ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆ: ತಲ್ಲೂರ್ ಅವರ ತಲ್ಲಣಗಳು

Last Updated 18 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಉದ್ಘಾಟನೆಯಾದ ಕಲೆ ಮತ್ತು ಚಿತ್ರಪಟಗಳ ವಸ್ತುಸಂಗ್ರಹಾಲಯದಲ್ಲಿ(ಮ್ಯಾಪ್‌) ನೋಡುಗರ ಮಿದುಳಿಗೆ ಕೆಲಸ ನೀಡುವ, ವಿಶಿಷ್ಟವಾದ ಶಿಲ್ಪಕಲಾಕೃತಿಗಳ ಸಂಗ್ರಹವಿದೆ. ಅದರ ಹಿಂದೆ ಲಕ್ಷ್ಮಿನಾರಾಯಣ ತಲ್ಲೂರ್ ಅವರ ಕೈಚಳಕವಿದೆ. ಕೃತಕ ಬುದ್ಧಿಮತ್ತೆ ಕುರಿತು ತಮಗಿರುವ ಆಸಕ್ತಿ, ಆತಂಕವನ್ನು ಕಲಾಕೃತಿಗಳ ಮೂಲಕ ಕಟ್ಟಿಕೊಡುತ್ತಾ ತಲ್ಲೂರ್‌ ಮಾತಿಗಿಳಿದರು...

ನಮ್ಮ ಸಾಮಾಜಿಕ ಪರಿಸರದಲ್ಲಿ ಕಾಣುವ ಗೊಂದಲ, ಅತಿರೇಕ, ವಿಕಾರ ಹಾಗೂ ವಿಪರ್ಯಾಸಗಳನ್ನು ಪ್ರತಿಮೆಗಳ ಮೂಲಕ ಸೆರೆಹಿಡಿದು ನೋಡುಗರ ಮೆದುಳಿಗೆ ಕಚಗುಳಿಯಿಡುವ ಕಾರ್ಯವನ್ನು ಲಕ್ಷ್ಮಿ ನಾರಾಯಣ ತಲ್ಲೂರ್ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದಾರೆ.

ಕೋಟೇಶ್ವರದ (ಕುಂದಾಪುರ) ತಲ್ಲೂರ್ ಅವರ ಕಲಾಕೃತಿಗಳು ದೇಶ ವಿದೇಶಗಳಲ್ಲಿ ಪ್ರದರ್ಶನಗೊಂಡಿದ್ದು ಕಲಾಭಿಮಾನಿಗಳು ಸಂಗ್ರಾಹಕರ ಜೊತೆಗೆ ಅಂತರರಾಷ್ಟ್ರೀಯ ಕಲಾವಿಮರ್ಶಕರ ಹಾಗೂ ಕ್ಯುರೇಟರುಗಳ ಗಮನ ಸೆಳೆದಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಾರಂಭವಾದ MAP (Museum of Art and Photography) ವಸ್ತುಸಂಗ್ರಹಾಲಯದಲ್ಲಿ ಅವರ ವಿಶಿಷ್ಟವಾದ ಶಿಲ್ಪಕಲೆಯ ಸ್ಥಾಪನೆಗಳನ್ನು ನೋಡಬಹುದು.

ಆ ಸಂದರ್ಭವನ್ನು ಗುರುತಿಸಲು ಆಯೋಜಿಸಲಾದ ಸಂವಾದದಲ್ಲಿ ತಲ್ಲೂರ್ ತಮ್ಮ ಅನುಭವಗಳು ಹಾಗೂ ಕಲಾಕೃತಿಗಳ ರಚನೆಯ ಹಿಂದಿನ ಆಲೋಚನೆಗಳ ಬಗ್ಗೆ ಮಾತನಾಡಿದರು. ಸಂವಾದದ ಆಯ್ದ ಭಾಗಗಳು ಹೀಗಿವೆ.

ಹೀಗೊಂದು ಕವಚ ಪ್ರಸಂಗ
ಹಲವು ವರ್ಷಗಳ ಹಿಂದೆ ನಡೆದ ಘಟನೆ. ನಮ್ಮ ಊರಿನ ಒಬ್ಬ ಮಹನೀಯರು ದುಬೈಗೆ ಹೋಗಿ ಚೆನ್ನಾಗಿ ಹಣ ಮಾಡಿದರು. ನಮ್ಮಲ್ಲಿನ ಒಂದು ದೇವಸ್ಥಾನದ ದೇವರ ವಿಗ್ರಹಕ್ಕೆ ಬೆಳ್ಳಿ ಕವಚವನ್ನು ಮಾಡಿಸಿ ಕೊಡಲು ಮುಂದಾದರು. ವಿಗ್ರಹದ ಅಳತೆಯನ್ನು ತೆಗೆಯಲು ಅಕ್ಕಸಾಲಿಗರು ದೇವಸ್ಥಾನಕ್ಕೆ ಬಂದಾಗ ಒಂದು ಸಮಸ್ಯೆ ಎದುರಾಯಿತು. ಅದೇನೆಂದರೆ ಅವರು ಜಾತಿ ಸಮ್ಮತ ಆಗದ ಕಾರಣ ಗರ್ಭಗುಡಿಯಲ್ಲಿ ಕಾಲಿಡುವುದಕ್ಕೆ ಅವಕಾಶ ಇರಲಿಲ್ಲ. ಈಗೇನು ಮಾಡುವುದು?

ವಿಗ್ರಹದ ಅಳತೆ ಬೇಕು, ಆದರೆ ಅಳತೆ ತೆಗೆಯಲು ಒಳಗೆ ಹೋಗೋ ಹಾಗಿಲ್ಲ. ಆಗ ಅರ್ಚಕರು ಯೋಚಿಸಿ ಒಂದು ಪರಿಹಾರವನ್ನು ಸೂಚಿಸಿದರು. ನಾನೇ ಅಳತೆ ತೆಗೆಯುತ್ತೇನೆ, ಅದರ ಪ್ರಕಾರ ಕವಚ ಮಾಡಿಸಿದರಾಯಿತು ಅಂದರು. ಹಾಗೇ ಆಯಿತು. ಅರ್ಚಕರು ತೆಗೆದ ಅಳತೆಯ ಆಧಾರದ ಮೇಲೆ ಕವಚ ಸಿದ್ಧವಾಯಿತು. ಇನ್ನೇನು ಅದನ್ನು ದೇವರಿಗೆ ತೊಡಿಸಬೇಕು, ಆಗ ಗೊತ್ತಾಯಿತು, ಅಳತೆ ಸರಿಯಾಗಿ ತೆಗೆಯದ ಕಾರಣ ಕವಚ ವಿಗ್ರಹಕ್ಕಿಂತ ಬಹಳ ದೊಡ್ಡದಿದೆ ಅಂತ!

ಸರಿ, ಕವಚವನ್ನು ರಿಪೇರಿಗೆ ಕಳಿಸುವ ಅನಿವಾರ್ಯ ಎದುರಾಯಿತು. ಆಗ ಯಾರೋ ಬುದ್ಧಿವಂತರು ಲೆಕ್ಕಾಚಾರ ಮಾಡಿ ಇನ್ನೊಂದು ಉಪಾಯ ಸೂಚಿಸಿದರು. ದೇವರ ವಿಗ್ರಹವನ್ನೇ ಕವಚದ ಅಳತೆ ಸ್ವರೂಪಗಳಿಗೆ ಹೊಂದಿಸುವುದು ಅಂತ! ಅದು ಸುಲಭದ ಕೆಲಸ. ಮೇಲಾಗಿ ರಿಪೇರಿ ಕೆಲಸಕ್ಕೆ ತಗಲುವ ವೆಚ್ಚಕ್ಕಿಂತ ಕಡಿಮೆ ಹಣದಲ್ಲಿ ಆಗುವ ಕಾರ್ಯ! ಇಂತಹ ವಿಪರ್ಯಾಸಗಳನ್ನು ಗಮನಿಸಿದಾಗ ನಗುವುದೋ ಅಳುವುದೋ ನೀವೇ ಹೇಳಿ... ಇಂತಹ ಸನ್ನಿವೇಶಗಳು ನನ್ನ ಕುತೂಹಲಗಳನ್ನು ಕೆರಳಿಸುವುದಲ್ಲದೆ ನನ್ನ ಕಲಾಸೃಷ್ಟಿಗೆ ಪೋಷಣೆ ಆಗುವವು.

ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ
ತಂತ್ರಜ್ಞಾನ ಎಲ್ಲರಿಗೆ ಹೇಗೋ ಅದೇ ರೀತಿ ಕಲಾವಿದನಿಗೂ ಬಹಳ ಮುಖ್ಯವಾಗುತ್ತೆ. ಈಗ ಕೃತಕ ಬುದ್ಧಿಮತ್ತೆ ಬಗ್ಗೆ ಎಲ್ಲರೂ ಮಾತಾಡುತ್ತಿದ್ದಾರೆ. ಒಂದು ಸಿಂಪಲ್ ಉದಾಹರಣೆ ತಗೊಳ್ಳಿ. ನಾವು ಕಂಪ್ಯೂಟರ್ ಅನ್ನು ಉಪಯೋಗಿಸುತ್ತೇವೆ. ಮೊಬೈಲ್ ಫೋನ್ ಅನ್ನು ಉಪಯೋಗಿಸುತ್ತೇವೆ. ಆದರೆ ಅವುಗಳ ಒಳ ಹೊಕ್ಕು ನೋಡಿದರೆ ಆಶ್ಚರ್ಯವಾಗುತ್ತದೆ. ಅವುಗಳನ್ನು ಉಪಯೋಗಿಸುವಾಗ ಅವುಗಳೂ ನಮ್ಮನ್ನು ನೋಡುತ್ತಿವೆ. ಉಪಯೋಗಿಸಿಕೊಳ್ಳುತ್ತಿವೆ. ನಮ್ಮ ಡೇಟಾ ಕಲೆಕ್ಟ್ ಮಾಡುತ್ತಿರುತ್ತವೆ. ಹಾಗಾಗಿ ನಾವು ಮತ್ತು ನಮ್ಮ ಮುಂದಿರುವ ಯಂತ್ರ ಮುಖಾಮುಖಿ ಆಗುವುದರ ಜೊತೆಗೆ ಪರಸ್ಪರ ವಿಷಯ, ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ಯಂತ್ರಕ್ಕೆ ಬಹಳ ವೇಗವಾಗಿ ಹಾಗೂ ಬಹಳ ಸೂಕ್ಷ್ಮವಾಗಿ ಮಾಹಿತಿಗಳನ್ನು ವಿಶ್ಲೇಷಿಸುವ ಶಕ್ತಿ ಇದೆ. ಇದೆಲ್ಲ ನನಗೆ ಸೋಜಿಗದ ವಿಷಯ.

ನಮ್ಮ ಮತ್ತು ಯಂತ್ರಗಳ ಮಧ್ಯೆ ಇರುವ ವೈಚಾರಿಕ ಭೂಮಿಯನ್ನು ಬಹಳ ಕುತೂಹಲದಿಂದ ನೋಡುತ್ತೇನೆ, ಗಮನಿಸುತ್ತೇನೆ ಹಾಗೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ತಂತ್ರಜ್ಞಾನದ ಬಗ್ಗೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಗ್ಗೆ ನನಗೆ ಆಸಕ್ತಿ ಇದೆ. ಅವುಗಳನ್ನು ಮತ್ತು ಅವುಗಳ ಬಗ್ಗೆ ನನಗಿರುವ ಆಸಕ್ತಿ, ಆತಂಕಗಳನ್ನು ನಾನು ಕಲಾಕೃತಿಗಳ ಮೂಲಕ ರಚನಾತ್ಮಕ ರೀತಿಯಲ್ಲಿ ನೋಡಬಯಸುತ್ತೇನೆ, ತೋರಬಯಸುತ್ತೇನೆ, ಸಾಧ್ಯವಾದರೆ ಪರಿಹರಿಸಿಕೊಳ್ಳುತ್ತೇನೆ ಕೂಡ.

-ಲಕ್ಷ್ಮಿನಾರಾಯಣ ತಲ್ಲೂರ್
-ಲಕ್ಷ್ಮಿನಾರಾಯಣ ತಲ್ಲೂರ್

ನಮ್ಮ ಮುಂದಿರುವ ಸಾಮಾಜಿಕ ಪರಿಸರ
ಚಿಕ್ಕವನಿದ್ದಾಗ ನಡೆದ ಘಟನೆ ನೆನಪಿಗೆ ಬರುತ್ತಿದೆ. ನಾವು ಮಕ್ಕಳು ಬೀದಿಯಲ್ಲಿ ಕ್ರಿಕೆಟ್ ಆಡುತ್ತಿದ್ದೆವು. ಆಗ ನಮಗಿಂತ ತುಂಬಾ ಸಣ್ಣವರಾಗಿದ್ದ ಮಕ್ಕಳು ಬಂದು ನಮ್ಮನ್ನೂ ಸೇರಿಸಿಕೊಳ್ಳಿ ಅಂತ ಪೀಡಿಸುತ್ತಿದ್ದವು. ನಮಗೆ ಅದು ಇಷ್ಟವಾಗದ ವಿಷಯ. ಇಲ್ಲ, ನೀವು ಚಿಕ್ಕ ಮಕ್ಕಳು ಬೇರೆ ಜಾಗದಲ್ಲಿ ಆಡಿಕೊಳ್ಳಿ, ನಮ್ಮ ಜೊತೆ ಆಡುವುದು ಸಾಧ್ಯವಿಲ್ಲ ಅಂತ ಅಟ್ಟಲು ಪ್ರಯತ್ನಿಸುತ್ತಿದ್ದೆವು. ಅದನ್ನು ನೋಡಿದ ನಮ್ಮ ಅಮ್ಮ ಮಕ್ಕಳ ಪರವಾಗಿ ನಿಲ್ಲುತ್ತಿದ್ದರು. ಆಟದಲ್ಲಿ ದೊಡ್ಡವರು ಚಿಕ್ಕವರು ಅನ್ನೋ ತಾರತಮ್ಯ ಕೂಡದು. ಎಲ್ಲರೂ ಸೇರಿ ಆಟವಾಡಿ ಅಂತ ನಮ್ಮ ಮೇಲೆ ಗದರುತ್ತಿದ್ದರು. ಗೊಣಗುತ್ತಲೇ ಅವರಾಜ್ಞೆಯಂತೆ ಪುಟ್ಟ ಮಕ್ಕಳನ್ನು ಆಟಕ್ಕೆ ಸೇರಿಸಿಕೊಳ್ಳುತ್ತಿದ್ದೆವು. ಆದರೆ ದೊಡ್ಡ ಹುಡುಗರ ಪ್ರಕಾರ ಚಿಕ್ಕ ಮಕ್ಕಳು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’.

ಈಗ ನಮ್ಮ ಮುಂದಿರುವ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ವಾತಾವರಣವನ್ನು ಶಕ್ತಿಗಳನ್ನು ನೋಡಿದರೆ ನಾವೆಲ್ಲರೂ (ಅಂದರೆ ಸಾಮಾನ್ಯ ಜನರು) ಆ ಚಿಕ್ಕ ಮಕ್ಕಳಂತೆ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಆಗಿಬಿಟ್ಟಿದ್ದೆವೆ ಅನ್ನಿಸುತ್ತೆ. ಇದು ಬಹಳ ಆತಂಕದ ವಿಷಯ. ದೊಡ್ಡ ಉದ್ಯಮಿಗಳು, ರಾಜಕೀಯ ಶಕ್ತಿಗಳು ಸಾಮಾನ್ಯ ಜನರನ್ನು ಕೇಂದ್ರಸ್ಥಾನದ ಒಳಬರಲು ಬಿಡದೆ ಅಂಚಿನಲ್ಲೇ ಇರಿಸುವ ತಂತ್ರಗಳನ್ನು ನೋಡಿದರೆ ಕೋಪ, ಆತಂಕ, ನೋವು ಎಲ್ಲ ಒಂದೇ ಸಮಯಕ್ಕೆ ಬರುತ್ತವೆ. ನನ್ನಲ್ಲಿ ಉಂಟಾಗುವ ಭಾವನೆಗಳನ್ನು ಶಿಲ್ಪಗಳ ಮೂಲಕ ಪ್ರತಿಮೆಗಳ ಮೂಲಕ ತೋರಿಸಲು ಪ್ರಯತ್ನಿಸುತ್ತೇನೆ. ಹೀಗೆಂದು ತಲ್ಲೂರ್‌ ಅವರೇನೋ ಮಾತು ಮುಗಿಸಿದರು. ಆದರೆ, ಅವರ ಕಲಾಕೃತಿಗಳು ಮಾತನಾಡಲು ಆರಂಭಿಸಿದ್ದವು.

(‘ಎಲ್ಎನ್ ತಲ್ಲೂರ್: ಚಿರಾಗ್-ಇ-ಎಐ’ ಪ್ರದರ್ಶನವನ್ನು ಏಪ್ರಿಲ್ 9ರವರೆಗೆ ಬೆಂಗಳೂರಿನ ಕಸ್ತೂರಬಾ ರಸ್ತೆಯ ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್ ಫೋಟೋಗ್ರಫಿಯಲ್ಲಿ (MAP) ನೋಡಬಹುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT