ಮಧುಗಿರಿ (ತುಮಕೂರು): ಪಟ್ಟಣದ ಲಾಲಾಪೇಟೆಯಲ್ಲಿ ಶುಕ್ರವಾರ ಚಿರತೆ ಹಾಡ ಹಗಲೇ ನಾಲ್ಕು ಮಂದಿಯ ಮೇಲೆ ದಾಳಿ ನಡೆಸಿತು.
ಮಧ್ಯಾಹ್ನದ ಕುಲುಮೆ ಕೆಲಸ ಮಾಡುತ್ತಿದ್ದ ರಾಜಣ್ಣ (40) ಅವರ ಮೇಲೆ ಚಿರತೆ ದಾಳಿ ನಡೆಸಿದೆ. ಅಲ್ಲಿಯೇ ಇದ್ದ ಪತ್ನಿ ಮಂಜಮ್ಮ (34) ಬಿಡಿಸಿಕೊಳ್ಳಲು ಬಂದಾಗ ಅವರ ಮೇಲೆಯೂ ಎರಗಿ ಗಂಭೀರವಾಗಿ ಗಾಯಗೊಳಿಸಿತು. ಇಬ್ಬರ ಚೀರಾಟ ಕೇಳಿ ಸ್ಥಳಕ್ಕೆ ಬಂದ ಜನರು ಚಿರತೆಯನ್ನು ಓಡಿಸಿದರು.
ಸ್ವಲ್ಪ ದೂರ ತೆರಳಿದ ಚಿರತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಸಿದ್ದಗಂಗಮ್ಮ (40) ಹಾಗೂ ದೊಡ್ಡರಂಗಪ್ಪ (45) ಅವರ ಮೇಲೆ ದಾಳಿ ನಡೆಸಿತು.
ಗಾಯಾಳುಗಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಗಂಭೀರವಾಗಿ ಗಾಯಗೊಂಡಿದ್ದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಯಿತು.
ಅರಣ್ಯಾಧಿಕಾರಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಚಿರತೆಗಾಗಿ ಹುಡುಕಾಡಿದರು. ಈ ಸಂದರ್ಭ ಪೊಲೀಸ್ ಸಿಬ್ಬಂದಿ ರಂಗನಾಥ ಅವರ ಕಾಲಿಗೆ ಚಿರತೆ ಬಾಯಿ ಹಾಕಿತು. ಚಿರತೆ ಕಂಡ ತಕ್ಷಣ ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಬಲೆ ಹಾಕಿ ಹಿಡಿಯಲು ಮುಂದಾದರು. ಈ ಸಂದರ್ಭ ಅದು ಉಸಿರುಕಟ್ಟಿ ಸಾವನ್ನಪ್ಪಿತು.