದರು.
ಬುಧವಾರ ಮಧ್ಯಾಹ್ನ ರಾಮಯ್ಯ ದ್ವಿಚಕ್ರ ವಾಹನದಲ್ಲಿ ಹೊಸಕೋಟೆಗೆ ಬರುತ್ತಿದ್ದರು. ಅವರ ಎದುರಿಗೆ ಬುಲೆಟ್ ಬೈಕ್ನಲ್ಲಿ ಬಂದಿದ್ದ ಜನಾರ್ದನ್ ಮತ್ತು ಅವರ ತಂದೆ ಪ್ರಕಾಶ್, ವಾಹನ ತಡೆದು ರಾಮಯ್ಯರ ಮೇಲೆ ಹಲ್ಲೆ ಮಾಡಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಬಳಿಕ, ಜನಾರ್ದನ್ ತನ್ನ ಬಳಿಯ ರಿವಲ್ವಾರ್ನಿಂದ ಒಂದು ಸುತ್ತು ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಗುಂಡು ತಗುಲಿರಲಿಲ್ಲ. ಅಲ್ಲಿಂದ ತಪ್ಪಿಸಿಕೊಂಡು ಬಂದ ರಾಮಯ್ಯ ಠಾಣೆಗೆ ದೂರು ನೀಡಿದ್ದರು. ಬಳಿಕ ಘಟನಾ ಸ್ಥಳಕ್ಕೆ ಹೋದಾಗ, ಗುಂಡಿನ ಕವಚ ಸಿಕ್ಕಿತು ಎಂದರು.
‘ಆರೋಪಿ ಜನಾರ್ದನ್, ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ. ರಾಮಯ್ಯ, ಬಿಜೆಪಿ ಪರ ಕೆಲಸ ಮಾಡುವುದನ್ನು ಸಹಿಸದೆ ಈ ಕೃತ್ಯ ಎಸಗಿದ್ದಾನೆ’ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು