ನರೇಗಲ್: ರಾಮಾಯಾಣದ ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ. ಹಿಂದೂ ದೇವತೆಗಳು ವ್ಯಭಿಚಾರಿಗಳು. ಭಗವದ್ಗೀತೆ ಓದಬೇಡಿ, ಉಪನಿಷತ್ತು ಕೆಟ್ಟ ಗ್ರಂಥ, ಹಿಂದೂ ದೇವಸ್ಥಾನಗಳು ಕೇವಲ ಹಣ ಮಾಡುವ ಯಂತ್ರಗಳಾಗಿವೆ ಎಂಬ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಬುದ್ಧಿಜೀವಿಗಳು ದೇಶದ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಹಾಗೂ ದೇಶದ ಪ್ರಗತಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ ಎಂದು ಯುವ ಬ್ರಿಗೇಡ್ ರಾಜ್ಯ ಸಹ ಸಂಚಾಲಕ ಸಂತೋಷ ಸಾಮ್ರಾಟ ಹೇಳಿದರು.
ಪಟ್ಟಣದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಶ್ರಯದಲ್ಲಿ ಭಾನುವಾರ ಬಸ್ ನಿಲ್ದಾಣದ ಬಳಿ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘’ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗುವುದಿಲ್ಲ ಎನ್ನುವ ಸಂಸದ ಅಸಾದುದ್ದೀನ್ ಓವೈಸಿಯಂಥವರ ವಿರೋಧಿಗಳು. ಡಾ. ಅಬ್ದುಲ್ ಕಲಾಂ ಹಾಗೂ ಸಂತ ಶಿಶುನಾಳ ಶರೀಫರನ್ನು ನೆನಪು ಮಾಡಿಕೊಳ್ಳದ ರಾಜಕೀಯ ನಾಯಕರು ತಮ್ಮ ಲಾಭಕ್ಕಾಗಿ ಟಿಪ್ಪು ಮತ್ತು ಬಹಮನಿ ಸುಲ್ತಾನರ ಜಯಂತಿಗೆ ಮುಂದಾಗಿದ್ದಾರೆ ಎಂದರು.
ಗದಗ ಜಿಲ್ಲಾ ಆರ್ಎಸ್ಎಸ್ ಬೌದ್ಧಿಕ ಪ್ರಮುಖ ಮಾರುತಿ ಕಟ್ಟಿಮನಿ ಮಾತನಾಡಿ, ಶಿವಾಜಿ ದೇಶದ ಏಳಿಗೆಗೆ ಶ್ರಮಿಸುತ್ತಾ ಮುಸ್ಲಿಂ ರಾಜರು ಹಿಂದೂಗಳ ಮೇಲೆ ಮಾಡುತ್ತಿದ್ದ ದಬ್ಬಾಳಿಕೆ ವಿರುದ್ಧ ಸಿಡಿದೆದ್ದು ರಾಜರ ರಾಜ ಎಂಬ ಹೆಸರು ಪಡೆದಿದ್ದ ಎಂದರು.
ಭಾವಚಿತ್ರದ ಮೆರವಣಿಗೆ: ಸಭಾ ಕಾರ್ಯ ಕ್ರಮಕ್ಕೆ ಮುನ್ನ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಜರುಗಿತು.
ಖಂಡನೆ: ಶಿವಾಜಿ ಜಯಂತಿ ಆಚರಣೆ ವೇಳೆಯಲ್ಲಿ ಸಂತೋಷ ಸಾಮ್ರಾಟ ಅವರು ಪದೇ ಪದೇ ಪ್ರಧಾನಿ ಹೆಸರನ್ನು ಪ್ರಸ್ತಾಪಿಸಿ ಬಿಜೆಪಿ ಕಾರ್ಯಕ್ರಮವನ್ನಾಗಿ ಮಾಡಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಲ್ಮೇಶ ತೊಂಡಿಹಾಳ, ಎಪಿಎಂಸಿ ಸದಸ್ಯ ನಿಂಗನ ಗೌಡ ಲಕ್ಕನಗೌಡ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಖಂಡಿಸಿದರು.