ಮಂಡ್ಯ ಸಕ್ಕರೆ ಕಾರ್ಖಾನೆ ಇಂದಿನಿಂದ ಬಂದ್: ಆಡಳಿತ ವರ್ಗದ ಕ್ರಮ
ಬೆಂಗಳೂರು, ಜೂ. 14– ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಜೂನ್ 15ರಿಂದ ಮುಚ್ಚಲಾಗುವುದು.
ಕಾರ್ಖಾನೆ ಮುಚ್ಚುವ ಬಗ್ಗೆ ಕಾರ್ಖಾನೆಯ ಆಡಳಿತ ನೋಟಿಸ್ ಹೊರಡಿಸಿರುವುದನ್ನು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದ ಕೈಗಾರಿಕೆ ಹಾಗೂ ವಾರ್ತೆ ಸಚಿವ ಶ್ರೀ ಎಂ. ರಾಜಶೇಖರಮೂರ್ತಿ ಅವರು ‘ಸರ್ಕಾರ ಪರಿಸ್ಥಿತಿಯನ್ನು ಗಮನಿಸುತ್ತಿದೆ’ ಎಂದೂ ಹೇಳಿದರು.
**
ರಾಜ್ಯದಿಂದಾಚೆ ಬೆಲ್ಲ ಸಾಗಣೆ ನಿರ್ಬಂಧ?
ಬೆಂಗಳೂರು, ಜೂ. 14– ಸಕ್ಕರೆ ಕಾರ್ಖಾನೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ದೊರಕುವಂತೆ ಮಾಡುವ ಉದ್ದೇಶದಿಂದ ರಾಜ್ಯದಿಂದ ಹೊರಗಡೆಗೆ, ಬೆಲ್ಲ ಕಳುಹಿಸುವುದರ ಮೇಲೆ ನಿರ್ಬಂಧ ಹೊರಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ.
ಸರ್ಕಾರದ ಈ ಯೋಚನೆಯನ್ನು ವಾರ್ತೆ ಸಚಿವ ಶ್ರೀ ಎಂ. ರಾಜಶೇಖರಮೂರ್ತಿ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.
**
ಮೂರು ತಿಂಗಳಲ್ಲಿ ಭೂಕಂದಾಯ ರದ್ದು ಮಾಡದೆ ಇದ್ದರೆ ಪಿ.ಎಸ್.ಪಿ. ಚಳವಳಿ
ಬೆಂಗಳೂರು, ಜೂ. 14– ರಾಜ್ಯದಲ್ಲಿ ಭೂಕಂದಾಯವನ್ನು ತತ್ಕ್ಷಣವೇ ರದ್ದುಪಡಿಸಬೇಕೆಂದು ಪ್ರಜಾ ಸೋಷಲಿಸ್ಟ್ ಪಕ್ಷ ಇಂದು ಕರೆಯಿತ್ತಿದೆ.
**
ನಾಗಾಲ್ಯಾಂಡ್ ಸರ್ಕಾರ ಉರುಳಿಸಲು ಚೀನ, ಗುಪ್ತ ನಾಗಾ ಸಂಚು
ಕೋಹಿಮ, ಜೂ. 14– ಕಮ್ಯುನಿಸ್ಟ್ ಚೀನಾ ಸಹಾಯದಿಂದ ಮನ್ನಣೆ ಪಡೆದ ಗುಪ್ತ ನಾಗಾಗಳು ಸಂವಿಧಾನಬದ್ಧ ನಾಗಾಲ್ಯಾಂಡ್ ಸರ್ಕಾರವನ್ನು ಉರುಳಿಸಲು ಯೋಚಿಸಲಾದ ಭಾರಿ ಪಿತೂರಿಯೊಂದು ಪತ್ತೆಯಾಗಿದೆ.