ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದ ಭಾಷೆಗೆ ‘ನ್ಯಾಯ’ ಸಿಗುವುದು ಯಾವಾಗ?

Last Updated 1 ನವೆಂಬರ್ 2020, 5:05 IST
ಅಕ್ಷರ ಗಾತ್ರ

ಕಠಿಣ ನಿಲುವು, ರಾಜಿಯಾಗದ ಸ್ವಭಾವ, ನಿಗಿನಿಗಿ ವ್ಯಕ್ತಿತ್ವದ ರಾಜ್‌ ನಾರಾಯಣ ಅವರದು ಭಾರತದ ಸಾಂವಿಧಾನಿಕ ಇತಿಹಾಸದಲ್ಲಿ ಅಚ್ಚಳಿಯದ ಹೆಸರು. ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಇಂದಿರಾ ಗಾಂಧಿಯವರು ಚುನಾವಣಾ ಅಕ್ರಮಗಳನ್ನೆಸಗಿ ಆಯ್ಕೆಯಾಗಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ ದಾವೆಯನ್ನು ಹೂಡಿ ಸರ್ಕಾರದ ಬುಡವನ್ನೇ ಅಲ್ಲಾಡಿಸಿದ ಖ್ಯಾತಿ ಅವರದ್ದು.

ಈ ಪ್ರಕರಣದಷ್ಟೇ ಮಹತ್ವದ್ದಾದರೂ ಹೆಚ್ಚು ಸದ್ದು ಮಾಡದ ಮತ್ತೊಂದು ಪ್ರಕರಣದಲ್ಲೂ ಅವರ ಹೆಸರು ತಳುಕು ಹಾಕಿಕೊಂಡಿದೆ. 1971ರ ಸುಮಾರಿಗೆ ಸಮಾಜವಾದಿ ನಾಯಕ ಮಧು ಲಿಮಯೆ ಮತ್ತು ವೇದಮೂರ್ತಿ ನಡುವಣ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಘಟ್ಟ ತಲುಪಿದ ಸಂದರ್ಭ ಅದು. ಈ ಪ್ರಕರಣದಲ್ಲಿ ಪಕ್ಷಗಾರನಾಗಿ ಸೇರಿಕೊಂಡು ನ್ಯಾಯಾಲಯಕ್ಕೆ ಸಹಕರಿಸಲು ರಾಜ್ ನಾರಾಯಣ ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸಿದ್ದರು. ಹಿಂದಿಯಲ್ಲಿ ಸಲ್ಲಿಸಲಾದ ಅರ್ಜಿಯ ಕುರಿತು ವಾದ ಮಂಡನೆಯನ್ನು ಹಿಂದಿಯಲ್ಲಿಯೇ ಮಾಡಲು ಅವರು ತಮ್ಮ ವಕೀಲರಿಗೆ ಸೂಚಿಸಿದ್ದರು. ನ್ಯಾಯಾಲಯದ ಕಲಾಪದ ಭಾಷೆಯಾದ ಇಂಗ್ಲಿಷ್‌ನಲ್ಲಿ ವಾದ ಮಂಡಿಸಲು ಕೋರ್ಟ್ ತಾಕೀತು ಮಾಡಿತ್ತು. ಆಡು ಭಾಷೆಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ವಾದ ಮಂಡಿಸಲಾರೆ ಎಂದು ರಾಜ್ ನಾರಾಯಣ ಪಟ್ಟು ಹಿಡಿದಿದ್ದರು. ಸುಪ್ರೀಂ ಕೋರ್ಟ್, ಸಂವಿಧಾನದ 348ನೇ ವಿಧಿಯನ್ನು ಉಲ್ಲೇಖಿಸುತ್ತಾ ನ್ಯಾಯಾಲಯದ ಕಲಾಪವು ಇಂಗ್ಲಿಷಿನಲ್ಲೇ ನಡೆಯಬೇಕು, ಬೇರೆ ಭಾಷೆಯನ್ನು ಬಳಸಲು ಅವಕಾಶವಿಲ್ಲವೆಂದು ಮಧ್ಯಂತರ ಅರ್ಜಿಯ ಮೇಲಿನ ವಿಚಾರಣೆಯನ್ನೇ ನಿರಾಕರಿಸಿತ್ತು. ಈ ತೀರ್ಪು ಬಂದು ಐವತ್ತು ವರ್ಷಗಳ ನಂತರ ಸುಪ್ರೀಂ ಕೋರ್ಟ್‌ನ ಸ್ಥಾನದಲ್ಲಿ ಹೈಕೋರ್ಟ್‌ಅನ್ನೂ ರಾಜ್ ನಾರಾಯಣ ಸ್ಥಾನದಲ್ಲಿ ಸಾಮಾನ್ಯ ಬಾಧಿತನನ್ನೂ ಹಿಂದಿಯ ಸ್ಥಾನದಲ್ಲಿ ಕನ್ನಡವನ್ನೂ ಇಟ್ಟು ಹೋಲಿಸಿ ನೋಡಿದರೆ ಕರ್ನಾಟಕದ ಆಡಳಿತ ಭಾಷೆಯಾದ ಕನ್ನಡದ ಅನುಷ್ಠಾನ ಕೋರ್ಟ್‌ಗಳಲ್ಲಿ ಯಾವ ಮಟ್ಟದಲ್ಲಿದೆ ಎಂಬುದನ್ನು ಅರಿಯಬಹುದು.

ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಲು ಕೆಳಹಂತದ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಕನ್ನಡವನ್ನು ಕಲಾಪದ ಭಾಷೆಯನ್ನಾಗಿ ಜಾರಿಗೆ ತರಲಾಗಿದೆ. ಕನ್ನಡದಲ್ಲಿ ತೀರ್ಪು ಬರೆಯುವ ನ್ಯಾಯಾಧೀಶರಿಗೆ, ವಾದ ಪತ್ರ, ತಕರಾರು ಅರ್ಜಿ, ಮೌಖಿಕ ವಾದವನ್ನು ಕನ್ನಡದಲ್ಲಿಯೇ ಮಾಡುವ ಸರ್ಕಾರಿ ಮತ್ತು ಖಾಸಗಿ ವಕೀಲರಿಗೆ ಪ್ರಶಸ್ತಿ ನೀಡಿ ಬೆನ್ನುತಟ್ಟುವ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರತಿವರ್ಷ ಹಮ್ಮಿಕೊಳ್ಳುತ್ತದೆ. ಈ ಪ್ರಯತ್ನ ಮೇಲ್ನೋಟಕ್ಕೆ ಒಳಿತಿನಂತೆ ಕಂಡರೂ ದೋಷರಹಿತ ಎಂದು ಹೇಳಲಾಗದು. ಏಕೆಂದರೆ ಕನ್ನಡವೇ ಕೆಳಹಂತದ ನ್ಯಾಯಾಲಯದ ವ್ಯವಹಾರದ ಭಾಷೆಯೆಂಬ ಆದೇಶವನ್ನು ಜಾರಿಗೊಳಿಸಿದ ಮೇಲೆ ಎಲ್ಲಾ ತೀರ್ಪುಗಳು ಕನ್ನಡದಲ್ಲಿಯೇ ಬರಬೇಕು ಎಂದು ನಿರೀಕ್ಷಿಸುವುದು ಸರಿಯಾದ ಕ್ರಮ. ಆದರೆ, ಕೆಲವು ನ್ಯಾಯಾಧೀಶರು ಮಾತ್ರ ತೀರ್ಪುಗಳನ್ನು ಕನ್ನಡದಲ್ಲಿ ಪ್ರಕಟಿಸುತ್ತಿದ್ದಾರೆ ಮತ್ತು ಬಹುತೇಕರು ಸರ್ಕಾರದ ಆದೇಶವನ್ನು ಪಾಲಿಸುತ್ತಿಲ್ಲ ಎಂಬ ಅಂಶವನ್ನು ಈ ಸಂಗತಿ ಪುಷ್ಟೀಕರಿಸಿದಂತೆ.

ಭಾಷೆಯ ಅನುಷ್ಠಾನವನ್ನು ಪರೀಕ್ಷಿಸಲು ಕೇವಲ ತೀರ್ಪುಗಳನ್ನು ಗಮನಿಸಿದರೆ ಸಾಕೇ? ಆರೋಪಿಗಳನ್ನು, ಸಾಕ್ಷಿಗಳನ್ನು ಕರೆತರಲು ಹೊರಡಿಸುವ ಸಮನ್ಸ್, ವಾರಂಟ್, ಜಾಮೀನು ಅರ್ಜಿಯ ಆದೇಶ, ಬಂಧಿತರನ್ನು ಜೈಲಿನಿಂದ ಬಿಡುಗಡೆ ಮಾಡಲು ಹೊರಡಿಸುವ ಆದೇಶ, ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ನಿತ್ಯದ ಕಲಾಪಗಳನ್ನು ಬರೆದಿಡುವ ಆದೇಶಗಳ ಪುಟ, ಇತರೆ ಎಲ್ಲಾ ಬಗೆಯ ಕಡತಗಳಲ್ಲಿ ಕನ್ನಡದ ಬಳಕೆ ಎಷ್ಟಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕಲ್ಲವೇ?

ಕನ್ನಡ ಅನುಷ್ಠಾನವೆಂಬುದು ಕೆಳಹಂತದ ನ್ಯಾಯಾಲಯಗಳಿಗೆ ಮಾತ್ರ ಸೀಮಿತವೇ? ನೆಲದ ಭಾಷೆಯನ್ನು ನ್ಯಾಯಾಲಯದ ಕಲಾಪದಲ್ಲಿ ಬಳಸಲು ಯಾವುದೇ ಸಾಂವಿಧಾನಿಕ ತೊಡಕು ಇರದ ರಾಜ್ಯ ಗ್ರಾಹಕರ ಆಯೋಗ, ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್‌ಗಳಿಗೆ ಅನ್ವಯಿಸಬಾರದೇ? ನ್ಯಾಯಾಲಯಗಳ ಕಲಾಪದ ಭಾಷೆಯಾಗಿ ಕನ್ನಡ ಎಷ್ಟರಮಟ್ಟಿಗೆ ಜಾರಿಯಾಗಿದೆ ಎಂಬ ಸಂಗತಿಯಕುರಿತು ರಾಜ್ಯ ಸರ್ಕಾರವಾಗಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಲಿ ವಸ್ತುನಿಷ್ಠ ಅಧ್ಯಯನವನ್ನು ಕೈಗೊಂಡಿಲ್ಲ.

ಜನರ ಒಳಿತಿಗಾಗಿ ರಚಿಸಿಕೊಂಡ ವ್ಯವಸ್ಥೆಯಲ್ಲಿನ ಯಾವುದೇ ನಿರ್ದಿಷ್ಟ ಕಾನೂನು, ಖಟ್ಲೆಗಳ ಸಾಧಕ ಬಾಧಕಗಳನ್ನು ಜನರಿಗೆ ಮನ ಮುಟ್ಟುವಂತೆ ತಿಳಿಸಿಕೊಡದೆ ಕೇವಲ ಅಂತಿಮ ತೀರ್ಪುಗಳನ್ನು ಕನ್ನಡದಲ್ಲಿ ಪ್ರಕಟಿಸಿ ಜನಸಮುದಾಯವನ್ನು ಮುಂದೆ ಕರೆದೊಯ್ಯುವ ಪದ್ಧತಿ ಪ್ರಶ್ನಾರ್ಹವಾದದ್ದು. ಇಂತಹ ಅರೆ ಮನಸ್ಸಿನ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ಬದಲಾವಣೆಯನ್ನು ತರಲಾರವು.

ಭಾರತದಂತೆಯೇ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಪೋಷಿಸಿಕೊಂಡು ಬಂದಿರುವ ಕೆನಡಾ ಮತ್ತು ಸ್ವಿಟ್ಜರ್ಲೆಂಡ್ ದೇಶಗಳ ನ್ಯಾಯಾಲಯಗಳ ಕಲಾಪಗಳನ್ನು ಇಲ್ಲಿ ನೆನೆಯುವುದು ಅಗತ್ಯ. ಕೆನಡಾದ ನ್ಯಾಯಾಲಯಗಳ ಕಲಾಪದಲ್ಲಿ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಯನ್ನು ಅಧಿಕೃತವಾಗಿ ಬಳಸಲಾಗುತ್ತಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ಇಂಗ್ಲಿಷ್, ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳನ್ನು ಅಧಿಕೃತವಾಗಿ ನ್ಯಾಯಾಲಯದ ಕಲಾಪದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಇಸ್ಲಾಂ ಧರ್ಮದ ಸಾಂಪ್ರದಾಯಿಕ ಪರಂಪರೆಯನ್ನು ಮೈಗೂಡಿಸಿಕೊಂಡ ಅರಬ್ ಎಮಿರೇಟ್ಸ್ ಗಣರಾಜ್ಯದ ಅಬುಧಾಬಿಯಲ್ಲಿ ಹಿಂದಿಯನ್ನು ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಯಂತೆ ನ್ಯಾಯಾಲಯದ ಅಧಿಕೃತ ಕಲಾಪದ ಭಾಷೆಯಾಗಿ ಅಳವಡಿಸಿಕೊಳ್ಳಲಾಗಿದೆ.1950ರಲ್ಲಿ ಸಂವಿಧಾನ ಜಾರಿಗೆ ಬಂದಾಗ ಇದ್ದ ಪರಿಸ್ಥಿತಿಗೂ 2020ರ ಇಂದಿನ ಸ್ಥಿತಿಗೂ ಭಾರತದ ಒಕ್ಕೂಟ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಯ ಸ್ವರೂಪಗಳು ಮತ್ತು ಪರಿಣಾಮಗಳು ಭಿನ್ನವಾಗಿವೆ. ಆಧುನಿಕ ತಂತ್ರಜ್ಞಾನ ಎಲ್ಲಾ ಕಸುಬುಗಳ ಚೌಕಟ್ಟುಗಳನ್ನು ಮತ್ತು ಎಲ್ಲೆಗಳನ್ನು ಬದಲಾಯಿಸಿದೆ. ಕ್ಷಣಾರ್ಧದಲ್ಲಿ ಯಾವುದೇ ಭಾಷೆಯನ್ನೂ ಹಲವು ಭಾಷೆಗಳಿಗೆ ಭಾಷಾಂತರ ಮಾಡುವ ಸಾಧನಗಳನ್ನು ಪರಿಚಯಿಸಲಾಗಿದೆ.

ನ್ಯಾಯ ವಿತರಣೆಯನ್ನು ಸರಳಗೊಳಿಸುವ ಮತ್ತು ಕಲಾಪಗಳನ್ನು ಬಾಧಿತರ ಆಡು ಭಾಷೆಯಲ್ಲಿಯೇ ನಡೆಸುವ ನಿಟ್ಟಿನಲ್ಲಿ ಅಮೆರಿಕದ ಫೆಡರಲ್ ಕೋರ್ಟ್‌ಗಳು ತಳೆದಿರುವ ನಿರ್ಧಾರ ಅನುಕರಣೀಯ. ಅಮೆರಿಕದ ನ್ಯಾಶನಲ್ ಇಂಟರ್‌ಪ್ರಿಟರ್ ಡೇಟಾಬೇಸ್‌ನಲ್ಲಿ 3600 ನೋಂದಾಯಿತ ಭಾಷಾಂತರಕಾರರಿದ್ದು, ಜಗತ್ತಿನ 180 ಭಾಷೆಗಳನ್ನು ಅಲ್ಲಿನ ನ್ಯಾಯಾಲಯಗಳಲ್ಲಿ ಸರಾಗವಾಗಿ ರಿಯಲ್ ಟೈಮ್ ಆಧಾರದಲ್ಲಿ ಭಾಷಾಂತರಿಸಲಾಗುತ್ತದೆ.

ಭಾರತದ ಉನ್ನತ ನ್ಯಾಯಾಲಯಗಳ ಕಲಾಪಗಳನ್ನು ಸ್ಥಳೀಯ ಭಾಷೆಯಲ್ಲಿ ನಡೆಸಲು ಸಾಧ್ಯವಾಗದೇ ಹೋದದ್ದು ಪ್ರಜಾಪ್ರಭುತ್ವದ ದೊಡ್ಡ ವಿಪರ್ಯಾಸ.ವಸಾಹತು ಕಾಲದ ರೀತಿ ರಿವಾಜುಗಳನ್ನು ಬದಲಾಯಿಸಿಕೊಳ್ಳದ ಉನ್ನತ ನ್ಯಾಯಾಲಯಗಳ ಕಲಾಪಗಳ ಪ್ರಯೋಜನ ಪೀಳಿಗೆಯಿಂದ ಪೀಳಿಗೆಗೆ ಸವಲತ್ತುಗಳನ್ನು ಸವಿಯುತ್ತಾ ಬಂದಿರುವ ಕೆಲವೇ ಕೆಲವು ಜನರಿಗೆ ಸಿಗುವಂತಾಗಿದೆ.

ಭಾಷೆಯು ಅಭಿವ್ಯಕ್ತಿಯ ಅಮೂಲ್ಯ ಸಾಧನ. ವ್ಯಕ್ತಿಯೊಬ್ಬನು ತಾನಾಡುವ ಭಾಷೆಯಲ್ಲಿಯೇ ತನ್ನ ನೆಲದ ಕಾನೂನು, ನ್ಯಾಯಾಲಯದ ತೀರ್ಪುಗಳನ್ನು ಬಯಸುವುದು ಸ್ವಾಭಾವಿಕ. ಜನ ಸಮುದಾಯವು ಸ್ವಯಂಪ್ರೇರಣೆಯಿಂದ ಸಂವಿಧಾನವನ್ನಾಗಲೀ, ಶಾಸನಗಳನ್ನಾಗಲೀ ಅರಿಯಲು ಮುಂದಾಗದಿರಲು ಕಾರಣ ಶಾಸನಗಳಲ್ಲಿ ಬಳಸುವ ಭಾಷೆ, ಕಠಿಣ ಪದಗಳು ಹಾಗೂ ಜಟಿಲವಾದ ವಾಕ್ಯಗಳು. ಶಾಸನಸಭೆಗಳು ರಚಿಸುವ ಶಾಸನಗಳು, ನ್ಯಾಯಾಲಯದಿಂದ ಹೊರಹೊಮ್ಮುವ ತೀರ್ಪುಗಳು ಜನರಿಗೆ ತಿಳಿಯದ ಭಾಷೆಯಲ್ಲಿ ಪ್ರಕಟವಾಗಿ ಮತ್ತು ವಿಶ್ಲೇಷಿಸಲ್ಪಡುವುದು, ಸ್ವಾತಂತ್ರ್ಯ ನಂತರದಲ್ಲಿ ನಾವೆಲ್ಲರೂ ಸೇರಿ ಪ್ರಜಾಸತ್ತೆಗೆ ಎಸಗಿದ ಬೌದ್ಧಿಕ ವಂಚನೆ ಎಂಬುದನ್ನು ಅಲ್ಲಗಳೆಯಲಾಗದು.

ಭಾಷೆಯ ಆಯಾಮವನ್ನು ಬದಿಗಿಟ್ಟು ನೋಡುವುದಾದರೆ ನ್ಯಾಯಾಲಯದ ಮೊರೆಹೋದ ಕಕ್ಷಿದಾರ ಮತ್ತು ವಕೀಲರ ನಡುವೆ ಇರುವುದು ಗ್ರಾಹಕ ಮತ್ತು ಸೇವಾ ಪೂರೈಕೆದಾರನ ಸಂಬಂಧ. ಒಬ್ಬ ಗ್ರಾಹಕನಿಗೆ ತಾನು ಕೊಳ್ಳುವ ಸರಕು ಮತ್ತು ಸೇವೆಗಳ ಕುರಿತಾದ ಮಾಹಿತಿಯನ್ನು ತನ್ನ ಭಾಷೆಯಲ್ಲಿಯೇ ಕೇಳಿ ಪಡೆಯಲು ಸಾಧ್ಯವಿರುವಾಗ ಆ ಹಕ್ಕುಗಳು ಕಕ್ಷಿಗಾರನಿಗೂ ಲಭಿಸದಂತಹ ವ್ಯವಸ್ಥೆ ನ್ಯಾಯಸಮ್ಮತವಾದದ್ದೇ?

ಕಕ್ಷಿಗಾರನು ತನ್ನ ಆಲೋಚನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿಯೂ ಮತ್ತು ಸರಳವಾಗಿಯೂ ಪ್ರಕಟಪಡಿಸಲು ಸಂವಿಧಾನದ ವಿಧಿ 19(1)(ಎ)ಯಲ್ಲಿನ ವಾಕ್‌ ಸ್ವಾತಂತ್ರ್ಯದ ಹಕ್ಕು ಮತ್ತು 21ನೇ ವಿಧಿಯು ಪರಸ್ಪರ ಪೂರಕವಾಗಿವೆ. ರಾಜ್ಯಪಾಲರು ರಾಷ್ಟ್ರಪತಿಯವರ ಪೂರ್ವಾನುಮತಿಯೊಂದಿಗೆ ಆ ರಾಜ್ಯದ ಭಾಷೆಯನ್ನು ಹೈಕೋರ್ಟಿನ ಆಡಳಿತ ಭಾಷೆಯನ್ನಾಗಿಸಲು ಸಂವಿಧಾನದ ವಿಧಿ 348(2) ಮತ್ತು ಅಫಿಶಿಯಲ್ ಲಾಂಗ್ವೇಜ್ ಆ್ಯಕ್ಟ್‌–1963ರ ಕಲಂ 7 ಅನುವು ಮಾಡಿಕೊಟ್ಟಿದೆ. ಇದನ್ನು ಬಳಸಿಕೊಂಡು ಮಧ್ಯ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ರಾಜ್ಯದ ಹೈಕೋರ್ಟ್‌ಗಳಲ್ಲಿ ಹಿಂದಿಯನ್ನು ಅಧಿಕೃತವಾಗಿ ಬಳಸಲಾಗುತ್ತಿದೆ.

ಯಾವುದೇ ರಾಜ್ಯದ ಹೈಕೋರ್ಟ್‌ನಲ್ಲಿ ಸ್ಥಳೀಯ ಭಾಷೆಯನ್ನು ಆಡಳಿತ ಭಾಷೆಯಾಗಿ ಜಾರಿಗೆ ತರಲು ಮುಖ್ಯ ನ್ಯಾಯಮೂರ್ತಿಯವರ ಅನುಮೋದನೆ ಪಡೆಯಬೇಕೆಂಬ 1965ರ ಕ್ಯಾಬಿನೆಟ್ ಸಮಿತಿಯ ಆದೇಶವಿದೆ. ಇಂತಹ ಸಂವಿಧಾನಬಾಹಿರ ನಿಯಮವನ್ನುಅಡ್ಡಹಿಡಿದು ಕನ್ನಡ, ಬಂಗಾಳಿ, ತಮಿಳು, ಗುಜರಾತಿ ಭಾಷೆಗಳನ್ನು ಆ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಬಳಸಲು ಸಲ್ಲಿಸಲಾದ ಪ್ರಸ್ತಾವಗಳನ್ನು ಭಾರತ ಸರ್ಕಾರವು ನನೆಗುದಿಯಲ್ಲಿರಿಸಿದೆ.ಪೂರ್ಣ ಪ್ರಮಾಣದಲ್ಲಿ ಕನ್ನಡವನ್ನು ಹೈಕೋರ್ಟ್‌ನಲ್ಲಿ ಕಲಾಪದ ಭಾಷೆಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಕರ್ನಾಟಕವು 1997, 1999, 2012 ಮತ್ತು 2016ರಲ್ಲಿ ಪ್ರಸ್ತಾವಗಳನ್ನು ಸಲ್ಲಿಸಿದೆ. ಈ ಪ್ರಸ್ತಾವಗಳನ್ನು ಭಾರತ ಸರ್ಕಾರ ತಿರಸ್ಕರಿಸಿಲ್ಲ.

ನೀತಿ ಆಯೋಗದ ಶಿಫಾರಸಿನಂತೆ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ₹ 1,670 ಕೋಟಿ ವೆಚ್ಚದಲ್ಲಿ ದೇಶದಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನ್ಯಾಯಾಲಯಗಳನ್ನು ಕಂಪ್ಯೂಟರೀಕರಿಸಲಾಗಿದೆ. ದೊಡ್ಡ ಪ್ರಮಾಣದ ಹಣ ಸುರಿದು ಸಿದ್ಧಪಡಿಸಿದ ಕಂಪ್ಯೂಟರ್ ಕಿಯೋಸ್ಕ್‌ಗಳಲ್ಲಿ, ನ್ಯಾಯಾಲಯದ ಟಿ.ವಿ ಪರದೆಗಳಲ್ಲಿ ಮತ್ತು ಮೊಬೈಲ್ ಆ್ಯಪ್‌ಗಳಲ್ಲಿನ ಮಾಹಿತಿ ಸ್ಥಳೀಯ ಭಾಷೆಗಳಲ್ಲಿ ಲಭ್ಯವಿಲ್ಲ. ರಾಜ್ಯದ ವಿಚಾರಣಾ ನ್ಯಾಯಾಲಯಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು ನ್ಯಾಯಾಲಯಗಳ ಅಧಿಕೃತ ಮಾಹಿತಿ ಜಾಲಗಳಲ್ಲಿ ಕನ್ನಡಕ್ಕೆ ಅವಕಾಶವೇ ಇಲ್ಲ.

ಸಾಂಪ್ರದಾಯಿಕ ನ್ಯಾಯಾಲಯಗಳ ಮೇಲಿನ ಒತ್ತಡಗಳನ್ನು ತಗ್ಗಿಸಲು ಆರಂಭಿಸಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗಳು ಮತ್ತು ರಾಜ್ಯ ಗ್ರಾಹಕರ ಕಮಿಷನ್‌ಗಳಿಗೆ ಸ್ವತಂತ್ರವಾದ ಅಂತರ್ಜಾಲ ತಾಣವಿಲ್ಲ. ರಾಷ್ಟ್ರೀಯ ಗ್ರಾಹಕರ ಕಮಿಷನ್‌ನ ಅಂತರ್ಜಾಲದ ಜೊತೆಗೆ ಜಿಲ್ಲಾ ಮತ್ತು ರಾಜ್ಯಮಟ್ಟದ ವೇದಿಕೆಗಳನ್ನು ಬೆಸೆದಿರುವುದರಿಂದ ಅಂತರ್ಜಾಲ ತಾಣದಲ್ಲಿ ಕನ್ನಡಕ್ಕೆ ಕಿಂಚಿತ್ತೂ ಆಸ್ಪದವಿಲ್ಲ.

ರಾಜ್ಯ ಸರ್ಕಾರಿ ನೌಕರರ ನೇಮಕಾತಿ ಮತ್ತು ಸೇವಾ ಸಂಬಂಧಿತ ವ್ಯಾಜ್ಯಗಳ ವಿಲೇವಾರಿಗಾಗಿ ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್‌ ಹೊಂದಲಾಗಿದೆ. ಇದರಜಾಲತಾಣದಲ್ಲಿ ಕನ್ನಡದಲ್ಲಿ ಮಾಹಿತಿಯೇನೋ ಇದೆ. ಆದರೆ ನ್ಯಾಯಮಂಡಳಿಯ ಕಲಾಪಗಳು, ಕಡತಗಳು, ಆದೇಶಗಳು ಮತ್ತು ತೀರ್ಪುಗಳು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯ. ಸಂವಿಧಾನದ 348(2) ವಿಧಿಯಲ್ಲಿನ ತೊಡಕು ಹೈಕೋರ್ಟ್‌ಗೆ ಮಾತ್ರ ಅನ್ವಯಿಸಲಿದ್ದು, ರಾಜ್ಯ ಗ್ರಾಹಕರ ಕಮಿಷನ್ ಮತ್ತು ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್‌ ಇದರಿಂದ ಹೊರತಾಗಿವೆ. ಹಾಗಾಗಿ ಇಲ್ಲಿಯೂ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವ ನಿಟ್ಟಿನಲ್ಲಿ ಮುಂದಾಗದಿರುವುದು ಆಶ್ಚರ್ಯಕರ ಸಂಗತಿ.

ಜನರ ಮತ್ತು ನ್ಯಾಯಾಲಯದ ನಡುವಿನ ಸಂವಹನ ನೆಲದ ಭಾಷೆಯಲ್ಲಿಯೇ ನಡೆದಾಗ ಅನಗತ್ಯ ಕಾಲಹರಣಕ್ಕೂ ಮತ್ತು ಅಪಾರ ಸಂಪನ್ಮೂಲಗಳ ವೆಚ್ಚಕ್ಕೂ ಕಡಿವಾಣ ಬೀಳುತ್ತದೆ. ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ನ್ಯಾಯಾಲಯಗಳ ಪಾತ್ರ ಗಣನೀಯ. ಇಂತಹ ಸಂಸ್ಥೆಗಳಲ್ಲಿ ನೆಲದ ಭಾಷೆಯನ್ನು ಬಳಸದೇ ಹೋದರೆ ಇವು ಅಮಾಯಕರನ್ನು ಕತ್ತಲಿನಲ್ಲಿಡುವ ವ್ಯವಸ್ಥೆಯಾಗಿಯೇ ಉಳಿದುಬಿಡಬಹುದು!

ಜನ ಸಮುದಾಯಗಳಿಗೆ ನ್ಯಾಯವು ಸರಾಗವಾಗಿ ನಿಲುಕಲು ಕೇವಲ ನ್ಯಾಯಾಲಯದೊಳಗೆ ಭೌತಿಕ ಉಪಸ್ಥಿತಿ ಒದಗಿಸಿದರೆ ಸಾಲದು, ಭಾಷಾ ಉಪಸ್ಥಿತಿಯ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT