ರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಫೆ. 12ರಿಂದ ಆರಂಭವಾಗಿರುವ ಎಂ. ನಾರಾಯಣ ಅವರ ಇತ್ತೀಚಿನ ಕಲಾಕೃತಿಗಳ ಪ್ರದರ್ಶನ ನೋಡುಗರನ್ನು ಸೆಳೆಯುವಂತಿವೆ. ಗಾಢವರ್ಣಗಳಾದ ಕೆಂಪು, ಅರಿಶಿಣ, ಕಡುನೀಲಿ, ಗಿಳಿ ಹಸಿರು ಬಣ್ಣಗಳಲ್ಲಿ ಕಲಾಕೃತಿಗಳಿವೆ.
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಮಿಟಿಗಾನಹಳ್ಳಿಯಚಿತ್ರಕಲಾವಿದ ಎಂ. ನಾರಾಯಣ ಬಾಲ್ಯದಲ್ಲೇ ಬಣ್ಣಗಳತ್ತ ಆಕರ್ಷಿತರಾದವರು. ಅವರಿಗೆ ಕಾಡಿದ್ದು ಮಿಟಿಗಾನಹಳ್ಳಿಯ ಗ್ರಾಮ್ಯ ಬದುಕು. ಹಳ್ಳಿ ಜನರ ಮುಗ್ಧತೆ, ಅಲ್ಲಿನ ಚಟುವಟಿಕೆಗಳು. ಅವೇ ಅವರ ಕಲಾಕೃತಿಗಳ ವಸ್ತು.
‘ಅಪ್ಪ–ಅಮ್ಮ ಅನಕ್ಷರಸ್ಥರಾಗಿದ್ದರೂ ಚಿತ್ರ ಬಿಡಿಸುತ್ತಿದ್ದುದನ್ನು ನೋಡಿ ಖುಷಿ ಪಡುತ್ತಿದ್ದರು. ಇಂದು ಕಲಾವಿದನಾಗಿದ್ದೇನೆ. ಆದರೆ, ಅದನ್ನು ಕಣ್ತುಂಬಿಕೊಳ್ಳಲು ಅವರೇ ಇಲ್ಲ. ನನಗಾಗಿ ತ್ಯಾಗ ಮಾಡಿದ ಒಡಹುಟ್ಟಿದ ಸಹೋದರನೂ ಇಲ್ಲ’ ಎಂದು ಭಾವುಕವಾಗಿ ನುಡಿಯುತ್ತಾರೆ ನಾರಾಯಣ.
ಚಿತ್ರಕಲಾವಿದ ಎಂ. ನಾರಾಯಣ
ಕೆನ್ ಕಲಾ ಶಾಲೆಯಲ್ಲಿದ್ದಾಗ ಗುರುಗಳಾದ ಆರ್.ಎಂ. ಹಡಪದ್, ಜೆ.ಎಂ.ಎಸ್. ಮಣಿ ಒಡನಾಟ ಬಹಳಷ್ಟು ಕಲಿಸಿತು. ವಿದ್ಯಾರ್ಥಿದೆಸೆಯಲ್ಲಿ ಬೋಲ್ಡ್ ಕಲರ್ಗಳನ್ನು ಧೈರ್ಯವಾಗಿ ಬಳಸುತ್ತಿದ್ದೆ. ಬೋಲ್ಡ್ ಕಲರ್ಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದನ್ನು ಗುರುಗಳು ಕಲಿಸಿಕೊಟ್ಟಿದ್ದರು. ಆ ನೆಲೆಯಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಾ ಬಂದಿದ್ದೇನೆ’ ಎಂದು ಕಲಾ ಪಯಣ ಸ್ಮರಿಸಿಕೊಳ್ಳುತ್ತಾರೆ.
ನಾರಾಯಣ ಅವರು ಕೇರಳ ಸರ್ಕಾರಕ್ಕಾಗಿ ‘ಇನ್ಕ್ರೆಡಿಬಲ್ ಇಂಡಿಯಾ’ ಕಾರ್ಯಕ್ರಮಕ್ಕಾಗಿ ಸರಣಿ ಕಲಾಕೃತಿಗಳನ್ನೂ ರಚಿಸಿದ್ದಾರೆ. ಇದುವರೆಗೆ 30ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನಗಳನ್ನು ನಡೆಸಿದ್ದಾರೆ. ಮದರ್ ತೆರೆಸಾ ಭಾವಚಿತ್ರಕ್ಕೆ ಅವರಿಗೆ ಅನೇಕರಿಂದ ಮೆಚ್ಚುಗೆ ಸಿಕ್ಕಿದೆ. ನಾರಾಯಣ ಇತ್ತೀಚಿಗೆ ರಚಿಸಿರುವ 220ಕ್ಕೂ ಹೆಚ್ಚು ಕಲಾಕೃತಿಗಳ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳಬಹುದು. ಫೆ 22ರವರೆಗೆ ಕಲಾಪ್ರದರ್ಶನ ನಡೆಯಲಿದೆ.