ನಾನು ನಮ್ಮ ಡ್ಯಾಡಿ(ಅಬ್ಬಯ್ಯ ಯಲ್ಲಪ್ಪ)ಗೆ ಬಹಳ ಪ್ರೀತಿಯ ಮಗನಾಗಿದ್ದೆ. ಅವರನ್ನು ಬಿಟ್ಟು ಇರುತ್ತಿರಲಿಲ್ಲ. ಎಂಟನೇ ತರಗತಿವರೆಗೂ ಅವರೊಟ್ಟಿಗೆ ಮಲಗುತ್ತಿದ್ದೆ. ಅವರು ಕೆಲಸಕ್ಕೆ(ಫುಡ್ ಇನ್ಸ್ಪೆಕ್ಟರ್) ಹೋಗುವಾಗಲೂ ಬೆನ್ನುಬೀಳುತ್ತಿದ್ದೆ. ಬೇಸರಗೊಳ್ಳದೇ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ನಮ್ಮ ತಂದೆ–ತಾಯಿಗೆ ಐವರು ಹೆಣ್ಣು ಮತ್ತು ಆರು ಗಂಡು ಸೇರಿದಂತೆ 11 ಜನ ಮಕ್ಕಳಾದರೂ ಸಹ ಯಾವುದಕ್ಕೂ ಕೊರತೆ ಇಲ್ಲದಂತೆ ಸಾಕಿ, ಬೆಳೆಸಿದರು. ಎಲ್ಲರಿಗೂ ಉನ್ನತ ಶಿಕ್ಷಣ ಕೊಡಿಸಿದರು. ನನಗೆ ಮದುವೆಯಾಗು ಎಂದು ಆಗಾಗ ಪೀಡಿಸುತ್ತಿದ್ದರು. ನಾನು ಮಾತ್ರ ಮದುವೆ ಬೇಡ ಎಂದು ತೀರ್ಮಾನಿಸಿದ್ದೆ. ಆದರೆ, ಅವರು ತೀರಿಕೊಂಡ ಬಳಿಕ ಮದುವೆಯಾದೆ. ನನ್ನ ಹೆಂಡತಿ, ಮಕ್ಕಳನ್ನು ಅವರು ನೋಡಲಾಗಲಿಲ್ಲ. ಈ ವಿಷಯವಾಗಿ ಈಗಲೂ ನನಗೆ ಬೇಸರವಿದೆ.