ಬೆಂಗಳೂರು: ಬಡ ಜನರಿಗಾಗಿ ಉತ್ತಮ ಆರೋಗ್ಯ ಯೋಜನೆ ಜಾರಿ ಸಂಬಂಧ, ಬುಧವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀರ್ಮಾನ ತೆಗೆದು ಕೊಳ್ಳಲಿದ್ದಾರೆ.
ಮಂಗಳವಾರ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಯಶಸ್ವಿನಿ ಮತ್ತು ಇತ್ತೀಚೆಗೆ ಜಾರಿಗೊಳಿಸಿದ ‘ಆರೋಗ್ಯ ಕರ್ನಾಟಕ’ ಯೋಜನೆ ಕುರಿತು ಮಾಹಿತಿ ಪಡೆದರು.
‘ಯಶಸ್ವಿನಿ’ ಆರೋಗ್ಯ ಯೋಜನೆಯನ್ನು ಮುಂದುವರಿಸುವ ಬಗ್ಗೆ ಸಭೆಯಲ್ಲಿ ಒಲವು ವ್ಯಕ್ತಪಡಿಸಿದ ಕುಮಾರಸ್ವಾಮಿ, ಬಡವರಿಗೆ ಅನುಕೂಲವಾಗಿಸಲು ಎಲ್ಲ ಅಂಶಗಳನ್ನು ಪರಿಶೀಲಿಸಿ ಸಮಗ್ರಮಾಹಿತಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್ಗೆ ಸೂಚಿಸಿದರು.
‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಹಿಂದಿನ ಸರ್ಕಾರ ಚುನಾವಣೆಗೆ ಮೊದಲು ಜಾರಿಗೆ ತಂದಿತ್ತು. ಬಡ ಜನರಿಗಾಗಿ ಗುಣಮಟ್ಟದ ಆರೋಗ್ಯ ಯೋಜನೆ ಜಾರಿಗೊಳಿಸುವ ಉದ್ದೇಶದಿಂದ ಅಧಿಕಾರಿಗಳ ಜತೆ ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.