ಮಾನವನ ಜೀವನರಥಕ್ಕೆ ಧರ್ಮ, ನೀತಿ, ತತ್ತ್ವಗಳೆಂಬ ನೊಗ (ಯುಗ)ವನ್ನು ಕಟ್ಟಿ ಎಳೆದರು. ಧರ್ಮಕ್ಷೀರದಲ್ಲಿ ನೀತಿ ನವನೀತವನ್ನೇ ತೆಗೆದರು; ನೀತಿ ನವನೀತದಲ್ಲಿ ತತ್ತ್ವವೆಂಬ ತುಪ್ಪವನ್ನು ಅಭಿವ್ಯಕ್ತಗೊಳಿಸಿದರು. ಧರ್ಮವೇ ಅಂಗ, ನೀತಿಯೇ ಪ್ರಾಣ; ತತ್ತ್ವವೇ ಆತ್ಮವೆಂದು ಸಿದ್ಧಾಂತ ಮಾಡಿದರು. ಈ ಬಗೆಯಾಗಿ ಬಾಳಿನಲ್ಲಿ ಈ ಮೂರರ ಸಮನ್ವಯವನ್ನು ಸಾಧಿಸಿದರು. ಇದರಿಂದಾಗಿ ಕಲಿಯುಗ ಕೃತಯುಗವಾಯಿತು. ಯುಗಧರ್ಮವನ್ನು ನವೀಕರಿಸಿದರು.