ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ‘ಧರಣಿ’ಗೆ ಹಸಿರುಡಿಸುವ ಸಂಭ್ರಮ

ವಿಶ್ವ ಪರಿಸರ ದಿನಾಚರಣೆ: ಜಿಲ್ಲೆಯಾದ್ಯಂತ ಸಸಿಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದ ಜನರು, ವಿವಿಧೆಡೆ ಬಯಲು ಪ್ರದೇಶದಲ್ಲಿ ಬೀಜದುಂಡೆ ಪ್ರಸರಣ
Last Updated 6 ಜೂನ್ 2018, 10:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅರಿಸಿನ ಕುಂಕುಮ ಮೈಗೆಲ್ಲ ಮೆತ್ತಿ ಹಸುರುಟ್ಟ ನೆಲದವ್ವ ಮದುವಣಗಿತ್ತಿ ತೊಟ್ಟಿರೆ ಜರತಾರಿ ಮರಗಳ ನೆತ್ತಿ
ದಿಬ್ಬಣ ಹೊರಟವೋ ಪಾತರಗಿತ್ತಿ..

‘ವಿಶ್ವ ಪರಿಸರ ದಿನ’ದ ಅಂಗವಾಗಿ ಮಂಗಳವಾರ ಜಿಲ್ಲೆಯಾದ್ಯಂತ ನಡೆದ ವಿವಿಧ ಕಾರ್ಯಕ್ರಮಗಳು ‘ನಿತ್ಯೋತ್ಸವ’ ಕವಿ ಡಾ. ಕೆ. ಎಸ್. ನಿಸಾರ್ ಅಹಮದ್ ಅವರ ‘ಸಗ್ಗದ ಸಿರಿ’ ಕವಿತೆಯ ಈ ಸಾಲುಗಳನ್ನು ನೆನಪಿಸುವಂತೆ ಭಾಸವಾದವು.

ಬೆಳಿಗ್ಗೆಯಿಂದಲೇ ವಿವಿಧೆಡೆ ಸಸಿಗಳನ್ನು ನೆಡುವ, ಪರಿಸರ ಜಾಗೃತಿ ಮೂಡಿಸುವ, ಉಚಿತವಾಗಿ ಸಸಿ ವಿತರಿಸುವ, ಬೆಟ್ಟ ಗುಡ್ಡಗಳಲ್ಲಿ ಬೀಜದುಂಡೆ ಬಿತ್ತುವಂತಹ ಭೂತಾಯಿಗೆ ಹಸಿರುಡಿಸುವ ಪರಿಸರ ಕಾಳಜಿಯ ಸೇವಾ ಕಾರ್ಯಗಳು ಎಲ್ಲೆಡೆ ಗೋಚರಿಸಿದವು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ವಕೀಲರ ಸಂಘ ಸಹಯೋಗದಲ್ಲಿ ನಗರದ ಪಂಚಗಿರಿ ಬೋಧನಾ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ‘ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮವನ್ನು ಗಣ್ಯರು ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಜತೆಗೆ ರೈತರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ, ‘ಮುಂದಿನ ಪೀಳಿಗೆಗಳ ಆರೋಗ್ಯಕರ ಭವಿಷ್ಯಕ್ಕಾಗಿ ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ’ ಎಂದು ಕಿವಿಮಾತು ಹೇಳಿದರು.

‘ಪ್ರಕೃತಿಯ ಆಸರೆಯಲ್ಲಿ ಜೀವಿಸುತ್ತಿರುವ ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುವುದು ಸರಿಯಲ್ಲ. ಈಗಾಗಲೇ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಪ್ರಕೃತಿಯ ವಿರುದ್ಧ ನಡೆದವರಿಗೆ ಪ್ರಕೃತಿಯೇ ತಕ್ಕ ಪಾಠ ಕಲಿಸಿದೆ. ಇವತ್ತು ಜನರು ಪ್ರಕೃತಿಯನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಹಸಿರು ಉಳಿಸಿ, ಬೆಳೆಸುವ ಚಿಂತನೆ ರೂಢಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಪ್ಲಾಸ್ಟಿಕ್‌ ಒಂದು ಭಯಾನಕ ವಸ್ತು. ಆದರೆ ಅದು ಮನುಷ್ಯನ ನಿತ್ಯ ಜೀವನದ ಭಾಗವಾಗುತ್ತಿರುವುದು ಕಳವಳದ ಸಂಗತಿ. ಹಲವಾರು ರೋಗಗಳನ್ನು ಹರಡುವ ಪ್ಲಾಸ್ಟಿಕ್‌ನಿಂದ ಪರಿಸರ ಮತ್ತು ಜೀವಸಂಕುಲಕ್ಕೆ ಸಾಕಷ್ಟು ಅಪಾಯವಿದೆ. ಹೀಗಾಗಿ ಭವಿಷ್ಯದ ಹಿತದೃಷ್ಟಿಯಿಂದ ನಾವೆಲ್ಲರೂ ಪ್ಲಾಸ್ಟಿಕ್‌ ತ್ಯಜಿಸಲು ಪಣ ತೊಡಬೇಕು’ ಎಂದರು.

ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಮಾತನಾಡಿ, ‘ಪರಿಸರ ಉತ್ತಮವಾಗಿದ್ದಾಗ ಮಾತ್ರವೇ ನಮಗೆ ಉಸಿರಾಡಲು ಸ್ವಚ್ಛ ಗಾಳಿ ದೊರೆಯುತ್ತದೆ. ಪ್ರತಿಯೊಬ್ಬರು ಹೆಚ್ಚು ಗಿಡ ನೆಡುವ ಮೂಲಕ ಪರಿಸರ ಸಮತೋಲನಕ್ಕೆ ಕೈಜೋಡಿಸಬೇಕು. ನಿಸರ್ಗವನ್ನು ಕಲುಷಿತಗೊಳಿಸುವ ಪ್ಲಾಸ್ಟಿಕ್ ಬಳಕೆ ಕಡಿವಾಣ ಹಾಕಲು ನಾಗರಿಕರು ಸಹಕಾರ ನೀಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್‌ ಹೆಗಡೆ ಮತನಾಡಿ, ‘ವಿದ್ಯಾರ್ಥಿಗಳು ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು. ತಮ್ಮ ಮನೆಯ ಸುತ್ತ ಗಿಡಗಳನ್ನು ಬೆಳೆಸಬೇಕು. ಸ್ನೇಹಿತರಿಗೆ, ನೆರೆಹೊರೆಯರಿಗೆ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

ನ್ಯಾಯಾಧೀಶರಾದ ಎಚ್.ದೇವರಾಜ್‌, ಲೋಕೆಶ್‌, ವಕೀಲ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್‌.ತಮ್ಮೇಗೌಡ, ಉಪಾಧ್ಯಕ್ಷ ಬಾಲಾಜಿ, ಕಾರ್ಯದರ್ಶಿ ವಿನೋದ್‌ ಕುಮಾರ್‌, ಅರಣ್ಯ ಇಲಾಖೆ ಅಧಿಕಾರಿ ರವಿಶಂಕರ್‌, ಜಿಲ್ಲಾ ಪರಿಸರ ಅಧಿಕಾರಿ ಎಸ್. ಮಧುಸೂದನ್, ಪಂಚಗಿರಿ ಬೋಧನಾ ಪ್ರೌಢ ಶಾಲಾ ಪ್ರಾಂಶುಪಾಲ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಹಸಿರು ಹೊದ್ದ ಶಾಲೆ ಆವರಣ

ಚಿಕ್ಕಬಳ್ಳಾಪುರ ತಾಲ್ಲೂಕಿನ ರೇಣುಮಾಕಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಮಂಗಳವಾರ ಹಬ್ಬದ ವಾತಾವರಣ ಮನೆ ಮಾಡಿತ್ತು. ‘ವಿಶ್ವ ಪರಿಸರ ದಿನ’ದ ಅಂಗವಾಗಿ ವಸತಿ ಶಾಲೆಯ ಆವರಣದಲ್ಲಿ ಸಾಮಾಜಿಕ ಅರಣ್ಯ ವಲಯದ ವತಿಯಿಂದ ನೆಡುತೋಪು ರೂಪಿಸುವ ಕಾರ್ಯಕ್ಕೆ ವಿದ್ಯಾರ್ಥಿಗಳು ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್‌ ಹೆಗಡೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಬೆಟ್ಟದಲ್ಲಿ ಬೀಜದುಂಡೆ ಪ್ರಸರಣ

ಚಿಕ್ಕಬಳ್ಳಾಪುರ ಹೊರವಲಯದ ಅಗಲಗುರ್ಕಿ ಬಳಿ ಇರುವ ಬಿಜಿಎಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಸುರ್ಯೋದಯದ ಸಮಯಕ್ಕೆ ಗೋಪಿನಾಥ ಬೆಟ್ಟಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಸುಮಾರು ಎರಡು ಸಾವಿರಕ್ಕೂ ಅಧಿಕ ಬೀಜದುಂಡೆಗಳನ್ನು ಬೆಟ್ಟದ ತುಂಬೆಲ್ಲ ಸುತ್ತಾಡಿ ಹರಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಡಿ.ಸಿ.ಮೋಹನ್ ಕುಮಾರ್, ‘ಪ್ರಕೃತಿ ಮಾತೆ ನಮಗೆ ತನ್ನ ಸಕಲವನ್ನೂ ನೀಡಿದ್ದಾಳೆ. ಆದರೂ ನಾವು ನಮ್ಮ ಸ್ವಾರ್ಥ ಸಾಧನೆಗಾಗಿ ನಿಸರ್ಗದ ಮೇಲೆ ಅವ್ಯಾಹತ ದಾಳಿ ನಡೆಸಿದ್ದೇವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಮ್ಮ ವಿನಾಶ ಕಟ್ಟಿಟ್ಟ ಬುತ್ತಿ. ಆದ್ದರಿಂದ ನೀವು ವಿದ್ಯಾರ್ಥಿದೆಸೆಯಲ್ಲಿಯೇ ಪರಿಸರ ಉಳಿಸುವ ರಾಯಭಾರಿಗಳಾಗಬೇಕಿದೆ’ ಎಂದು ಕಿವಿಮಾತು ಹೇಳಿದರು.

ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತು ಕಿರುನಾಟಕ ಪ್ರದರ್ಶಿಸಲಾಯಿತು. ಬಿಜಿಎಸ್ ವಿದ್ಯಾ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಉಪಸ್ಥಿತರಿದ್ದರು.

ಕೆ.ಎಸ್‌.ಆರ್‌.ಟಿ.ಸಿ ಸಿಬ್ಬಂದಿ ಪರಿಸರ ಪ್ರೇಮ

ಚಿಕ್ಕಬಳ್ಳಾಪುರದ ಮುಸ್ಟೂರು ರಸ್ತೆಯಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಡಿಪೊ, ಪ್ರಶಾಂತ್ ನಗರದಲ್ಲಿರುವ ವಿಭಾಗೀಯ ಕಚೇರಿ ಮತ್ತು ನಗರದಲ್ಲಿರುವ ನೂತನ ಬಸ್‌ ನಿಲ್ದಾಣದ ಆವರಣಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಸಂಸ್ಥೆಯ ಸಿಬ್ಬಂದಿ ಪರಿಸರ ಪ್ರೇಮ ಮೆರೆದರು.

ವಿಭಾಗೀಯ ನಿಯಂತ್ರಣಾಧಿಕಾರಿ ಆ್ಯಂಟನಿ ಜಾರ್ಜ್, ವಿಭಾಗೀಯ ಸಂಚಲನಾಧಿಕಾರಿ ಮಂಜುನಾಥ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರುದ್ರಸ್ವಾಮಿ, ಘಟಕ ವ್ಯವಸ್ಥಾಪಕರು ಅಪ್ಪಿರೆಡ್ಡಿ ಹಾಗೂ ಕನ್ನಡ ಕ್ರಿಯಾ ಸಮಿತಿ ವಿಭಾಗೀಯ ಅಧ್ಯಕ್ಷ ಎನ್.ಶ್ರೀನಿವಾಸ್ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು.

ಗಿಡ ನೆಟ್ಟು ‘ಪರಿಸರ ದಿನ’ ಆಚರಣೆ

ಚಿಕ್ಕಬಳ್ಳಾಪುರ ತಾಲ್ಲೂಕಿನ ಪೇರೇಸಂದ್ರದಲ್ಲಿರುವ ಶಾಂತಾ ವಸತಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಮಂಗಳವಾರ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಿದರು. ಶಾಲೆಯ ಪ್ರಾಂಶುಪಾಲ ಎಸ್. ಆರ್. ಶೇಖರ್ ಅವರು ವಿದ್ಯಾರ್ಥಿಗಳಿಗೆ ಪರಿಸರ ಹಾನಿಯ ದುಷ್ಪರಿಣಾಮ ಮತ್ತು ರಕ್ಷಣೆಯ ಉಪಯೋಗ ಕುರಿತು ಮನವರಿಕೆ ಮಾಡಿಕೊಟ್ಟರು.

ಚಿಕ್ಕಬಳ್ಳಾಪುರ ಹೊರವಲಯದ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. ಪ್ರಾಂಶುಪಾಲೆ ಲೀಲಾವತಿ, ನಿವೃತ್ತ ಪಾಂಶುಪಾಲ ಪ್ರೋ.ಕೋಡಿರಂಗಪ್ಪ, ಉಪನ್ಯಾಸಕರಾದ ಲೋಕನಾಥ್, ಬಾಹುಬಲಿ, ಶಂಕರ್, ಗುರುರಾಜ್, ಶ್ರೀನಿವಾಸಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಬಂಡಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಅಡ್ಡಗಲ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಸದಸ್ಯೆ ಜ್ಯೋತಮ್ಮ, ಕಾರ್ಯದರ್ಶಿ ರಾಮಕೃಷ್ಣಪ್ಪ, ಮುಖ್ಯಶಿಕ್ಷಕ ಪಿ.ಮಂಜುನಾಥ್, ಸಿಆರ್‌ಪಿ ಪುಟ್ಟರಾಜು, ಶಿಕ್ಷಕ ಪಿ.ಫಕ್ರುದ್ದೀನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT