ಚಿತ್ರದುರ್ಗ: ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಪ್ರಬಲವಾಗಿದ್ದು, ಎರಡೂ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ನಡೆಯುತ್ತಿರುವ ಜೆಡಿಎಸ್ 'ವಿಕಾಸ ಪರ್ವ' ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
'ಎರಡು ಕ್ಷೇತ್ರಗಳಲ್ಲಿರುವ ನಮ್ಮ ಅಭ್ಯರ್ಥಿಗಳ ಎದುರು ಸಿದ್ದರಾಮಯ್ಯ ಅವರ ಜಾತಿಬಲ ನಡೆಯುವುದಿಲ್ಲ' ಎಂದರು.
'ಸಿದ್ದರಾಮಯ್ಯ ಜಾತಿವಾದ ಮಾಡುತ್ತಿದ್ದಾರೆ. ಮಾತಿನಲ್ಲಿ ಮಾತ್ರ ಅವರು ಜಾತ್ಯಾತೀತರು ಅಷ್ಟೇ' ಎಂದು ವ್ಯಂಗ್ಯವಾಡಿದರು.
'ಚಾಮುಂಡೇಶ್ವರಿಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲೋದರಲ್ಲಿ ಸಂಶಯ ಇಲ್ಲ. ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಜೆಡಿಎಸ್ ಸಮರ್ಥ ಹೋರಾಟ ಮಾಡಲಿದೆ' ಎಂದ ಅವರು, ‘ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡದಂತೆ ಬಿಜೆಪಿ ನಾಯಕರ ಮೇಲೆ ಸಿದ್ದರಾಮಯ್ಯ ಒತ್ತಡ ಹಾಕಿದ್ದಾರೆ' ಎಂದು ಆರೋಪಿಸಿದರು.
'ರಾಜ್ಯದಲ್ಲಿ ಬಿಎಸ್ಪಿ ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬರೋದರಲ್ಲಿ ಅನುಮಾನವಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.