ಮೂಲ್ಕಿ: ಅಮಾನ್ಯಗೊಂಡ ನೋಟುಗಳನ್ನು ಜಮೆಗೊಳಿಸಿದುದಕ್ಕಾಗಿ ಚಾಲ್ತಿ ಖಾತೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದ ಬ್ಯಾಂಕ್ ಶಾಖೆಯ ವಿರುದ್ಧ ಗ್ರಾಹಕರೊಬ್ಬರು ನೀಡಿದ ದೂರನ್ನು ವಜಾಗೊಳಿಸಿ ಮಂಗಳೂರಿನ ಜಿಲ್ಲಾ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.
2016ರ ಡಿಸೆಂಬರ್ 19ರಂದು ಸನತ್ ಅವರು ಮೇ. ಮಾ. ಟ್ರೇಡರ್ಸ್ ಹೆಜಮಾಡಿ ಸಂಸ್ಥೆಯ ಪರವಾಗಿ ಅಮಾನ್ಯಗೊಂಡ ₹1.16 ಲಕ್ಷ ನೋಟುಗಳನ್ನು ಸಂಸ್ಥೆಯ ಚಾಲ್ತಿ ಖಾತೆಗೆ ಜಮೆ ಮಾಡಿದ್ದರು. ಸೂಕ್ತ ವಿವರಣೆ ನೀಡದೇ, ಅಮಾನ್ಯಗೊಂಡ ನೋಟುಗಳನ್ನು ಜಮೆ ಮಾಡಿದುದಕ್ಕಾಗಿ ಚಾಲ್ತಿ ಖಾತೆಯನ್ನು ತಾತ್ಕಾಲಿಕವಾಗಿ ಬ್ಯಾಂಕ್ ತಡೆ ಹಿಡಿದಿತ್ತು.
ಈ ಕ್ರಮವನ್ನು ಪ್ರಶ್ನಿಸಿ ಖಾತೆಯನ್ನು ತಡೆ ಹಿಡಿದಿದ್ದರಿಂದ ಮಾಡಿದ್ದರಿಂದ ನನ್ನ ಸಂಸ್ಥೆಗೆ ₹4 ಲಕ್ಷ ವ್ಯವಹಾರ ನಷ್ಟ, ಮಾನಸಿಕ ಹಿಂಸೆಗೆ ₹1 ಲಕ್ಷ, ಹಾಗೂ ಪ್ರಕರಣದ ಖರ್ಚು ₹10 ಸಾವಿರ ಸೇರಿ ₹5.10 ಲಕ್ಷ ಪರಿಹಾರ ಕೋರಿ ಬ್ಯಾಂಕ್ನ ಪ್ರಬಂಧಕರ ವಿರುದ್ಧ ದೂರು ನೀಡಿದ್ದರು.
ಭಾರತೀಯ ರಿಸರ್ವ್ ಬ್ಯಾಂಕ್ನ ನಿರ್ದೇಶನದನ್ವಯ ಅಮಾನ್ಯಗೊಂಡ ₹5 ಸಾವಿರಗಳಿಗೂ ಅಧಿಕ ಮೊತ್ತದ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವ ಸಂದರ್ಭ ಸದರಿ ನೋಟುಗಳನ್ನು ಹೊಂದಿರುವ ಬಗ್ಗೆ ಸೂಕ್ತ ವಿವರಣೆ ನೀಡಬೇಕು. ಆದರೆ ಫಿರ್ಯಾದುದಾರ ಸಂಸ್ಥೆಯು ವಿವರಣೆ ಸಲ್ಲಿಸದ ಕಾರಣ ಯಾವುದೇ ರೀತಿಯ ವ್ಯವಹಾರ ನಷ್ಟ, ಮಾನಸಿಕ ಹಿಂಸೆ ಉಂಟಾಗಿಲ್ಲ ಎಂದು ಕೋರ್ಟ್ ತಿಳಿಸಿದೆ.
ಸೂಕ್ತ ವಿವರಣೆ ಸಲ್ಲಿಸಿದ ಬಳಿಕ ಖಾತೆಯನ್ನು ಮರು ಊರ್ಜಿತಗೊಳಿಸಲಾಗಿದೆ. ಬ್ಯಾಂಕ್ ಪರವಾಗಿ ಮೂಲ್ಕಿಯ ನೋಟರಿ ಹಾಗೂ ವಕೀಲರಾದ ಡೇನಿಯಲ್ ದೇವರಾಜ್ ವಾದಿಸಿದರು.