ನವದೆಹಲಿ : ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಬೌಲಿಂಗ್ಗೆ ಐಪಿಎಲ್ ನಂತರ ಸಾಣೆ ಹಿಡಿಯಲು ನಿರ್ಧರಿಸಲಾಗಿದ್ದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವಿಶೇಷ ತರಬೇತಿಗೆ ಸಿದ್ಧತೆ ನಡೆಯುತ್ತಿದೆ.
ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕದಿನ ಸರಣಿಗೆ ಸಜ್ಜಾಗುವುದಕ್ಕಾಗಿ ನರೇಂದ್ರ ಹಿರ್ವಾನಿ ಬಳಿ ತರಬೇತಿ ಪಡೆಯಲಿದ್ದಾರೆ.
‘ಐಪಿಎಲ್ ಮುಗಿದ ನಂತರ ಒಂದು ತಿಂಗಳ ಅವಧಿ ಇದೆ. ಈ ಸಂದರ್ಭದಲ್ಲಿ ಎನ್ಸಿಎದಲ್ಲಿ ತರಬೇತಿ ಪಡೆಯಲು ನಿರ್ಧರಿಸಿದ್ದೇನೆ. ಹಿರ್ವಾನಿ ಅವರಿಗೆ ಇಂಗ್ಲೆಂಡ್ನಲ್ಲಿ ಆಡಿ ಅನುಭವ ಇರುವುದರಿಂದ ಉಪಯುಕ್ತ ಸಲಹೆ ಸಿಗುವ ನಿರೀಕ್ಷೆ ಇದೆ’ ಎಂದು ಚಾಹಲ್ ತಿಳಿಸಿದರು.
ಕಳೆದ ಬಾರಿಯ ಚಾಂಪಿಯನ್ಸ್ ಟ್ರೋಫಿ ನಂತರ ಚಾಹಲ್ ಮತ್ತು ಕುಲದೀಪ್ ಯಾದವ್ ಬೆಳಕಿಗೆ ಬಂದಿದ್ದರು. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರಿಗೆ ಪರ್ಯಾಯವಾಗಿ ಇವರಿಬ್ಬರು ಮಿಂಚಿದ್ದರು.
ಏಕದಿನ ಕ್ರಿಕೆಟ್ನಲ್ಲಿ 23 ಪಂದ್ಯಗಳಿಂದ 43 ವಿಕೆಟ್ ಕಬಳಿಸಿರುವ ಚಾಹಲ್ ಟ್ವೆಂಟಿ–20 ಕ್ರಿಕೆಟ್ನಲ್ಲಿ 21 ಪಂದ್ಯಗಳಿಂದ 35 ವಿಕೆಟ್ಗಳನ್ನು ಪಡೆದಿದ್ದಾರೆ. ಹೀಗಾಗಿ ಮುಂದಿನ ವಿಶ್ವಕಪ್ನಲ್ಲಿ ಭಾರತದ ಬೌಲಿಂಗ್ ವಿಭಾಗಕ್ಕೆ ಅವರು ಬಲ ತುಂಬುವ ನಿರೀಕ್ಷೆ ಇದೆ.