ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಇನ್ನು ಮಲಗುವುದಿಲ್ಲ!

Last Updated 9 ಜನವರಿ 2021, 19:30 IST
ಅಕ್ಷರ ಗಾತ್ರ

ಜಗತ್ತಿನ ಹಲವು ಪ್ರಮುಖ ನಗರಗಳಂತೆ ನಮ್ಮ ಬೆಂಗಳೂರು ಸಹ ಇನ್ಮುಂದೆ ಎಂದಿಗೂ ಮಲಗದ ನಗರಿ. ನಿದ್ದೆಯನ್ನೇ ಮರೆತ ಈ ನಗರದ ರಾತ್ರಿಗಳು ಹೇಗಿದ್ದಾವು? ಅದರ ದೂರಗಾಮಿ ಪರಿಣಾಮಗಳು ಏನಿರಬಹುದು? ಅಹರ್ನಿಶಿ ದುಡಿಯಲು ಹೊರಟ ನಗರಕ್ಕೆ ಬೇಕಾದ ಸೌಲಭ್ಯಗಳು ಏನೇನು?

ಜಗತ್ತಿನ ಹಲವು ನಗರಗಳನ್ನು ನಾನು ಸುತ್ತಿದ್ದೇನೆ. ಬಹುತೇಕ ಪ್ರಮುಖ ನಗರಗಳು ದಿನದ 24 ಗಂಟೆಗಳ ಕಾಲ ವಹಿವಾಟು ನಡೆಸುತ್ತವೆ. ಜನ, ರಾತ್ರಿ ಎಷ್ಟೊತ್ತಿಗೆ ಬೇಕಾದರೂ ಊಟಕ್ಕೋ ಮನರಂಜನೆಗೋ ಹೋಗಬಹುದು. ಅಂದರೆ ಆ ನಗರಗಳು ಎಂದಿಗೂ ಮಲಗುವುದಿಲ್ಲ. ಬೆಂಗಳೂರಿನಲ್ಲೂ ಅಂತಹ ವಾತಾವರಣ ಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿತ್ತು. ನಾಗರಿಕರ ಈ ಬೇಡಿಕೆಗೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದೆ. ನಗರದ ಭವಿಷ್ಯದ ಚಹರೆ ಕಲ್ಪಿಸಿಕೊಂಡರೆ ಸಂತಸವಾಗುತ್ತದೆ.

ದೊಡ್ಡ ದೊಡ್ಡ ನಗರಗಳಲ್ಲಿ 24/7 ವಹಿವಾಟಿಗೆ ಮುಕ್ತ ಅವಕಾಶ ಒದಗಿಸಬೇಕಾದುದು ಅಗತ್ಯವೂ ಹೌದು, ಅನಿವಾರ್ಯವೂ ಹೌದು. ಏಕೆಂದರೆ, ಅಲ್ಲಿನ ಜನರ ಕೆಲಸದ ಸಮಯ ಭಿನ್ನವಾಗಿರುತ್ತದೆ. ಹೊತ್ತೇರಿದಂತೆ ಕೆಲಸಕ್ಕೆ ಹೋಗುವವರು, ಹಾಗೆಯೇ ಕೆಲಸ ಮುಗಿಸಿ ಮನೆಯ ಕಡೆಗೆ ಹೆಜ್ಜೆ ಹಾಕುವವರು, ಹೊತ್ತು ಮುಳುಗಿದ ಮೇಲೆ ದುಡಿಮೆಗೆ ಹೋಗುವವರು, ನಸುಕಿನಲ್ಲೂ ಕೆಲಸ ಮಾಡುವವರು – ಹೀಗೆ ಉದ್ಯೋಗಸ್ಥರ ಕೆಲಸದ ಸಮಯ ದೊಡ್ಡ ನಗರಗಳಲ್ಲಿ ಸಂಪೂರ್ಣ ಭಿನ್ನ. ಅವರ ಆದ್ಯತೆಗಳು ಸಹ ಭಿನ್ನವೇ. ಅವರೆಲ್ಲರ ಆಯ್ಕೆಗಳನ್ನೂ ಗೌರವಿಸಬೇಕಾಗುತ್ತದೆ. ಪ್ರಜಾಪ್ರಭುತ್ವ ಎಂದರೆ ಅದೇ ಅಲ್ಲವೇ? ಅಲ್ಲಿ ಆಯ್ಕೆಗಳಿರಬೇಕು ಮತ್ತು ಜನರಿಗೆ ತಾವು ಬಯಸಿದ್ದನ್ನು ಆಯ್ದುಕೊಳ್ಳಲು ಮುಕ್ತ ಅವಕಾಶ ಇರಬೇಕು. ರಾತ್ರಿಜೀವನದ ಮೇಲೆ ನಿರ್ಬಂಧ ಹೇರುವುದರಿಂದ, ಒಂದು ನಿಶ್ಚಿತ ಸಮಯದ ಬಳಿಕ ಜನ ಮನರಂಜನಾ ಸ್ಥಳಕ್ಕೋ ಊಟಕ್ಕೋ ಹೋಗದಂತೆ ಅನಗತ್ಯವಾಗಿ ತಡೆದಂತಾಗುತ್ತದೆ. ಅಲ್ಲದೆ, ಜನರ ಹಕ್ಕನ್ನೂ ಮೊಟಕುಗೊಳಿಸಿದಂತಾಗುತ್ತದೆ.

ಈ ಹಿಂದೆ, ಸರ್ಕಾರದ ಮುಂದೆ ನಾವು ರಾತ್ರಿಜೀವನದ ಮೇಲಿನ ನಿರ್ಬಂಧ ತೆರವುಗೊಳಿಸುವ ಪ್ರಸ್ತಾವ ಇಟ್ಟಾಗ, ರಾತ್ರಿಯಲ್ಲೂ ಮುಕ್ತ ವಾತಾವರಣ ಕಲ್ಪಿಸಿದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರಿಗೆ ಕಷ್ಟ ಎಂದು ಹೇಳಲಾಗಿತ್ತು. ಪೊಲೀಸ್‌ ಇಲಾಖೆಯಲ್ಲಿ ಅಷ್ಟೊಂದು ಸಾಮರ್ಥ್ಯವಿಲ್ಲ ಎಂದೂ ವಿವರಿಸಲಾಗಿತ್ತು. ಅದು ಆಡಳಿತಾತ್ಮಕ ವಿಷಯವಾಗಿದ್ದು, ಸರ್ಕಾರವೇ ಪರಿಹಾರ ಕಂಡುಕೊಳ್ಳಬೇಕಾದ ಸಂಗತಿಯಾಗಿದೆ. ನಾವು ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನು ಕಟ್ಟುತ್ತೇವೆ. ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವಂತಹ ಮುಕ್ತ ವಾತಾವರಣ ಇರುವಂತೆ ಸರ್ಕಾರ ತನ್ನ ಆಡಳಿತದ ಹೊಣೆಯನ್ನು ನಿಭಾಯಿಸಬೇಕು ಅಷ್ಟೆ. ಯಶಸ್ವೀ ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣ ಇದಾಗಿದೆ.

ಬೆಂಗಳೂರು ದಿನದ 24 ಗಂಟೆಗಳವರೆಗೆ ವಹಿವಾಟಿಗೆ ಮುಕ್ತವಾಗಿರುವುದು ಏಕೆ ಅಗತ್ಯ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ಮೊದಲು ಈ ನಗರವನ್ನು ಅರ್ಥ ಮಾಡಿಕೊಳ್ಳಬೇಕು. ಭಾರತದ ಏಕೈಕ ಜಾಗತಿಕ ನಗರ ಬೆಂಗಳೂರು. ಇಲ್ಲಿನ 1.1 ಕೋಟಿ ಜನಸಂಖ್ಯೆಯಲ್ಲಿ 20 ಲಕ್ಷ ಜನ ತಂತ್ರಜ್ಞಾನ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ. ಪ್ರತಿವರ್ಷ 6,000 ಕೋಟಿ ಡಾಲರ್‌ (4.5 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಸಾಫ್ಟ್‌ವೇರ್‌ಅನ್ನು ಜಗತ್ತಿನ ಹಲವು ದೇಶಗಳಿಗೆ ಈ ನಗರ ರಫ್ತು ಮಾಡುತ್ತದೆ. 25 ಸಾವಿರಕ್ಕೂ ಅಧಿಕ ಸಾಫ್ಟ್‌ವೇರ್‌ ಕಂಪನಿಗಳು ಇಲ್ಲಿವೆ. ಭಾರತದಲ್ಲೇ ಅತ್ಯಂತ ಶ್ರೀಮಂತ ನಗರವಾಗಿದೆ ಬೆಂಗಳೂರು. ಇಲ್ಲಿನ ತಲಾ ಆದಾಯ 10 ಸಾವಿರ ರೂಪಾಯಿಯಷ್ಟಿದೆ. ಸೊಗಸಾದ ನಗರ, ಹೊಸ ಆವಿಷ್ಕಾರಗಳ ನೆಲೆ, ಸುಶಿಕ್ಷಿತರು, ಸುಸಂಸ್ಕೃತರು ಇರುವಂತಹ ಊರು. ತಂತ್ರಜ್ಞಾನದ ಬೀಡೂ ಹೌದು. ಹೀಗಾಗಿ ಅತ್ಯುತ್ತಮ ಬದುಕಿನ ಎಲ್ಲ ಅಗತ್ಯಗಳು ಈ ಊರಿಗೆ ಬೇಕು.

ಜಗತ್ತಿನ ಹಲವು ದೇಶಗಳ ತಂತ್ರಜ್ಞಾನದ ಅಗತ್ಯಗಳನ್ನು ಈ ನಗರ ಪೂರೈಸುವುದರಿಂದ ದಿನದ 24 ಗಂಟೆಗಳ ಕಾಲ ಇದು ಕೆಲಸ ಮಾಡುತ್ತದೆ. ಏಕೆಂದರೆ, ಜಗತ್ತು ಕೂಡ 24/7ರ ಸ್ವರೂಪದಲ್ಲೇ ಕಾರ್ಯ ನಿರ್ವಹಿಸುತ್ತದೆ. ಪಶ್ಚಿಮ ಜಗತ್ತಿನ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸಲು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳು ರಾತ್ರಿ ವೇಳೆಯೂ ಇಲ್ಲಿ ಕೆಲಸ ಮಾಡುತ್ತಾರೆ. ಇದರಿಂದ ಭಾರತದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಯಾಗಿರುವುದು ಸುಳ್ಳಲ್ಲ.

ಕಳೆದ 20 ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಭೆ ಹಾಗೂ ಕೌಶಲ ಬೆಂಗಳೂರಿಗೆ ಹರಿದುಬಂದು ಇಲ್ಲಿ ನೆಲೆ ನಿಂತಿದೆ. ಜಗತ್ತಿನಲ್ಲಿ ಅತ್ಯಧಿಕ ಪ್ರಮಾಣದ ತಂತ್ರಜ್ಞಾನಿಗಳನ್ನು ಹೊಂದಿದ ನಗರವಾಗಿದೆ ಈ ಊರು. ಅವರ ಉದ್ಯೋಗದ ಜೀವನವನ್ನು ಇನ್ನಷ್ಟು ಸುಲಭಗೊಳಿಸಲು, ಅವರ ಅಗತ್ಯಗಳನ್ನು ಪೂರೈಸಲು ದಿನದ 24 ಗಂಟೆಗಳ ಕಾಲ ನಗರದ ಬೀದಿಗಳು ಜನರಿಗೆ ಮುಕ್ತವಾಗಬೇಕಾದುದು ಅನಿವಾರ್ಯವಾಗಿದೆ. ನಗರ ಅಹರ್ನಿಶಿ ಎಚ್ಚರವಿದ್ದರೆ ಸುರಕ್ಷತೆಯ ದೃಷ್ಟಿಯಿಂದಲೂ ಒಳ್ಳೆಯದು. ಏಕೆಂದರೆ, ರಾತ್ರಿಯೂ ಜನ ಓಡಾಡತೊಡಗಿದರೆ ರಸ್ತೆಗೆ ಇಳಿಯುವ ವಾಹನಗಳ ಸಂಖ್ಯೆಯೂ ಹೆಚ್ಚುತ್ತದೆ. ಅದಕ್ಕೆ ಪೂರಕವಾಗಿ ಪೊಲೀಸ್‌ ಕಾವಲೂ ಇರುತ್ತದೆ. ಇದರಿಂದ ಸುರಕ್ಷಿತ ವಾತಾವರಣ ತಂತಾನೇ ಹೆಚ್ಚುತ್ತದೆ. ಸಮೂಹ ಸಾರಿಗೆಯೂ 24/7 ಲಭ್ಯವಿರುವಂತೆ ನೋಡಿಕೊಳ್ಳುವುದು ಅಗತ್ಯ. ಹಗಲಿಗಿಂತ ರಾತ್ರಿ ವೇಳೆ ಅವುಗಳ ಓಡಾಟದ ಪ್ರಮಾಣ ಕಡಿಮೆ ಇರುಬೇಕಾದುದು ಸಹಜ. ದಿನದ ಬೇರೆ ಬೇರೆ ಕಾಲಘಟ್ಟದಲ್ಲಿ ಕೆಲಸದ ಸಮಯ ವಿಸ್ತಾರಗೊಳ್ಳುವುದರಿಂದ ನಗರದ ಉತ್ಪಾದನಾ ಸಾಮರ್ಥ್ಯವೂ ಹೆಚ್ಚುತ್ತದೆ.

ರಾತ್ರಿಯಿಡೀ ಎಚ್ಚರವಿದ್ದು ಝಗಮಗಿಸುವ ನಗರ
ರಾತ್ರಿಯಿಡೀ ಎಚ್ಚರವಿದ್ದು ಝಗಮಗಿಸುವ ನಗರ

ವಹಿವಾಟನ್ನು 24 ಗಂಟೆಗಳವರೆಗೆ ಮುಕ್ತವಾಗಿಟ್ಟರೆ ಗ್ರಾಹಕರು ವ್ಯಯಿಸುವ ಪ್ರಮಾಣ ಏರಿಕೆಯಾಗಲಿದೆ. ಇದು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ. ಏಕೆಂದರೆ, ಮಳಿಗೆಗಳು, ರೆಸ್ಟೊರೆಂಟ್‌ಗಳು, ಮನರಂಜನಾ ತಾಣಗಳು ರಾತ್ರಿಯೂ ತೆರೆಯಲಿವೆ. ಅವುಗಳಿಗೆ ಹೆಚ್ಚುವರಿ ಸಿಬ್ಬಂದಿ ಬೇಕೇಬೇಕು ಅಲ್ಲವೇ? ಹೌದು, ಇಲ್ಲಿಯೇ ಇನ್ನೊಂದು ವಿಷಯವನ್ನೂ ಸ್ಪಷ್ಟಪಡಿಸಲೇಬೇಕು. ನಮ್ಮ ನಗರ ರಾತ್ರಿಯೂ ಹಗಲಿನಂತೆಯೇ ಕಾರ್ಯನಿರ್ವಹಿಸಲು ಬಯಸುವವರು ತಡರಾತ್ರಿಯಲ್ಲಿ ಯಾವುದೇ ಗದ್ದಲ, ಗಲಾಟೆ ಆಗದಂತೆ ಜಾಗ್ರತೆ ವಹಿಸಬೇಕಾದ ಹೊಣೆಯನ್ನು ಮರೆಯುವಂತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿ ಗೌಜು–ಗದ್ದಲ ಮಾಡಿದರೆ ನಾಳೆ ಎಲ್ಲರೂ ತಮ್ಮತ್ತ ಬೊಟ್ಟು ಮಾಡುತ್ತಾರೆ ಎನ್ನುವುದನ್ನೂ ನೆನಪಿಡಬೇಕು.

ಹಗಲು–ರಾತ್ರಿ ಎನ್ನದೆ ನಗರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಮುಕ್ತವಾಗಿ ಓಡಾಡಬಲ್ಲೆ ಎನ್ನುವಂತಹ ಸುರಕ್ಷಿತ ಭಾವವನ್ನು ಜನರಲ್ಲಿ ಮೂಡಿಸುವಂತಹ ಸಂಸ್ಕೃತಿ ದೊಡ್ಡ ನಗರಗಳ ಇಂದಿನ ಅಗತ್ಯ. ನಗರವನ್ನು ದಿನದ 24 ಗಂಟೆಗಳವರೆಗೆ ಮುಕ್ತವಾಗಿರಿಸುವ ಹಂತದಲ್ಲಿ ಸರ್ಕಾರ, ಅದರಲ್ಲೂ ಪೊಲೀಸ್‌ ಇಲಾಖೆ, ಸದ್ಯದ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಏಕೆಂದರೆ, ರಾತ್ರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ಅಗತ್ಯ ಬೀಳುತ್ತದೆ. ದಿನದ 24 ಗಂಟೆಗಳವರೆಗೆ ಸಮೂಹ ಸಾರಿಗೆಯ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಸಾರ್ವಜನಿಕರ ದೂರು–ದುಮ್ಮಾನಗಳನ್ನು ಆಲಿಸಿ, ಅದಕ್ಕೆ ಪರಿಹಾರ ಒದಗಿಸುವ ಕೆಲಸವೂ ಹೆಚ್ಚುತ್ತದೆ. ಸಾರ್ವಜನಿಕ ಆಸ್ಪತ್ರೆಗಳು ಸೇರಿದಂತೆ ಬಹುತೇಕ ವೈದ್ಯಕೀಯ ಸೌಲಭ್ಯಗಳು ದಿನದ 24 ಗಂಟೆಗಳವರೆಗೆ ಈಗಾಗಲೇ ಲಭ್ಯವಿವೆ. ಅವುಗಳನ್ನು ಇನ್ನಷ್ಟು ಹೆಚ್ಚಿಸಬೇಕು.

ಹಿರಿಯರು ಇದನ್ನು ಹೇಗೆ ಸ್ವೀಕರಿಸಬಹುದು?: ಅವರಿಗೂ ಈ ಹಿಂದಿಗಿಂತ ಹೆಚ್ಚಿನ ಆಯ್ಕೆಗಳು ಹೊಸ ವಾತಾವರಣದಲ್ಲೂ ಸಿಗುತ್ತವೆ. ರಾತ್ರಿಜೀವನವನ್ನು ಹಿಂದಿನ ತಲೆಮಾರಿನವರು ಒಪ್ಪುವುದಿಲ್ಲ ಎನ್ನುವುದನ್ನು ನಾನು ಚೆನ್ನಾಗಿ ಬಲ್ಲೆ. ಏಕೆಂದರೆ, ಅವರು ಬದುಕಿ ಬಾಳಿದ ರೀತಿಯೇ ಬೇರೆ. ಬೆಳಿಗ್ಗೆ ಕಚೇರಿಗೆ ಹೋಗುವುದು, ಸಂಜೆ ಐದು ಗಂಟೆಗೆ ಮನೆಗೆ ಮರಳುವುದು, ಊಟ ಮುಗಿಸಿ, ರಾತ್ರಿ 9ರ ವೇಳೆಗೆ ನಿದ್ದೆಗೆ ಹೋಗುವುದು – ಇದು ಅವರ ದಿನಚರಿಯಾಗಿತ್ತು. ಅವರ ಈ ದಿನಚರಿಗೆ ಮುಂದೆಯೂ ಯಾವುದೇ ತೊಂದರೆ ಇಲ್ಲ. ಆದರೆ, ಪ್ರತಿಯೊಬ್ಬ ವ್ಯಕ್ತಿಗೂ ತಾನು ಹೇಗೆ ಬದುಕಬೇಕೆಂದು ನಿರ್ಧರಿಸುವ ಹಕ್ಕಿದೆ. ಹೀಗಾಗಿ ನಮ್ಮ ಆಯ್ಕೆಯನ್ನು ಮತ್ತೊಬ್ಬರ ಮೇಲೆ ಹೇರುವುದು ತರವಲ್ಲ. ಹಗಲು–ರಾತ್ರಿ ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸಿರುವುದು ಎಲ್ಲ ಬೆಂಗಳೂರಿಗರಿಗೆ ಮುಕ್ತ ಸ್ವಾತಂತ್ರ್ಯ ನೀಡಿದಂತೆ. ಅವರು ತಮಗೆ ಬೇಕಾದ ಆಯ್ಕೆಯನ್ನು ಮಾಡಿಕೊಳ್ಳಲು ಸ್ವತಂತ್ರರು. ಬೆಂಗಳೂರು ಇನ್ನಷ್ಟು ಮಿನುಗಲು ಹೊಸನೀತಿ ಸಹಕರಿಸುತ್ತದೆ. ಕನ್ನಡಿಗರ ಬದುಕನ್ನು ಮತ್ತಷ್ಟು ಸಮೃದ್ಧಗೊಳಿಸಲು ಇದರಿಂದ ಸಾಧ್ಯ ಎನ್ನುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT